Advertisement

ತ್ಯಾಜ್ಯ ಸೃಷ್ಟಿ ಮತ್ತು ಅದರ ವಿಲೇವಾರಿ ಎಂಬ ವಿಷವೃತ್ತ

01:12 AM Jan 21, 2017 | Karthik A |

ನಗರಗಳು ಪರಿಣಾಮಕಾರಿ ತ್ಯಾಜ್ಯ ವಿಲೇವಾರಿಯತ್ತ ಹೊರಟಿವೆ. ಅದು ಎಷ್ಟರಮಟ್ಟಿಗೆ ಯಶಸ್ಸಾಗುತ್ತದೆಂಬುದು ಅನಂತರದ ಮಾತು. ಕೊನೆಗೂ ಮೆರವಣಿಗೆ ಹೊರಟಿದೆಯಲ್ಲ; ಅದೇ ಸಮಾಧಾನ.

Advertisement

ನಮ್ಮ ನಮ್ಮ ಮನೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯಗಳನ್ನು ಲೆಕ್ಕ ಹಾಕಿದ್ದೇವೆಯೇ? ಇಂಥದೊಂದು ಪ್ರಶ್ನೆಯಿಂದ ಕಥನ ಆರಂಭಿಸಿದರೆ ಮುಗಿಯುವುದೇ ಇಲ್ಲ. ಕಾಫಿ ಡಿಕಾಕ್ಷನ್‌ ಹಾಕಿ ಉಳಿದ ಹುಡಿಯಿಂದ ಹಿಡಿದು, ಹಾಲಿನ ಕವರ್‌, ಬಿಸ್ಕತ್‌ ತೊಟ್ಟೆ- ಒಂದೇ ಎರಡೇ. ಒಂದು ದಿನಕ್ಕೆ ಏನಿಲ್ಲವೆಂದರೂ (ನಾಲ್ಕು ಮಂದಿ ಇರುವ ಸಂಸಾರ) 450ರಿಂದ 500 ಗ್ರಾಂನಷ್ಟು ತ್ಯಾಜ್ಯವನ್ನು ಸೃಷ್ಟಿಸುತ್ತದೆ. ಇದಲ್ಲದೆ ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ ಬೇರೆ. ಈ ಘನ ತ್ಯಾಜ್ಯದ ಪ್ರಮಾಣವೇ ಅರ್ಧ ಕೆಜಿಯಷ್ಟು ಎಂದರೆ, ಒಂದು ಸಾವಿರ ಮನೆಗಳಿರುವ ಒಂದು ಸಣ್ಣ ಊರಿನ ಕಥೆ ಏನಾಗಿರಬಹುದು? ಕಾಳ್ಗಿಚ್ಚಿನ ಮಾದರಿಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ನಗರೀಕರಣದಿಂದ ಪ್ರತಿ ನಗರಗಳಲ್ಲೂ ಮೂಲ ಸೌಕರ್ಯ ಕಲ್ಪಿಸುವುದೊಂದೇ ಸಮಸ್ಯೆಯಾಗಿ ಪರಿಗಣಿಸುತ್ತಿಲ್ಲ.

ತ್ಯಾಜ್ಯ ನಿರ್ವಹಣೆ ಬಹು ದೊಡ್ಡ ಸವಾಲಾಗಿ ಪರಿಗಣಿಸುತ್ತಿದೆ. ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಸಾಮಾನ್ಯವಾದ ಕೆಲಸವೂ ಅಲ್ಲ. ಸರಳವೂ ಅಲ್ಲ; ಸುಲಭವೂ ಅಲ್ಲ. ಅದರೊಂದಿಗೆ ನಮ್ಮ ವಿವೇಚನಾರಹಿತ ನಡವಳಿಕೆ ಮತ್ತು ಆಡಳಿತಗಾರರ (ವ್ಯವಸ್ಥೆ ರೂಪಿಸುವವರ) ದೂರದೃಷ್ಟಿಯ ಕೊರತೆ ಎರಡೂ ಸೇರಿ ಸಮಸ್ಯೆ ಬೃಹದಾಕಾರವಾಗಿ ರೂಪುಗೊಳ್ಳುವಂತೆ ಮಾಡುತ್ತವೆ. 

ಇದೇನು ಹೊಸತೇ?
ಈ ತ್ಯಾಜ್ಯ ಎಂಬುದೇನು ಹೊಸತೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಮನುಷ್ಯರಾದ ನಾವು ನಮ್ಮ ಬದುಕಿನ ಅಗತ್ಯಗಳಿಗೆ ಒಂದಿಷ್ಟು ಪರಿಹಾರ ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಆ ಅಗತ್ಯಗಳ ಸೃಷ್ಟಿಯ ರಭಸ ಹೇಗಿತ್ತೆಂದರೆ, ಅವುಗಳ ಕುರಿತು ಆಮೂಲಾಗ್ರವಾಗಿ ಯೋಚಿಸಲೇ ಇಲ್ಲ. ಆ ಕ್ಷಣವನ್ನು ಈಡೇರಿಸುವಂತಿದ್ದರೆ ಸಾಕು ಎಂಬುದು ನಮ್ಮೆಲ್ಲರ ದೃಷ್ಟಿಕೋನವೂ ಆಗಿತ್ತು.ತಮ್ಮ ಬಳಿ ಬಂದ ರೋಗಿಗೆ ವೈದ್ಯರೊಬ್ಬರು, “ನೀವು ಈ ಮಾತ್ರೆಯನ್ನು ಮೂರು ದಿನಗಳ ಕಾಲ ತೆಗೆದುಕೊಳ್ಳಿ. ಸ್ವಲ್ಪ ವಿಶ್ರಮಿಸಿ. ನಾಲ್ಕನೇ ದಿನ ನಿಮ್ಮ ಕಾಯಿಲೆ ಹತೋಟಿಗೆ ಬರುತ್ತದೆ” ಎಂದರಂತೆ. ಅದಕ್ಕೆ ರೋಗಿಯು, “ಮೂರು ದಿನ ಕಾಯಬೇಕೇ? ಈಗಲೇ ಕಡಿಮೆಯಾಗಲಿಕ್ಕೆ ನಿಮ್ಮ ಬಳಿ ಯಾವ ಔಷಧವೂ ಇಲ್ಲವೇ?” ಎಂದು ಕೇಳಿದನಂತೆ. ಅದಕ್ಕೆ ವೈದ್ಯರು, “ಇಲ್ಲಪ್ಪ, ನನ್ನ ಔಷಧ ಕ್ರಮ ಹೀಗಿದೆ” ಎಂದು ಹೇಳಿದರಂತೆ. 

ಇದು ಒಂದು ರೀತಿಯಲ್ಲಿ ವ್ಯವಸ್ಥೆಯ ಬಗೆಗಿನ ಕಾಳಜಿಗೆ ನಿದರ್ಶನ. ಆದರೆ ಆ ರೋಗಿ ಅಲ್ಲಿಗೇ ನಿಲ್ಲಲಿಲ್ಲ. “ಸರಿ, ಬಿಡಿ. ಅವರಲ್ಲಿ ಸಿಗುತ್ತೆ. ನಾನು ಅಲ್ಲಿಗೇ ಹೋಗುತ್ತೇನೆ” ಎಂದು ತನಗೆ ಬೇಕಾದವರನ್ನು ಹುಡುಕಿಕೊಂಡು ಹೊರಟ. ಕೊನೆಗೂ ಒಬ್ಬ ವೈದ್ಯ ಸಿಕ್ಕಿದನಂತೆ. ಅವನಲ್ಲಿ ಎಲ್ಲದಕ್ಕೂ ಪರಿಹಾರವಿತ್ತಂತೆ. ಈ ರೋಗಿ ಕೇಳಿದಂತೆಯೇ ಆ ಕೂಡಲೇ ನೋವು ಶಮನಗೊಳ್ಳುವುದಕ್ಕೆ ಯಾವುದೋ ಒಂದು ಔಷಧ ಕೊಟ್ಟನಂತೆ. ರೋಗಿಗೆ ಖುಷಿಯೋ ಖುಷಿ. “ತನ್ನ ನೋವು ಆ ಕೂಡಲೇ ಕಡಿಮೆಯಾಯಿತು. ಬಹಳ ಒಳ್ಳೆಯ ಔಷಧ ಕೊಟ್ಟ ಆ ಡಾಕ್ಟರ್‌ ಬಹಳ ಒಳ್ಳೆಯವನು’ ಎಂದು ಊರಿಗೆಲ್ಲಾ ಪ್ರಚಾರ ಮಾಡಿದನಂತೆ. ಅದರ ಪರಿಣಾಮವಾಗಿ ನೂರಾರು ಜನ ಆ ವೈದ್ಯರ ಬಳಿ ಸಾಲುಗಟ್ಟಿ ನಿಂತರು. ಮುಂದೇನಾಯಿತು ಎಂದು  ಬಿಡಿಸಿ ಹೇಳಬೇಕಾಗಿಲ್ಲ. ಆದರೆ ನಾವು ಆ ಔಷಧ ದೀರ್ಘ‌ಕಾಲದಲ್ಲಿ ಮಾಡಬಹುದಾದ ಪರಿಣಾಮದ ಬಗ್ಗೆ ಒಂದಿನಿತೂ ಯೋಚಿಸಲೇ ಇಲ್ಲ. ಹಾಗಾಗಿ ಮೊದಲ ವೈದ್ಯನ ಮಾತು ರುಚಿಸಲಿಲ್ಲ. 

Advertisement

ಈ ರೋಗಿಯಂತೆಯೇ ನಾವೂ ಆಗಿರುವುದು ಸುಳ್ಳಲ್ಲ. ಪ್ಲಾಸ್ಟಿಕ್‌ ಸೃಷ್ಟಿಯನ್ನೇ ನೆನಪಿಸಿಕೊಳ್ಳಿ. ಯಾವುದೋ ಒಂದು ಸಂದರ್ಭದ ಅಗತ್ಯಕ್ಕೆಂದು ಹುಟ್ಟಿಕೊಂಡದ್ದು ಇಂದು ಯಾವ ರೂಪ ಪಡೆದಿದೆ ಎಂಬುದನ್ನು ಲೆಕ್ಕ  ಹಾಕಿ. ಕ್ರಿ.ಶ. 1600ರ ಸುಮಾರಿನಲ್ಲಿ ಸಾವಯವ ಪಾಲಿಮರ್‌ ವಸ್ತುಗಳಿಂದ ಪ್ಲಾಸ್ಟಿಕ್‌ನ್ನು ರೂಪಿಸುತ್ತಿದ್ದರು. ಅವೆಲ್ಲವೂ ಮಣ್ಣಿನೊಂದಿಗೆ ಕರಗುವಂಥವು. ಉದಾಹರಣೆಗೆ, ತತ್ತಿಯಿಂದ ತೆಗೆದ ಕೆಲ ಅಂಶಗಳನ್ನು ಇದಕ್ಕಾಗಿ ಬಳಸುತ್ತಿದ್ದರಂತೆ. 1800ರ ಅನಂತರದ ಕೈಗಾರಿಕಾ ಕ್ರಾಂತಿ ಈ ಪ್ಲಾಸ್ಟಿಕ್‌ನತ್ತ ಹೆಚ್ಚು ಗಮನ ಹರಿಯುವಂತೆ ಮಾಡಿತು.

ಪ್ಲಾಸ್ಟಿಕ್‌ನ ಪ್ರಗತಿಗೆ ವೇಗ ಸಿಕ್ಕಿದ್ದೇ ಆಗ. 1856ರಲ್ಲಿ ಬರ್ಮಿಂಗ್‌ ಹ್ಯಾಂನ ಅಲೆಕ್ಸಾಂಡರ್‌ ಪಾರ್ಕ್ಸ್ ಎಂಬಾತ ಮಾನವ ನಿರ್ಮಿತ ಪ್ಲಾಸ್ಟಿಕ್‌ಗೆ (ಪಾರ್ಕ್‌ಸೈನ್‌) ಪೇಟೆಂಟ್‌ ಪಡೆದ. ಅಲ್ಲಿಂದ ಅದು ವಿಷವಾಗಿ ಪರಿಣಮಿಸುತ್ತಿದೆ. ಇಡೀ ಜಗತ್ತಿನಾದ್ಯಂತ ಪ್ಲಾಸ್ಟಿಕ್‌ ವಿರೋಧಿ ಆಂದೋಲನಗಳು ನಡೆಯುತ್ತಿವೆ. ನಮ್ಮ ದೇಶದ ಹಲವು ನಗರಗಳಲ್ಲಿ, ಹಳ್ಳಿಗಳನ್ನು ಪ್ಲಾಸ್ಟಿಕ್‌  ಮುಕ್ತ ಪ್ರದೇಶಗಳನ್ನಾಗಿ ಘೋಷಿಸುವ ಹಂಬಲದಲ್ಲಿದ್ದೇವೆ. ಪ್ರಕೃತಿದತ್ತ ವಸ್ತುಗಳಿಂದ ನಿರ್ಮಾಣವಾಗುತ್ತಿದ್ದ (ರೂಪಿಸುತ್ತಿದ್ದ) ಪ್ಲಾಸ್ಟಿಕ್‌ ಮಣ್ಣಿನೊಂದಿಗೆ ಕರಗುವುದರಿಂದ ಹೆಚ್ಚಿನ ನಷ್ಟವಿರಲಿಲ್ಲ. ಈಗ ಮಾನವ ನಿರ್ಮಿತ ಪ್ಲಾಸ್ಟಿಕ್‌ ನ ದೊಡ್ಡ ಭಯವೆಂದರೆ, ಅದು ಮಣ್ಣಿನೊಂದಿಗೆ ಬೆರೆಯದಿರುವುದು. ನೂರಾರು ವರ್ಷಗಳಾದರೂ ಅದು ಕರಗುವುದಿಲ್ಲವೆಂಬ ಅಂಶ ಭಯದ ವಾತಾವರಣವನ್ನೇ ಸೃಷ್ಟಿಸಿದೆ.

ನಗರಗಳಲ್ಲಿ ಸೃಷ್ಟಿಯಾಗುತ್ತಿರುವ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್‌ ಕಡಿಮೆಯೇನಿಲ್ಲ. ಸರಳ ಲೆಕ್ಕಾಚಾರವನ್ನೇ ಹಾಕಿ. ಒಂದು ಮನೆಯಲ್ಲಿ (ನಗರದಲ್ಲಿರುವ) ದಿನಕ್ಕೆ ಒಂದು ಬಿಸ್ಕತ್‌ ಪೊಟ್ಟಣ, ಎರಡು ಲೀಟರ್‌ ಹಾಲಿನ ತೊಟ್ಟೆ, ಬೇರೆ ಇತರೆ ಪದಾರ್ಥಗಳ ತೊಟ್ಟೆ- ಇತ್ಯಾದಿ ಸರಾಸರಿ ಕನಿಷ್ಠ 8-10 ಪ್ಲಾಸ್ಟಿಕ್‌ ತೊಟ್ಟೆಗಳು ಸಂಗ್ರಹವಾಗಬಹುದು. ಒಂದು ತಿಂಗಳಿಗೆ ಒಂದು ಮನೆಯಿಂದ ಸುಮಾರು 250 ತೊಟ್ಟೆಗಳು ಸಂಗ್ರಹವಾದರೆ ಕಥೆ ಏನು?

ತ್ಯಾಜ್ಯ ವಿಂಗಡಣೆ ಮತ್ತು ತ್ಯಾಜ್ಯ ವಿಲೇವಾರಿಯೂ ಸ್ಥಳೀಯ ಸಂಸ್ಥೆಗಳಿಗೆ, ಕಾರ್ಪೋರೇಷನ್‌ಗಳಿಗೆ ಸವಾಲಾಗಿರುವುದೂ ಹೀಗೆ. ಬೆಂಗಳೂರಿನಲ್ಲಿ ಇತ್ತೀಚಿನ ಮಾಹಿತಿ ಪ್ರಕಾರ ದಿನವೊಂದಕ್ಕೆ ಕನಿಷ್ಠ 3 ಸಾವಿರ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅವುಗಳ ಸಂಸ್ಕರಣೆಗೆ ಏಳು ಘಟಕಗಳಿವೆ. ಅವುಗಳಲ್ಲಿ ಶೇ. 80ರಷ್ಟು ಮಾತ್ರ ಸಂಸ್ಕರಣೆ ಸಾಧ್ಯವಾಗುತ್ತಿದ್ದು, 2, 300 ಟನ್‌ ಸಂಸ್ಕರಣೆ ಸಾಮರ್ಥ್ಯ ಹೊಂದಲಾಗಿದೆ. ಸುಮಾರು 20 ಸಾವಿರ ಮಂದಿ ಪೌರ ಕಾರ್ಮಿಕರು ಈ ತ್ಯಾಜ್ಯ ಸಂಗ್ರಹ-ವಿಲೇವಾರಿಯ ವಿವಿಧ ಹಂತಗಳಲ್ಲಿ ಭಾಗಿಯಾಗಿದ್ದಾರೆ. ಇದಲ್ಲದೇ ತ್ಯಾಜ್ಯ ವಿಂಗಡಣೆ ಇತ್ಯಾದಿ ಕಾರ್ಯದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು, ನಾಗರಿಕ ಸೇವಾ ಸಂಘಗಳು, ಸಮಿತಿಗಳ ಸದಸ್ಯರೂ ಭಾಗಿಯಾಗಿದ್ದಾರೆ. ಒಂದು ಸಾವಿರ ಮನೆಗೊಂದರಂತೆ ಟಿಪ್ಪರ್‌, 200 ಮನೆಗೊಂದರಂತೆ ತಳ್ಳುಗಾಡಿ- ಹೀಗೆ ಕೋಟ್ಯಂತರ ರೂ. ವೆಚ್ಚದಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಆದರೂ ಸಾಕಾಗುತ್ತಿಲ್ಲ. 

ಮೊದಲಾದರೆ ಸಂಗ್ರಹಿಸಿದ ತ್ಯಾಜ್ಯವನ್ನು ನಗರದಿಂದ ದೂರ ಪ್ರದೇಶದಲ್ಲಿ ಸುರಿಯಲಾಗುತ್ತಿತ್ತು. ಆದರೆ ಹಸಿರು ನ್ಯಾಯಪೀಠಗಳು, ಇತರೆ ನ್ಯಾಯಪೀಠಗಳು ಪರಿಸರಕ್ಕೆ ಈ ತ್ಯಾಜ್ಯ ಸುರಿಯುವ ಕ್ರಮ ಉಂಟುಮಾಡುತ್ತಿರುವ ಅಪಾಯವನ್ನು ಮನಗಂಡು ನೀಡಿದ ಕೆಲವು ಸೂಚನೆಗಳ ಪ್ರಕಾರ ಪ್ರತಿ ರಾಜ್ಯ ಸರಕಾರಕ್ಕೂ ಸಂಸ್ಕರಣಾ ಘಟಕಗಳನ್ನು ಹೊಂದುವುದು ಅನಿವಾರ್ಯವಾಗಿದೆ. ಈಗ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲೂ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ಹೊಂದಬೇಕೆಂದಿದೆ. ಆದರೆ, ಪ್ರಾಮಾಣಿಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದು ಸತ್ಯ. ನಮ್ಮ ಪುಟ್ಟ ಪುಟ್ಟ ಗ್ರಾಮಗಳೂ ನಾಳೆ ತ್ಯಾಜ್ಯ ವಿಲೇವಾರಿಯ ಸಂಕಟಕ್ಕೆ ತುತ್ತಾಗಬೇಕಾದುದು ಸ್ಪಷ್ಟ.

ಮತ್ತೆ ಆ ವೈದ್ಯರಿಬ್ಬರ ಕಥೆಗೆ ಬರುತ್ತೇನೆ. ಮೊದಲಿನ ವೈದ್ಯ ದೂರದೃಷ್ಟಿಯಲ್ಲಿಟ್ಟುಕೊಂಡು, ರೋಗಿಯೊಳಗೆ ಒಂದು ಸಾವಯವ ರೋಗ ನಿರೋಧ ಪದ್ಧತಿ ಜಾಗೃತವಾಗಲೆಂದು ಬುದ್ಧಿ ಹೇಳಿದ. ಅದು ತೀರಾ ಅಗತ್ಯ, ಅನಿವಾರ್ಯವೆಂದಾದರೆ ನೋಡೋಣ. ಅಲ್ಲಿಯವರೆಗೂ ಪ್ರಯತ್ನ ಜಾರಿಯಲ್ಲಿರಲಿ ಎಂಬುದು ಅದರರ್ಥ. ಸುಸ್ಥಿರ ಬದುಕಿನ ಅರ್ಥವೂ ಅದೇ. ಆದರೆ ಮತ್ತೂಬ್ಬ, ರೋಗಿಯ ತತ್‌ಕ್ಷಣದ ಅಗತ್ಯಗಳನ್ನು ಈಡೇರಿಸಿದ. ಪರಿಣಾಮವಾಗಿ ಬಯಕೆ ಹೆಚ್ಚಿತು, ಬಳಕೆ ಹೆಚ್ಚಿತು. ಇದರ ಹಿನ್ನೆಲೆಯಲ್ಲಿ ಪೂರೈಕೆಯೂ ಹೆಚ್ಚಿತು. ಬೇಡಿಕೆ ಈಡೇರಿಸಬೇಕಾದರೆ ಉತ್ಪಾದನೆ ಹೆಚ್ಚಾಗಲೇಬೇಕು. ಅದೂ ಆಯಿತು. ಈಗ ಮುಂದೆ ದಾರಿಯಿಲ್ಲದ ವೃತ್ತದಲ್ಲಿ ನಿಂತಿದ್ದೇವೆ. ಎತ್ತ ಸಾಗುವುದೋ ತಿಳಿಯುತ್ತಿಲ್ಲ.

ವಾಪಸು ಬರುವುದೊಂದೇ ಉಳಿದಿರುವ ದಾರಿ. ಅದಕ್ಕಾಗಿಯೇ ಬಳಕೆಯಲ್ಲೇ ಮೊದಲು ನಿಯಂತ್ರಣ, ಬಳಿಕ ಬಳಸಿದ್ದರ ಪುನರ್‌ ಬಳಕೆಯತ್ತ ಗಮನಹರಿಸಲೇಬೇಕಾದ ಪರಿಸ್ಥಿತಿ ಇದೆ. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಎಲ್ಲ ನಗರಗಳಲ್ಲೂ ತ್ಯಾಜ್ಯ ವಿಲೇವಾರಿ ಸಮಸ್ಯೆಯೆಂದು ಅರಿವಾಗಿದೆ. ಸ್ಥಳೀಯ ಸಂಸ್ಥೆಗಳೂ ಕೊನೆಗೂ ಎದ್ದು ಕುಳಿತಿವೆ. ಅಂದರೆ ಮೆರವಣಿಗೆ ಆರಂಭವಾಗಿದೆ. ಎಷ್ಟು ದೂರ ನಡೆಯುತ್ತದೆ ಎಂಬುದು ಬಳಿಕ ಆಲೋಚಿಸೋಣ.

– ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next