Advertisement

Plastic: ಪ್ಲಾಸ್ಟಿಕ್‌ ಎಂಬ ಪಾಶ, ಪ್ರಕೃತಿಯ ವಿನಾಶ

07:18 AM Feb 22, 2024 | Team Udayavani |

ಪ್ಲಾಸ್ಟಿಕ್‌ ಅಬ್ಟಾ ಇದೊಂದು ಅದ್ಭುತ ಆವಿಷ್ಕಾರ ಅನ್ನೋದು ಬಹುತೇಕರ ಮನದ ನಿಲುವು. ಪ್ರತಿಯೊಂದು ವಿಚಾರವೂ ಒಂದೊಂದು ಕಾಲಘಟ್ಟದಲ್ಲಿ ತನ್ನ ನಿಜಬಣ್ಣ ಬಯಲು ಮಾಡಿದಂತೆ ಪ್ಲಾಸ್ಟಿಕ್‌ ಕೂಡ ಇತ್ತೀಚಿಗೆ ತನ್ನ ಮುಖವಾಡವನ್ನು ಕಳಚುವುದರೊಂದಿಗೆ ತನ್ನ ನೈಜ ಬಣ್ಣ ತೋರಿದೆ. ಬಹುತೇಕ ವಸ್ತುಗಳಿಗೆ ಪರ್ಯಾಯವೆಂದು ಬಳಕೆಯಾಗುತಿಹ ಪ್ಲಾಸ್ಟಿಕ್‌ ಎಷ್ಟು ಸರಳ ಬಳಕೆಯಾಗಿದೆ ಎಂದರೆ, ಇದು ಅಷ್ಟೇ ಸರಳವಾಗಿ ನಮಗೆ ಕ್ಯಾನ್ಸರ್‌, ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ಸಮಸ್ಯೆಗಳನ್ನ ಸಾಗಾಟ ಮಾಡುವ ವಾಹಕವಾಗಿದೆ.

Advertisement

ಅಯ್ಯೋ ಈ ಬರಹ ಪ್ಲಾಸ್ಟಿಕ್‌ ಬಳಸೋರಿಗೆ, ನಮಗಲ್ಲಾ ಅನ್ನುವಂತವರು ಕೊಂಚ ಇತ್ತ ಗಮನಹರಿಸಿ. ಒಂದಿಷ್ಟು ಅಂಕಿ ಅಂಶಗಳ ಪ್ರಕಾರ ನಮ್ಮ ಭೂಮಂಡಲವೂ 71% ನೀರಿನಿಂದ ಆವೃತವಾಗಿದ್ದರೆ, 90% ಪ್ಲಾಸ್ಟಿಕ್‌ ನಿಂದ ಆವೃತವಾಗಿದೆ. ಇಲ್ಲಿ ಮರುಬಳಕೆಯ ಅಂಕಿ ಅಂಶ ನಮ್ಮನ್ನು  ಸ್ತಬ್ಧವಾಗಿಸುತ್ತದೆ. ನಾವು ತಯಾರು ಮಾಡುವ 100% ಪ್ಲಾಸ್ಟಿಕ್‌ ನಲ್ಲಿ 37% ಪ್ಲಾಸ್ಟಿಕ್‌ ಭೂಮಿಯನ್ನು ಸೇರಿದರೆ, 20% ಪ್ಲಾಸ್ಟಿಕ್‌ ಜಲಮೂಲಗಳನ್ನು ತಲುಪುತ್ತಿವೆ, ಇನ್ನೂ 12% ಪ್ಲಾಸ್ಟಿಕ್‌ ಯಾವುದೋ ಒಂದು ರೂಪದಲ್ಲಿ ಮತ್ತೆ ಮಾನವನ ದೇಹಕ್ಕೆ ಪ್ರವೇಶ ಪಡೆಯುತ್ತಿವೆ. 14% ಪ್ಲಾಸ್ಟಿಕ್‌ ಎಲ್ಲಿ ಹೋಗುತಿದೆ ಎಂಬುದರ ಮಾಹಿತಿಯೇ ಇಲ್ಲ. ಉಳಿದ 17% ಪ್ಲಾಸ್ಟಿಕ್‌ ಮರುಬಳಕೆಗೆ ಹೋಗುತ್ತಿದೆ ಆದರೂ ಮರುಬಳಕೆಯಾಗಿ ಬರುತ್ತಿರುವ ಪ್ಲಾಸ್ಟಿಕ್‌ ಕೇವಲ 9% . ಸಿಂಪಲ್ಲಾಗ್‌ ಹೇಳ್ಬೇಕಂದ್ರೆ ನಾವು ತಯಾರಿಸೋ 100% ಪ್ಲಾಸ್ಟಿಕ್‌ ನಲ್ಲಿ ಮರುಬಳಕೆ  ಆಗ್ತಿರೋ ಪ್ಲಾಸ್ಟಿಕ್‌ ಕೇವಲ 9%. ಇನ್ನು 91% ಪ್ಲಾಸ್ಟಿಕ್‌ ಪರಿಸರಕ್ಕೆ ಮಾರಕವಾಗಿ ನಿಂತಿದೆ.

ಅದೆಷ್ಟೋ ವರುಷಗಳಿಂದ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆಗೊಳಿಸುವುದರ ಕುರಿತು ಸರ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ಅನೇಕಾನೇಕ ಅಭಿಯಾನ ಕಾರ್ಯಕ್ರಮಗಳನ್ನು ಮಾಡಿದರೂ ನಮಗೆ ಪ್ಲಾಸ್ಟಿಕ್‌ ಮಾಲಿನ್ಯದ ಕುರಿತು ಇನ್ನೂ ಅಸಡ್ಡೆ ಇತ್ತು. ಆದರೆ ಇತ್ತೀಚೆಗೆ ಕರ್ಣಾಟ ಬಲ ಸೇನೆ ಎಂಬ ತಂಡ ಕೆಲವು ತಂಡಗಳ ಸಹಕಾರದೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಹತ್ತಿರವಿರುವ ಅತ್ಯಂತ ಚಾರಣ ಸುಪ್ರಸಿದ್ಧ ಬಿಸಿಲೇ ಘಾಟ್‌ ನಲ್ಲಿ ಪ್ಲಾಸ್ಟಿಕ್‌ ಡ್ರೆ„ವ್‌ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗುತ್ತಿರುವುದನ್ನು ನಾವಿಲ್ಲಿ ನೆನೆಯಬಹುದು.

ತಂಡವು ಹೇಳುವಂತೆ ಪ್ಲಾಸ್ಟಿಕ್‌ ಡ್ರೆ„ವ್‌ ಅಭಿಯಾನಗಳು ಇತ್ತೀಚೆಗೆ ಸಾಮಾನ್ಯವಾಗಿದ್ದರು, ಕರ್ಣಾಟ ಬಲ ಸೇನೆ ತಂಡದ ಕಾರ್ಯಕ್ರಮ ಬಹಳ ವಿಭಿನ್ನವಾದ ಪ್ರಯತ್ನ. ಕಾರಣ ಇಲ್ಲಿ ಪ್ರಯತ್ನ ಸಾಮಾನ್ಯವಾಗಿದ್ದರೂ ಅಲ್ಲಿ ಸಿಕ್ಕಂತಹ ಅಂಕಿ ಅಂಶಗಳು ಎಂತವರಲ್ಲಿಯೂ ಭಯಮೂಡಿಸುವಂತಿತ್ತು. ಚಾರಣ ಹೆಚ್ಚಿರುವ, ಜನದಟ್ಟಣೆ ಇರುವ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಮಾಡಲೊರಟ ಕೇವಲ ಒಂದು ಕಿ.ಮೀ ಗೆ ಒಂದೂವರೆ ಟನ್‌ ಪ್ಲಾಸ್ಟಿಕ್‌ ಸಂಗ್ರಹವಾಗಿದೆ.

ಇದು ಅರಣ್ಯ ವಲಯಕ್ಕೆ ಸೇರಿರುವುದರಿಂದ ಅಲ್ಲಿನ ಅರಣ್ಯಾಧಿಕಾರಿಗಳೇ ಹೇಳುವಂತೆ ಆಕಸ್ಮಿಕವಾಗಿ ಯಾವುದೇ ಕಾರಣವಿಲ್ಲದೆ ಸತ್ತಂತಹ ಕಾಡುಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಆ ಪ್ರಾಣಿಗಳ ಹೊಟ್ಟೆಯಲ್ಲಿ 60% ಪ್ಲಾಸ್ಟಿಕ್‌ ಕಂಡುಬರುತ್ತಿದೆ. ಮನುಷ್ಯ ತನ್ನ ಮೋಜು ಮಸ್ತಿಗೆ ಅರಣ್ಯಗಳಲಿ ಪಾರ್ಟಿ ಮಾಡಿ ಕುಡಿದು ಮರದಲ್ಲಿ ಸಿಕ್ಕಿಸಿದ ಬಾಟಲಿಗೆ ಕಣವೆಯೊಂದು ತಲೆ ಸವೆರಿಕೊಳ್ಳುತ್ತಿದ್ದಾಗ ಬಾಟಲಿಯ ಗಾಜಿಂದ ನಿಂತಂತೆಯೇ ಪ್ರಾಣ ಬಿಟ್ಟಿದೆ. ಈ ಕುರಿತ ಜಾಗೃತಿ ಕಾರ್ಯಕ್ರಮದಿಂದ ಶಾಲಾ-ಕಾಲೇಜುಗಳಲಿ ಪ್ಲಾಸ್ಟಿಕ್‌ ಮುಕ್ತ ಅಭಿಯಾನಗಳು ನಡೆಯುತ್ತಿವೆ. ಏಕ ಬಳಕೆ ಪ್ಲಾಸ್ಟಿಕ್‌ ನ ಪ್ರಮಾಣ ಕಡಿಮೆಯಾಗ್ತಿದೆ.

Advertisement

ಈ ಮೊದಲೇ ಹೇಳಿದಂತೆ, ಲೆಕ್ಕಕ್ಕೆ ಸಿಗದೆ ಕಣ್ಮರೆಯಾಗುತಿಹ ಪ್ಲಾಸ್ಟಿಕ್‌ ಮಾನವನ ಮನರಂಜನೆ ಎಂಬ ಹೆಸರಿನಲಿ ಕಾಡು ಸೇರುತಿದೆ. ಪ್ಲಾಸ್ಟಿಕ್‌ ಮಣ್ಣಲ್ಲಿ ಕರಗಲು ಕನಿಷ್ಠ 1000 ವರ್ಷಗಳು ಬೇಕು. ಕೇವಲ 75-80 ವರ್ಷಗಳವರೆಗೆ ಭೂಮಿಯ ಅತಿಥಿಗಳಾಗಿ ಬಂದಿರುವ ನಾವು ಭೂಮಿಯ ತಿಥಿ ಮಾಡಲು ಸಂಕಲ್ಪ ಮಾಡಿದಂತಿದೆ. ನಾವು ಭೂಮಿ, ಆಕಾಶ, ನೀರನ್ನು ದೇವರಂತೆ ಪೂಜಿಸಿ ನಮ್ಮೆಲ್ಲ ಪಾಪ-ಕರ್ಮವನ್ನು ನದಿಗಳಲಿ ಸುರಿಯುತ್ತಿದ್ದೇವೆ.

ಆದರೇ 21ನೇ ಶತಮಾನದಲ್ಲಿರುವ ನಮಗೆ ತಿಳಿಯಬೇಕಾದದು ನದಿ-ಪರಿಸರ ಇದ್ದರೆ ಮಾತ್ರ, ಮಾನವ ಆಚರಣೆಗಳನ್ನು ಯೋಚಿಸಲು, ಮಾಡಲು ಲಭ್ಯ. ಪ್ರಕೃತಿಯನ್ನು ಪ್ರಕೃತಿಯಂತೆ ಕಾಣಿ, ಪೂಜೆ-ಪುನಸ್ಕಾರದ ಹೆಸರಲ್ಲಿ ಪ್ರಕೃತಿಗಳ ಅಂತ್ಯ ಸಂಸ್ಕಾರವಾಗೋದು ಬೇಡ. ಈಗಾಗಲೇ ನಾವು ಮಾಡಿದ ತಪ್ಪಿಗೆ ಸರ್ಕಾರ ಸಾವಿರಾರು ಕೋಟಿಗಳನ್ನು ವ್ಯಯಿಸಿ ನಮಾಮಿ ಗಂಗಾ ಯೋಜನೆ ತಂದಿದೆ. ಆದರೂ ಗಂಗೆ ಮತ್ತೆ ತನ್ನ ನೈಜ ಸ್ಥಿತಿಗೆ ಬರುವ ನಂಬಿಕೆಯಿಲ್ಲ.

ಈಗಾಗಲೇ ನಾವುಗಳು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದೇವೆ. ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಗೆ ನಾವು ಸೇವಿಸುವ ಹಾಲು ಹಸುವಿನಿಂದ ಬರುತ್ತದೆ ಎಂಬ ವಿಚಾರವನ್ನು ಗ್ರಾಫಿಕ್ಸ… ಮೂಲಕ ತಿಳಿಸಬೇಕಾಗಬಹುದು. ಹಾಗಾಗಿ ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ ಕಾರಣ ಅತಿ ಹೆಚ್ಚು ಪ್ಲಾಸ್ಟಿಕ್‌ ಮಾಲಿನ್ಯ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ನಾವು ಚೀನಾವನ್ನು ಹಿಂದೆ ಹಾಕಿ ಟಾಪ್‌ 5 ಸ್ಥಾನಗಳಲ್ಲಿ ನಿಂತಿದ್ದೇವೆ.

ಭಾರತವು ಪ್ರತಿ ದಿನಕ್ಕೆ 26ಸಾವಿರ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಹಾಗೂ ಕರ್ನಾಟಕದಲ್ಲಿ 600 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ತಯಾರುಮಾಡ್ತಿದೆ. ಇಂದಿನಿಂದಾದರೂ ಪೃಥ್ವಿಯನ್ನು ಪ್ಲಾಸ್ಟಿಕ್‌ ನಿಂದ ಲ್ಯಾಮಿನೇಟ್‌ ಮಾಡೋದನ್ನು ತಡಿಯೋಣ. ಅವನಿ ಅವಳಂತೆಯೇ ಉಸಿರಾಡಲು ಬಿಡೋಣ.  ಹಾಗಾಗಿ Let’s say no to plastic.

-ಪವಿತ್ರಾ

ಕೋಲಾರ

Advertisement

Udayavani is now on Telegram. Click here to join our channel and stay updated with the latest news.

Next