Advertisement

ಇವು ಭಾರತ ಕ್ರಿಕೆಟ್ ನಲ್ಲಿ ತಲ್ಲಣ ಮೂಡಿಸಿದ ವಿವಾದಗಳು..!

04:53 PM Sep 22, 2018 | |

ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಆಟವಲ್ಲ. ಭಾರತೀಯ ಉಪಖಂಡದಲ್ಲಿ ಕ್ರಿಕೆಟ್ ಜನರ ಮನಸ್ಸಿನಲ್ಲಿ ಧರ್ಮವೇ ಆಗಿದೆ. ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್ ನಲ್ಲಿ ವಿವಾದಗಳಿಗೇನು ಕಡಿಮೆಯಿಲ್ಲ. ಭಾರತ ಕ್ರಿಕೆಟ್ ತಂಡದಲ್ಲೂ ಇಂತಹ ವಿವಾದಗಳು ನಡೆದಿವೆ, ಅವು ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿವೆ. ಅಂತಹ ಕೆಲವು ವಿವಾದಗಳು ಇಲ್ಲಿವೆ ನೋಡಿ. 

Advertisement

1) ಸೌರವ್ ಗಂಗೂಲಿ ಮತ್ತು ನಗ್ಮಾ ನಡುವಿನ ಸಂಬಂಧ


ಬಂಗಾಲದ ಪ್ರಿನ್ಸ್ ಖ್ಯಾತಿಯ ಸೌರವ್ ಗಂಗೂಲಿ ತನ್ನ ಆಕ್ರಮಣಕಾರಿ ನಡೆಗಳಿಂದಲೇ ವಿಶ್ವ ಕ್ರಿಕಟ್ ನಲ್ಲಿ ಹೆಸರು ಮಾಡಿದವರು. ತನ್ನ ದಿಟ್ಟತನದ ನಿರ್ಧಾರಗಳಿಂದ ಹಲವಾರು ಬಾರಿ ಸುದ್ದಿಯಾದವರು. ಆದರೆ 2001ರ ಭಾರತ ಆಸ್ಟ್ರೇಲಿಯ ಸರಣಿ ವೇಳೆಗೆ ಈ ಎಡಗೈ ಬ್ಯಾಟ್ಸ್ ಮನ್ ಸುದ್ದಿಯಾಗಿದ್ದು ಮಾತ್ರ ಬೇರೆಯೇ ವಿಷಯಕ್ಕೆ. 
ದಕ್ಷಿಣ ಭಾರತದ ಚಿತ್ರ ನಟಿ ನಗ್ಮಾ ಜೊತೆ ಸೌರವ್ ಗಂಗೂಲಿ ಹೆಸರು ತಳುಕು ಹಾಕಿತ್ತು. ಆದರೆ ಇದು ದೊಡ್ಡ ಸಂಚಲನ ಉಂಟು ಮಾಡಲು ಕಾರಣ ಗಂಗೂಲಿಗೆ ಆಗಲೇ ಮದುವೆಯಾಗಿತ್ತು. ! ಹೌದು ಡೋನಾ ಜೊತೆ ಆಗಲೇ ಮದುವೆ ಆಗಿದ್ದ ಗಂಗೂಲಿ ಮತ್ತು ನಗ್ಮಾ ನಡುವೆ ಅಫೇರ್ ಎಂದು ಸುದ್ದಿಯಾಗಿತ್ತು. ಇವರಿಬ್ಬರು ಆಂಧ್ರ ಪ್ರದೇಶದ ದೇವಸ್ಥಾವೊಂದರಲ್ಲಿ ಪೂಜೆಯಲ್ಲಿ ಕೂಡಾ ಭಾಗವಹಿಸಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಗಂಗೂಲಿ ಪತ್ನಿ ಡೋನಾ ಪತಿಯನ್ನು ಬೆಂಬಲಿಸುತ್ತಾ ಈ ಸುದ್ದಿಯನ್ನು ತಳ್ಳಿ ಹಾಕಿದಾಗ ಪ್ರಕರಣ ಅಂತ್ಯವಾಯಿತು. 

2) ಮ್ಯಾಚ್ ರೆಫ್ರಿ ಮೈಕ್ ಡೆನ್ನಿಸ್ ಪ್ರಕರಣ


ಅದು 2001ರ ಪೋರ್ಟ್ ಎಲಿಜಬೆತ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯ. ಆದರೆ ಇದು ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದು ಮಾತ್ರ ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ . ಮ್ಯಾಚ್ ರೆಫ್ರಿಯಾಗಿದ್ದ ಇಂಗ್ಲೆಂಡ್ ನ ಮೈಕ್ ಡೆನ್ನಿಸ್ ಭಾರತದ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಹೊರಿಸಿ ಒಂದು ಪಂದ್ಯದ ನಿಷೇಧ ವಿಧಿಸಿದರು. ಇದಲ್ಲದೇ ವೀರೇಂದ್ರ ಸೆಹ್ವಾಗ್ ಸೇರಿದಂತೆ, ದೀಪ್ ದಾಸ್ ಗುಪ್ತ, ಹರ್ಭಜನ್ ಸಿಂಗ್, ಶಿವ ಸುಂದರ್ ದಾಸ್ ಅವರಿಗೆ ಅತಿಯಾದ ಅಪೀಲ್ ಮಾಡಿದರೆಂದು ಒಂದು ಟೆಸ್ಟ್ ಪಂದ್ಯ, ನಾಯಕ ಸೌರವ್ ಗಂಗೂಲಿಗೆ ಒಂದು ಟೆಸ್ಟ್, ಎರಡು ಏಕದಿನ ಪಂದ್ಯಗಳ ನಿಷೇಧ ಹೇರಿದರು. 
ರೆಫ್ರಿ ಡೆನ್ನಿಸ್ ಈ ನಿರ್ಧಾರ ಭಾರತದ ಕ್ರೀಡಾಭಿಮಾನಿಗಳಲ್ಲಿ ಆಕ್ರೋಶವನ್ನು ಉಂಟು ಮಾಡಿತ್ತು. ಈ ಪ್ರಕರಣ ಭಾರತದಲ್ಲಿ ಜನಾಂಗೀಯ ನಿಂದನೆಯ ರೂಪ ತಾಳಿತ್ತು.  ದಕ್ಷಿಣಾ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಂದಿನ ಪಂದ್ಯಕ್ಕೆ ಡೆನ್ನಿಸ್ ಅವರನ್ನು ರೆಫ್ರಿ  ಜವಾಬ್ಧಾರಿಯಿಂದ ವಜಾಗೊಳಿಸಿತು.  ಐಸಿಸಿ ಸಚಿನ್ ಮತ್ತು ಗಂಗೂಲಿ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡ ನಂತರ ವಿವಾದ ತಣ್ಣಗಾಯಿತು. 

3) ಭಜ್ಜಿ ಸೈಮಂಡ್ಸ್ ಮಂಕೀ ಗೇಟ್ ಪ್ರಕರಣ


2008ರ ಭಾರತ ಆಸ್ಟ್ರೇಲಿಯ ನಡುವಿನ ಸಿಡ್ನಿ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ಪಂದ್ಯ. ಸರಣಿಯ ಎರಡನೇ ಪಂದ್ಯದ ವೇಳೇ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಆಸೀಸ್ ಆಲ್ ರೌಂಡರ್ ಆಂಡ್ರೂ ಸೈಮಂಡ್ಸ್ ಅವರನ್ನು ಮಂಕೀ ( ಕೋತಿ) ಎಂದು ನಿಂದಿಸಿದರೆಂದು ಸೈಮಂಡ್ಸ್ ಆರೋಪಿಸಿದ್ದರು. ಇದರಿಂದಾಗಿ ಪಂದ್ಯದ ಅಂಪೈರ್ ಗಳು ಭಜ್ಜಿಗೆ ಮೂರು ಪಂದ್ಯ ನಿಷೇಧ ಹೊರಿಸಿದ್ದರು. ನಿಷೇಧದ ವಿರುದ್ದ ಭಜ್ಜಿ ಮೇಲ್ಮನವಿ ಸಲ್ಲಿಸಿದರೂ ಅರ್ಜಿ ತಿರಸ್ಕರಿಸಲಾಯಿತು. 

4) ಸೌರವ್ ಗಂಗೂಲಿ ಮತ್ತು ಚಾಪೆಲ್ ವಿವಾದ

Advertisement


ಈ ಪ್ರಕರಣ ಭಾರತ ಕ್ರಿಕೆಟ್ ನ ದಿಕ್ಕು ದೆಸೆ ಬದಲಾಯಿಸಿದ ವಿವಾದ. ಭಾರತ ತಂಡವನ್ನು ಆಸ್ಟ್ರೇಲಿಯ ತಂಡದಂತೆ ಮಾಡುತ್ತೇನೆ ಎಂದು ಬಂದ ಕೋಚ್ ಗ್ರೇಗ್ ಚಾಪೆಲ್ ತಂಡದಲ್ಲಿ ಅವಾಂತರವನ್ನೇ ಹುಟ್ಟು ಹಾಕಿದರು. ನಾಯಕ ಗಂಗೂಲಿಗೆ ಮತ್ತು ಚಾಪೆಲ್ ಡ್ರೆಸ್ಸಿಂಗ್ ರೂಮ್ ಜಗಳ ದೊಡ್ಡ ವಿವಾದವಾಯಿತು. 
ಗಂಗೂಲಿ ನಾಯಕತ್ವ ತ್ಯಜಿಸಬೇಕು ಎಂದು ಚಾಪೆಲ್ ಹಠ ಹಿಡಿದರೆ, ಅದಕ್ಕೆ ಇತರ ಆಟಗಾರರ ಬೆಂಬಲ ಸಿಗಲಿಲ್ಲ. ಈ ಜಗಳದಿಂದಾಗಿ ಕೊನೆಗೂ 2007ರಲ್ಲಿ ಚಾಪೆಲ್ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಅಂತ್ಯವಾಯಿತು.

5)  ಗಂಭೀರ್ ಮತ್ತು ಶಾಹೀದ್ ಅಫ್ರಿದಿ ಜಗಳ


ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಸಾಕು ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಅತ್ತ ನೆಟ್ಟಿರುತ್ತದೆ. ಆಟಗಾರರಲ್ಲೂ ಕೂಡಾ ಪಂದ್ಯ ಗೆಲ್ಲುವ ಹುಮ್ಮಸ್ಸು ಹೆಚ್ಚಾಗಿರುತ್ತದೆ. ಭಾರತ- ಪಾಕಿಸ್ತಾನ ಪಂದ್ಯದಲ್ಲಿ ಸಣ್ಣ ಮಟ್ಟಿನ ಜಗಳ ಸಾಮಾನ್ಯ. ಆದರೆ 2007ರಲ್ಲಿ ಕಾನ್ಪುರದಲ್ಲಿ ನಡೆದ ಜಗಳ ದೊಡ್ಡ ಮಟ್ಟಿನ ಸುದ್ದಿಯಗಿತ್ತು. ಭಾರತದ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮತ್ತು ಪಾಕಿಸ್ತಾನದ ಶಾಹೀದ್ ಅಫ್ರಿದಿ ಮಾತಿನ ಚಕಮಕಿ ತಾರಕಕ್ಕೇರಿತ್ತು. ಜಗಳ ನಿಲ್ಲಿಸಲು ಸಹ ಆಟಗಾರರು ಮತ್ತು ಅಂಪೈರ್ ಗಳು ಮಧ್ಯಪ್ರವೇಶ ಮಾಡಬೇಕಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ರಿದಿಗೆ ಪಂದ್ಯದ ಸಂಭಾವನೆಯ 95% ಮತ್ತು ಗಂಭೀರ್ ಗೆ 65% ದಂಡ ವಿಧಿಸಲಾಯಿತು. 

6) ಕ್ಯಾಪ್ಟನ್ ಕೂಲ್ ಮೇಲೆ ದಾಖಲಾಗಿತ್ತು ಕ್ರಿಮಿನಲ್ ಕೇಸ್


ಹೌದು, ನೀವಿದನ್ನು ನಂಬಲೇಬೇಕು. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ 2015ರಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಕ್ಯಾಪ್ಟನ್ ಕೂಲ್ ಜಾಹೀರಾತುವೊಂದರಲ್ಲಿ ಹಿಂದೂ ದೇವರು ವಿಷ್ಣುವಿಗೆ ಅಪಮಾನ ಮಾಡಿದ್ದಾರೆಂದು ಕೇಸು ಹಾಕಲಾಗಿತ್ತು. ಬೆಂಗಳೂರಿನಲ್ಲಿ ದಾಖಲಾಗಿದ್ದ ಈ ಕ್ರಿಮಿನಲ್ ಪ್ರಕರಣ 2016ರಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. 

7) ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ


ಹೊಡಿಬಡಿ ಆಟ, ಸಿಕ್ಕಾಪಟ್ಟೆ ಮನೋರಂಜನೆ, ಮೋಜು ಮಸ್ತಿಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ತಲುಪಿದ್ದ ಐಪಿಲ್ ಗೆ ಹೊಡೆತ ನೀಡಿದ್ದು2013 ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣ. ವೇಗದ ಬೌಲರ್ ಶ್ರೀಶಾಂತ್, ಅಜಿತ್ ಚಂಡಿಲಾ, ಅಂಕಿತ್ ಚೌಹಾಣ್ ರನ್ನು ಬುಕ್ಕಿಗಳಿಗೆ ನೆರವು ನೀಡಿದ ಅರೋಪದಡಿ ದೆಹಲಿ ಪೊಲೀಸರು ಬಂಧಿಸಿದ್ದರು. ಬಿಸಿಸಿಐ ಈ ಮೂವರನ್ನು ಎಲ್ಲಾ ಮಾದರಿ ಕ್ರಿಕೆಟ್ ನಿಂದ ನಿಷೇಧ ಹೊರಿಸಿತ್ತು. 2015ರಲ್ಲಿ ನ್ಯಾಯಾಲಯ ಇವರನ್ನು ಖುಲಾಸೆಗೊಳಿಸಿದರೂ ಆಟಗಾರರ ನಿಷೇಧ ಮುಂದುವರಿದಿದೆ.

*ಕೀರ್ತನ್ ಶೆಟ್ಟಿ ಬೋಳ 

Advertisement

Udayavani is now on Telegram. Click here to join our channel and stay updated with the latest news.

Next