Advertisement

ಕೂಲ್‌ ಕ್ಯಾಪ್ಟನ್‌, ಬೆಸ್ಟ್‌ ಫಿನಿಶರ್‌ ಎಂ ಎಸ್ ಧೋನಿ

10:22 PM Aug 15, 2020 | mahesh |

ಬಹುಶಃ ಕ್ರಿಕೆಟ್‌ ಇತಿಹಾಸದಲ್ಲಿ ಧೋನಿಯಷ್ಟು ತಾಳ್ಮೆ ಹಾಗೂ ತಣ್ಣಗಿನ ಸ್ವಭಾವದ ನಾಯಕರು ಮತ್ತೂಬ್ಬರು ಇರಲಿಕ್ಕಿಲ್ಲ. ಅಂಗಳದಲ್ಲಿ ಅವರು ಸಿಡುಕಿನಿಂದ ವರ್ತಿಸದೆ ಎಲ್ಲವನ್ನೂ ಬಹಳ ನಾಜೂಕಿನಿಂದ ನಿಭಾಯಿಸುತ್ತ ಯಶಸ್ಸು ಕಂಡವರು. ಪರಿಸ್ಥಿತಿ ಎಷ್ಟೇ ಜಟಿಲವಾಗಿರಲಿ, ಅವರಲ್ಲಿ ಒತ್ತಡದ ಲವಲೇಶವೂ ಕಾಣುತ್ತಿರಲಿಲ್ಲ. ಹೀಗಾಗಿ ಧೋನಿ “ಕೂಲ್‌ ಕ್ಯಾಪ್ಟನ್‌’ ಎಂದೇ ಹೆಸರುವಾಸಿಯಾಗಿದ್ದಾರೆ.

Advertisement

ಅವರ ನಾಯಕತ್ವದ ಯಶಸ್ಸಿನಲ್ಲಿ ಇನ್ನೂ ಸಾಕಷ್ಟು ಮಾದರಿ ಅಂಶಗಳಿವೆ. ಇದರಲ್ಲಿ ಮುಖ್ಯವಾದುದು ವಿನೀತ ಹಾಗೂ ವಿನಮ್ರತೆ. ಇದು ಅವರ ಸೋಲು-ಗೆಲುವಿನ ಫಲಿತಾಂಶಗಳೆರಡಕ್ಕೂ ಅನ್ವಯಿಸುತ್ತದೆ. ವಿಕೆಟ್‌ ಬಿದ್ದಾಗ ಅಂಗಳದಲ್ಲಿ ವಿಪರೀತ ಹಾರಾಡುವುದಾಗಲಿ, ಬೌಂಡರಿ, ಸಿಕ್ಸರ್‌, ಸೆಂಚುರಿಸಿ ಸಿಡಿಸಿದಾಗ ಭಾರೀ ಸಂಭ್ರಮ ವ್ಯಕ್ತಪಡಿಸುವುದಾಗಲಿ ಇಲ್ಲವೇ ಇಲ್ಲ. ಅಂಪಾಯರ್‌ ತೀರ್ಪಿಗೆ ಸಿಡುಕು ಮೋರೆ ತೋರಿದ ನಿದರ್ಶನವೂ ಕಂಡುಬರದು.

ಸ್ವತಃ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವುದು ಅವರ ಹೆಚ್ಚುಗಾರಿಕೆ. ತಂಡದ ಯಶಸ್ಸಿಗೆ ನಾಯಕನ ಅಗತ್ಯ ಬಹಳಷ್ಟಿದೆ ಎಂದಾಗ ಅವರು ಕೈಕೊಟ್ಟ ನಿದರ್ಶನಗಳು ಬಹಳ ಕಡಿಮೆ. ಕಪ್ತಾನನಾಗಿ ನಿಂತು ಆಡಿ ಗೆಲುವನ್ನು ತಂದಿತ್ತ ಉದಾಹರಣೆಗಳು ಅದೆಷ್ಟೋ. ಇದಕ್ಕೆ 2011ರ ವಿಶ್ವಕಪ್‌ ಫೈನಲ್‌ಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಹೀಗಾಗಿಯೇ ಅವರು “ಬೆಸ್ಟ್‌ ಫಿನಿಶರ್‌’ ಎನಿಸಿಕೊಂಡರು.

ಆಟಗಾರರ ಮೇಲೆ ನಂಬಿಕೆ
ನಾಯಕನಾದವನು ತನ್ನ ಆಟಗಾರರ ಮೇಲೆ ನಂಬಿಕೆ, ವಿಶ್ವಾಸ ಇರಿಸುವುದು ಬಹಳ ಮುಖ್ಯ. ಈ ವಿಷಯದಲ್ಲೂ ಧೋನಿ ಹಿಂದುಳಿದವರಲ್ಲ. ತಾನು ಆರಿಸಿದ 11 ಸದಸ್ಯರ ಮೇಲೆ ಅವರು ತಮಗಿಂತ ಹೆಚ್ಚಿನ ನಂಬಿಕೆ ಹೊಂದಿರುತ್ತಿದ್ದರು. ಉದಾಹರಣೆಗೆ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌. ಅಲ್ಲಿಯ ತನಕ ಇಶಾಂತ್‌ ಶರ್ಮ ಎಸೆತಗಳಿಗೆ ಎದುರಾಳಿಗಳು ಬೆಂಡೆತ್ತಿದ್ದರು. ಆದರೂ ನಿರ್ಣಾಯಕ ಘಟ್ಟದಲ್ಲಿ ಅವರು ಮತ್ತೆ ಇಶಾಂತ್‌ ಕೈಗೇ ಚೆಂಡು ನೀಡುತ್ತಾರೆ. ಅವರು 2 ವಿಕೆಟ್‌ ಉಡಾಯಿಸಿ ಪಂದ್ಯಕ್ಕೆ ತಿರುವು ಕೊಡುತ್ತಾರೆ. ಧೋನಿ ಇರಿಸಿದ ನಂಬಿಕೆ ನಿಜವಾಗುತ್ತದೆ!

ಯಶಸ್ಸಿನ ಶ್ರೇಯಸ್ಸನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದುದು ಧೋನಿ ನಾಯಕತ್ವದ ಬಹಳ ದೊಡ್ಡ ಗುಣ. ಯಾವುದೇ ಸಂದರ್ಶನ, ಪಂದ್ಯಕ್ಕೂ ಮೊದಲು ಹಾಗೂ ಅನಂತರದ ಪತ್ರಿಕಾಗೋಷ್ಠಿಗಳಲ್ಲಿ ಧೋನಿ ತಂಡದ ಸದಸ್ಯರು ಹಾಗೂ ಅವರ ಕೊಡುಗೆಯನ್ನು ಉಲ್ಲೇಖೀಸಲು ಮರೆಯುತ್ತಿರಲಿಲ್ಲ, ಇದು ಕೇವಲ ಬಾಯುಪಚಾರದ ಮಾತುಗಳಾಗಿರುತ್ತಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next