Advertisement

ಚುಕ್ಕು”ಬುಕ್ಕು’ಜಾಣತಾಣ!

03:23 PM Sep 19, 2017 | |

ಬಿಹಾರದ ರೋಹಾrಸ್‌ ಜಿಲ್ಲೆಯ ಜನನಿಬಿಡ ಸಸಾರಾಂ ರೇಲ್ವೆ ನಿಲ್ದಾಣ, ಬಡ ವಿದ್ಯಾರ್ಥಿಗಳ ಪಾಲಿಗೆ ವಿಶ್ವವಿದ್ಯಾಲಯ ಇದ್ದಂತೆ. ಇದು ಇಲ್ಲಿನವರ ಪಾಲಿಗೆ ಗ್ರೂಪ್‌ಸ್ಟಡಿಯ ತಾಣ! ಬಡ ಹುಡುಗರು ಇದೇ ಪ್ಲಾಟ್‌ಫಾರಂನಲ್ಲಿ ನಿತ್ಯ ಗುಂಪಿನಲ್ಲಿ ಓದುತ್ತಾ, ಸರ್ಕಾರಿ ಹುದ್ದೆ ಅಲಂಕರಿಸುತ್ತಾರೆ. ಇವರ್ಯಾರ ಮನೆಯಲ್ಲೂ ಕರೆಂಟು ಇಲ್ಲ. ಬೆರಳೆಣಿಕೆ ವಿದ್ಯಾರ್ಥಿಗಳ ಮನೆಯಲ್ಲಿ ಕರೆಂಟು ಇದ್ದರೂ, ಪವರ್‌ ಕಟ್‌- ಇಲ್ಲವೇ ವೋಲ್ಟೆàಜ್‌ ಇರೋದಿಲ್ಲ! ಅದಕ್ಕಾಗಿ ಇವರೆಲ್ಲ, ಈ ರೇಲ್ವೆ ಪ್ಲಾಟ್‌ಫಾರಂಗೆ ಓದಲು ಬರುತ್ತಾರೆ. ಕನ್ನಡ ಲೇಖಕಿಯ ಕಣ್ಣಿಗೆ ಆ ಗ್ರೂಪ್‌ ಸ್ಟಡಿಯ ದೃಶ್ಯ ಸಾಕ್ಷಾತ್‌ ಆಗಿ ಕಂಡಾಗ…

Advertisement

ನಮಗೆ ರೇಲ್ವೆ ಪ್ಲಾಟ್‌ಫಾರಂ ಅಂದ್ರೆ ನೆನಪಿಗೆ ಬರೋದು ತೀರಾ ಇತ್ತೀಚಿನ, ಶ್ರದ್ಧಾ ಕಪೂರ್‌ ಮಳೆಯಲ್ಲಿ ನೆನೆಯುತ್ತಾ ಕುಣಿದಿರುವ “ಬಾ ‘ ಚಿತ್ರದ “ಚಂ.. ಚಂ.. ಚಂ..’ ಎನ್ನುವ ಮೈ ಜುಮ್ಮೆನಿಸು ಹಾಡು! ಅದಕ್ಕೂ ಸ್ವಲ್ಪ ಹಿಂದಕ್ಕೆ ಹೋದರೆ “ಚೆನ್ನೈ ಎಕ್ಸ್‌ಪ್ರೆಸ್‌’, ಇನ್ನೂ ಹಿಂದಕ್ಕೆ ಹೋದರೆ ಕನ್ನಡದ “ಯಾರೇ ನೀನು ಚೆಲುವೇ…’, ಇನ್ನೂ ಹಿಂದಕ್ಕೆ ತಮಿಳಿನ “ಕಿಳಿಂಜಗಳ್‌, ರೈಲ್‌ ಪಯಣಂಗಳಿಲ್‌..’ - ಹೀಗೆ ರೇಲ್ವೆ ಸ್ಟೇಷನ್‌ ಎನ್ನುವುದು ಹಲವು ಪ್ರೇಮಕತೆಗಳ ಲವ್‌ ಜಂಕ್ಷನ್‌. ರೈಲಿನಲ್ಲೇ ಓಡಾಡುವ ಎಷ್ಟೋ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕ್ರಶ್‌, ಲವ್‌ ಎಲ್ಲಾ ರೈಲಲ್ಲೇ ಆಗಿದ್ದಿದೆ. ಆ ಲವ್‌ ಕಹಾನಿಯ ಅನುಭವಗಳು ಸವಿ ಸವಿ ನೆನಪಿನ ನಾಸ್ಟಾಲ್ಜಿಯಾ ಆಗಿ ಅಚ್ಚಳಿಯದೆ ನೆನಪಲ್ಲಿ ಉಳಿದಿರುತ್ತವೆ. ಆದರೆ, ಬಿಹಾರದ ರೋಹಾrಸ್‌ ಜಿಲ್ಲೆಯ ಜನನಿಬಿಡ ಸಸಾರಾಂ ರೇಲ್ವೆ ನಿಲ್ದಾಣ ಇದಕ್ಕೆ ಅಪವಾದ. ನಾನು ಅಲ್ಲಿಗೆ ಹೋದಾಗ, ಅಲ್ಲೊಂದು ಅಚ್ಚರಿ ಕಣ್ಣಿಗೆ ಬಿತ್ತು.

ಈ ರೇಲ್ವೆ ನಿಲ್ದಾಣಕ್ಕೆ ಪ್ರತಿದಿನ ಮುಂಜಾನೆ ಚುಮು ಚುಮು ಚಳಿಯಲ್ಲೇ, ಬೆಟ್ಟಗುಡ್ಡಗಳಿಂದ ಬೀಸಿ ಬರುವ ತೀವ್ರ ಕುಳಿರ್ಗಾಳಿಯ ಮಧ್ಯೆ ಸುತ್ತಮುತ್ತಲ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಆದರೆ, ಇವರು “ಚಂ ಚಂ ಚಂ’ ಡ್ಯಾನ್ಸ್‌ ಮಾಡಲು ಬಂದವರಲ್ಲ. ಆ ರೇಲ್ವೆ ನಿಲ್ದಾಣದಲ್ಲೇ ಕೂತು ಓದಲು ಬಂದವರು! ಇವರ್ಯಾರ ಮನೆಯಲ್ಲೂ ಕರೆಂಟು ಇಲ್ಲ. ಬೆರಳೆಣಿಕೆ ವಿದ್ಯಾರ್ಥಿಗಳ ಮನೆಯಲ್ಲಿ ಕರೆಂಟು ಇದ್ದರೂ, ಪವರ್‌ ಕಟ್‌- ಇಲ್ಲವೇ ವೋಲ್ಟೆàಜ್‌ ಇರೋದಿಲ್ಲ! ರೇಲ್ವೆ ಪ್ಲಾಟ್‌ಫಾರಂನ ಬೆಳಕೇ ಇವರ ಬದುಕಿಗೆ ದಾರಿದೀಪ! ಈ ಕಡುಬಡತನದ ಕೆಲವು ಹುಡುಗರು, ರೈಲು ಬಂದಾಗ ಮ್ಯಾಗಜಿನ್‌ ಇಲ್ಲವೇ ನೀರಿನ ಬಾಟಲ್‌ ಮಾರುವುದನ್ನೂ ಕಾಣಬಹುದು.

ಸುಮಾರು 10 ವರ್ಷಗಳಿಂದಲೂ ನಿರಂತರವಾಗಿ ಇಲ್ಲಿ “ಗ್ರೂಪ್‌ ಸ್ಟಡಿ’ ಸಾಗಿದೆ. ಒಂದು ಕಾಲದಲ್ಲಿ ಸಸಾರಾಂ ಹಲವು ವೈಭವಗಳಿಗೆ ಸಾಕ್ಷಿಯಾಗಿತ್ತು. 16ನೇ ಶತಮಾನದ ಹೆಸರಾಂತ ಮೊಘಲ್‌ ದೊರೆ ಶೇರ್‌ ಷಾ ಸೂರಿ ಇದೇ ಊರಿನವರೇ. ಅವರು ಚಿತ್ತಗಾಂಗ್‌ನಿಂದ ಪೇಶಾವರ್‌ಗೆ ನಿರ್ಮಿಸಿರುವ ಗ್ರಾಂಡ್‌ ಟ್ರಂಕ್‌ ರಸ್ತೆಯ ರೂವಾರಿ. ಅಂಥ ವೈಭವದ ಇತಿಹಾಸ ಹೊಂದಿದ ಸಸಾರಾಂ, ಕತ್ತಲಲ್ಲಿ ಮುಳುಗಿ ಹೋಗಿತ್ತು. ಇಡೀ ರೊಹ್‌ಟಾಸ್‌ ಜಿಲ್ಲೆ ತೀವ್ರ ವಿದ್ಯುತ್‌ ಅಭಾವದಿಂದ ನರಳುತ್ತಿತ್ತು. ಇಡೀ ಜಿಲ್ಲೆಯೇ ತೀವ್ರ ನಕ್ಸಲ್‌ ದಾಳಿಗೆ ಹಾಗೂ ಕೋಮು ದಳ್ಳುರಿಗೆ ಸಿಲುಕಿ ತತ್ತರಿಸಿತ್ತು. ಕೃಷಿಗೆ ಬಲವಾದ ಹೊಡೆತ ಬಿದ್ದಿದ್ದ ಕಾರಣ, ಕೃಷಿಯನ್ನೇ ನಂಬಿದ್ದ ರೈತರ ಮಕ್ಕಳು ಅನಿವಾರ್ಯವಾಗಿ ಕೆಲಸ ಹುಡುಕಿ ವಲಸೆ ಹೋಗಬೇಕಾಯಿತು. ಅಂಥ ವಿಷಮ ಸಂದರ್ಭದಲ್ಲಿ ಸಾವಿರಾರು ಬಡ ಯುವಕರಲ್ಲಿ ವಿದ್ಯೆ ಕಲಿತು ನೌಕರಿ ಸೇರುವ ಆಸೆ ಚಿಗುರಿಸಿದ್ದೇ ಈ ಸಸಾರಾಂ ರೈಲು ನಿಲ್ದಾಣ! ಯಾರೋ ಒಂದಷ್ಟು ಜನ ಒಂದು ಸುಡುಬೇಸಿಗೆಯಲ್ಲಿ ಇಲ್ಲಿನ ಲ್ಯಾಂಪ್‌ಪೋಸ್ಟ್‌ ಕೆಳಗೆ ಓದಲು ಶುರುಹಚ್ಚಿದರು. ಮಿಕ್ಕವರೂ ಕ್ರಮೇಣ ಅವರನ್ನು ಅನುಸರಿಸಿದರು. ಕೆಲವೇ ವರ್ಷಗಳಲ್ಲಿ ಇಡೀ ನಿಲ್ದಾಣವೇ ಒಂದು ಬೃಹತ್‌ ಅಧ್ಯಯನ ಕೇಂದ್ರವಾಗಿ ಪರಿವರ್ತನೆಗೊಂಡಿತು. ನೂರಾರು ವಿದ್ಯಾರ್ಥಿಗಳಿಗೆ ಇದೇ ಮನೆ, ಇದೇ ಕಾಲೇಜು, ಟ್ಯುಟೋರಿಯಲ್‌, ವಿಶ್ವವಿದ್ಯಾಲಯ ಎಲ್ಲಾ..!

ಚುಕುಬುಕು ಸದ್ದಿನ ನಡುವೆ…
ಈ ರೇಲ್ವೆ ಪ್ಲಾಟ್‌ಫಾರಂನಲ್ಲಿ ಪ್ರತಿವರ್ಷ ಓದುವ ಕನಿಷ್ಠ 100 ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಕೆಲಸ ಸಿಕ್ಕ ಉದಾಹರಣೆ ಇದೆ. ಇಲ್ಲಿ ಪುಸ್ತಕ ಹಿಡಿದು ಕುಳಿತ ಅನೇಕರಲ್ಲಿ ಬಿಪಿಎಸ್ಸಿ ಹಾಗೂ ಯುಪಿಎಸ್ಸಿಗೆ ಅರ್ಜಿ ಹಾಕಿದವರೇ ಇರುತ್ತಾರೆ. ರೈಲುಗಳ ಚುಕುಬುಕು ಸದ್ದಿನ ನಡುವೆಯೇ ಇವರು ಬುಕ್‌ ತೆರೆದು ಕೂರುತ್ತಾರೆ. ನೀರು, ತಿಂಡಿ, ಪೇಪರ್‌ ಮಾರುವವರ ಕರ್ಕಶ ಕಿರುಚಾಟ, ಬೆಲ್‌, ವಿಶಲ್‌ಗ‌ಳ ಸದ್ದು ಗದ್ದಲದ ನಡುವೆಯೂ ಈ ಯುವಕರು ನಿಲ್ದಾಣದ ಪ್ಲಾಟ್‌ಫಾರಂ-1ರಲ್ಲಿ ಗುಂಪುಗಳಲ್ಲಿ ಕೂತು ಓದುತ್ತಾರೆ. ಚರ್ಚೆ- ಸಂವಾದಗಳು ನಡೆಯುತ್ತವೆ. ಹಾಗೇ ಉತ್ತರಗಳಿಗೆ ತಾರ್ಕಿಕ ಕಾರಣಗಳನ್ನೂ ನೀಡಲಾಗುತ್ತದೆ. ರೈಲುಗಳು ಬಂದಾಗ ಮಾತ್ರ ಇವರಿಗೆ ತುಸು ವಿರಾಮ! ಕೆಲವರು ಈ ವಿರಾಮದಲ್ಲಿ ಇಲ್ಲಿ ಏನಾದರೂ ಮಾರುತ್ತಾ, ಪಾಕೆಟ್‌ ಮನಿ ಮಾಡಿಕೊಳ್ಳುತ್ತಾರೆ. ರೈಲು ಹೊರಟ ಮೇಲೆ, ಪುನಃ ಓದು… ಅದೂ ಮಧ್ಯರಾತ್ರಿ ತನಕ ಅಥವಾ ಬೆಳಗಿನ ವರೆಗೆ!

Advertisement

ಇಲ್ಲಿ ಓಧ್ದೋರೆಲ್ಲ ಏನೇನಾದ್ರು?
ಕಳೆದ 4 ವರ್ಷಗಳಲ್ಲಿ ಈ ಪ್ಲಾಟ್‌ಫಾರಂ ಮೇಲೆ ಅಧ್ಯಯನ ನಡೆಸಿದ್ದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೇಲ್ವೆ ಹಾಗೂ ಬ್ಯಾಂಕ್‌ ಹುದ್ದೆಗಳಿಗೆ ಹೋಗಿದ್ದಾರೆ! ರಾಜೇಶ್‌ ಕುಮಾರ್‌, ಈ ರೈಲು ನಿಲ್ದಾಣದ ಗುಂಪು ಚರ್ಚೆಯ “ಮೊದಲ ಯಶಸ್ವೀ ವಿದ್ಯಾರ್ಥಿ’ ಎನ್ನುತ್ತಾರೆ ಇಲ್ಲಿನವರು. ಇಲ್ಲೇ ಓದಿದ ರಂಜಿತ್‌ ಕುಮಾರ್‌ ದೆಹಲಿಯ ಪ್ರತಿಷ್ಠಿತ ಎಐಐಎಂಎಸ್‌ನಲ್ಲಿ ಎಂಬಿಬಿಎಸ್‌ ಪದವಿಗೆ ಪ್ರವೇಶ ಪಡೆದು, ಭಾರತದ ಹೆಸರಾಂತ ವೈದ್ಯರ ಪಟ್ಟಿಗೆ ಸೇರಿದ್ದಾರೆ. ಈ ನಿಲ್ದಾಣದಲ್ಲಿ ಅಧ್ಯಯನ ಮಾಡಿದ ರಾಜೇಶ್‌, ರೈಲು ಚಾಲಕನ ಕೆಲಸಕ್ಕೆ ಸೇರಿದ್ದಾರೆ. ಇಲ್ಲಿನ ಪ್ಲಾಟ್‌ಫಾರಂನಲ್ಲಿ ಓದಿದ ಕುಂದನ್‌ ಕುಮಾರ್‌, ಅವಿನಾಶ್‌, ಪ್ರವೀಣ್‌ ಕುಮಾರ್‌ ಹಾಗೂ ಗೌರವ್‌, ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕ್ರಮವಾಗಿ 127, 136, 322 ಹಾಗೂ 515ನೇ ರ್‍ಯಾಂಕ್‌ ಗಿಟ್ಟಿಸಿ ವಿವಿಧ ಉದ್ಯೋಗಗಳಿಗೆ ಆಯ್ಕೆಯಾಗಿದ್ದಾರೆ. ಬ್ರಿಜ್‌ ಬಿಹಾರಿ ರಾವ್‌/ ಯೋಗೀಂದ್ರ ಕುಮಾರ್‌, ಚಂದನ್‌ ಕುಮಾರ್‌, ಸಂತೋಷ್‌ಕುಮಾರ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಬಿಪಿಎಸ್ಸಿ ಮತ್ತು ಯುಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಉದ್ಯೋಗ ಪಡೆದಿದ್ದಾರೆ.

ಈಗ ಕರೆಂಟು ಬಂದಿದೆ..!
ಈಗ ರೋಹಾrಸ್‌ ಜಿಲ್ಲೆಯ ಪರಿಸ್ಥಿತಿ ಮೊದಲಿನಂತಿಲ್ಲ. ಎಲ್ಲೆಡೆ ಕರೆಂಟು ಕಂಬಗಳು ತಲೆ ಎತ್ತುತ್ತಿವೆ. ಮೊದಲಿನಷ್ಟು ವಿದ್ಯುತ್‌ ಅಭಾವವೂ ಇಲ್ಲ. ಆದರೆ, ಈ ಸಸಾರಾಂ ರೈಲು ನಿಲ್ದಾಣದ ಪ್ರಾಮುಖ್ಯತೆ ಏನೂ ಕಮ್ಮಿಯಾಗಿಲ್ಲ. ಈ ರೈಲು ನಿಲ್ದಾಣ ಇಲ್ಲಿ ಒಂದು ವಿಶ್ವವಿದ್ಯಾಲಯದಷ್ಟೇ ಪ್ರಖ್ಯಾತ. ಇಲ್ಲಿನ ಗುಂಪುಚರ್ಚೆಗಳಲ್ಲಿ ಪಾಲ್ಗೊಳ್ಳಲೆಂದೇ ವಿದ್ಯಾರ್ಥಿಗಳು ಸಮೀಪದ ಹಳ್ಳಿಗಳಲ್ಲಿ ಬಾಡಿಗೆ ರೂಮುಗಳನ್ನು ಪಡೆದು ವಾಸ್ತವ್ಯ ಹೂಡಿದ್ದಾರೆ. “ಒಂದು ಕಾಲಕ್ಕೆ ಕೇಳುವವರೇ ಇಲ್ಲದ ಇಲ್ಲಿನ ವಸತಿ ಪ್ರದೇಶಗಳ ಬಾಡಿಗೆ ಹೆಚ್ಚುಕಡಿಮೆ ಪಾಟ್ನಾ ಸಿಟಿಯಲ್ಲಿ ರೂಮ್‌ಗಳಿಗೆ ಇರುವ ಬಾಡಿಗೆ ದರದಷ್ಟೇ ಏರಿದೆ’ ಎನ್ನುತ್ತಾರೆ ವಿದ್ಯಾರ್ಥಿ ಆಶಿಶ್‌.

ಸಾರ್ವಜನಿಕ ಜಾಗಗಳೆಂದರೆ ನಮಗೆ ತೀರಾ ಅಸಡ್ಡೆ. ಅವು ನಿರ್ವಹಣೆಯೇ ಇಲ್ಲದೆ ಅವ್ಯವಸ್ಥೆಯ ತಾಣಗಳಾಗಿರುತ್ತವೆ. ಒಂದೋ, ಅದನ್ನು ನಾವು ಕುಡಿತ- ಇಸ್ಪೀಟ್‌ ಮೊದಲಾದ ಅಗ್ಗದ ಮನರಂಜನೆಗೆ ಅಥವಾ ಧರಣಿ, ಚಳವಳಿಗೆ ಬಳಸುತ್ತೇವೆ. ಬಿಹಾರದ ವಿದ್ಯಾರ್ಥಿಗಳು ರೇಲ್ವೆ ನಿಲ್ದಾಣವನ್ನೇ “ಅಧ್ಯಯನ ತಾಣ’ ಮಾಡಿಕೊಂಡಿರೋದು ನಿಜಕ್ಕೂ ಗ್ರೇಟ್‌. ವಿದ್ಯಾರ್ಥಿಗಳ ಸಮೂಹ ಶಕ್ತಿ ಹಾಗೂ ಸಾಂ ಕ ಶಕ್ತಿಗಳು ಗುಂಪುಗಾರಿಕೆ, ಪ್ರತಿಭಟನೆಯನ್ನು ಹೊರತು ಪಡಿಸಿಯೂ ಪರಸ್ಪರ ಸಹಕಾರ, ಯೋಚನೆ ಮತ್ತು ಕೌಶಲಗಳ ಹಂಚಿಕೆಗೆ ಪ್ರೇರಕ ಶಕ್ತಿಯಾಗಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

ಓ ಸಸಾರಾಂ, ನಿನಗೊಂದು ಸಲಾಂ!

ನಿಲ್ದಾಣವೇ ಕ್ಲಾಸ್‌ ಟೀಚರ್‌!
1. ಬಿಹಾರದ ನೂರಾರು ವಿದ್ಯಾರ್ಥಿಗಳಿಗೆ ಸಸಾರಾಂ ರೇಲ್ವೆ ನಿಲ್ದಾಣವೇ ಮನೆ, ಇದೇ ಕಾಲೇಜು, ಟ್ಯುಟೋರಿಯಲ್‌, ವಿಶ್ವವಿದ್ಯಾಲಯ ಎಲ್ಲಾ..!
2. ಇಲ್ಲಿ ಪ್ರತಿವರ್ಷ ಗ್ರೂಪ್‌ ಸ್ಟಡಿಯಲ್ಲಿ ಪಾಲ್ಗೊಳ್ಳುವ ಕನಿಷ್ಠ 100 ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ.
3. ಮನೆಯಲ್ಲಿ ಕರೆಂಟ್‌ ಇಲ್ಲದ ಕಾರಣ, ಕರೆಂಟ್‌ ಇದ್ದರೂ ಪವರ್‌ ಕಟ್‌ನ ಕಾರಣ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.
4. ಈ ಗ್ರೂಪ್‌ ಸ್ಟಡಿಯಲ್ಲಿ ಪಾಲ್ಗೊಳ್ಳಲು, ಐದಾರು ಹುಡುಗರು ಸೇರಿ ಇಲ್ಲಿಯೇ ಸಮೀಪ ರೂಮ್‌ ಮಾಡಿಕೊಳ್ಳುತ್ತಾರೆ.
5. ಕೆಲವರು 50- 60 ಕಿ.ಮೀ. ದೂರದ ಹಳ್ಳಿಗಳಿಂದ ಇಲ್ಲಿಗೆ ನಿತ್ಯ ಬರುತ್ತಾರೆ.
6. ಟ್ಯೂಶನ್‌ಗೆ ಹೋದರೆ ಸಿಕ್ಕಾಪಟ್ಟೆ ಶುಲ್ಕ, ಈ ಪ್ಲಾಟ್‌ಫಾರಂನ ಗ್ರೂಪ್‌ ಸ್ಟಡಿಗೆ ಯಾವುದೇ ಶುಲ್ಕವಿಲ್ಲ.
7. ಇಲ್ಲಿ ಓದಿದವರು ಬಿಪಿಎಸ್ಸಿ, ಯುಪಿಎಸ್ಸಿಯಲ್ಲಿ ಕೆಲಸ ಪಡೆಯುತ್ತಿದ್ದಾರೆ.

ಓದು ಹೇಗಿರುತ್ತೆ?
– ರಾತ್ರಿ 9ಕ್ಕೆ ಓದಲು ಕುಳಿತರೆ, ಬೆಳಗ್ಗೆ 5ರ ತನಕ ಓದುತ್ತಾರೆ.
– ಪ್ಲಾಟ್‌ಫಾರಂನಲ್ಲಿ ಮಾರಲು ಇಟ್ಟ ಪತ್ರಿಕೆಗಳೇ ಇವರಿಗೆ ಜ್ಞಾನದ ಬುತ್ತಿ!
– ಈ ಪ್ಲಾಟ್‌ಫಾರಂನಲ್ಲಿ ಓದಲು ಸೇರುವ ವಿದ್ಯಾರ್ಥಿಗಳದ್ದೇ ವಾಟ್ಸಾéಪ್‌ ಗ್ರೂಪ್‌ ಇದೆ. ಅಲ್ಲಿ ಓದಿನದ್ದೇ ಚರ್ಚೆ.
– ಹಳೇ ಪ್ರಶ್ನೆ ಪತ್ರಿಕೆಗಳ ಮೆಲುಕು. ಒಬ್ಬರು ಪ್ರಶ್ನೆ ಕೇಳ್ಳೋದು, ಮತ್ತೂಬ್ಬರು ಉತ್ತರ ಕೊಡೋದು.
– ಪ್ರತಿ ಪರೀಕ್ಷಾ ಹುದ್ದೆಯ 10- 15 ವಿದ್ಯಾರ್ಥಿಗಳ ಗುಂಪು ಇಲ್ಲಿರುತ್ತೆ.

ಟಿ.ಪಿ. ಶರಧಿ, ಹಾಸನ

Advertisement

Udayavani is now on Telegram. Click here to join our channel and stay updated with the latest news.

Next