ಉಡುಪಿ: ಸ್ವಚ್ಛ ಉಡುಪಿ ಮಿಷನ್ಗೆ ಆ. 15ರಂದು ಚಾಲನೆ ನೀಡಲಿದ್ದು, 2018ರ ಆ. 15ರೊಳಗೆ ಜಿಲ್ಲೆಯ ಎಲ್ಲ ಗ್ರಾಮಗಳು ಗುರಿ ಸಾಧಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.
ಬುಧವಾರ ರಜತಾದ್ರಿಯ ಅಟಲ್ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ “ಸ್ವಚ್ಛ ಉಡುಪಿ – ಸ್ವಸ್ಥ ಉಡುಪಿ’ ಪುಸ್ತಕ
ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ನಿರ್ವಹಣೆ ಕುರಿತು6 ದಿನಗಳ ತರಬೇತಿ ಪಡೆದಿರುವ ಎಲ್ಲ
ಸ್ವಸಹಾಯ ಸಂಘಗಳ ಸದಸ್ಯರು ಸ್ವಚ್ಛ ಉಡುಪಿ ಮಿಷನ್ ಅನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೈನಿಕರಂತೆ ಕರ್ತವ್ಯ ನಿರ್ವಹಿಸಬೇಕು. ಆಗಸ್ಟ್ 5ರಿಂದ 2 ದಿನ ನಡೆಯುವ ಪ್ರಾಯೋಗಿಕ ತರಬೇತಿ ಅನಂತರ ತಮ್ಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಮನೆ ಅಂಗಳದಿಂದಲೇ…
ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಎಲ್ಲರ ಮನೆ ಅಂಗಳದಿಂದಲೇ ಸ್ವಚ್ಛತೆ ಕಾರ್ಯ ಆರಂಭವಾಗಬೇಕು ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ಪುಸ್ತಕ ಬಿಡುಗಡೆಗೊಳಿಸಿ ಹೇಳಿದರು. ಘನ ಮತ್ತು ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಜಿಲ್ಲೆಯಗ್ರಾ.ಪಂ.ಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ ನೀಡಲಾಗಿದೆ. ಆದರೆ ಸ್ವಚ್ಛತಾ ಕಾರ್ಯದ ಆರಂಭ ನಮ್ಮ ಮನೆ ಅಂಗಳದಿಂದಲೇ ಪ್ರಾರಂಭವಾಗಬೇಕು. ಈ ಕಾರ್ಯಗಳಲ್ಲಿ ಜನಪ್ರತಿನಿಧಿಗಳು ಕೈಜೋಡಿಸಲಿದ್ದೇವೆ ಎಂದು ಹೇಳಿದರು.
ನೆಹರೂ ಯುವ ಕೇಂದ್ರದ ವತಿಯಿಂದ ಸ್ವಚ್ಛತಾ ಶಪಥ ಬೋಧಿಸಲಾಯಿತು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ವೆಲ್ಲೂರು ಶ್ರೀನಿವಾಸನ್ ಉಪಸ್ಥಿತರಿದ್ದರು. ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್ ಸ್ವಾಗತಿಸಿದರು, ಜಿಲ್ಲಾ ಪರಿಸರಅಧಿಕಾರಿ ಲಕ್ಷ್ಮೀಕಾಂತ್ ವಂದಿಸಿದರು.