Advertisement

ಚಿತ್ರದುರ್ಗ: ಮೀಸಲು ಕ್ಷೇತ್ರವಾದ ಬಳಿಕ ಬಿಜೆಪಿಯದೇ ಪ್ರಾಬಲ್ಯ

05:39 PM Jun 05, 2024 | Team Udayavani |

ಉದಯವಾಣಿ ಸಮಾಚಾರ
ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ ನಡೆದ ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ಬಿಜೆಪಿ ಗೆದ್ದಿದೆ. 2009ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಎಸ್ಸಿ ಮೀಸಲು ಕ್ಷೇತ್ರವಾಗಿ ಪುನರ್‌ ವಿಂಗಡಣೆ ಮಾಡಲಾಯಿತು. ಪರಿಶಿಷ್ಟ ಜಾತಿಗೆ ಮೀಸಲಾದ ಮೊದಲ ಚುನಾವಣೆಯಲ್ಲೇ ಬಿಜೆಪಿ ಭರ್ಜರಿ
ಗೆಲುವು ದಾಖಲಿಸಿತ್ತು. ಅಮೇರಿಕಾದಲ್ಲಿ ಸಾಫ್ಟ್‌ ವೇರ್‌ ಇಂಜಿನಿಯರ್‌ ಆಗಿದ್ದ ಚಿತ್ರದುರ್ಗ ಮೂಲದ ಜನಾರ್ಧನಸ್ವಾಮಿ ಚಿತ್ರದುರ್ಗದ ಮೊದಲ ಬಿಜೆಪಿ ಸಂಸದರಾಗಿ ಆಯ್ಕೆಯಾದರು. ಈ ವೇಳೆ ಕಾಂಗ್ರೆಸ್ಸಿನಿಂದ ಡಾ| ಬಿ. ತಿಪ್ಪೇಸ್ವಾಮಿ
ಅಭ್ಯರ್ಥಿಯಾಗಿದ್ದರು.

Advertisement

ಆನಂತರ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನಾರ್ದನಸ್ವಾಮಿ ಮರು ಆಯ್ಕೆ ಬಯಸಿ ಕಣಕ್ಕಿಳಿದರೆ, ಕಾಂಗ್ರೆಸ್ಸಿನಿಂದ ಬಿ.ಎನ್‌. ಚಂದ್ರಪ್ಪ ಅಭ್ಯರ್ಥಿಯಾಗಿದ್ದರು. ಜೆಡಿಎಸ್‌ ಅಭ್ಯರ್ಥಿಯಾಗಿ ಗೂಳಿಹಟ್ಟಿ ಶೇಖರ್‌ ಕಣಕ್ಕಿಳಿದ್ದರು. ಈ ಚುನಾವಣೆಯಲ್ಲಿ ಮತ ವಿಭಜನೆಯಾಗಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಗೆಲುವು ಸಾಧಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆನೇಕಲ್‌ ನಾರಾಯಣಸ್ವಾಮಿ ಅಖಾಡಕ್ಕಿಳಿದರೆ, ಕಾಂಗ್ರೆಸ್ಸಿನಿಂದ ಆಗಿನ ಹಾಲಿ ಸಂಸದ ಬಿ.ಎನ್‌. ಚಂದ್ರಪ್ಪ ಸ್ಪರ್ಧೆ ಮಾಡಿದ್ದರು. ಎ. ನಾರಾಯಣಸ್ವಾಮಿ ಗೆಲುವು ಸಾ ಧಿಸುವ ಮೂಲಕ ಮತ್ತೊಮ್ಮೆ ಕ್ಷೇತ್ರ ಬಿಜೆಪಿ ಪಾಲಾಯಿತು. ಈಗ 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ನಾರಾಯಣಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕಿದ ಪರಿಣಾಮ ಬಿಜೆಪಿ ನಾಯಕರು ಗೋವಿಂದ ಕಾರಜೋಳ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು. ಇದಕ್ಕೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌ಗೆ ಟಿಕೇಟ್‌ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಈ ಎಲ್ಲಾ ಬಂಡಾಯಗಳನ್ನು ಬಿಜೆಪಿ ನಾಯಕರು ಶಮನ ಮಾಡಿ ವ್ಯವಸ್ಥಿತವಾಗಿ ಪ್ರಚಾರಕ್ಕೆ ಇಳಿದ ಪರಿಣಾಮ ಮೂರನೇ ಬಾರಿಗೆ ಚಿತ್ರದುರ್ಗ ಕ್ಷೇತ್ರದಲ್ಲಿ ಕಮಲ ಅರಳಿದೆ.

ಭದ್ರಾ ಮೇಲ್ದಂಡೆ ಅನುದಾನದ ಅಭದ್ರತೆ: ಈ ಚುನಾವಣೆಯಲ್ಲಿ ಬಿಜೆಪಿಗೆ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸದ ಅಸಮಾಧಾನ ಮತದಾರರಲ್ಲಿತ್ತು. ಚುನಾವಣೆ ಸಂದರ್ಭದಲ್ಲೇ ರೈತ ಸಂಘಟನೆಗಳು ಬಂದ್‌, ನಿರಶನ ನಡೆಸಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದರು. ಕಾಂಗ್ರೆಸ್‌ ಕೂಡ ಇದೇ ಅಸ್ತ್ರ ಬಳಕೆ ಮಾಡಿಕೊಂಡಿತ್ತು. ಆದರೆ ಈ ವಿಚಾರದಲ್ಲಿ ಜನರ ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ
ಎನ್ನುವುದು ಫಲಿತಾಂಶಕ್ಕೆ ಸಾಕ್ಷಿ.

Advertisement

2019 ಹಾಗೂ 2024 ಎರಡೂ ಅವಧಿಯ ಲೋಕಸಭೆ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಬಿಜೆಪಿ ಹೊರಗಿನಿಂದ ಅಭ್ಯರ್ಥಿಗಳನ್ನು ಕರೆತಂದಿತ್ತು. ಕಳೆದ ಚುನಾವಣೆಯಲ್ಲಿ ಎ. ನಾರಾಯಣಸ್ವಾಮಿ ಇಲ್ಲಿ ಅನಿರೀಕ್ಷಿತ ಅಭ್ಯರ್ಥಿಯಾಗಿ ಚುನಾವಣೆಗೆ 15 ದಿನಗಳ ಮೊದಲು ಬಂದಿದ್ದರು. ಈ ಸಲ ಕೂಡ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಭ್ಯರ್ಥಿಗಳು ಘೋಷಣೆಯಾದರೂ ಚಿತ್ರದುರ್ಗದ ಟಿಕೆಟ್‌
ಯಾರಿಗೆ ಎನ್ನುವುದು ಅಂತಿಮವಾಗಿರಲಿಲ್ಲ. ಕೊನೆ ಹಂತದಲ್ಲಿ ಬಿಜೆಪಿ ನಾಯಕರು ಗೋವಿಂದ ಕಾರಜೋಳ ಅವರ ಹೆಸರನ್ನು ಅಂತಿಮಗೊಳಿಸಿ, ಇಲ್ಲಿಗೆ ಬಂದು ಪ್ರಚಾರ ಆರಂಭಿಸಿದಾಗ ಸಿಕ್ಕಿದ್ದು 15 ದಿನ ಮಾತ್ರ. ಇಷ್ಟು ಕಡಿಮೆ ಅವ ಧಿಯಲ್ಲೇ ಗೆಲುವಿನ
ದಡ ಸೇರಿದ್ದು, ಪ್ರಚಾರ ತಂತ್ರದ ನಿಪುಣತೆ ತೋರಿಸುತ್ತದೆ.

ಫಲ ನೀಡಿದ ಜೆಡಿಎಸ್‌ ಜೊತೆಗಿನ ಮೈತ್ರಿ: ಚಿತ್ರದುರ್ಗ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ, ಬಿಜೆಪಿಗೆ ಜೆಡಿಎಸ್‌ ಮೈತ್ರಿ ಫಲಕೊಟ್ಟಿದೆ. ಜೆಡಿಎಸ್‌ ಮತಗಳ ಪ್ರಮಾಣ ಹೆಚ್ಚಾಗಿರುವ ಹಿರಿಯೂರು, ಶಿರಾ, ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತ ಬಂದಿವೆ. ಚಳ್ಳಕೆರೆಯಲ್ಲಿ ಜೆಡಿಎಸ್‌ ಸಖ್ಯದ ಕಾರಣಕ್ಕೆ ಕಾಂಗ್ರೆಸ್‌ ನಾಗಾಲೋಟಕ್ಕೆ ಬ್ರೇಕ್‌ ಹಾಕಿ ಕೇವಲ 3525 ಹಚ್ಚು ಮತ ಪಡೆಯಲು ಮಾತ್ರ ಕಾಂಗ್ರೆಸ್‌ಗೆ ಸಾಧ್ಯವಾಗಿದೆ.

ಗ್ಯಾರಂಟಿ ನಂಬಿದ್ದ ಕಾಂಗ್ರೆಸ್ಸಿಗೆ ಆಘಾತ: ಲೋಕಸಭೆ ಚುನಾವಣೆಯುದ್ದಕ್ಕೂ ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳನ್ನು ಪ್ರಸ್ತಾಪ ಮಾಡಿದ ಕಾಂಗ್ರೆಸ್ಸಿಗೆ ಅವು ಕೈ ಹಿಡಿದಿಲ್ಲ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಜನ ಕಾಂಗ್ರೆಸ್‌ ಶಾಸಕರೇ ಇದ್ದರೂ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂದ ಮತಗಳು ಈಗ ಬಂದಿಲ್ಲ. ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾ ಸಿದೆ. ಇದರೊಟ್ಟಿಗೆ ಕೆಲ ಶಾಸಕರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಲಿಲ್ಲ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಎಲ್ಲ ವರ್ಗಗಳಿಂದಲೂ ಮತ ಪಡೆದುಕೊಂಡಿದ್ದಾರೆ ಎನ್ನುವುದಕ್ಕೆ ತಾಲೂಕುವಾರು ಸಿಕ್ಕಿರುವ ಅಂಕಿ-ಸಂಖ್ಯೆಗಳೇ ಸಾಕ್ಷಿಯಾಗಿವೆ. ಚಿತ್ರದುರ್ಗ, ಹೊಳಲ್ಕೆರೆಯಲ್ಲಿ ಬಿಜೆಪಿಗೆ ಹೆಚ್ಚು ಲೀಡ್‌ ಬಂದಿದ್ದು, ಹೊಸದುರ್ಗದಲ್ಲಿ ಈ ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಲೀಡ್‌ ಪ್ರಮಾಣ ಕಡಿಮೆಯಾಗಿದೆ. ಲಿಂಗಾಯತ, ಒಕ್ಕಲಿಗ, ಕಾಡುಗೊಲ್ಲ, ದಲಿತ, ವಾಲ್ಮೀಕಿ ಸೇರಿದಂತೆ ಎಲ್ಲ ಸಮುದಾಯಗಳಿಂದಲೂ ಗೋವಿಂದ ಕಾರಜೋಳ ಅವರಿಗೆ ಮತಗಳು ಸಿಕ್ಕಿವೆ.

ಗೆಲುವಿಗೆ ಕಾರಣಗಳೇನು?
*ಮೋದಿ ಅಲೆ. ಬಿಎಸ್‌ವೈ, ವಿಜಯೇಂದ್ರ ವಿಶೇಷ ಗಮನ.
*ಜೆಡಿಎಸ್‌ನೊಂದಿಗಿನ ಮೈತ್ರಿ ಬಲ
*ಅಭ್ಯರ್ಥಿ ಬದಲಾವಣೆ ತಂತ್ರ
*ವ್ಯವಸ್ಥಿತ ಪ್ರಚಾರ ಕೈಗೊಂಡಿದ್ದು
*ಪಕ್ಷದೊಳಗಿನ ಬಂಡಾಯ ಶಮನ ಮಾಡಿದು

ಸೋಲಿಗೆ ಕಾರಣವೇನು?
*ಗ್ಯಾರಂಟಿ ಯೋಜನೆಗಳ ಮೇಲೆ ಅತಿಯಾದ ಅವಲಂಬನೆ
*ಸಂಘಟಿತ ಪ್ರಯತ್ನದ ಕೊರತೆ
*ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಕೆಮೆಸ್ಟ್ರಿ
*ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ, ಒಳ ಹೊಡೆತ
*ಅಭ್ಯರ್ಥಿ ಜಾತಿ ಕುರಿತು ಮೂಡಿದ ಗೊಂದಲ

*ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next