Advertisement

ಕೈ, ತೆನೆ ಒಂದಾದರೆ ಬಿಜೆಪಿ ಎರಡಂಕಿ ತಲುಪಲ್ಲ

09:52 PM Apr 07, 2019 | Team Udayavani |

ತುಮಕೂರು: ಬಿಜೆಪಿ, ಶಿವಸೇನೆ, ಅಕಾಲಿ ದಳ ಬಿಟ್ಟರೆ, ಎಲ್ಲ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ್‌ಗೆ ಬಂದಿದ್ದಾರೆ. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಸಂಬಂಧ ಚೆನ್ನಾಗಿರಬೇಕು. ಜೆಡಿಎಸ್‌ಗೆ ಕಡಿಮೆ ಶಕ್ತಿ ಇರಬಹುದು. ಆದರೆ, ಕಾಂಗ್ರೆಸ್‌, ಜೆಡಿಎಸ್‌ ಒಂದಾದರೆ ಬಿಜೆಪಿಯನ್ನು ರಾಜ್ಯದಲ್ಲಿ ಬಗ್ಗು ಬಡಿಯಬಹುದು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎಚ್ಚರಿಸಿದರು.

Advertisement

ನಗರದ ಗ್ರಂಥಾಲಯ ಆವರಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಶಕ್ತಿಗಳು ಒಟ್ಟಾದರೆ ಬಿಜೆಪಿ ಕುಗ್ಗಿಸಬಹುದು. ಬಿಜೆಪಿ ಯಾವತ್ತಿಗೂ ಒಂದಂಕಿಯಲ್ಲಿಯೇ ಇರಬೇಕು. ಎರಡಂಕಿ ತಲುಪಬಾರದು. ಈ ಸಾಧನೆ ಮಾಡಲು ನಿಮ್ಮೆಲ್ಲರ ಸಹಕಾರ ಬೇಕು ಎಂದ ಅವರು, ಯುವಕರು ಮೋದಿ ಬಗ್ಗೆ ಭ್ರಮೆ ಬೆಳೆಸಿಕೊಂಡಿದ್ದಾರೆ. ಮಾಧ್ಯಮಗಳು ಸೃಷ್ಟಿಸಿರುವ ಭ್ರಮೆಯನ್ನು ನಮ್ಮ ಕಾರ್ಯಕರ್ತರು ಒಂದಾಗಿ ಹೋಗಲಾಡಿಸಬೇಕು ಎಂದು ಕರೆ ನೀಡಿದರು.

ಮೈತ್ರಿ ಸರ್ಕಾರ: ಮೈತ್ರಿ ಸರ್ಕಾರದ ರಚನೆಗೆ ರಾಹುಲ್, ಸೋನಿಯಾ ಸೂಚನೆ ಮೇರೆಗೆ ಮೈತ್ರಿ ಸರ್ಕಾರವಾಗಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ. ಸರ್ಕಾರ ನಡೆಸುವಾಗ ಏಳು-ಬೀಳು ಎಲ್ಲ ಗೊತ್ತಿದೆ. ಎಲ್ಲ ಮಾಧ್ಯಮಗಳು ಮೋದಿ ಸಮರ್ಥರು ಎನ್ನುತ್ತಾರೆ. ರಾಜ್ಯದಲ್ಲಿ ಮೈತ್ರಿ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಿದ್ದರಾಮಯ್ಯ ಜತೆ ಪ್ರವಾಸ: ಪ್ರತಿಯೊಬ್ಬರು ಜಬಾಬ್ದಾರಿಗೂ ಇರಬೇಕು, ಹೇಗೆ ನಡೆದುಕೊಳ್ಳಬೇಕು ಎಂಬ ಅರಿವು ಇರಬೇಕು ಎಂದು ಎಚ್ಚರಿಕೆ ನೀಡಿ, ರಾಜ್ಯದಲ್ಲಿ ಬಿಜೆಪಿ ಎರಡು ಸ್ಥಾನಕ್ಕಿಂತ ಹೆಚ್ಚಿನ ಕಡೆ ಗೆಲ್ಲದಂತೆ ಒಟ್ಟಾಗಿ ಶ್ರಮಿಸಬೇಕು. ನಾನು ಅಭ್ಯರ್ಥಿಯಾಗಿರುವುದರಿಂದ ಹೆಚ್ಚಿನ ಸಮಯ ಇಲ್ಲೆ ಇರಬೇಕಿದೆ ಆದರೆ, ರಾಜ್ಯಾದ್ಯಂತ ಸಿದ್ದರಾಮಯ್ಯ ಜೊತೆ ಪ್ರವಾಸ ಮಾಡುವುದಾಗಿ ತಿಳಿಸಿದರು.

ದೇವೇಗೌಡರು ಹೇಮಾವತಿ ತಡೆದಿದ್ದಾರೆ ಎಂದು ಅಪಪ್ರಚಾರ ಮಾಡುವ ಮೂಲಕ ಗೆಲ್ಲಲು ಸಾಧ್ಯವಾಗುವುದಿಲ್ಲ. ಜಿಲ್ಲೆಯ ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುತ್ತೇನೆ. ಅಪಪ್ರಚಾರಕ್ಕೆ ಕಿವಿಗೊಡದಂತೆ ಮನವಿ ಮಾಡಿದರು.

Advertisement

ದೇಶ ವಿಭಜನೆ ಸ್ಥಿತಿ ನಿರ್ಮಾಣ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ದೇವೇಗೌಡರಿಗೆ ಮತ ನೀಡಬೇಕಾದ ಜವಾಬ್ದಾರಿ ತುಮಕೂರಿನ ಜನರ ಮೇಲಿದೆ. ಜನರು ದೇವೇಗೌಡರನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ದೇಶದಲ್ಲಿ ಶೇ.18ರಷ್ಟು ಮುಸ್ಲಿಂರಿದ್ದಾರೆ ಅವರು ಇಲ್ಲೆ ಹುಟ್ಟಿ ಇಲ್ಲೆ ಬದುಕುತ್ತಾರೆ ಎಂದರು.

ದೇಶದಲ್ಲಿ ಸ್ವಾತಂತ್ರ ನಂತರ ದೇಶ ವಿಭಜನೆ ಸ್ಥಿತಿ ನಿರ್ಮಾಣವಾಗಿದೆ. ಜನರ ಸಮಸ್ಯೆ, ದೇಶದ ಸ್ಥಿತಿಯನ್ನು ಕಂಡು ಚುನಾವಣೆ ನಿಂತಿದ್ದಾರೆ. 2006ರಲ್ಲಿ ಸಾರ್ಚಾ ಸಮಿತಿಯಿಂದ ಮುಸ್ಲಿಂರ ಸ್ಥಿತಿ ಬಗ್ಗೆ ಅಧ್ಯಯನ ದೇಶದ ಅಲ್ಪಸಂಖ್ಯಾತರಿಗಾಗಿ ಅನೇಕ ಯೋಜನೆ 121ಜಿಲ್ಲೆಯಲ್ಲಿ ಮುಸ್ಲಿಂರೇ ಹೆಚ್ಚು ಸಂವಿಧಾನದ ಆಶಯದಂತೆ ಸಮಾನತೆ ನೀಡಲು ಮೋದಿ ಅವರಿಂದ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರಿಗಾಗಿ ಯಾವ ಕಾರ್ಯಕ್ರಮವನ್ನು ಮೋದಿ ನೀಡಿಲ್ಲ, ಕೋಮುವಾದ ಪ್ರಚೋದನೆ ಮಾಡುವ ಮೂಲಕ ಜನರು ಶಾಂತಿಯಿಂದ ಬದುಕದಂಥ ವಾತಾವರಣ ನಿರ್ಮಿಸಲು ಹೊರಟಿದ್ದಾರೆ. ದೇಶದಲ್ಲಿ ಅತ್ಯಂತ ಸುಳ್ಳುಗಾರ ಮೋದಿ, ಹತ್ತುಕೋಟಿ ಉದ್ಯೋಗ ಕೊಡಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡರೂ ಪರಿಹಾರ ಕೊಡದೇ ಚುನಾವಣಾ ಗಿಮಿಕ್‌ಗಾಗಿ ಭಿಕ್ಷೆ ಹಾಕಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಗೋಧ್ರಾ ಹತ್ಯಾಕಾಂಡಕ್ಕೆ ಕ್ಷಮೆ ಕೇಳಲಿಲ್ಲ. ನೋಟು ಅಮಾನೀಕರಣದಿಂದ ದೇಶದ ಅಭಿವೃದ್ಧಿ ಹಿಂದಕ್ಕೆ ಹೋಗಿದೆ. ಈಗ ಮತ್ತೆ ಅಧಿಕಾರ ಕೇಳಲು ನಾಚಿಕೆಯಾಗುವುದಿಲ್ಲವೇ. ಸಂಖ್ಯಾತರಿಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ ಎಂದು 56 ಇಂಚಿನ ಎದೆ ಮುಟ್ಟಿ ಹೇಳಿ ಏನು ಮಾಡಿದ್ದೀವಿ ಎಂದು ಹೇಳಿ ಸವಾಲು ಹಾಕಿದರು.

ಬಿಜೆಪಿಗೆ ಮತ ಬೇಡ: ಮತಹಾಕದೇ ಇರಬೇಡಿ ಎಂದು ಅಲ್ಪ ಸಂಖ್ಯಾತರಿಗೆ ಕರೆ ನೀಡಿದ ಡಿಸಿಎಂ, ಬಿಜೆಪಿ ಅವರು ಕುತಂತ್ರ ಮಾಡುತ್ತಿದ್ದಾರೆ. ಅಲ್ಲಾನ ಮೇಲೆ ಆಣೆ ಇಟ್ಟು ಬಿಜೆಪಿಗೆ ಮತ ಹಾಕಬಾರದು ಎಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಲು ಬೇಕು ಎಂದರು.

ಋಣ ತೀರಿಸುತ್ತೇನೆ: ಸಚಿವ ಜಮೀರ್‌ ಅಹಮದ್‌ ಖಾನ್‌ ಮಾತನಾಡಿ, ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಿರುವುದು ನಮ್ಮ ಪುಣ್ಯ. ಬೆಂಗಳೂರು ಉತ್ತರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡೆ ಆದರೆ, ಅವರು ಕೇಳಲಿಲ್ಲ. ಮೂರು ಲಕ್ಷ ಮತಗಳಿಂದ ಗೆಲ್ಲಿಸಿಕೊಂಡು ಬರ್ತೀನಿ, ನಿಮ್ಮ ಋಣ ತೀರಿಸುತ್ತೇನೆ ಎಂದು ಕೇಳಿಕೊಂಡರು ಬರಲಿಲ್ಲ ಎಂದು ಹೇಳಿದರು.

ತಂತ್ರ ರೂಪಿಸಿದ್ದಾರೆ: ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಗೊತ್ತಿದೆ. ಕಾಂಗ್ರೆಸ್‌ನಿಂದ ಹೋದವರು ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಮುಸ್ಲಿಂ ಮತಗಳನ್ನು ಹಾಕದಂತೆ ತಂತ್ರ ರೂಪಿಸಿದ್ದಾರೆ. ಮುಸ್ಲಿಮರಿಗೆ ಬಿಜೆಪಿಗೆ ಟಿಕೆಟ್‌ ಕೊಡಲ್ಲ ಎಂದರು. ಈಶ್ವರಪ್ಪ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆಯಲಿ ಎನ್ನುತ್ತಾರೆ ಅಂಥವರನ್ನು ನಾವೇ ಕೆಲ್ಸಕ್ಕೆ ಇಟ್ಟುಕೊಳ್ಳುತ್ತೇವೆ ಎಂದರು.

ಸಮಾಜದಲ್ಲಿ ಒಟ್ಟಿಗೆ ಇರುವ ಹಿಂದೂ, ಮುಸ್ಲಿಮರನ್ನು ದೂರ ಮಾಡುತ್ತಿದ್ದಾರೆ ಈ ಬಿಜೆಪಿ ಅವರು. ರಾಜ್ಯದಲ್ಲಿರುವ ಭಾವೈಕ್ಯತೆ ಬೇರೆ ಎಲ್ಲಿಯೂ ಇಲ್ಲ. ಭಾರತ ನಮ್ಮದು ನಾವು ಎಲ್ಲಿಗೂ ಹೋಗುವುದಿಲ್ಲ. ದೇವೇಗೌಡರು ಇಳಿವಯಸ್ಸಿನಲ್ಲೂ ಗಲ್ಲಿ ಗಲ್ಲಿ ಓಡಾಡುವ ಅವಶ್ಯಕತೆ ಏನಿತ್ತು. ದೇಶವನ್ನು ಉಳಿಸುವುದಕ್ಕಾಗಿ ಮತ್ತೆ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಬೇಕಿದೆ ಎಂದು ಕರೆ ನೀಡಿದರು.

ಪ್ರಾದೇಶಿಕ ಪಕ್ಷಗಳು ಒಂದು: ಮೋದಿ ಪ್ರಧಾನಿಯಾದರೆ ದೇಶದಲ್ಲಿ ಶಾಂತಿ ನಾಶವಾಗುತ್ತದೆ ಎಂದು ದೇಶದಲ್ಲಿರುವ ಎಲ್ಲ ಪ್ರಾದೇಶಿಕ ಪಕ್ಷಗಳು ಒಂದಾಗಿವೆ. ನನಗೆ ಸೀಟು ಮುಖ್ಯವಲ್ಲ ದೇಶ ಮುಖ್ಯ ಎಂದರು. ಇದು ದೇಶದ ಬಡವನ ಚುನಾವಣೆ. ಎಲ್ಲ ಮುಸ್ಲಿಂರು ಒಂದಾಗಿ ದೇವೇಗೌಡರಿಗೆ ಮತ ಹಾಕಿ. ತಪ್ಪದೇ ಮತ ಹಾಕಿ ಮತದಾನ ಕಡಿಮೆ ಆದ್ರೆ ಬಿಜೆಪಿ ಗೆಲುವಿಗೆ ಸಹಕಾರ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

ದೇವೇಗೌಡರು ಇಲ್ಲಿ ಗೆದ್ದರೆ ಜಮೀರ್‌ ಅಹಮದ್‌ ಶಕ್ತಿ ಬರುತ್ತದೆ. ಮುಸ್ಲಿಂರ ಮತ ಹೆಚ್ಚಳವಾಗಬೇಕು. ಮೈತ್ತಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಮುಸ್ಲಿಮರು ಒಂದಾಗಿ ಮತ ಹಾಕಿಸಬೇಕಿದೆ. ನೋಟು ಅಮಾನೀಕರಣದಿಂದ ಕಪ್ಪು ಹಣ ಕಡಿಮೆಯಾಯಿತಾ ಎಂದು ಪ್ರಶ್ನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಎಸ್‌.ಆರ್‌.ಶ್ರೀನಿವಾಸ್‌, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಡಾ.ಎಸ್‌.ರಫೀಕ್‌ ಅಹಮದ್‌, ಶಾಸಕ ಎನ್‌.ಎ.ಹ್ಯಾರಿಸ್‌, ವಿಧಾನ ಪರಿಷತ್‌ ಸದಸ್ಯರಾದ ವೇಣುಗೋಪಾಲ್, ಬೆಮಲ್‌ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ, ಶಾಸಕ ಎಂ.ವಿ.ವೀರಭದ್ರಯ್ಯ, ಮಾಜಿಶಾಸಕರಾದ ಕೆ.ಷಡಕ್ಷರಿ, ಎಸ್‌.ಷಫೀಅಹ್ಮದ್‌, ಮುಖಂಡರಾದ ಗೋವಿಂದರಾಜು, ಆರ್‌.ರಾಮಕೃಷ್ಣ, ಎಚ್‌.ನಿಂಗಪ್ಪ, ಮಾಜಿ ಎಂಎಲ್ಸಿ ರಮೇಶ್‌ ಬಾಬು, ರೆಹಮಾನ್‌ ಷರೀಫ್, ಅಲ್ತಾಫ್, ಆರೀಫ್ ಪಾಷ, ಚುನಾಯಿತ ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು, ಸೇರಿದಂತೆ ಇತರರಿದ್ದರು.

ಬಿಜೆಪಿ ಅವರು ಡೋಂಗಿಗಳು, ಮುಸ್ಲಿಮರು ಬಿಜೆಪಿಯವರ ಮನೆ ಬಾಗಲಿಗೆ ಹೋಗಲ್ಲ. ದೇಶದಲ್ಲಿ ಅಮಿತ್‌ ಶಾ, ಮೋದಿಗೆ ಅಚ್ಛೇದಿನ್‌ ಬಂತು. ಚಾಯ್‌ವಾಲಾ ಇಂದು ಹತ್ತು ಲಕ್ಷದ ಸೂಟು ಹಾಕಲಿಲ್ವ. ಅಮಿತ್‌ ಶಾ ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಾರೆ. ಇದೆ ಅಲ್ವೇ ಅಚ್ಛೇದಿನ್‌.
-ಜಮೀರ್‌ ಅಹಮದ್‌ ಖಾನ್‌, ಸಚಿವ

ಮೂರು ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿ ಬಸವರಾಜು ದೆಹಲಿಗೆ ಹೋಗಿ ಮಲಗಿದರು, ಏನೂ ಮಾಡಲಿಲ್ಲ. ತುಮಕೂರಿಗೆ ಏನು ಕೊಡುಗೆ ನೀಡಿದ್ದಾರೆ. ನಾವು ಜಿಲ್ಲೆಗೆ ವಿಶ್ವವಿದ್ಯಾನಿಲಯ, ಕ್ಯಾನ್ಸರ್‌ ಆಸ್ಪತ್ರೆ ತಂದಿದ್ದೀವಿ. ನೀವೇನು ಮಾಡಿದ್ದೀರಾ. ಎತ್ತಿನಹೊಳೆ ಯೋಜನೆ ಮೂಲಕ ಎರಡು ವರ್ಷದಲ್ಲಿ ಕುಡಿಯುವ ನೀರು ಜಿಲ್ಲೆಗೆ ತರುತ್ತೇವೆ.
-ಡಾ.ಜಿ.ಪರಮೇಶ್ವರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next