Advertisement

ಕಾಂಗ್ರೆಸ್‌, ಜೆಡಿಎಸ್‌ ಮೇಲೆ ಸಿ.ಟಿ.ರವಿ ವಾಗ್ಧಾಳಿ

07:25 AM Mar 06, 2019 | |

ಹಾಸನ: ಕಾಂಗ್ರೆಸ್‌, ಜೆಡಿಎಸ್‌ನವರದು ಕುಟುಂಬ ರಾಜಕಾರಣ. ಕುಟುಂಬದವರ ಹೊರತು ಪಕ್ಷದ ಸಮರ್ಥ ನಾಯಕರು ಆ ಪಕ್ಷಗಳ ಮುಖಂಡರಿಗೆ ಕಾಣಿಸುವುದೇ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ವಾಗ್ಧಾಳಿ ನಡೆಸಿದರು.

Advertisement

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಬಿಜೆಪಿ ಏರ್ಪಡಿಸಿದ್ದ  ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಬಿಜೆಪಿಯಲ್ಲಿ ಸಾಮರ್ಥಯವಿರುವವರು ಉನ್ನತ ಹುದ್ದೆಗೆ ಏರುತ್ತಾರೆ. ಹಾಗಾಗಿಇ ಬಿಜೆಪಿಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ಆದರೇ ಮಕ್ಕಳು ಹಾಗೂ ಮೊಮ್ಮಗನನ್ನು ರಾಜಕಾರಣದಲ್ಲಿ ಬೆಳೆಸುವ  ಕುಟುಂಬದ ರಾಜಕಾರಣ ರಾಜ್ಯದಲ್ಲಿ ಒಂದು ಕುಟುಂಬಕ್ಕೆ ಸೀಮಿತವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಮೇಲೆ ಹರಿಹಾಯದರು. 

ಮೋದಿಗೆ ಸಾಮರ್ಥ್ಯವಿದೆ: ನರೇಂದ್ರಮೋದಿ ಅವರು ಅದೃಷ್ಟದಿಂದ ಪ್ರಧಾನಿ ಆಗಲಿಲ್ಲ. ಅವರು ಅನುಭವ ಮತ್ತು ಸಾಮರ್ಥ್ಯದ ಮೇಲೆ ಪ್ರಧಾನಿ ಹುದ್ದೆಗೇರಿದರು. ದೇಶದ 130 ಕೋಟಿ ಜನರಲ್ಲಿ ಯಾರು ಬೇಕಾದರೂ ಪ್ರಧಾನಿ ಆಗಬಹುದು ಎಂಬುದು ಬಿಜೆಪಿ ಸಿದ್ಧಾಂತ. ಆದರೇ ಒಂದೆ ಕುಟುಂಬದ ಸದಸ್ಯರನ್ನು ಪ್ರಧಾನಿಯಾಗಿ ಮಾಡುವುದು ಬಿಜೆಪಿ ಸಿದ್ಧಾಂತವಲ್ಲ ಎಂದು ಕಾಂಗ್ರೆಸ್‌ ಪಕ್ಷದ ಧೋರಣೆಯನ್ನೂ ಟೀಕಿಸಿದರು. 

ಅಟಲ್‌ಜೀ ಉತ್ತಮ ಪ್ರಧಾನಿ: ಅಟಲ್‌ ಬಿಹಾರಿ ವಾಜಪೇಮಿ ಅವರನ್ನು ಉತ್ತಮ ಪ್ರಧಾನಿ ಎಂದು ದೇಶದ ಜನರು ಕರೆದರು.  ಈಗ ಇನ್ನು ಉತ್ತಮ ಪ್ರಧಾನಿಯಾಗಿ ಮೋದಿಯವರು ಬಂದಿದ್ದಾರೆ ಎಂದ ಅವರು, ಈ ಹಿಂದೆ ಕಾಂಗ್ರೆಸ್‌ ಪಕ್ಷ  ಕುಟುಂಬದ ರಾಜಕಾರಣ ಮಾಡಿಕೊಂಡು ದೇಶದಲ್ಲಿ ಆಳ್ವಿಕೆ ನಡೆಸಿದರೆ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷದ ಎಚ್‌.ಡಿ. ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ಪುತ್ರರಾದ  ಪ್ರಜ್ವಲ್‌, ನಿಖೀಲ್‌  ಹೀಗೆ ಕುಟುಂಬ ರಾಜಕಾರಣ ನಡೆಯುತ್ತಿದೆ.

ಬಿಜೆಪಿಯಲ್ಲಿ  ಭಾರತ್‌ ಮಾತಾಕೀ,  ಜೈ ಎಂದು ಘೋಷಣೆ ಕೂಗಿದರೇ, ಜೆಡಿಎಸ್‌ನಲ್ಲಿ ಪ್ರಜ್ವಲ್‌ಕಿ ಜೈ ಎನ್ನಬೇಕಾಗಿದೆ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರಮೋದಿ ಅವರಂತಹ ಉತ್ತಮ ನಾಯಕ ಸಿಗುವುದು ವಿರಳ.  ದೇಶ ಆಳಲು ಯಾರು  ಯೋಗ್ಯರು ಎಂಬುದನ್ನು ಮೊದಲು ಚಿಂತಿಸಬೇಕು. ಪ್ರಪಂಚದಲ್ಲಿ ಭಾರತವನ್ನು ಆರ್ಥಿಕವಾಗಿ 6ನೇ ಸ್ಥಾನಕ್ಕೆ ನರೇಂದ್ರ ಮೋದಿಯವರು ಕೊಂಡೊಯ್ದಿದ್ದಾರೆ ಎಂದರು. 

Advertisement

ಜನಧನ ಖಾತೆ: ಬ್ಯಾಂಕ್‌ ಕಡೆ ಹೆಜ್ಜೆ ಹಾಕದವರಿಗೆಲ್ಲಾ ಜನಧನ ಬ್ಯಾಂಕ್‌ ಖಾತೆ ಆರಂಭಿಸಿ ಬ್ಯಾಂಕ್‌ ಕಡೆ ಬರುವಂತೆ ಪ್ರಧಾನಿ ಮೋದಿ ಅವರು ಮಾಡಿದರು. ರಸಗೊಬ್ಬರ ಕಾಳಸಂತೆ ತಪ್ಪಿಸಿದ ಮೋದಿ ಅವರು  ಬೇನಾಮಿ ಆಸ್ತಿ ಮಾಡಿಕೊಳ್ಳುವರಿಗೂ ಸಿಂಹಸ್ವಪ್ನವಾದರು. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಆಡಳಿತದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೇ ವಂಚನೆ  ನಡೆಯುತ್ತಿತ್ತು.

ವಿಜಯಮಲ್ಯ ಸೇರಿದಂತೆ ಹಲವು ಉದ್ಯಮಿಗಳು ಸಾವಿರಾರು ಕೋಟಿಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದು ದೇಶ ಬಿಡುತ್ತಿದ್ದರು. ಮೋದಿಯವರು ಅಧಿಕಾರಕ್ಕೆ  ಬಂದ ಮೇಲೆ ಆರ್ಥಿಕ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಿದರು. ಹಿಂದೆ ಭ್ರಷ್ಟಾಚಾರ ಎಂದರೆ  ಪ್ರಧಾನಿ ಕಾರ್ಯಾಲಯವೇ ಕೇಂದ್ರವಾಗಿರುತ್ತಿತ್ತು. ಈಗ ಸಂಪೂರ್ಣ ಬದಲಾವಣೆಯಾಗಿದೆ. ಸುಧಾರಣೆ ತರಲಾಗಿದೆ ಎಂದು ಕೇಂದ್ರ ಸರ್ಕಾರದ ಜನಪ್ರ ಕಾರ್ಯಕ್ರಮಗಳ ವಿವರ ನೀಡಿದರು. 

ಬಿಜೆಪಿಯಿಂದ ಅಭಿವೃದ್ಧಿ: ಕೇಂದ್ರ ಸರ್ಕಾರದ ಅನುದಾನ ಪುರಸಭೆ ಹಾಗೂ ಗ್ರಾಮ ಪಂಚಾಯತಿಗೆ ನೇರವಾಗಿ ಹೋಗುವಂತೆ ಮಾಡಲಾಗಿದೆ. ಹಿಂದಿನ ಯುಪಿಎ ಸರ್ಕಾರ  ವೋಟಿ ಗಾಗಿ ಕೆಲಸ ಮಾಡಿದರೇ ಇಂದಿನ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಮುಂದಾಗಿದೆ ಎಂದ ಅವರು,  ವಿಶ್ವ ಯೋಗ ದಿನವನ್ನು ಮೋದಿ ಮಾರ್ಗದರ್ಶನದಲ್ಲಿ ಆರಂಭಿಸಿ ಭಾರತ ಸಂಸ್ಕೃತಿಗೆ ಗೌರವ ಸಿಗುವಂತೆ ಮಾಡಿದ ಕೀರ್ತಿ ಎನ್‌ಡಿಎ ಸರ್ಕಾರದ್ದು ಎಂದರು. 

ಪ್ರಬುದ್ಧರನ್ನು ಆಯ್ಕೆ ಮಾಡಿ: ಇಷ್ಟೆಲ್ಲಾ ಮಾಡಿರುವ ಮೋದಿ ನೇತೃತ್ವದ ಸರ್ಕಾರ  ಇನ್ನು ಮುಂದಿನ ದಿಗಳಲ್ಲಿ ವಸತಿ ರಹಿತರಿಗೆಲ್ಲಾ  ಮನೆ ಸಿಗುವಂತೆ ಮಾಡುವ  ಗುರಿ ಹೊಂದಿದೆ ಎಂದರು.  ಮುಂದಿನ ಚುನಾವಣೆಯಲ್ಲಿ ದೇಶದ ಜನರು ಸಮರ್ಥ ಆಡಳಿತಗಾರರನ್ನು ಆಯ್ಕೆ ಮಾಡಿಕೊಳ್ಳುವ ಪ್ರಬುದ್ಧತೆ ತೋರಬೇಕು ಎಂದು ಮನವಿ ಮಾಡಿದರು.

ಸಂವಾದ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದ ಸಿ.ಟಿ.ರವಿ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಶಾಸಕ ಪ್ರೀತಂ ಜೆ.ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್‌, ರಾಜ್ಯ ರೈತ ಮೋರ್ಚಾದ  ಅಧ್ಯಕ್ಷ ರೇಣುಕುಮಾರ್‌  ಮತ್ತಿತರರು ಉಪಸ್ಥಿತರಿದ್ದರು.  ಜಿಲ್ಲಾ ಬಿಜೆಪಿ ಕಾರ್ಯದರ್ಶಿ  ವೇಣುಗೋಪಾಲ್‌ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next