Advertisement

Siddapura: ನಮಗೆ ಕಾಲು ಸಂಕ ಬೇಕು: ಮಕ್ಕಳು ಹಳ್ಳ ದಾಟುವುದೇ ಡೇಂಜರ್‌!

03:05 PM Jul 30, 2024 | Team Udayavani |

ಸಿದ್ದಾಪುರ: ಬೈಂದೂರು ತಾಲೂಕಿನ  ಆಜ್ರಿ ಗ್ರಾಮದ ಹೆಬ್ಟಾರುತಡಿ ಪ್ರದೇಶ ಮಳೆಗಾಲ ಬಂತೆಂದರೆ ಥರ ಗುಟ್ಟುತ್ತದೆ. ಇದಕ್ಕೆ ಕಾರಣ, ಅವರ ದೈನಂದಿನ ಬದುಕು ಮಳೆಗಾಲದಲ್ಲಿ ಸಂಪುರ್ಣವಾಗಿ
ಅಸ್ತವ್ಯಸ್ತವಾಗುವುದು. ಸಾಮಾನ್ಯ ದಿನಗಳಲ್ಲಿ ಇಲ್ಲಿನ ಮಕ್ಕಳು, ಇತರರು ಇಲ್ಲಿನ ಹಳ್ಳಗಳನ್ನು ಸಹಜವಾಗಿ ದಾಟಿ ತಮ್ಮ ತಮ್ಮ ದಾರಿ ಕಂಡುಕೊಳ್ಳುತ್ತಾರೆ. ಆದರೆ, ಯಾವಾಗ ಮಳೆ ಬಿತ್ತೋ ಹಳ್ಳಗಳು ತುಂಬಿ ಹರಿಯುತ್ತವೆ. ಆಗ ಬದುಕೇ ಏರುಪೇರು.

Advertisement

ಹೆಬ್ಟಾರುತಡಿ ಪ್ರದೇಶದ ಜನರಿಗೆ ವ್ಯವಹಾರದ ಹತ್ತಿರದ ಪಟ್ಟಣ ಸಿದ್ಧಾಪುರ. ಆದರೆ, ಮಳೆಗಾಲದಲ್ಲಿ ಹೆಬ್ಟಾರ್‌ತಡಿಯ ಹಳ್ಳ ಉಕ್ಕಿ ಹರಿಯುವುದರಿಂದ ಅವರಿಗೆ ಸಮಸ್ಯೆಯಾಗುತ್ತದೆ. ಇಲ್ಲಿನ ತಂದೆ-ತಾಯಂದಿರು
ಮಕ್ಕಳನ್ನು ಹೊತ್ತುಕೊಂಡೇ ಹಳ್ಳ ದಾಟಿಸಬೇಕಾದ ಸ್ಥಿತಿ ಇದೆ. ಹಾಗಂತ ಅವರಿಗೂ ಇದು ಸುಲಭದ ಕೆಲಸವೇನಲ್ಲ. ಸೆಳೆತ ತುಂಬಿದ ಹಳ್ಳವನ್ನು ಕಷ್ಟಪಟ್ಟು ದಾಟಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಸಂಜೆ ಮತ್ತೆ ಕಾದು ನಿಂತು ಮಕ್ಕಳನ್ನು ಹಳ್ಳ ದಾಟಿಸಬೇಕು. ಇದು ಮಳೆಗಾಲದಲ್ಲಿ ಅವರ ನಿತ್ಯ ಬದುಕಾಗಿದೆ. ಅವರ  ಈ ಪರಿಸ್ಥಿತಿಗೆ ಮುಖ್ಯ ಕಾರಣ, ಹೆಬ್ಟಾರ್‌ ತಡಿಯ ಈ ಸುಮಾರು 30 ಅಡಿ ಉದ್ದದ ಹಳ್ಳಕ್ಕೆ ಕಾಲು ಸಂಕ ಸೇರಿ ದಂತೆ ಯಾವುದೇ ದಾಟುವ ವ್ಯವಸ್ಥೆ ಇಲ್ಲದಿರುವುದು. ಮಕ್ಕಳನ್ನು ಹಳ್ಳ ದಾಟಿಸುವಾಗ ಪ್ರತಿ ದಿನವೂ  ಭಯಾನಕ ಸನ್ನಿವೇಶಗಳನ್ನು ಎದುರಸುತ್ತಾರೆ. ತಾವು ಸಂಪೂರ್ಣ ಒದ್ದೆಯಾಗುತ್ತಾರೆ. ಪ್ರಾಣವನ್ನು ಲೆಕ್ಕಿಸದೇ ಸಾಗುತ್ತಾರೆ.

ಇಲ್ಲಿ ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಸ್ಥಿತಿ ಇಲ್ಲಿದೆ. ಅಪಾಯ ಸಂಭವಿಸಿ ಪ್ರಾಣ ಕಳೆದುಕೊಂಡ ಮೇಲೆ ಲಕ್ಷಾಂತರ ರೂಪಾಯಿ ಪರಿಹಾರ ನೀಡಿದರೆ ಏನು ಪ್ರಯೋಜನ? ಈಗಲೇ ಆ ಹಣದಲ್ಲಿ ಕಾಲು ಸಂಕ ನಿರ್ಮಿಸಿ ಕೊಡಿ, ಆ ಮೂಲಕ ಅನಾಹುತವನ್ನು ತಪ್ಪಿಸಬಹುದು ಎನ್ನುವುದು ಇಲ್ಲಿನ ಜನರ ನೋವಿನ ಮಾತು.

ಉಕ್ಕಿಹರಿಯುವ ಹಳ್ಳಗಳು
ಹೆಬ್ಟಾರ್‌ ತಡಿ ಪ್ರದೇಶದಲ್ಲಿ 25 ಮನೆಗಳಿದ್ದು, ಅವರಿಗೆ ಸಿದ್ದಾಪುರವೇ ಮುಖ್ಯ ಪೇಟೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಮಳೆಗಾಲದಲ್ಲಿ ಅಂದಾಜು 30 ಅಡಿ ಉದ್ದದ ಹಳ್ಳ ದಾಟಿ ತೆರಳಬೇಕು. ಜೋರಾದ ಮಳೆ ಬಂದರೆ ಶಾಲಾ ಮಕ್ಕಳು ಶಾಲೆಗೆ ಗೈರಾಗಬೇಕಾಗುತ್ತದೆ ಈ ಹಳ್ಳ ದಾಟುವ ಬದಲು ದೂರದ ಬೇರೆ ದಾರಿಯಲ್ಲಿ ಸಿದ್ಧಾಪುರಕ್ಕೆ ಹೋಗಬಹುದು. ಸುತ್ತುವರಿದು ಜನ್ಸಾಲೆ, ಅಗಳಿ ಮೂಲಕ ಮತ್ತು ಆಜ್ರಿ ಮೂರುಕೈಗೆ ಬಂದು ಸಿದ್ದಾಪುರ ತಲುಪಬಹುದು. ಆದರೆ ಅದಕ್ಕೆ ಬೇಗನೆ ಮನೆಯಿಂದ  ಹೊರಡಬೇಕು. ಆದರೆ, ಹೆಚ್ಚಿನವರು ಅಪಾಯ ಕಾರಿಯಾದರೂ ಸರಿ, ಹಳ್ಳವನ್ನೇ ದಾಟುತ್ತಾರೆ. ಪೋಷಕರು ಮಳೆ ಪ್ರಮಾಣ ಕಡಿಮೆಯಾದ ಮೇಲೆ ಮಕ್ಕಳನ್ನು ಹಳ್ಳ ದಾಟಿಸಿ ಶಾಲೆಗಳಿಗೆ ಬಿಡುತ್ತಾರೆ. ಸಂಜೆ ಮತ್ತೆ ಹಳ್ಳ ದಾಟಿ, ಮಕ್ಕಳನ್ನು ಕರೆತರುತ್ತಾರೆ. ಅನಾರೋಗ್ಯ ಪೀಡಿತರ ಕಥೆಯಂತೂ ಕೇಳಲೇಬೇಡಿ.

ಮಳೆ ಜೋರಾದರೆ ಶಾಲೆ, ಕೆಲಸ ಇಲ್ಲ
ಗ್ರಾಮೀಣ ಭಾಗಗಳಲ್ಲಿ ಕೆಲ ಕಡೆ ಮರದ ಕಾಲು ಸಂಕವಿದ್ದ ಪ್ರದೇಶಗಳಿಗೆ ಸೇತುವೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ದೊರಕಿವೆ. ಕೆಲವು ಕಡೆ ಹಳ್ಳ ತೋಡುಗಳನ್ನು ದಾಟಿಯೇ ಹೋಗಬೇಕಾದ ಅನಿವಾರ್ಯತೆ ಇದೆ. ಜೋರಾದ ಮಳೆ ಬಂದರಂತೂ ಕೆಲವು ಕಡೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಅಂದು ರಜೆ ಹಾಕಿ ಮನೆಯಲ್ಲಿರಬೇಕಾದ ಸ್ಥಿತಿಯಾಗಿದೆ.

Advertisement

ಶಾಸಕರಿಗೆ ಮನವಿ
ಹೆಬ್ಟಾರ್‌ತಡಿ ಹಳ್ಳವು ಅಂದಾಜು 30 ಅಡಿಗೂ ಹೆಚ್ಚು ಉದ್ದ ಇದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಪಂಚಾಯತ್‌ ಅನುದಾನ ಸಾಲದು. ಸೇತುವೆ ನಿರ್ಮಾಣದ ಕುರಿತು ಸಂಸದರು ಶಾಸಕರಿಗೆ ಗ್ರಾ.ಪಂ.ನಿಂದ ಮನವಿ
ಸಲ್ಲಿಸಲಾಗಿದೆ.

– ಗೋಪಾಲ ದೇವಾಡಿಗ, ಆಜ್ರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

ಕಾಲು ಸಂಕ ನಿರ್ಮಾಣ
ಅಭಿವೃದ್ಧಿಗೆ ಸರಕಾರದಲ್ಲಿ ಅನುದಾನ ಇಲ್ಲ. ನರೇಗಾ ಯೋಜನೆಯಲ್ಲಿ ಸೇತುವೆ ನಿರ್ಮಿಸಲು ಅವಕಾಶ ಇಲ್ಲ.ಖಾಸಗಿಯಾಗಿ, ಟ್ರಸ್ಟ್‌ ಮೂಲಕ ಅಥವಾ ದಾನಿಗಳ ಸಹಕಾರದಿಂದ ಜನರು ಸಂಚರಿಸುವ ಆವಶ್ಯಕತೆಗೆ ಅನುಗುಣವಾಗಿ ಕಾಲು ಸಂಕ ನಿರ್ಮಿಸಿ ಕೊಡುವ ಬಗ್ಗೆ ಪ್ರಯತ್ನಿಸಲಾಗುವುದು.

– ಗುರುರಾಜ್‌ ಗಂಟಿಹೊಳೆ, ಬೈಂದೂ ರು ಶಾಸಕರು

ಇನ್ನೆಷ್ಟು ವರ್ಷ ಬೇಕು?
ಹಳ್ಳ ಉಕ್ಕಿದ ರೆ ಮಕ್ಕಳವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತದೆ. ನಿತ್ಯ ಕೆಲಸ ಕಾರ್ಯಗಳಿಗೆ ಹೋಗಲೂ ಆಗುವುದಿಲ್ಲ. ಆರ್ಧ ಶತಮಾನ ಸರ್ಕಸ್‌ ಮೂಲಕ ಹಳ್ಳ ದಾಟಿದ್ದೇವೆ. ಇತಂಹ ಸಮಸ್ಯೆ ಪರಿಹಾರಕ್ಕೆ ಇನ್ನೇಷ್ಟು ವರ್ಷ ಕಾಯ ಬೇಕು ಎಂದು ಸ್ಥಳೀಯರಾದ ನಾರಾಯಣ ಪೂಜಾರಿ ಕೇಳುತ್ತಾರೆ.

– ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next