Advertisement

ಚಾಮರಾಜನಗರ ಕಾಂಗ್ರೆಸ್‌ನ ಭದ್ರಕೋಟೆ

07:38 AM Mar 16, 2019 | Team Udayavani |

ಚಾಮರಾಜನಗರ: ಚಾಮರಾಜನಗರ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಕಾಂಗ್ರೆಸ್‌ ಪಕ್ಷ ಅತ್ಯಂತ ಗಟ್ಟಿಯಾಗಿದೆ. ಧ್ರುವನಾರಾಯಣ 10 ವರ್ಷಗಳ ಕಾಲ ಕೆಲಸ ಮಾಡಿ, ಕರ್ನಾಟಕ ಮಾತ್ರವಲ್ಲ ದೇಶದಲ್ಲೇ ಉತ್ತಮ  ಹೆಸರು ಗಳಿಸಿದ್ದಾರೆ. ಇನ್ನೂ ಮುಂದಿನ 10 ವರ್ಷವೂ ಅವರೇ ಆಯ್ಕೆಯಾಗುತ್ತಾರೆ. ಸಂಸದ ಮಾತ್ರವಲ್ಲ ಕೇಂದ್ರ ಸಚಿವರೂ ಆಗುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ರಾಜಕಾರಣದ ಮುಖ್ಯ ಉದ್ದೇಶ. ದೇಶಕ್ಕೆ ನಾಡಿಗೆ ಊರಿಗೆ ಒಳ್ಳೆಯದಾಗಬೇಕು. ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸಬೇಕು. ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕು. ಧ್ರುವನಾರಾಯಣರಂಥ ಸಂಸದರು ಸಿಗುವುದು ಬಹಳ ಕಷ್ಟ. ಮುಂದಿನ ಲೋಕಸಭಾ ಚುನಾವಣೆ ನಂತರ ಹೊಸ ಸರ್ಕಾರ ಬಂದು, ರಾಹುಲ್‌ ಗಾಂಧಿ ಪ್ರಧಾನಿಯಾಗುವುದನ್ನು ನಾವೆಲ್ಲ ನೋಡಬೇಕು ಎಂದರು.

ನಮ್ಮ ಸರ್ಕಾರ ಅನೇಕ ಯೋಜನೆ ನೀಡಿದೆ: ಮನಮೋಹನಸಿಂಗ್‌ ಪ್ರಧಾನಿಯಾಗಿದ್ದಾಗ ಅನೇಕ ಹೊಸ ಕಾರ್ಯಕ್ರಮಗಳನ್ನು ನೀಡಿದ್ದರು. ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಪ್ರದೇಶದ ಜನರಿಗೆ 100 ದಿನಗಳ ಉದ್ಯೋಗ ಕೊಡುವ ಕಾನೂನು ಮಾಡಿದರು. ಆಹಾರ ಭದ್ರತಾ ಕಾಯ್ದೆಯಿಂದ ಆಹಾರ ಇಲ್ಲದ ಕುಟುಂಬಗಳಿಗೆ ಕನಿಷ್ಠ 5 ಕೆ.ಜಿ. ಅಕ್ಕಿ, 3 ರೂ. ಅಕ್ಕಿ, 2 ರೂ. ಗೋಧಿ ಕೊಡುವ ಕಾರ್ಯಕ್ರಮವನ್ನು ಯುಪಿಎ ಸರ್ಕಾರ ನೀಡಿತು. ಅದೇ ಕಾರ್ಯಕ್ರಮ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಮುಫ‌ತ್ತಾಗಿ ನೀಡುವ ಕೆಲಸ ಮಾಡಿತು ಎಂದು ತಿಳಿಸಿದರು.

ಕೇವಲ ಬರೀ ಮಾತು: ಉಜ್ವಲ ಯೋಜನೆಯಡಿ ಗ್ಯಾಸ್‌ ಸಿಲಿಂಡರ್‌ ಉಚಿತವಾಗಿ ನೀಡಿಲ್ಲ. ಮೊದಲನೇ ಸಿಲಿಂಡರ್‌ ಮಾತ್ರ ಉಚಿತ, ನಂತರದ ಸಿಲಿಂಡರ್‌ಗೆ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಹಣ ವಾಪಸ್‌ ಕಟ್ಟಬೇಕಾಗಿದೆ ಎಂದು ಟೀಕಿಸಿದರು. ಪುಲ್ವಾಮಾದಲ್ಲಿ 44 ಜನ ಯೋಧರು ಸತ್ತಿದ್ದಾರೆ. 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎನ್ನುವಂಥ  ಕೀಳುಮಟ್ಟದ ಮಾತುಗಳನ್ನು ಬೇರೆ ಯಾರೂ ಆಡುವುದಿಲ್ಲ.  2016ನೇ ಸಾಲಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ಯುತವಾಗಿ ಚುನಾವಣೆ ನಡೆದಿತ್ತು. ಸರ್ಕಾರಗಳ ರಚನೆಯಾಯಿತು. ಇವತ್ತು ಜಮ್ಮು ಕಾಶ್ಮೀರದಲ್ಲಿ ಗಲಭೆ, ಯೋಧರು ಸಾಯುತ್ತಿದ್ದಾರೆ. ವಾತಾವರಣೆ ಕೆಟ್ಟಿದೆ. ಇವತ್ತು ಪ್ರಧಾನಿ ಮೋದಿಯವರ ಸಾಧನೆ ಏನೂ ಇಲ್ಲ. ಕೇವಲ ಬರೀ ಮಾತು.

ಶಾಂತಿ ನೆಮ್ಮದಿ ಇಲ್ಲ: ದೇಶವನ್ನು ಮುಂದೆ ತರುವಂಥ ವ್ಯಕ್ತಿ ಶಾಂತಿ ನೆಮ್ಮದಿಯನ್ನು ಸ್ಥಾಪಿಸುವ ಕೆಲಸ ಆಗಿಲ್ಲ.  ಬದಲಾವಣೆ ಆಗಲೇಬೇಕು. 28 ಕ್ಷೇತ್ರಗಳಲ್ಲಿ ಕನಿಷ್ಠ 22 ಕ್ಷೇತ್ರಗಳನ್ನು ಗೆಲ್ಲುವ ಭರವಸೆ ಇದೆ.  ರಾಹುಲ್‌ಗಾಂಧಿ ಪ್ರಧಾನಿಯಾಗಬೇಕು. ರಾಹುಲ್‌ ಗಾಂಧಿ ಅವರು ದಕ್ಷಿಣ ಭಾರತದಿಂದ ಅದರಲ್ಲೂ ಕರ್ನಾಟಕದಲ್ಲಿ ಬಂದು ಸ್ಪರ್ಧೆ ಮಾಡಲಿ. ಇಂದಿರಾಗಾಂಧಿ, ಸೋನಿಯಾಗಾಂಧಿ ಆಯ್ಕೆ ಮಾಡಿದೆ. ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಬಂದು ಸ್ಪರ್ಧಿಸಬೇಕು ಎಂದು ಅವರು ಮನವಿ ಮಾಡಿದರು.

Advertisement

ದುಡ್ಡಿಗೇ ಕೆಟ್ಟ ಕಾಲ: ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ,ದುಡ್ಡಿಗೇ ಕೆಟ್ಟ ಕಾಲ ಬಂದದ್ದು ಪ್ರಧಾನಿ ಮೋದಿಯವರ ಕಾಲದಲ್ಲಿ. ಕಷ್ಟ ಬಂದಾಗ ಇರಲಿ ಅಂತ ದುಡ್ಡು ಇಡ್ತಿದ್ವಿ. ಈಗ ದುಡ್ಡಿಗೇ ಕೆಟ್ಟ ಕಾಲ ಬಂದಿದೆ. ವಿವೇಚನೆ ಇಲ್ಲದ ಪ್ರಧಾನಿ ಬಂದರೆ ದೇಶಕ್ಕೆ ಏನಾಗುತ್ತದೆ ಎಂಬುದನ್ನು ಈಗ ನೋಡಬಹುದು ಎಂದು ಟೀಕಿಸಿದರು.

ಜಿಲ್ಲೆಯ ಜನತೆ ಹಿರಿಯ ರಾಜಕಾರಣಿಗಳಾಧ ಗುರುಪಾದಸ್ವಾಮಿ ರಾಜಶೇಖರ ಮೂರ್ತಿ, ಎಂಸಿ ಬಸಪ್ಪ, ಚೆನ್ನಬಸಪ್ಪ, ಮಹದೇವಪ್ರಸಾದ್‌ ಅವರನ್ನು ನೆನೆಸಿಕೊಳ್ಳಬೇಕು. ಸಜ್ಜನರು ರಾಜಕೀಯಕ್ಕೆ  ಬರಬೇಕು. ಎಲ್ಲ ಸಮಾಜದ ಜನರು ಒಪ್ಪಿಕೊಳ್ಳಬೇಕು. ಧ್ರುವನಾರಾಯಣ ಅಂತಹ ಸಜ್ಜನ. ಹೆಮ್ಮೆ ಪಡುವಂಥ ಸಂಸದ. ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶಂಸಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next