Advertisement

ಗುಂಪಲಡ್ಕ-ಸರೊಳಿಮೂಲೆ ರಸ್ತೆ ಅಭಿವೃದ್ಧಿ ಅನಿವಾರ್ಯ

01:30 PM May 23, 2018 | Team Udayavani |

ವಿಟ್ಲ : ವಿಟ್ಲಕಸಬಾ, ವಿಟ್ಲ ಮುಟ್ನೂರು, ಕೇಪು, ಪುಣಚ ಗ್ರಾಮಗಳನ್ನು ಸಂಪರ್ಕಿಸುವ ಒಳ ರಸ್ತೆಗೆ ಕಾಯಕಲ್ಪವಾಗ ಬೇಕಾಗಿದೆ. ಗುಂಪಲಡ್ಕದಿಂದ ಸರೊಳಿಮೂಲೆ ವರೆಗಿನ ಸುಮಾರು 4 ಕಿ.ಮೀ. ದೂರದ ಈ ರಸ್ತೆಯ ಮುಕ್ಕಾಲುಭಾಗ ಸಂಪೂರ್ಣ ಹದಗೆಟ್ಟಿದೆ. ಇದನ್ನು ಅಭಿವೃದ್ಧಿಪಡಿಸ ಬೇಕೆಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.

Advertisement

ಎಲ್ಲಿದೆ ಈ ರಸ್ತೆ ?
ವಿಟ್ಲ ಗ್ರಾಮದ ಉಕ್ಕುಡ ದರ್ಬೆಯಿಂದ ಕೇಪು-ಪುಣಚ-ಪುತ್ತೂರು ರಸ್ತೆಯಲ್ಲಿ 2 ಕಿ.ಮೀ. ದೂರದಲ್ಲಿ ಎಡಕ್ಕೆ ತಿರುಗಬೇಕು. ಅದೇ ಗುಂಪಲಡ್ಕ. ಇಲ್ಲಿ ಮೇಲಕ್ಕೇರಿದ ಈ ರಸ್ತೆ ಸರೊಳಿಮೂಲೆಯ ತನಕ ಸಾಗುತ್ತದೆ. ಗುಂಪಲಡ್ಕದಲ್ಲಿ ಸ್ವಲ್ಪ ಭಾಗ ವಿಟ್ಲಕಸಬಾ ಗ್ರಾಮಕ್ಕೆ ಸಂಬಂಧಪಟ್ಟಿದೆ. ಬಳಿಕ ಕೇಪು ಗ್ರಾಮದಲ್ಲಿ ಹಾದುಹೋಗುತ್ತದೆ. ವಿಟ್ಲ ಗ್ರಾಮದ ಚಂದಳಿಕೆ – ವಿಟ್ಲಮುಟ್ನೂರು ಗ್ರಾಮದ ಮಾಡತ್ತಡ್ಕ ಮತ್ತು ಪುಣಚ ಗ್ರಾಮದ ಅಜ್ಜಿನಡ್ಜ ಸಂಪರ್ಕ ರಸ್ತೆಗೆ ದಡ್ಡಲಡ್ಕ ಎಂಬಲ್ಲಿ ಗುಂಪಲಡ್ಕ-ಸರೊಳಿಮೂಲೆ ರಸ್ತೆ ಸೇರಿಕೊಳ್ಳುತ್ತದೆ. ಇದು ಜಿಲ್ಲಾ ಪಂಚಾಯತ್‌ ರಸ್ತೆ. ಕೇವಲ ನಾಲ್ಕು ಕಿ.ಮೀ. ದೂರದ ರಸ್ತೆಯಾಗಿದ್ದರೂ ಇತರ ಗ್ರಾಮಗಳಿಗೆ ಸುಲಭ ಸಂಪರ್ಕ ಮಾರ್ಗವಾಗಿರುವುದರಿಂದ ಅಭಿವೃದ್ಧಿ ಯಾಗಬೇಕಾಗಿರುವುದು ಅನಿವಾರ್ಯ.

ಉಪಯುಕ್ತ ಯಾರಿಗೆ ?
ಈ ರಸ್ತೆ ವಿಟ್ಲ ಮತ್ತು ಕೇಪು ಗ್ರಾಮದ ಜನತೆಗೆ ಹೆಚ್ಚು ಪ್ರಯೋಜನ ಸಿಗುವುದಿಲ್ಲ. ಆದರೆ ಈ ಭಾಗದಿಂದ ಬೇರೆ ಗ್ರಾಮಗಳನ್ನು ಸಂಪರ್ಕಿಸುವುದಕ್ಕೆ ಈ ರಸ್ತೆಯನ್ನು ಅವಲಂಬಿಸುವವರಿದ್ದಾರೆ.

ಪ.ಜಾ. ಮತ್ತು ಪ.ಪಂ.ದ ಅನೇಕ ಕುಟುಂಬಗಳೂ ಈ ರಸ್ತೆಯನ್ನೇ ಅವಲಂಬಿಸಬೇಕು. ವಿಟ್ಲಮುಟ್ನೂರು ಗ್ರಾಮದ ಜನತೆಗೆ ಅತೀ ಉಪಯುಕ್ತ. ನೂರಾರು ಮನೆಗಳಿಗೆ ಅವಶ್ಯವಾಗಿರುವ ಈ ರಸ್ತೆಯ ಮೂಲಕ ಆಲಂಗಾರು ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಧಾರ್ಮಿಕ ಕೇಂದ್ರಗಳನ್ನು ಹತ್ತಿರದಿಂದ ತಲುಪುವುದಕ್ಕೆ ಸಾಧ್ಯವಿದೆ. ಈ ರಸ್ತೆಯ ಹಿಂದೆ ಮತ್ತು ಮುಂದೆ ಉತ್ತಮ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ ರಸ್ತೆ ಪೂರ್ತಿ ಅಭಿವೃದ್ಧಿಯಾಗಲೇಬೇಕಾಗಿದೆ.

ಅನುದಾನ ಬಂದಿದೆಯೇ?
ಪಕ್ಷ ಬೇಧವಿಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರ ಅವಧಿಯಲ್ಲಿ ಈ ರಸ್ತೆಗೆ ಅನುದಾನ ಬಂದಿದೆ. ಜಿ.ಪಂ. ರಸ್ತೆಗೆ ಅನುದಾನ ಹೆಚ್ಚಿರುವುದಿಲ್ಲ. ಅರ್ಧಂಬರ್ಧ ಅನುದಾನ ಸಿಕ್ಕಿರುವುದರಿಂದ ಅಲ್ಲಲ್ಲಿ ಅಭಿವೃದ್ಧಿಯಾಗಿದೆ. ನೂರಿನ್ನೂರು ಮೀಟರ್‌ ದೂರ ಕಾಂಕ್ರೀಟ್‌ ರಸ್ತೆಯೂ ನಿರ್ಮಾಣವಾಗಿದೆ. ಈ ರಸ್ತೆ ಸುಸಜ್ಜಿತವಾಗಿ, ಸರ್ವಋತು ರಸ್ತೆಯನ್ನಾಗಿಸಬೇಕೆಂದು ಇಲ್ಲಿನ ಜನತೆ ಆಗ್ರಹಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ಈ ರಸ್ತೆಗೆ ಸುಮಾರು 58 ಲಕ್ಷ ರೂ. ಅನುದಾನ ಬಂದಿದೆ. ಆದರೆ ಅದು ಸಾಲದೆ, ರಸ್ತೆ ಪೂರ್ತಿಯಾಗಬೇಕಾದರೆ ಸುಮಾರು 1 ಕೋಟಿ ರೂ. ಬೃಹತ್‌ ಯೋಜನೆ ಅತೀ ಅಗತ್ಯ.

Advertisement

ಇನ್ನಷ್ಟು ಅನುದಾನಕ್ಕೆ ಪ್ರಯತ್ನ 
ಈ ರಸ್ತೆಗೆ ಪ್ರಥಮವಾಗಿ 5 ಲಕ್ಷ ರೂ. ಅನುದಾನ ಬಂದಿತ್ತು. ಬಳಿಕ ಶೋಭಾ ಕರಂದ್ಲಾಜೆ ಅವರು ಗ್ರಾಮೀಣಾಭಿವೃದ್ಧಿ
ಸಚಿವರಾಗಿದ್ದಾಗ 20 ಲಕ್ಷ ರೂ. ಅನುದಾನ, ಸಂಸದ ನಳಿನ್‌ ಅವರ 5 ಲಕ್ಷ ರೂ. ಅನುದಾನ, ಮಲ್ಲಿಕಾಪ್ರಸಾದ್‌ ಶಾಸಕತ್ವದ ಅವಧಿಯಲ್ಲಿ 10 ಲಕ್ಷ ರೂ. ಮತ್ತು ಶಕುಂತಳಾ ಟಿ. ಶೆಟ್ಟಿ ಅವರ ಮೂಲಕ ಪ.ಪಂ./ಪ.ಜಾ. ರಸ್ತೆ ಕಾಂಕ್ರೀಟ್‌ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಮೂಲಕ 17 ಲಕ್ಷ ರೂ. ಅನುದಾನ ಬಂದಿದೆ. ಇನ್ನಷ್ಟು ಅನುದಾನಕ್ಕೆ ಪ್ರಯತ್ನವಾಗುತ್ತಿದೆ. ಆ ರಸ್ತೆ ಅಭಿವೃದ್ಧಿಯಾಗಬೇಕೆಂಬ ಬೇಡಿಕೆಯೂ ಇದೆ.
– ಮಹಾಬಲೇಶ್ವರ ಭಟ್‌ ಆಲಂಗಾರು
ಗ್ರಾ.ಪಂ. ಸದಸ್ಯರು

 ಉದಯಶಂಕರ್‌ ನೀರ್ಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next