Advertisement

ಅಕ್ಷರ ಜಾತ್ರೆಗೆ ಸಂಪೂರ್ಣ ಸಿದ್ಧತೆ

11:23 AM Jan 28, 2019 | |

ತಾಳಿಕೋಟೆ: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ತಾಳಿಕೋಟೆ ಪಟ್ಟಣದಲ್ಲಿ ಜ. 28 ಹಾಗೂ 29ರಂದು ವಿಜಯಪುರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಅಕ್ಷರ ಜಾತ್ರೆಗೆ ಪಟ್ಟಣ ನವ ವಧುವಿನಂತೆ ಅಲಂಕೃತಗೊಂಡು ಸಾಟಹಿತ್ಯಾಸಕ್ತರನ್ನು ಕೈ ಬೀಸಿ ಕರೆಯುತ್ತಿದೆ.

Advertisement

ಸಮ್ಮೇಳನ ಪ್ರಧಾನ ವೇದಿಕೆಗೆ ಖಾಸ್ಗತ ಶಿವಯೋಗಿಗಳ ಹೆಸರಿಡಲಾಗಿದೆ. ಮಹಾ ಮಂಟಪಕ್ಕೆ ದಿ| ವೀರಸಂಗಪ್ಪ ಹಗರಟಗಿ ಅವರ ಹೆಸರನ್ನು, ದ್ವಾರ 1ಕ್ಕೆ ಕೊಂಡಗೂಳಿ ಕೇಶಿರಾಜ, ದ್ವಾರ 2ಕ್ಕೆ ಬಂಥನಾಳ ಶಿವಯೋಗಿಗಳ, ಪುಸ್ತಕ ಮಳಿಗೆಗಳಿಗೆ ದಿ| ಎಂ.ಎಂ. ಕಲ್ಬುರ್ಗಿ, ಚಿತ್ರಕಲಾ ಪ್ರದರ್ಶನಕ್ಕೆ ದಿ| ಹಾಸಿಂಪೀರ್‌ ಚನ್ನೂರ ಹೆಸರು ಇಡಲಾಗಿದೆ.

ಪಟ್ಟಣದ ತುಂಬೆಲ್ಲ ಕನ್ನಡ ಕಲರವ ಪಸರಿಸಿದ್ದು ಪಟ್ಟಣದ ವಿಜಯಪುರ ವೃತ್ತದ ನಾಲ್ಕು ದ್ವಾರಗಳಿಗೆ ಸ್ವಾಗತ ಕೋರುವ ಕಮಾನಗಳು ವಿಜೃಂಭಿಸುತ್ತಿವೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭಗೊಳ್ಳುವ ಮುಖ್ಯ ರಸ್ತೆಯಿಂದ ಹಿಡಿದು ಸಮ್ಮೇಳನ ಪ್ರಧಾನ ವೇದಿಕೆ ಎಚ್.ಎಸ್‌. ಪಾಟೀಲ ಕಾಲೇಜ್‌ ಮೈದಾನದವರೆಗೆ ಪರಪರಿಗಳಿಂದ ಅಲಂಕೃತಗೊಳಿಸಲಾಗಿದೆ.

ಪಟ್ಟಣದಲ್ಲಿ ನಡೆಯುತ್ತಿರುವ ಈ ಕನ್ನಡ ಜಾತ್ರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಜನ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಐತಿಹಾಸಿಕ ಪಟ್ಟಣ ತಾಳಿಕೋಟೆಯ ಮೆರಗು ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸರ್ವ ರೀತಿಯಿಂದ ಮುನ್ನಡೆದಿದೆ.

ಸಮ್ಮೇಳನ ಪ್ರಧಾನ ವೇದಿಕೆ 20X70 ಅಳತೆಯಲ್ಲಿ ನಿರ್ಮಿಸಿದ್ದು 140X200 ಅಳತೆಯ ಪೆಂಡಾಲ್‌ ಹಾಕಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ, ಕನ್ನಢಾಭಿಮಾನಿಗಳಿಗಾಗಿ ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನ ರಸದೌತಣಕ್ಕೆ ಮೆರಗು ನೀಡುವ ಸಾಹಿತ್ಯದ ಜ್ಞಾನ ಭಂಡಾರ ಬಿತ್ತುವ ಮಳಿಗೆಗಳ ಸಂಖ್ಯೆ ರಾಜ್ಯ ಸಮ್ಮೇಳನ ರೀತಿಯಲ್ಲಿ ಸುಮಾರು 50 ಮಳಿಗೆಗಳ ಬೇಡಿಕೆಗಳು ಬಂದಿದ್ದು ಅವುಗಳ ನಿರ್ವಹಣೆಗಾಗಿ ಎಲ್ಲ ರೀತಿಯಿಂದಲೂ ಮಳಿಗೆಗಳನ್ನು ಸಿದ್ಧ ಪಡಿಸಲಾಗಿದೆ.

Advertisement

ಕನ್ನಢಾಭಿಮಾನಿಗಳ ಅತಿಥಿಗಳ ಊಟದ ವ್ಯವಸ್ಥೆಗೆ ಸಂಗಮಾರ್ಯ ವಿದ್ಯಾ ಸಂಸ್ಥೆಯ ಎರಡು ಬೃಹತ್‌ ಸಭಾಭವನಗಳನ್ನು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಅತಿಥಿ ಮಹೋದಯರಿಗೆ ವಿಶ್ರಾಂತಿಗೆ ಪಟ್ಟಣದ ವಿವಿಧ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ ಪಟ್ಟಣದಲ್ಲಿ ಎರಡು ದಿನ ನಡೆಯಲಿರುವ ಸಮ್ಮೇಳನವನ್ನು ರಾಜ್ಯ ಸಮ್ಮೇಳನ ಮಾದರಿಯಲ್ಲಿ ಜರುಗಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಪಟ್ಟಣ ಅಲಂಕೃತಗೊಂಡಿದ್ದ ಸಾಹಿತ್ಯಾಭಿಮಾನಿಗಳಿಗೆ, ಕನ್ನಢಾಭಿಮಾನಿಗಳಿಗೆ ಕೈ ಬೀಸಿ ಕರೆಯುತ್ತಿದೆ.

ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಚಾಲನೆ
ತಾಳಿಕೋಟೆ:
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ವಿಜಯಪುರ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ. 28 ಹಾಗೂ 29ರಂದು ತಾಳಿಕೋಟೆ ಪಟ್ಟಣದಲ್ಲಿ ನಡೆಯಲಿದೆ. ಎಸ್‌.ಎಸ್‌. ವಿದ್ಯಾ ಸಂಸ್ಥೆ ಆವರಣದಲ್ಲಿ 28ರಂದು ಬೆಳಗ್ಗೆ 8ಕ್ಕೆ ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪರಿಷತ್‌, ಕಸಾಪ ತಾಲೂಕಾಧ್ಯಕ್ಷೆ ಸುಮಂಗಲಾ ಕೊಳೂರ ನಾಡ ಧ್ವಜಾರೋಹಣ ನೆರವೇರಿಸುವರು. 8:30ಕ್ಕೆ ಸಮ್ಮೇಳನಾಧ್ಯಕ್ಷ ಬಿ.ಆರ್‌. ಪೊಲೀಸ್‌ಪಾಟೀಲ ಅವರ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು ಪ್ರಮುಖ ಬೀದಿಗಳ ಮೂಲಕ ಬಸ್‌ ನಿಲ್ದಾಣದ ಮುಂಭಾಗದ ರಸ್ತೆಯಿಂದ ಸಮ್ಮೇಳನದ ಮುಖ್ಯ ವೇದಿಕೆಗೆ ಕರೆ ತರಲಾಗುವುದು. ಬೆಳಗ್ಗೆ 11ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದೆ. ಮಧ್ಯಾಹ್ನ 2ಕ್ಕೆ ”ನಾಡು ನುಡಿ” ಗೋಷ್ಠಿ 1 ನಡೆಯಲಿದ್ದು ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ ವಹಿಸುವರು. 3:30ಕ್ಕೆ ಕೃಷಿ ಸಂಪದ ಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ವಿಶ್ರಾಂತ ಕುಲಪತಿ ಡಾ| ಅಶೋಕರಾಜ ಪಾಟೀಲ ವಹಿಸುವರು. ಸಾಯಂಕಾಲ 5ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಜರುಗಲಿದ್ದು ಪ್ರಧಾನ ನಿರ್ವಹಣೆಯನ್ನು ಮಲ್ಲಿಕಾರ್ಜುನ ಮೇತ್ರಿ, ಡಾ| ಎಸ್‌.ಕೆ. ಕೊಪ್ಪ, ದ್ರಾಕ್ಷಾಯಿಣಿ ಬಿರಾದಾರ, ಗೀತಯೋಗಿ ಪಾಲ್ಗೊಳ್ಳುವರು. ಸಂಜೆ 6ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವವು.

Advertisement

Udayavani is now on Telegram. Click here to join our channel and stay updated with the latest news.

Next