Advertisement

ಕ್ಲಾಸ್‌ ಯೋಚನೆ; ಮಾಸ್‌ ನಿರೂಪಣೆ

10:23 AM Jul 23, 2017 | |

ಅದು ಕೆ.ಆರ್‌. ಮಾರ್ಕೆಟ್‌ನ ಹಳೆಯ ಸಂಪ್ರದಾಯ. ಅಲ್ಲಿ ಆಳಬೇಕು ಅಂದರೆ, ಹುಕುಂ ಗೆದ್ದು ಬರಬೇಕು. ಒಮ್ಮೆ ಹುಕುಂ ಗೆದ್ದು ಬಿಟ್ಟರೆ, ಬರೀ ಮಾರ್ಕೆಟ್‌ ಅಷ್ಟೇ ಅಲ್ಲ, ಬೆಂಗಳೂರನ್ನೇ ಆಳುವ ದಾದಾ ಆಗಬಹುದು. ಆದರೆ, ದಾದಾ ಆಗುವುದು ಅಷ್ಟು ಸುಲಭವಲ್ಲ. ರಕ್ತ ಹರಿಸುವುದಕ್ಕೆ ತಯಾರಾಗಬೇಕು, ಯುದ್ಧಕ್ಕೆ ಬಂದವರ ಜೊತೆಗೆ ತೊಡೆ ತಟ್ಟಿ ನಿಲ್ಲಬೇಕು, ಹೆಣಗಳ ಮೇಲೆ ಸಾಮ್ರಾಜ್ಯ ಕಟ್ಟಬೇಕು… ಭೂಗತ ಜಗತ್ತಿನ ಕುರಿತು ಇದುವರೆಗೂ ಹಲವು ಚಿತ್ರಗಳು ಬಂದಿವೆ.

Advertisement

“ದಾದಾ ಈಸ್‌ ಬ್ಯಾಕ್‌’ ಆ ಸಾಲಿಗೆ ಸೇರುವ ಇನ್ನೊಂದು ಸಿನಿಮಾ. ಇಲ್ಲಿ ಭೂಗತ ಜಗತ್ತಿನ ದಾದಾ ಆಗುವುದಕ್ಕೆ ಜಿದ್ದಾಜಿದ್ದಿ ಇದೆ, ಗ್ಯಾಂಗ್‌ವಾರ್‌ಗಳಿವೆ, ರಕ್ತದೋಕುಳಿಯೂ ಇದೆ. ಅದೆಲ್ಲದರ ಹಿಂದೆ ಒಂದು ದೊಡ್ಡ ತ್ಯಾಗಮಯ ಕಥೆ ಇದೆ. ಬಹುಶಃ “ದಾದಾ ಈಸ್‌ ಬ್ಯಾಕ್‌’ ಚಿತ್ರವು ಸ್ವಲ್ಪ ವಿಭಿನ್ನವಾಗುವುದಕ್ಕೆ ಅದೇ ಕಾರಣ. ಇಲ್ಲಿ ನಿರ್ದೇಶಕ ಸಂತು ಗ್ಯಾಂಗ್‌ವಾರ್‌ಗೆ ಅದೆಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೋ, ಅಷ್ಟೇ ಪ್ರಾಮುಖ್ಯತೆಯನ್ನು ಸೆಂಟಿಮೆಂಟಲ್‌ ದೃಶ್ಯಗಳ ಕಡೆಗೂ ಕೊಟ್ಟಿದ್ದಾರೆ. ಹಾಗಾಗಿಯೇ ಇದೊಂದು ರೌಡಿಸಂ ಹಿನ್ನಲೆಯ ಚಿತ್ರವಾದರೂ, ಇಲ್ಲಿ ಸ್ನೇಹ, ಸಂಬಂಧ, ಪ್ರೀತಿ ಎಲ್ಲವೂ ಇದೆ.

ಆತ ಎಲ್ಲರ ಪಾಲಿಗೆ ದಾದಾ. ಹೆಸರು ಟಿಪ್ಪು. ಅವನ ಎಡ-ಬಲಕ್ಕೆ ದೊಡ್ಡ, ಚಿಕ್ಕ ಎಂಬ ಹುಡುಗರು. ದಾದಾಗಾಗಿ ಪ್ರಾಣ ಕೊಡುವ ಹೈದರು. ಅವರು ದಾದಾಗೆ ಪ್ರಾಣ ಕೊಡುವುದಕ್ಕೆ ತಯಾರಾದರೆ, ದಾದಾನನ್ನು ಹೇಗಾದರೂ ಮುಗಿಸಿ, ಆ ಜಾಗಕ್ಕೆ ಬರಬೇಕು ಎನ್ನುವುದು ಡೆಲ್ಲಿ ಎಂಬ ಇನ್ನೊಬ್ಬ ರೌಡಿಯ ಕನಸು. ಆದರೆ, ದೊಡ್ಡ ಮತ್ತು ಚಿಕ್ಕ ಇರುವವರೆಗೂ ಅದು ಸಾಧ್ಯವಿಲ್ಲ. ಹೀಗಿರುವಾದಗಲೇ ಅವರಿಬ್ಬರ ಜೀವನಕ್ಕೆ ಪೋಸ್ಟ್‌ ಆಫೀಸ್‌ ಶ್ರುತಿ ಎಂಬ ಹುಡುಗಿ ಬಲಗಾಲಿಟ್ಟು ಬರುತ್ತಾಳೆ.

ಹಾಗೆ ಬಂದ ನಂತರ ಅವರಿಬ್ಬರ ಜೀವನವೇ ಬದಲಾಗುತ್ತದೆ. ಇಬ್ಬರೂ ಅವಳ ಕನವರಿಕೆಯಲ್ಲೇ ಕಳೆದು ಹೋಗುತ್ತಾರೆ. ಈ ಅವಕಾಶವನ್ನು ಬಳಸಿಕೊಂಡು, ಡೆಲ್ಲಿ ಕಡೆಯವರು, ಟಿಪ್ಪು ಮೇಲೆ ಬೀಳುತ್ತಾರಾ? ಆ ಪ್ರಶ್ನೆಗೆ ಉತ್ತರ ಸಿಗಬೇಕಿದ್ದರೆ ಚಿತ್ರ ನೋಡಲೇಬೇಕು. ಇಷ್ಟು ಕೇಳಿದರೆ, ಚಿತ್ರ ಮುಂದೇನಾಗಬಹುದು ಎಂಬುದನ್ನು ಅಂದಾಜಿಸಬಹುದು. ಆದರೆ, ಸಂತು ನಿಮ್ಮ ಅಂದಾಜನ್ನು ಬುಡಮೇಲು ಮಾಡುತ್ತಾರೆ. ಒಂದು ಭಯಂಕರ ಟ್ವಿಸ್ಟು ಕೊಟ್ಟು, ಚಿತ್ರವನ್ನು ಇನ್ನೊಂದು ಆಯಾಮಕ್ಕೆ ತಿರುಗಿಸುತ್ತಾರೆ.

ಅಲ್ಲಿಯವರೆಗೂ ರೌಡಿಸಂ, ಬಜಾರು, ಗ್ಯಾಂಗ್‌ ವಾರ್‌ ಎಂದು ಸಾಗುವ ಚಿತ್ರ, ಅಲ್ಲಿಂದ ಪಥ ಬದಲಾಯಿಸುತ್ತದೆ. ಬಹುಶಃ ಚಿತ್ರದಲ್ಲಿ ಅಲ್ಲಿಯವರೆಗೂ ವಿಶೇಷವಾದದ್ದೇನೂ ಆಗಿರುವುದಿಲ್ಲ. ಅದೊಂದು ಟ್ವಿಸ್ಟು, ಪ್ರೇಕ್ಷಕರಿಗೂ ಚಿತ್ರದ ಬಗ್ಗೆ ಗಮನಹರಿಸುವಂತೆ ಮಾಡುತ್ತದೆ. ಹಾಗಾಗಿ ಅಲ್ಲಿಯವರೆಗೂ ಕಾಯದೇ ವಿಧಿಯಿಲ್ಲ. ಹಾಗೆ ನೋಡಿದರೆ, ಸಂತು ಚಿತ್ರವನ್ನು ವಿಪರೀತ ಏಳೆದಾಡಿಲ್ಲ ಅಥವಾ ಬೇಡದ್ದನ್ನು ಹೇಳುವ ಪ್ರಯತ್ನ ಮಾಡುವುದಕ್ಕೆ ಹೋಗಿಲ್ಲ. ಏನು ಹೇಳಬೇಕೋ, ಅದನ್ನು ಎರಡು ಗಂಟೆ ಅವಧಿಯಲ್ಲಿ ಹೇಳಿ ಮುಗಿಸಿದ್ದಾರೆ.

Advertisement

ಆದರೂ ಮೊದಲಾರ್ಧ ಏನೂ ವಿಶೇಷ ನಡೆದಿಲ್ಲ ಎಂಬ ಭಾವನೆ ಆಗಾಗ್ಗೆ ಪ್ರೇಕ್ಷಕರಿಗೆ ಬರುತ್ತಲೇ ಇರುತ್ತದೆ. ಅದೆಲ್ಲಾ ಸರಿ ಹೋಗಬೇಕೆಂದರೆ, ಚಿತ್ರದ ದ್ವಿತೀಯಾರ್ಧದವರೆಗೂ ಕಾಯಬೇಕು. ಅದರಲ್ಲೂ ಕೊನೆಯ ಕಾಲು ಗಂಟೆ ಚಿತ್ರವನ್ನು ಸಂತು ನಿರೂಪಿಸಿರುವ ರೀತಿ, ಅದಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿರುವ ಸಾಥ್‌ ಖುಷಿಕೊಡುತ್ತದೆ. ಬಹುಶಃ ಈ ಚಿತ್ರಕ್ಕೆ ಇನ್ನಷ್ಟು ಪಕ್ವ ಕಲಾವಿದರು ಇದ್ದಿದ್ದರೆ ಚಿತ್ರ ಇನ್ನೊಂದು ಲೆವೆಲ್‌ಗೆ ಹೋಗುತಿತ್ತೇನೋ? ಪಾರ್ಥಿಬನ್‌ ಒಳ್ಳೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ದಾದಾ ಪಾತ್ರದಲ್ಲಿ ಅವರು ತಿಣುಕಾಡಿದ್ದಾರೆ.

ಬಹುಶಃ ಭಾಷೆಯ ಸಮಸ್ಯೆಯಿಂದಾಗಿ ಅವರು ಡಲ್‌ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಇನ್ನು ದೊಡ್ಡ-ಚಿಕ್ಕನಾಗಿ ಕಾಣಿಸಿಕೊಂಡಿರುವ ಅಜಯ್‌ ರಾಜ್‌ ಮತ್ತು ಅರುಣ್‌ ನಟನೆಯಲ್ಲಿ ಇನ್ನಷ್ಟು ದೂರ ಸಾಗಬೇಕು. ಶ್ರಾವ್ಯ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇಲ್ಲ. ಇವರ ಮಧ್ಯೆ ನಿಜಕ್ಕೂ ತಮ್ಮ ಅಭಿನಯದಿಂದ ಖುಷಿಪಡಿಸುವುದೆಂದರೆ ಅದು ಶರತ್‌ ಲೋಹಿತಾಶ್ವ, ಸುಧಾರಾಣಿ ಮತ್ತು ದತ್ತಣ್ಣ. ಪತ್ರಕರ್ತ ವಿನಾಯಕ್‌ ರಾಮ್‌ ಕಲಗಾರು ಸಣ್ಣ ಪಾತ್ರದಲ್ಲೇ ಗಮನಸೆಳೆಯುತ್ತಾರೆ.

ಇನ್ನು ನಾಗೇಶ್‌ ಆಚಾರ್ಯ ಇಡೀ ಪರಿಸರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಾಡುಗಳಿಗಿಂಥ, ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ ಅನೂಪ್‌ ಸೀಳಿನ್‌. “ಗೊಂಬೆಗಳ ಲವ್‌’ನಂತಹ ವಿಭಿನ್ನ ಚಿತ್ರ ಮಾಡಿದ್ದ ಸಂತು, ಈಗ ರೌಡಿಸಂ ಚಿತ್ರ ಮಾಡುವ ಮೂಲಕ ಹೊಸ ಪ್ರಯೋಗವೊಂದಕ್ಕೆ ತಮ್ಮನ್ನು ತಾವೇ ಒಡ್ಡುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಇದು ಇನ್ನೊಂದು ಹೊಸ ಪ್ರಯೋಗ ಎಂದು ಹೇಳುವುದು ಕಷ್ಟ. ಆದರೆ, ಸಂತು ಮಟ್ಟಿಗೆ ಇದೊಂದು ಹೊಸ ಪ್ರಯೋಗ ಎಂದರೆ ತಪ್ಪಿಲ್ಲ.

ಚಿತ್ರ: ದಾದಾ ಈಸ್‌ ಬ್ಯಾಕ್‌
ನಿರ್ದೇಶನ: ಸಂತು
ನಿರ್ಮಾಣ: ಡಾ ಶಂಕರ್‌ ಮತ್ತು ಅಜಯ್‌ ರಾಜ್‌ ಅರಸ್‌
ತಾರಾಗಣ: ಪಾರ್ಥಿಬನ್‌, ಅರುಣ್‌, ಅಜಯ್‌ ರಾಜ್‌ ಅರಸ್‌, ಶರತ್‌ ಲೋಹಿತಾಶ್ವ, ಸುಧಾರಾಣಿ, ಶ್ರಾವ್ಯ, ದತ್ತಣ್ಣ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next