ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮ ದಲ್ಲಿರುವ ಸರ್ಕಾರಿ ಜಾಗಗಳಲ್ಲಿ ಅತಿಕ್ರಮವಾಗಿ ಪ್ರವೇಶಿಸಿ, ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆ, ಸ್ಥಳೀಯರು ಕಂದಾಯ ಇಲಾಖೆಗೆ ದೂರು ನೀಡಿದ್ದರಿಂದ ಎಚ್ಚೆತ್ತುಕೊಂಡ ಇಲಾಖಾ ಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಿ ಒತ್ತುವರಿ ತೆರವುಗೊಳಿಸಿ, ನಾಮಫಲಕ ಅಳವಡಿಸಿ, ಅತಿಕ್ರಮ ಪ್ರವೇಶಕ್ಕೆ ನಿರ್ಬಂಧ ಹೇರಿದರು.
ಸ್ಥಳೀಯವಾಗಿ ಖಾಸಗಿ ಮಾಲೀಕತ್ವದಲ್ಲಿನ ಆದರ್ಶ್ ಡೆವಲಪರ್ನಿಂದ ಲೇಔಟ್ಗಳು ತಲೆ ಎತ್ತುತ್ತಿದ್ದು, ಅಕ್ಕಪಕ್ಕದಲ್ಲಿನ ಸಾಕಷ್ಟು ಸರ್ಕಾರಿ ಬಿ ಖರಾಬು ಜಾಗ ಒತ್ತುವರಿ ಮಾಡಿಕೊಂಡಿರುವ ಜಾಗ ಗುರುತಿಸುವಲ್ಲಿ ಅಧಿಕಾರಿಗಳು ಯಶಸ್ವಿ ಯಾಗಿದ್ದು, ಆಯಾ ಜಾಗಗಳಲ್ಲಿ ಹದ್ದುಬಸ್ತು ಮಾಡಲು ಮುಂದಾದರು. ಸ್ಥಳೀಯರು ಸಹ ದಾಖಲಾತಿ ಗಳನ್ನು ಕೈಯಲ್ಲಿಡಿದುಕೊಂಡು ಅಧಿಕಾರಿಗಳ ಹೆಜ್ಜೆಗೆ ಹೆಜ್ಜೆ ಹಾಕಿದರು.
ಮಾಹಿತಿ ಪಡೆದುಕೊಂಡ ಅಧಿಕಾರಿಗಳು: ಕಂದಾಯ ಇಲಾಖೆ ಉಪ ತಹಶೀಲ್ದಾರ್ ಚೈತ್ರಾ, ಆರ್.ಐ.ಚಿದಾನಂದ್ ಅವರ ತಂಡ ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದ ಸರ್ವೆ ನಂ.108ರಲ್ಲಿ 5 ಎಕರೆ 13 ಗುಂಟೆ ಸರ್ಕಾರಿ ಬೀಳು, ಸರ್ವೆ ನಂ. 113ರಲ್ಲಿ 28ಗುಂಟೆ ಸರ್ಕಾರಿ ಬೀಳು, ಸರ್ವೆ ನಂ. 117ರಲ್ಲಿ ಸರ್ಕಾರಿ ಜಾಗ ಮತ್ತು ಸರ್ವೆ ನಂ.74 ರಲ್ಲಿ 36 ಗುಂಟೆ ಸರ್ಕಾರಿ ಬೀಳು ಸೇರಿ ಸರ್ಕಾರದ ಸ್ವತ್ತು ಗುರುತಿಸಲು ಸರ್ವೆಯರ್ ಮಂಜುನಾಥ್ ಮತ್ತು ಗ್ರಾಪಂ ಸೆಕ್ರೆಟರಿ ಅವರನ್ನು ಕರೆಯಿಸಿ ಸ್ಥಳದ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಗೋಮಾಳ ಜಾಗ ಪೋಡಿಯಾಗಿಲ್ಲ: ಜಾಲಿಗೆ ಗ್ರಾಪಂ ಸದಸ್ಯ ಬಿ.ಆರ್.ಮಹೇಶ್ಕುಮಾರ್ ಮಾತನಾಡಿ, ಅಕ್ರಮದ ಬಗ್ಗೆ ಪ್ರಶ್ನಿಸಿದರೆ ದೌರ್ಜನ್ಯ ಎಸಗುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಾಗ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಗ್ರಾಪಂನಿಂದ ಯಾವುದೇ ಅನುಮತಿ ಪಡೆದಿಲ್ಲ. ಜತೆಗೆ 3 ಬಾರಿ ನೊಟೀಸ್ ಕಳುಹಿಸಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೇಜರ್ ಆಗಿ ಸರ್ವೆ ನಂ.73ಪಿ 4 ಸರ್ಕಾರಿ ಗೋಮಾಳ ಜಾಗವು ಪೋಡಿಯಾಗಿಲ್ಲ. ಪೋಡಿಯಾಗದಿರುವ ಜಾಗಕ್ಕೆ ಬಯಪ್ಪ ಅವರು ತಾತ್ಕಾಲಿಕ ಅನುಮೋದನೆ ಕೊಟ್ಟಿದ್ದಾರೆ. ಪೋಡಿಯಾಗದ ಜಾಗಗಳಿಗೆ ಹೇಗೆ ಅನುಮತಿ ಕೊಡ್ತಾರೆ? ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಪಂಚಾಯಿತಿಗೆ ಒದಗಿಸಿಲ್ಲ. ಇದರ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಲಾ ಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಒತ್ತುವರಿ ಜಾಗ ತೆರವು: ಇದೀಗ ಕಂದಾಯ ಇಲಾಖಾಧಿಕಾರಿಗಳ ತಂಡ ಒಂದು ಕಡೆ ಪರಿಶೀಲನೆ ನಡೆಸಿದ್ದು, ಉಳಿದಂತೆ ಕೆಲವು ಕಡೆಗಳಲ್ಲಿಯೂ ಸಹ ಮುಂದಿನ ವಾರದಲ್ಲಿ ಸರ್ಕಾರಿ ಒತ್ತುವರಿ ಜಾಗ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರಾದ ಬೆಟ್ಟೇ® ಹಳ್ಳಿ ಮುನಿರಾಜ್, ನಾಗರಾಜು, ಕೇಶವಮೂರ್ತಿ, ಮೂರ್ತಿ, ವೆಂಕಟೇಶ್, ಮುನಿರಾಜು, ಮಹೇಶ್, ರಾಜಣ್ಣ, ಆಂಜಿನಪ್ಪ, ಪಿಲಿಪ್ಸ್, ಅಜಯ್, ಗುಳ್ಳಪ್ಪ, ಗ್ರಾಪಂ
ಸೆಕ್ರೇಟರಿ ನರಸಿಂಹಮೂರ್ತಿ, ಸಿಬ್ಬಂದಿ, ಸರ್ವೆಯರ್ ಮಂಜುನಾಥ್ ಹಾಗೂ ಇತರರು ಇದ್ದರು.