Advertisement

ಅಗಾಧ ಪ್ರಸರಣ ತಡೆಯಲು ಹೆಚ್ಚಲೇಬೇಕಿದೆ ಪರೀಕ್ಷೆ ಪ್ರಮಾಣ

02:52 AM Jun 15, 2020 | Hari Prasad |

ಕೋವಿಡ್‌-19ನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಏರುತ್ತಿರುವ ವೇಳೆಯಲ್ಲೇ, ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ.

Advertisement

ಈಗಲೂ ದೇಶದಲ್ಲಿ ಕೋವಿಡ್‌-19 ಮರಣ ಪ್ರಮಾಣ 3 ಪ್ರತಿಶತಕ್ಕಿಂತ ಕಡಿಮೆಯಿದೆ ಎನ್ನುವುದು ಸಮಾಧಾನದ ಸಂಗತಿಯಾದರೂ, ಹೀಗೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಹೋದರೆ, ಮುಂಬರುವ ದಿನಗಳಲ್ಲಿ ರೋಗಾವಸ್ಥೆ ಉಲ್ಬಣಿಸುವವರ ಸಂಖ್ಯೆಯಲ್ಲೂ ವೃದ್ಧಿ ಕಾಣಿಸಬಹುದು, ಅದು ಮರಣ ಪ್ರಮಾಣದ ಹೆಚ್ಚಳಕ್ಕೂ ಕಾರಣವಾಗಬಹುದು.

ಇದು ಭಾರತದ ಪಾಲಿಗೆ ನಿರ್ಣಾಯಕ ಸಮಯವಾಗಿದ್ದು, ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆಗೆ ಮತ್ತಷ್ಟು ವೇಗ ಕೊಡಬೇಕಾಗಿದೆ. ಆದರೆ, ಇಂಥ ಕ್ಲಿಷ್ಟ ಸಮಯದಲ್ಲೇ ಕೆಲ ಹಾಟ್‌ಸ್ಪಾಟ್‌ ರಾಜ್ಯಗಳು ಪರೀಕ್ಷೆಗಳ ಪ್ರಮಾಣವನ್ನು ತಗ್ಗಿಸಿ ಹುಬ್ಬೇರುವಂತೆ ಮಾಡುತ್ತಿವೆ.

ಸಕ್ರಿಯ  ಗುಣಮುಖ
ದೇಶದ 717 ಜಿಲ್ಲೆಗಳಲ್ಲೀಗ 382 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳಿಗಿಂತಲೂ ಗುಣಮುಖರಾದವರ ಸಂಖ್ಯೆ ಅಧಿಕವಾಗಿದೆ. ಚೇತರಿಕೆ ಹಾಗೂ ಸಕ್ರಿಯ ಪ್ರಕರಣಗಳ ನಡುವೆ ಅತಿದೊಡ್ಡ ಅಂತರ ಹೊಂದಿರುವ ಜಿಲ್ಲೆಯೆಂದರೆ ಗುಜರಾತ್‌ನ ಅಹಮದಾಬಾದ್‌. ಅಲ್ಲಿ ಚೇತರಿಸಿಕೊಂಡವರ ಸಂಖ್ಯೆ ಸಕ್ರಿಯ ಸಂಖ್ಯೆಗಿಂತಲೂ 7 ಸಾವಿರ ಅಧಿಕವಿದೆ! ಆದಾಗ್ಯೂ, ಜಗತ್ತಿನಾದ್ಯಂತ ಈಗ ಚೇತರಿಕೆ ಪ್ರಮಾಣದಲ್ಲಿ ಹೆಚ್ಚಳ ಕಾಣಿಸುತ್ತಿದೆಯಾದರೂ, ಅದು ಹೀಗೇ ಮುಂದುವರಿಯುತ್ತದೆ ಎಂದೇನೂ ಇಲ್ಲ.

ಅತಿಹೆಚ್ಚು ಚೇತರಿಕೆ ಕಂಡ ರಾಜ್ಯ, ಊರು, ಪ್ರದೇಶಗಳಲ್ಲಿ ಹಠಾತ್ತನೆ ಸೋಂಕಿತರ ಸಂಖ್ಯೆ ವೇಗವಾಗಿ ದ್ವಿಗುಣಗೊಂಡ ಉದಾಹರಣೆಗಳನ್ನೂ ನೋಡುತ್ತಿದ್ದೇವೆ. ಉದಾಹರಣೆಗೆ, ಕೇರಳ. ಆ ರಾಜ್ಯದಲ್ಲಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿತು ಎಂದು ಅನಿಸುತ್ತಿರುವಾಗಲೇ ಏಕಾಏಕಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

Advertisement

ಈಗ ಕೇರಳದಲ್ಲಿ ಚೇತರಿಸಿಕೊಂಡವರಿಗಿಂತ, ಸಕ್ರಿಯ ಪ್ರಕರಣಗಳ ಸಂಖ್ಯೆ ಅಧಿಕವಿದೆ. ಇನ್ನು, ಕಳೆದೊಂದು ವಾರದಲ್ಲಿ ದೆಹಲಿ ಮತ್ತು ತಮಿಳುನಾಡಲ್ಲೂ ಚೇತರಿಕೆಯ ಪ್ರಮಾಣದಲ್ಲಿ ತೀವ್ರ ಇಳಿಕೆ ದಾಖಲಾಗಿದೆ.

ಹಠಾತ್ತನೆ ಇಳಿದ ಪರೀಕ್ಷೆಗಳ ಪ್ರಮಾಣ
ಜನವರಿ ತಿಂಗಳಿಂದ ಇಲ್ಲಿಯವರೆಗೂ ದೇಶದಲ್ಲಿ 56 ಲಕ್ಷಕ್ಕೂ ಅಧಿಕ ಜನರನ್ನು ಪರೀಕ್ಷಿಸಲಾಗಿದ್ದು, ಅತಿಹೆಚ್ಚು ಟೆಸ್ಟ್‌ಗಳನ್ನು ನಡೆಸಿದ ದೇಶಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಜನಸಂಖ್ಯೆಯನ್ನು ಪರಿಗಣಿಸಿದಾಗ, ಭಾರತ ಈ ಪಟ್ಟಿಯಲ್ಲಿ ಕನಿಷ್ಠ ಎರಡನೇ ಸ್ಥಾನದಲ್ಲಿರಬೇಕಿತ್ತು ಅಥವಾ 1 ಕೋಟಿ ಜನರನ್ನಾದರೂ ಪರೀಕ್ಷಿಸಬೇಕಿತ್ತು ಎಂದು ಪರಿಣತರು ಹೇಳುತ್ತಾರೆ.

ಆದಾಗ್ಯೂ, ಮಾರ್ಚ್‌-ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಮೇ ಹಾಗೂ ಜೂನ್‌ನಲ್ಲಿ ಪ್ರತಿ ದಿನ ಒಂದು ಲಕ್ಷಕ್ಕಿಂತ ಅಧಿಕ ಪರೀಕ್ಷೆಗಳು ನಡೆಯುತ್ತಿವೆ (ಮೇ 19ರಿಂದ). ಆದರೆ, ಕೆಲವು ರಾಜ್ಯಗಳು ಹಠಾತ್ತನೆ ಪರೀಕ್ಷೆಗಳ ಸಂಖ್ಯೆಯನ್ನೇ ತಗ್ಗಿಸಿಬಿಟ್ಟಿವೆ. ಉದಾಹರಣೆಗೆ, ಅತಿಹೆಚ್ಚು ಸೋಂಕಿತ ರಾಜ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್‌, ತಲಾ ಹತ್ತು ಲಕ್ಷ ಜನಸಂಖ್ಯೆಯಲ್ಲಿ ನಡೆಸಿದ ಪರೀಕ್ಷೆಗಳ ಆಧಾರದಲ್ಲಿ 25ನೇ ಸ್ಥಾನಕ್ಕೆ ಜಾರಿದೆ! ಇತ್ತೀಚೆಗೆ, ಸುಪ್ರೀಂ ಕೋರ್ಟ್‌ ದೆಹಲಿ ಸರ್ಕಾರಕ್ಕಂತೂ ಟೆಸ್ಟಿಂಗ್‌ ಕಡಿಮೆ ಮಾಡಿದ್ದಕ್ಕಾಗಿ ಪ್ರಶ್ನಿಸಿತ್ತು.

ರಾಜ್ಯದ ಪರಿಶ್ರಮಕ್ಕೆ ಶ್ಲಾಘನೆ
ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಆಡಳಿತ, ಆರೋಗ್ಯ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ ಸೋಂಕು ಮುಕ್ತವಾದ ಸುದ್ದಿ ಹೊರಬಿದ್ದಾಗ, ಆ ರಾಷ್ಟ್ರಕ್ಕಿಂತಲೂ ಅಧಿಕ ಜನಸಂಖ್ಯೆಯಿರುವ ಬೆಂಗಳೂರಿನ ಸಾಧನೆಯನ್ನು ಹೋಲಿಕೆ ಮಾಡಿ, ರಾಜ್ಯ ರಾಜಧಾನಿಯ ಶ್ರಮವನ್ನು ಶ್ಲಾಘಿಸಲಾಗಿತ್ತು. ಅದರಲ್ಲೂ ಕಾಂಟ್ಯಾಕ್ಟ್ ಟ್ರೇಸಿಂಗ್‌ನಲ್ಲಿ ರಾಜ್ಯದ ಪ್ರಯತ್ನವು ಮಾದರಿಯಾಗಿ ನಿಲ್ಲುತ್ತಿದೆ.

ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಕೂಡ ಈ ವಿಚಾರದಲ್ಲಿ ಕರ್ನಾಟಕವನ್ನು ಹೊಗಳುತ್ತಾರೆ. “ಕೆಲವು ರಾಜ್ಯಗಳು/ನಗರಗಳು ಸಮರ್ಪಕ ಪರೀಕ್ಷೆಗಳನ್ನು ನಡೆಸದೆಯೇ ಕೋವಿಡ್‌-19 ಬಿಕ್ಕಟ್ಟನ್ನು ನಿರ್ವಹಿಸಬಹುದು ಎಂದು ಭಾವಿಸಿವೆ. ಆದರೆ ಇದು ಸಾಧ್ಯವಿಲ್ಲ. ಪರೀಕ್ಷೆ- ಸಂಪರ್ಕಗಳ ಪತ್ತೆಹಚ್ಚುವಿಕೆ-ಚಿಕಿತ್ಸೆಯ ಜತೆ ಜತೆಗೆ ಕಟ್ಟುನಿಟ್ಟಾದ ಕಂಟೇನ್ಮೆಂಟ್‌ ಹಾಗೂ ಜನರ ಸಹಕಾರ ರೋಗ ತಡೆಗೆ ಕೀಲಿಕೈ ಎನ್ನುವುದಕ್ಕೆ ಕೇರಳ/ಕರ್ನಾಟಕ/ ಕೊರಿಯಾ ಉದಾಹರಣೆಯಾಗಿ ನಿಲ್ಲುತ್ತವೆ” ಎನ್ನುತ್ತಾರವರು.

ಜೂನ್‌ ತಿಂಗಳ ಆರಂಭದಿಂದಲೂ ಕೆಲವು ರಾಜ್ಯಗಳಲ್ಲಿ ಟೆಸ್ಟ್‌ ಪಾಸಿಟಿವಿಟಿ ರೇಟ್‌ ಹೆಚ್ಚಳವಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಪರೀಕ್ಷೆಗೆ ಒಳಪಟ್ಟ ಪ್ರತಿ ನೂರು ಜನರಲ್ಲಿ ಎಷ್ಟು ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತದೋ ಅದನ್ನು ಟೆಸ್ಟ್‌ ಪಾಸಿಟಿವಿಟಿ ರೇಟ್‌ ಎನ್ನಲಾಗುತ್ತದೆ.

ಯಾವ ರಾಜ್ಯಗಳ ಟೆಸ್ಟ್‌ ಪಾಸಿಟಿವಿಟಿ ರೇಟ್‌ ಕಡಿಮೆಯಿದೆಯೋ ಅಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರ್ಥ. ಜೂನ್‌ 12ರ ವೇಳೆಗೆ ಮಹಾರಾಷ್ಟ್ರದಲ್ಲಿ ಪ್ರತಿ ನೂರು ಪರೀಕ್ಷೆಗಳಲ್ಲಿ  15 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ(15.28%), ಇದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಆ ಸಮಯಕ್ಕೆ ದಾಖಲಾದ ಟೆಸ್ಟ್‌ ಪಾಸಿಟಿವಿಟಿ ರೇಟ್‌ 1.48 ಪ್ರತಿಶತದಷ್ಟು!

ಕೋವಿಡ್‌ 19 ಮರಣ ಪ್ರಮಾಣ
ಭಾನುವಾರ ಸಂಜೆ 4 ಗಂಟೆಯ ವೇಳೆಗೆ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 9204 ದಾಖಲಾಗಿದ್ದರೆ, ಇದರಲ್ಲಿ ಮಹಾರಾಷ್ಟ್ರವೊಂದರಲ್ಲೇ ಮೃತರ ಸಂಖ್ಯೆ 3830ಕ್ಕೆ ಏರಿದೆ.

ಈಶಾನ್ಯ ರಾಜ್ಯಗಳಲ್ಲಿ ಏನಾಗುತ್ತಿದೆ?
ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಂ, ತ್ರಿಪುರಾ ಹೊರತುಪಡಿಸಿ ಅನ್ಯ ಭಾಗಗಳಲ್ಲಿ ಕೋವಿಡ್‌-19 ಹಾವಳಿ ಕಡಿಮೆಯೇ ಇದೆ. ಅಸ್ಸಾಂನಲ್ಲಿನ ಬಹುತೇಕ ಸೋಂಕಿತರು ಲಾಕ್‌ಡೌನ್‌ ಸಡಿಲಿಕೆಯಾದ ನಂತರದಿಂದ ಮುಂಬಯಿನಿಂದ ಹಿಂದಿರುಗಿರುವವರು.

ಈಶಾನ್ಯ ರಾಜ್ಯಗಳು ಬಹುತೇಕ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವುದರಿಂದ ಹಾಗೂ ಅಲ್ಲಿ ಜನಸಾಂದ್ರತೆ ಕಡಿಮೆಯಿರುವುದರಿಂದ ಸೋಂಕು ಪ್ರಸರಣವೂ ಅಷ್ಟಾಗಿ ಇಲ್ಲ. ಗಮನಾರ್ಹ ಸಂಗತಿಯೆಂದರೆ, ಈಶಾನ್ಯದ 8 ರಾಜ್ಯಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 10 ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next