Advertisement

ಕಡತದಲ್ಲೇ ಬಾಕಿಯಾದ ಕರಾವಳಿಯ “ಪ್ಲಾಸ್ಟಿಕ್‌ ಪಾರ್ಕ್‌’!

09:55 PM Dec 22, 2019 | mahesh |

ಮಹಾನಗರ: ನಗರ ಹೊರವಲಯದ ಗಂಜೀಮಠ ಮತ್ತು ಗುರುಪುರದ ಸುಮಾರು 90 ಎಕ್ರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೇಂದ್ರ ಸರಕಾರದ ಬಹುನಿರೀಕ್ಷಿತ “ಪ್ಲಾಸ್ಟಿಕ್‌ ಪಾರ್ಕ್‌’ ಯೋಜನೆ ಇನ್ನೂ ಅನುಷ್ಟಾನ ಹಂತದಲ್ಲೇ ಬಾಕಿಯಾಗಿದೆ.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಎರಡು ವರ್ಷದ ಹಿಂದೆ ಗುರುಪುರ ಹಾಗೂ ಗಂಜಿಮಠದಲ್ಲಿ ಪಾರ್ಕ್‌ ಸ್ಥಾಪನೆಯ ಸ್ಥಳ ಪರಿಶೀಲಿಸಿ, ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್‌ ಹೆಗಡೆ ಅವರ ಉಪಸ್ಥಿತಿಯಲ್ಲಿ ಮಂಗಳೂರಿನಲ್ಲಿ ಸಭೆ ಕೂಡ ನಡೆಸಲಾಗಿತ್ತು. ಯೋಜನೆಯ ಪ್ರಸ್ತಾವನೆಯನ್ನು ಬೆಂಗಳೂರಿನ ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿಗೆ ಅಂದು ಕಳುಹಿಸಲಾಗಿತ್ತು. ಈ ಕಡತ ಇಲಾಖೆಯಿಂದ ಇಲಾಖೆಗಳಿಗೆ ಈಗಲೂ ಹೋಗುತ್ತಿದೆ.

ಹಾಗಾದರೆ, ಕೆಲವು ವರ್ಷಗಳಿಂದ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಸಂಬಂಧ ಘೋಷಣೆ-ಮಾತುಕತೆ ನಡೆದದ್ದಕ್ಕೆ ಇನ್ನೂ ಕೂಡ ಜೀವಕಳೆ ಪಡೆದಿಲ್ಲ ಎಂಬುದು ಸ್ಪಷ್ಟವಾದಂತಾಗಿದೆ. ಕೈಗಾರಿಕೆ ಸ್ನೇಹಿ ವಾತಾವರಣವನ್ನು ರಾಜ್ಯದಲ್ಲಿ ಕಲ್ಪಿಸಿಕೊಡುವ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಇನ್ನೂ ಕೂಡ “ಪ್ಲಾಸ್ಟಿಕ್‌ ಪಾರ್ಕ್‌’ ಯೋಜನೆಯನ್ನು ಬೆನ್ನು ಹಿಡಿದು ಕಾರ್ಯಗತಗೊಳಿಸುವಲ್ಲಿ ಎಡವಿದ್ದು ಯಾಕೆ? ಎಂಬ ಪ್ರಶ್ನೆ ಈಗ ಕಾಡುವಂತಾಗಿದೆ.

1 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಪ್ಲಾಸ್ಟಿಕ್‌ ತಯಾರಿಕೆಯ ಜತೆಗೆ, ಪ್ಲಾಸ್ಟಿಕ್‌ನ ಮರುಬಳಕೆ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿತ್ತು. ಇದರಿಂದ ಪ್ಲಾಸ್ಟಿಕ್‌ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗಲಿದ್ದು, ಇನ್ನೊಂದೆಡೆ ದೇಶದಲ್ಲಿ ಬೇಡಿಕೆ ಇರುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ. ದೇಶದಲ್ಲಿ ಹಲವಾರು ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ ಘಟಕಗಳಿವೆ.

ಈ ಘಟಕಗಳು ಲಘು ಮತ್ತು ಸಣ್ಣ ಪ್ರಮಾಣದಲ್ಲಿದ್ದು, ದೇಶದ ಬೇಡಿಕೆಯನ್ನು ಪೂರೈಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹುತೇಕ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಹೊರ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ. ಇದನ್ನು ನಿವಾರಿಸುವುದಕ್ಕಾಗಿಯೇ ದೇಶದ ವಿವಿಧೆಡೆ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರದ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್‌ ಸಚಿವಾಲಯವು ಮುಂದಾಗಿತ್ತು.

Advertisement

ಇದರಂತೆ, ಪಂಜಾಬ್‌ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಹಾಗೂ ಆಂಧ್ರಪ್ರದೇಶಗಳಲ್ಲಿ ಆರು ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿತ್ತು. ಇದರ ಜತೆಗೆ ಮಧ್ಯಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಅಸ್ಸಾಂಗಳಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ವಿಶೇಷವೆಂದರೆ ಎಲ್ಲ ಭಾಗದ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಯೋಜನೆ ಅನುಷ್ಟಾನ ಹಂತದಲ್ಲಿದ್ದರೆ, ಮಂಗಳೂರು ಯೋಜನೆ ಇನ್ನು ಕೂಡ ಕಡತದಲ್ಲಿಯೇ ಬಾಕಿಯಾಗಿದೆ.

ಎಂಆರ್‌ಪಿಎಲ್‌ನಿಂದ ಹೊಸ ರೂಪ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಎಂಆರ್‌ಪಿಎಲ್‌ ಅವಕಾಶಗಳನ್ನು ತೆರೆದಿಟ್ಟಿತು. ಎಂಆರ್‌ಪಿಎಲ್‌ನಿಂದ ಪಾಲಿಪ್ರೊಪಲಿನ್‌ ಘಟಕ ಆರಂಭವಾಗುತ್ತಿದ್ದಂತೆಯೇ ಪ್ಲಾಸ್ಟಿಕ್‌ ಪಾರ್ಕ್‌ನ ಬೇಡಿಕೆ ಗರಿಗೆದರಿತ್ತು. ಪಾಲಿಪ್ರೊಪಲಿನ್‌ ಘಟಕದ ತ್ಯಾಜ್ಯವು ಪ್ಲಾಸ್ಟಿಕ್‌ ಪಾರ್ಕ್‌ನ ಕಚ್ಚಾ ವಸ್ತುವಾಗಿ ಬಳಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪಿಸುವಂತೆ ಕೆನರಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಆ್ಯಂಡ್‌ ಟ್ರೇಡರ್ಸ್‌ ಅಸೋಸಿಯೇಶನ್‌ ವತಿಯಿಂದ 2015ರಲ್ಲಿಯೇ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದರಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲವು, ಇದಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿತ್ತು.

“ಪ್ರಸ್ತಾವನೆ ಶೀಘ್ರ ಕೇಂದ್ರಕ್ಕೆ’
ಗಂಜಿಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಸಂಬಂಧಿಸಿದ ಎಲ್ಲ ಪೂರಕ ಕ್ರಮಗಳು ಈಗ ಅಂತಿಮ ಹಂತದಲ್ಲಿವೆ. ಇದೀಗ ಅನುಷ್ಟಾನ ಏಜೆನ್ಸಿ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೆಐಎಡಿಬಿ ಇದರ ಉಸ್ತುವಾರಿ ನೋಡಿಕೊಳ್ಳಲಿದೆ. ಇದರ ವರದಿಯನ್ನು ಕೇಂದ್ರ ಸರಕಾರ ಅಂತಿಮಗೊಳಿಸಿ ಪಾರ್ಕ್‌ ನಿರ್ಮಾಣ ಕಾರ್ಯ ನಡೆಯಲಿದೆ.
 - ಗೋಕುಲ್‌ದಾಸ್‌ ನಾಯಕ್‌, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ.

Advertisement

Udayavani is now on Telegram. Click here to join our channel and stay updated with the latest news.

Next