Advertisement

ನಾನು ಮಾರಾಟವಾಗಿದ್ದೇನೆಂದು ಚಾಮುಂಡಿಬೆಟ್ಟಕ್ಕೆ ಬಂದು ಸತ್ಯ ಮಾಡಿ

11:14 PM Oct 15, 2019 | Lakshmi GovindaRaju |

ಮೈಸೂರು: ಸಮ್ಮಿಶ್ರ ಸರ್ಕಾರದ ದೌರ್ಜನ್ಯದ ವಿರುದ್ಧ ಸಿಡಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದ ಮೇಲೆ ನನ್ನನ್ನು 25 ಕೋಟಿಗೆ ಬಿಜೆಪಿಗೆ ಮಾರಿಕೊಂಡಿದ್ದೇನೆ ಎನ್ನುವ ಮಾಜಿ ಸಚಿವ ಸಾ.ರಾ.ಮಹೇಶ್‌, ನನ್ನನ್ನು ಕೊಂಡುಕೊಂಡವನನ್ನು ಗುರುವಾರ ಬೆಳಗ್ಗೆ 9ಗಂಟೆಗೆ ಚಾಮುಂಡಿಬೆಟ್ಟಕ್ಕೆ ಕರೆ ತಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸತ್ಯ ಮಾಡಲಿ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಸವಾಲು ಹಾಕಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರದ ದೌರ್ಜನ್ಯದ ವಿರುದ್ಧ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದ 17 ಶಾಸಕರಲ್ಲಿ ಬಹುತೇಕರು 500, ಸಾವಿರ ಕೋಟಿಗೆ ಲೆಕ್ಕ ಕೊಟ್ಟವರು. ನಾನೇನು ರಿಯಲ್‌ ಎಸ್ಟೇಟ್‌, ಗಣಿದಂಧೆ ಮಾಡಿಲ್ಲ. ನಾನು ರೈತನ ಮಗ. ನನ್ನ ಮನೆಗೆ ಹತ್ತು ಜನ ಬಂದರೆ ಕುಳಿತುಕೊಳ್ಳಲು ಕಷ್ಟ. ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸುತ್ತಿರುವವರಲ್ಲಿ ನಾನೂ ಒಬ್ಬ.

ಈ ಕಾರಣಕ್ಕಾಗಿಯೇ ಐಟಿ, ಇ.ಡಿಯವರು ನಮ್ಮ ಮನೆ ಹತ್ತಿರ ಬರಲಾಗಲ್ಲ. ಆದರೆ, ಮಹೇಶ್‌ ಅವರು, ಪದೇ ಪದೆ ವಿಶ್ವನಾಥ್‌ 25 ಕೋಟಿಗೆ ಬಿಜೆಪಿಗೆ ಮಾರಿಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹಾಗಾಗಿ, ನನ್ನನ್ನು ಕೊಂಡುಕೊಂಡವನನ್ನು ಚಾಮುಂಡಿಬೆಟ್ಟಕ್ಕೆ ಕರೆ ತನ್ನಿ. ಸತ್ಯ ಆಗಿ ಬಿಡಲಿ. ಗುರುವಾರ ಚಾಮುಂಡಿಬೆಟ್ಟಕ್ಕೆ ಬರದಿದ್ದರೆ ಈ ಬಗ್ಗೆ ಇನ್ನು ಮಾತನಾಡಬಾರದು ಎಂದು ಮಹೇಶ್‌ಗೆ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next