Advertisement

Mother of Earth; ಮಂಡ್ಯದಲ್ಲಿ ನಿರ್ಮಾಣ “ಭೂದೇವಿ ಆಧ್ಯಾತ್ಮಿಕ ಕೇಂದ್ರ’

11:56 PM Sep 01, 2023 | Team Udayavani |

ಮಂಡ್ಯ: ಅಮೆರಿಕದ ಪ್ರಸಿದ್ಧ ಸರ್ಜನ್‌ ಜನರಲ್‌ ಹಲ್ಲೇಗೆರೆ ವಿವೇಕ್‌ ಮೂರ್ತಿ ಅವರ ತಂದೆ ಡಾ| ಎಲ್‌.ಎನ್‌.ಮೂರ್ತಿ ಹಲ್ಲೇಗೆರೆ ಅವರ ಸ್ಕೋಪ್‌ ಫೌಂಡೇಷನ್‌ ವತಿಯಿಂದ ಭೂದೇವಿ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರ (ಮದರ್‌ ಆಫ್‌ ಅರ್ಥ್)ವನ್ನು ಮಂಡ್ಯದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು, ಇದರ ಜತೆಗೆ 14 ಅಡಿ ಎತ್ತರದ ಭೂದೇವಿ ಪ್ರತಿಮೆಯನ್ನು ನಿರ್ಮಿಸುವ ಯೋಜನೆಯನ್ನೂ ರೂಪಿಸಲಾಗಿದೆ.

Advertisement

ಏಕತೆಯ ಸಂಕೇತ ಎಂದು ಕರೆಯಲಾಗುವ ಈ ಯೋಜನೆಯು ಪ್ರಪಂಚದಲ್ಲೇ ಮೊದಲನೆಯದಾಗಿದೆ. ಜಗತ್ತಿನ ಯಾವುದೇ ಭಾಗದಿಂದ ಯಾವುದೇ ವ್ಯಕ್ತಿ ಇದರೊಂದಿಗೆ ಸಂಪರ್ಕ ಸಾ ಧಿಸಬಹುದು ಮತ್ತು ಸಂಬಂಧ ಹೊಂದಬಹುದು. ಸುಮಾರು 70 ಕೋ. ರೂ. ವೆಚ್ಚದಲ್ಲಿ ತಮ್ಮ ಸ್ವಗ್ರಾಮದ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದ ತಮ್ಮ 12 ಎಕ್ರೆ ಭೂಮಿಯಲ್ಲಿ ಮದರ್‌ ಆಫ್‌ ಅರ್ಥ್ ನಿರ್ಮಾಣವಾಗಲಿದೆ.

ಏಕಶಿಲೆ ಕಲ್ಲು ಆಗಮನ
14 ಅಡಿ ಎತ್ತರದ ಮದರ್‌ ಆಫ್‌ ಅರ್ಥ್ ಅಂದರೆ ಭೂಮಿತಾಯಿಯ ಪ್ರತಿಮೆಯನ್ನು ಒಂದೇ ಬಂಡೆಯಿಂದ ಪ್ರಸಿದ್ಧ ಶಿಲ್ಪಿಗಳಿಂದ ಕೆತ್ತಲಾಗುತ್ತಿದೆ. ಪ್ರತಿಮೆಯಲ್ಲಿ ನೀರು ಮತ್ತು ಅಲೆಗಳ ಚಿಹ್ನೆಗಳಿರುತ್ತವೆ. ಇದನ್ನು ನೀಲಿ ಗ್ರಾನೈಟ್‌ ಮತ್ತು ವೈಟ್‌ಸ್ಟೋನ್‌ನಿಂದ ನಿರ್ಮಿಸಲಾಗುತ್ತಿದೆ. ಚಿಕ್ಕಬಳ್ಳಾಪುರದ ಕ್ವಾರೆಯಿಂದ ಏಕಶಿಲೆ ಗ್ರಾಮಕ್ಕೆ ಬರಲಿದೆ.

ಖ್ಯಾತ ಶಿಲ್ಪಿಗಳಿಂದ ವಿನ್ಯಾಸ
ಸುಭಾಷ್‌ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಕೆತ್ತಿದ್ದ ಖ್ಯಾತ ಶಿಲ್ಪಿ ಯೋಗಿರಾಜ್‌ ಅವರು ಭೂದೇವಿ ಪ್ರತಿಮೆಯನ್ನು ಕೆತ್ತಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಮುಖ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕಾರರನ್ನೂ ಸಂಪರ್ಕಿಸಿದ್ದು, ಈ ಆಧ್ಯಾತ್ಮಿಕ ಕೇಂದ್ರದಲ್ಲಿ ಸಾಕ್ರಟೀಸ್‌ನಿಂದ ಸ್ವಾಮಿ ವಿವೇಕಾನಂದರವರೆಗಿನ 64 ದಾರ್ಶನಿಕರ ಪ್ರತಿಮೆಗಳು ಇರಲಿವೆ ಎಂದು ಮಾಹಿತಿ ನೀಡಿದ್ದಾರೆ.

ಸುಮಾರು 13 ದೇಶಗಳಲ್ಲಿರುವ ಪ್ರತಿಷ್ಠಾನದ ಸ್ವಯಂ ಸೇವಕರೊಂದಿಗೆ ಹಲ್ಲೇಗೆರೆ ಡಾ| ಮೂರ್ತಿ ಸಭೆ ನಡೆಸಿದ್ದು, ಡಿಸೆಂಬರ್‌ ಅಂತ್ಯ ಹಾಗೂ ಜನವರಿ ಮೊದಲ ವಾರದಲ್ಲಿ ಭೂಮಿಪೂಜೆ ಸಮಾರಂಭ ನಡೆಸಲು ತಯಾರಿ ನಡೆಸಿದ್ದಾರೆ.

Advertisement

ಸೆ.10ರಂದು ವಾಷಿಂಗ್ಟನ್‌ ಡಿಸಿಯಲ್ಲಿ ಉದ್ಘಾಟನೆ
ಮದರ್‌ ಆಫ್‌ ಅರ್ಥ್ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ವಾಕಥಾನ್‌ ಕಾರ್ಯಕ್ರಮವನ್ನು ಯುಎಸ್‌ನ ಪ್ರಥಮ ಮಹಿಳೆ ಜಿಲ್‌ ಬಿಡೆನ್‌ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಸೆ.10ರಂದು ವಾಷಿಂಗ್ಟನ್‌ ಡಿಸಿಯಲ್ಲಿ ಉದ್ಘಾಟಿಸಲಿದ್ದಾರೆ. ಅಲ್ಲದೆ ವಿದೇಶದ ಬೇರೆ ಬೇರೆ ನಗರಗಳಲ್ಲೂ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಡಾ| ಮೂರ್ತಿ ತಿಳಿಸಿದ್ದಾರೆ.

ನಮ್ಮ ಕುಟುಂಬವು ಹಲವಾರು ಚಾರಿಟಿ ಚಟುವಟಿಕೆಗಳಿಗೆ ಹಣ ನೀಡಿದೆ. ಈ ಯೋಜನೆಗೆ ಸುಮಾರು 70 ಕೋಟಿ ರೂ. ಬೇಕಾಗಿರುವುದರಿಂದ ನಾವು ಕೆಲವು ದಾನಿಗಳನ್ನು ಸಂಪರ್ಕಿಸಲು ಮುಂದಾಗಿದ್ದೇವೆ. ಒಟ್ಟಾರೆ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ವಿಶ್ವದ ಮೊದಲ ಭೂತಾಯಿ ಪ್ರತಿಮೆ ಹಾಗೂ ಆಧ್ಯಾತ್ಮಿಕ ಕೇಂದ್ರವಾಗುತ್ತಿರುವುದು ಖುಷಿಯ ವಿಚಾರ ಎಂದು ಹನಕೆರೆ ಎಂ.ಶ್ರೀನಿವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು ಹಾಗೂ ಡಾ| ಮೂರ್ತಿ ಅವರ ಸಹೋದರ ವಸಂತ್‌ಕುಮಾರ್‌ ತಿಳಿಸಿದರು.

ಬರಾಕ್‌ ಒಬಾಮಾಗೆ ಆಹ್ವಾನ
ಭೂಮಿಪೂಜೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್‌ ಒಬಾಮಾ ಅವರನ್ನು ಆಹ್ವಾನಿಸಲು ತಯಾರಿ ನಡೆಸಿದ್ದಾರೆ. ಎಂಟು ಎಕ್ರೆ ಜಾಗದಲ್ಲಿ ನಿರ್ಮಾಣವಾಗಲಿರುವ ಯೋಗ ಮತ್ತು ಧ್ಯಾನ ಸಾತ್ವಿಕ ಕೇಂದ್ರದ ಶಂಕುಸ್ಥಾಪನೆಗೆ ಟಿಬೆಟಿಯನ್‌ ಆಧ್ಯಾತ್ಮಿಕ ಗುರು ದಲೈಲಾಮಾ ಅವರನ್ನು ಆಹ್ವಾನಿಸಲು ಪ್ರತಿಷ್ಠಾನವು ಯೋಜನೆ ರೂಪಿಸಿದೆ ಎಂದು ಕರ್ನಾಟಕ ಸಂಘದ ಪ್ರೊ| ಜಯಪ್ರಕಾಶ್‌ ಗೌಡ ತಿಳಿಸಿದ್ದಾರೆ.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next