ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿಯನ್ನು ಕಡ್ಡಾಯವಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಲ್ಲಿ ದಾಖಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಆದೇಶ ಮಾಡಿದ್ದಾರೆ.
ನಗರದಲ್ಲಿ ಸರ್ಕಾರಿ ಕೋಟಾದ ಅಡಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುವವರ ಡಿಸ್ಚಾರ್ಜ್ ನ ಬಗ್ಗೆ ಖಾಸಗಿ ಆಸ್ಪತ್ರೆಗಳು ನಿಖರವಾದ ಮಾಹಿತಿ ನೀಡದೆ ಇರುವ ಹಿನ್ನೆಲೆಯಲ್ಲಿ ಈ ರೀತಿ ಆದೇಶ ಮಾಡಲಾಗಿದೆ.
ಕೊರೊನಾ ಸೋಂಕಿತರಿಗೆ ಹತ್ತು ದಿನಗಳಿಗಿಂತ ಹೆಚ್ಚುವರಿ ಚಿಕಿತ್ಸೆ ಅವಶ್ಯಕತೆ ಇದ್ದರೆ, ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ಪೋರ್ಟಲ್ನಲ್ಲಿ ಐದು ದಿನ ಹೆಚ್ಚುವರಿ ಚಿಕಿತ್ಸೆ ಅವಶ್ಯ ಎಂದು ( ಐದು ದಿನ ಹೆಚ್ಚುವರಿ ಅವಶ್ಯ ಎಂದು ನಮೂದಿಸಿ)ಅರ್ಜಿ ಸಲ್ಲಿಸಬೇಕು. ಎಲ್ಲ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ಮತ್ತು ಆರೋಗ್ಯ ಮಿತ್ರ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಬೇಕು.
ಇದನ್ನೂ ಓದಿ :ಬ್ರಿಟನ್ ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ!
ಪ್ರತಿ ಡಿಸ್ಚಾರ್ಜ್ ನ ಮಾಹಿತಿ ಕಡ್ಡಾಯವಾಗಿ ದಾಖಲಿಸಬೇಕು. ಒಂದೊಮ್ಮೆ ಹತ್ತು ದಿನಗಳ ನಂತರವೂ ಸೋಂಕಿತರ ಬಿಡುಗಡೆಯ ಬಗ್ಗೆ ನಿಖರ ಮಾಹಿತಿ ನೀಡದೆ ಇದ್ದರೆ, ನಿರ್ದಿಷ್ಟ ಹಾಸಿಗೆ ಖಾಲಿ ಇದೆ ಎಂದು ಪರಿಗಣಿಸಲಾಗುತ್ತದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಮಾಹಿತಿಯನ್ನು ಸಹ ತಡ ಮಾಡದೆ ಅಪ್ ಡೇಟ್ ಮಾಡಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ.