Advertisement

ತೆರವು ಕಾರ್ಯಾಚರಣೆ : ಹೆದ್ದಾರಿಗೆ ಬಿದ್ದ ಬೃಹತ್‌ ನೀರಿನ ಟ್ಯಾಂಕ್‌

06:54 PM Oct 12, 2022 | Team Udayavani |

ಕೋಟೇಶ್ವರ: ಕೋಟೇಶ್ವರ ಗ್ರಾ.ಪಂ. ವ್ಯಾಪ್ತಿಯ ಪಂಚಾಯತ್‌ ಕಚೇರಿ ಸನಿಹದ ಶಿಥಿಲಗೊಂಡ ಸುಮಾರು 30 ವರ್ಷಗಳ ಪುರಾತನ ಬೃಹತ್ ನೀರಿನ ಟ್ಯಾಂಕ್‌ ತೆರವು ಕಾರ್ಯ ಅ. 11ರಂದು ಸಂಜೆ ನಡೆಯಿತು.

Advertisement

ಕುಸಿಯುವ ಭೀತಿಯಲ್ಲಿದ್ದ ನೀರಿನ ಟ್ಯಾಂಕ್‌ ಅನ್ನು ತೆರವು ಗೊಳಿಸುವ ಬಗ್ಗೆ ಗ್ರಾ.ಪಂ. ನಿರ್ಣಯ ಕೈಗೊಂಡು ದಿನ ನಿಗದಿಪಡಿಸಿತ್ತು. ರಾಷ್ಟ್ರೀಯ ಹೆದ್ದಾರಿ 66 ನ್ನು ಚಾಚಿ ಕೊಂಡಿರುವ ಗ್ರಾ.ಪಂ. ಮುಖ್ಯ ರಸ್ತೆಯ ಪಾರ್ಶ್ವದಲ್ಲಿರುವ ನೀರಿನ ಟ್ಯಾಂಕ್‌ ತೆರವುಗೊಳಿಸುವುದು ಪಂಚಾಯತ್‌ಗೆ ಸವಾಲಾಗಿತ್ತು. ಗ್ರಾ.ಪಂ. ಕಟ್ಟಡಕ್ಕೆ ತೊಂದರೆ ಯಾಗದಂತೆ ನೋಡಿಕೊಂಡು ರಾಷ್ಟ್ರೀಯ ಹೆದ್ದಾರಿಗೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೀರಿನ ಟ್ಯಾಂಕ್‌ ಅನ್ನು ವಿವಿಧ ಆಯಾಮದಲ್ಲಿ ಆಲೋಚಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಮಂಗಳೂರಿನ ಖಾಸಗಿ ಸಂಸ್ಥೆಯೊಂದು ಜೆಸಿಬಿ ಹಾಗೂ ಇನ್ನಿತರ ಪರಿಕರ ಬಳಸಿ ತೆರವು ಕಾರ್ಯಕ್ಕೆ ಮುಂದಾಗಿತ್ತು.

ವಾಹನ ಸಂಚಾರಕ್ಕೆ ನಿರ್ಬಂಧ ಡಿವೈಎಸ್ಪಿ ಶ್ರೀಕಾಂತ್‌ ಅವರ ಮಾರ್ಗದರ್ಶನದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಗೋಪಿ ಕೃಷ್ಣ, ಎಸ್‌.ಐ. ಸದಾಶಿವ ಗವರೋಜಿ, ಟ್ರಾಫಿಕ್‌ ಎಸ್‌.ಐ. ಸುಧಾಪ್ರಭು ಹಾಗೂ ಟ್ರಾಫಿಕ್‌ ಪೊಲೀಸರು, ಗ್ರಾ.ಪಂ. ಅಧ್ಯಕ್ಷ ಕೃಷ್ಣಗೊಲ್ಲ, ಪಿಡಿಒ ದಿನೇಶ ನಾಯ್ಕ, ಗ್ರಾ.ಪಂ.
ಸದಸ್ಯರು, ಸಿಬಂದಿ ನೇತೃತ್ವದಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸರ್ವಿಸ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

ಸುಮಾರು 4 ಗಂಟೆಗಳ ಸತತ ಪ್ರಯತ್ನದ ಬಳಿಕ ಸಂಜೆ ವೇಳೆಗೆ ನೀರಿನ ಟ್ಯಾಂಕ್‌ ಅನ್ನು ಕೆಡವಲಾಯಿತು. ಸಾವಿರಾರು ಮಂದಿ ಗ್ರಾಮಸ್ಥರು ನೀರಿನ ಟ್ಯಾಂಕ್‌ ತೆರವುಗೊಳಿಸುವ ಪ್ರಕ್ರಿಯೆ ವೀಕ್ಷಿಸಲು ಜಮಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next