Advertisement

ಉಪಚುನಾವಣೆಯಲ್ಲಿ ಕೈ-ದಳ ಹಣಾಹಣಿ

04:22 PM May 28, 2018 | Team Udayavani |

ರಾಮನಗರ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಏನಿದ್ದರು ವಿಧಾನಸೌಧಕ್ಕೆ ಸೀಮಿತ ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರು ಸ್ಪಷ್ಟನೆ ನೀಡಿರುವುದು, ರಾಮನಗರದ ಉಪಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ ನಿಶ್ಚಯವಾದಂತಿದೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿಯನ್ನಾಗಿ ಸಿ.ಪಿ.ಯೋಗೇಶ್ವರ್‌ ರನ್ನು ಕಣ್ಣಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.

Advertisement

ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ವೇಳೆ ಜೆಡಿಎಸ್‌ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮೈತ್ರಿ ಏನಿದ್ದರೂ ಆಡಳಿತಕ್ಕೆ ಮಾತ್ರ ಎಂದು ಫ‌ರ್ವಾನು ಹೊರೆಡಿಸಿರುವುದು ರಾಮನಗರ ಕ್ಷೇತ್ರದ ಉಪಚುನಾವಣೆಗೂ ಅನ್ವಯಿಸಲಿದೆ. ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಈ ಹೇಳಿಕೆ ಪ್ರಭಾವ ಬೀರಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಡಿ.ಕೆ. ಸುರೇಶ್‌ರನ್ನು ಕಟ್ಟಿ ಹಾಕುವ ತಂತ್ರ ಇದು ಎಂಬ ಅಭಿಪ್ರಾಯ ಈಗಾಗಲೆ ಜಿಲ್ಲಾ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. ದೇವೇಗೌಡರ ಈ ರಾಜಕೀಯ ಸೂಕ್ಷವನ್ನು ಅರಿತಿರುವ ಸಂಸದ ಡಿ.ಕೆ. ಸುರೇಶ್‌ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಟ್ಟು ಸಡಿಲಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.

ಅನಿತಾ ಕುಮಾರಸ್ವಾಮಿ ಅಭ್ಯರ್ಥಿ: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಚ್‌.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಲಿದ್ದು ಜೆಡಿಎಸ್‌ನಿಂದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್‌ ಮೂಲಗಳು ಸ್ಪಷ್ಟಪಡಿಸಿವೆ.

ಮೈತ್ರಿ ಇಲ್ಲ ಎಂದು ಎಚ್‌.ಡಿ.ದೇವೇಗೌಡರು ಹೇಳಿರುವುದರಿಂದ ಕೆರಳಿರುವ ಕಾಂಗ್ರೆಸ್‌ ಕಾರ್ಯಕರ್ತರು ಇಕ್ಬಾಲ್‌ ಹುಸೇನ್‌ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಮೇ 12ರಂದು ನಡೆದ ಚುನಾವಣೆಯಲ್ಲಿ ಇಕ್ಬಾಲ್‌ ಹುಸೇನ್‌ 70 ಸಾವಿರ ಮತಗಳನ್ನುಗಳಿಸಿ ಪ್ರಬಲ ಪೈಪೋಟಿ ನೀಡಿ ಸೋಲುಂಡಿದ್ದಾರೆ.
ಅನುಕಂಪದ ಅಲೆ ವರ್ಕೌಟ್‌ ಆಗಬಹುದು ಎಂಬುದು ಕಾರ್ಯಕರ್ತರ ಅಭಿಪ್ರಾಯ.

ಡಿಕೆಶಿ ಚಿತ್ತ: ಲೋಕಸಭಾ ಚುನಾವಣೆಯ ಮೇಲೆ ಕಾಂಗ್ರೆಸ್‌ ಕಣ್ಣು! ಡಿಕೆಶಿಗೆ ಜಡಿಎಸ್‌ ಬಗ್ಗೆ ಮೃದು ಧೋರಣೆ!
ಇನ್ನೊಂದು ವರ್ಷದಲ್ಲಿ ಎದುರಾಗುವ ಲೋಕಸಭಾ ಚುನಾವಣೆಯತ್ತ ಡಿ.ಕೆ.ಶಿವಕುಮಾರ್‌ ಚಿತ್ತ ನೆಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಡಿ.ಕೆ.ಸುರೇಶ್‌ ಮತ್ತೆ ಗೆಲ್ಲಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ರಾಮನಗರ ಕ್ಷೇತ್ರದ ಬಗ್ಗೆ ಡಿಕೆ ಸಹೋದರರು ಮೃದು ಧೋರಣೆ ತಳೆದು, ಲೋಕಸಭಾ
ಚುನಾವಣೆಯಲ್ಲಿ ಜೆಡಿಎಸ್‌ನ ಸಹಕಾರ ಪಡೆಯಲು ನಿಶ್ವಯಸಿದ್ದಾರೆ ಎನ್ನಲಾಗಿದೆ. ಇದು ಸತ್ಯವಾದರೆ ಇಕ್ಬಾಲ್‌ ಹುಸೇನ್‌ ಮತ್ತೆ ಸ್ಪರ್ಧಿಸಲು ಅವಕಾಶ ಕೊಡೋಲ್ಲ ಎಂಬ ಅಭಿಪ್ರಾಯಗಳು ಕಾಂಗ್ರೆಸ್‌ ಪಾಳಯದಲ್ಲಿ ಕೇಳಿಬಂದಿವೆ. ಕೇವಲ 22636 ಮತಗಳ ಅಂತರದಿಂದ ಸೋಲುಂಡಿರುವುದರಿಂದ ಅವರಿಗೆ ಅನುಕಂಪದ ಅಲೆ ಎದ್ದು ಅನಿತಾ ಅವರ ಗೆಲುವಿಗೆ ತೊಂದರೆ ಆದರೆ? ಎಂಬ ಪ್ರಶ್ನೆಯೂ ಡಿಕೆಶಿ ಸಹೋದರರಿಗೆ ಎದುರಾಗಿದೆ. ಹೀಗಾಗಿ ಇಕ್ಬಾಲ್‌ ಹುಸೇನ್‌ ಬದಲಿಗೆ ಬೇರೊಬ್ಬರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

Advertisement

ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next