Advertisement

ಕುರಕುಂಟಾ ಸಿಮೆಂಟ್‌ ಫ್ಯಾಕ್ಟರಿ ಪುನಾರಂಭಕ್ಕೆ ಸಮ್ಮತಿ

02:41 PM Mar 26, 2017 | Team Udayavani |

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕುರಕುಂಟಾ ಸಿಮೆಂಟ್‌ ಫ್ಯಾಕ್ಟರಿಯನ್ನು ಪುನರಾರಂಭಿಸುವ ಬಗ್ಗೆ ಕೇಂದ್ರದ ಭಾರಿ ಕೈಗಾರಿಕಾ ಸಚಿವರು ಸಮ್ಮತಿಸಿದ್ದು, ಈ ಕುರಿತು ರಾಜ್ಯ ಸರ್ಕಾರದಿಂದ ಎಲ್ಲ ಕ್ರಮ ಕೈಗೊಂಡು ಎಂಟಹತ್ತು ತಿಂಗಳಲ್ಲಿ ಫ್ಯಾಕ್ಟರಿ ಪುನರಾರಂಭಿಸುವ ಬಗ್ಗೆ ಜಿಲ್ಲಾ ಸಚಿವರು ತೀವ್ರ ಪ್ರಯತ್ನ ಮಾಡಬೇಕೆಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

Advertisement

ಮಹಾನಗರ ಪಾಲಿಕೆಯಿಂದ ರಾಜ್ಯ ಮುಕ್ತ ಹಣಕಾಸು ನಿಧಿಯಡಿ 2 ಕೋಟಿ ರೂ. ಮೆಹಬೂಬ ಗುಲ್‌ಶನ್‌ ಉದ್ಯಾನವನ ಅಭಿವೃದ್ಧಿ ಕಾಮಗಾರಿಯ ಅಡಿಗಲ್ಲು ಹಾಗೂ ನಗರದ ಜೇವರ್ಗಿ ರಸ್ತೆಯ ಜಿ.ಡಿ.ಎ. ನಿರ್ಮಿತ ಅಟರ್‌ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 1 ಕೋಟಿ ರೂ. ವೆಚ್ಚದಿಂದ ನಿರ್ಮಿಸಿರುವ ಸಾರ್ವಜನಿಕ ಶವಾಗಾರದ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. 

ಕೇಂದ್ರ ಸ್ವಾಮ್ಯದ ಈ ಫ್ಯಾಕ್ಟರಿಯು 15-20 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದು, ಫ್ಯಾಕ್ಟರಿ ಪುನರಾರಂಭಕ್ಕೆ ಭೂಮಿ ಮತ್ತು ನೀರಿನ ಸೌಲಭ್ಯವಿದೆ. ಈಗ ಸಿಮೆಂಟ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪುನರ್‌ ಆರಂಭಿಸುವುದರಿಂದ  ಈ ಭಾಗದ 400-500 ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ.

ಅಲ್ಲದೇ ಇತರ ಜನರಿಗೂ ಅನುಕೂಲವಾಗಲಿದೆ ಎಂದರು. ರಾಜ್ಯ ಸರ್ಕಾರವು ಈ ಭಾಗದಲ್ಲಿ ಜಾರಿಗೊಂಡ 371(ಜೆ)ನೇ ಕಲಂ ಅನ್ವಯ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈವರೆಗೆ ಒದಗಿಸಿದ 3000 ಕೋಟಿ ರೂ. ಅನುದಾನವನ್ನು ಮೇ ತಿಂಗಳೊಳಗೆ ಹಾಗೂ 2017-18ನೇ ಸಾಲಿನ ಬಜೆಟ್ಟಿನಲ್ಲಿ ಒದಗಿಸಿದ 1500 ಕೋಟಿ ರೂ. ಖರ್ಚು ಮಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹೇಳಿದರು.

ಕಾಮಗಾರಿಗಳಲ್ಲಿ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಜನಪ್ರತಿನಿಧಿಗಳು ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಣ ಖರ್ಚು ಮಾಡುವ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕಲ್ಲದೇ ಯಾವುದೇ ಕಾರಣಕ್ಕೂ ಹಣ ಉಳಿಯದಂತೆ ನೋಡಿಕೊಳ್ಳಬೇಕು ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಈ ಭಾಗದ ಅಭಿವೃದ್ಧಿಗಾಗಿ ಮಂಜೂರಾದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು.

Advertisement

ಅಭಿವೃದ್ಧಿ ಕಾರ್ಯಗಳಿಗಾಗಿ ಎಲ್ಲರೂ ಒಗ್ಗಟ್ಟಾಗಿ ಹೆಚ್ಚಿನ ಹಣ ತರಲು ಪ್ರಯತ್ನಿಸಿದಾಗ ಮಾತ್ರ ಕಲಬುರಗಿ ಜಿಲ್ಲೆ ಹಾಗೂ ನಗರ ಅಭಿವೃದ್ಧಿಯಾಗಲು ಸಾಧ್ಯವಿದೆ. ಇಂದು ಪ್ರಾರಂಭವಾದ ಮೆಹಬೂಬ ಗುಲ್‌ಶನ್‌ ಉದ್ಯಾನವನ ಪೂರ್ಣಗೊಂಡ ಬಳಿಕ ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಉದ್ಯಾನವನಕ್ಕೆ ಸುಂದರ ಗೇಟುಗಳನ್ನು ನಿರ್ಮಿಸಬೇಕು ಹಾಗೂ ವೀರಶೈವ ಕಲ್ಯಾಣ ಮಂಟಪ ರಸ್ತೆ ದುರಸ್ತಿಗೊಳಸಬೇಕು. 

ನಗರದಲ್ಲಿ ಹೆಚ್ಚು ಗಿಡಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಲಬುರಗಿ ಮಹಾನಗರಪಾಲಿಕೆ ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಉದ್ಯಾನವನಕ್ಕಾಗಿ ಮೀಸಲಿಟ್ಟ ನಿವೇಶವನ್ನು ಬೇರೆ ಉದ್ದೇಶಕ್ಕೆ ಬಳಸದೇ ಉದ್ಯಾನವನವನ್ನೇ ನಿರ್ಮಿಸಬೇಕು. ಇದಲ್ಲದೇ ನಗರದಲ್ಲಿ ಮನೆ ನಿರ್ಮಾಣಕ್ಕಾಗಿ ಅನುಮತಿ ಪತ್ರ ನೀಡುವ ಸಂದರ್ಭದಲ್ಲಿ ಗಿಡಗಳನ್ನು ನೆಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದರು. 

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಈ ಭಾಗದಲ್ಲಿ 371(ಜೆ) ಜಾರಿಯಾಗಿರುವುದರಿಂದ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ಸಿಗುತ್ತಿದೆ ಹಾಗೂ ಹೆಚ್ಚಿನ ಅನುದಾನ ಲಭ್ಯತೆಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿವೆ. ವಿಶ್ವ ಬ್ಯಾಂಕ್‌ ಆರ್ಥಿಕ ನೆರವಿನಿಂದ ಸುಮಾರು 600 ಕೋಟಿ ರೂ. ವೆಚ್ಚದಿಂದ ನಗರದ ಎಲ್ಲ ವಾರ್ಡುಗಳಲ್ಲಿ 24ಗಿ7 ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗುವುದು. 

ಇದಕ್ಕಾಗಿ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದೆ. ಶ್ರೀನಿವಾಸ ಸರಡಗಿ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವನ್ನು ಬರುವ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕಲಬುರಗಿ ನಗರವನ್ನು ಸುಂದರ ನಗರವನ್ನಾಗಿಸಲು ಸರ್ಕಾರ ಬದ್ಧವಾಗಿದೆ ಎಂದರು. 

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ್‌ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಖಮರುಲ್‌ ಇಸ್ಲಾಂ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್‌, ಬಾಗವಾನ್‌, ಮಹಾನಗರ ಪಾಲಿಕೆ ಪೂಜ್ಯ ಮಹಾಪೌರ ಸೈಯ್ಯದ್‌ ಅಹ್ಮದ್‌, ಕಾಡಾ ಅಧ್ಯಕ್ಷ ಮಹಾಂತಪ್ಪ  ಸಂಗಾವಿ,

ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ, ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹುಲಿಗೆಪ್ಪ ಕನಕಗಿರಿ, ಸದಸ್ಯರಾದ ಮಲ್ಲಿಕಾರ್ಜುನ ತೇಂಗಳಿ, ಅಬ್ದುಲ್‌ ರಹೀಂ ಮುಲ್ಲಾ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next