Advertisement

ನಿಲ್ಲದ ದಿಲ್ಲಿ ಅಧಿಕಾರ ಗುದ್ದಾಟ: ಸಿಎಂ- ಬೈಜಲ್‌ ಚರ್ಚೆ ವಿಫ‌ಲ

06:00 AM Jul 07, 2018 | Team Udayavani |

ನವದೆಹಲಿ: ದೆಹಲಿ ರಾಜ್ಯದ ವ್ಯಾಪ್ತಿಯಲ್ಲಿನ ಅಧಿಕಾರ ಗುದ್ದಾಟ ಇನ್ನೂ ನಿಂತಿಲ್ಲ. ಶುಕ್ರವಾರವೂ ಬಿಕ್ಕಟ್ಟು ಮುಂದುವರಿದಿದ್ದು, ಸಿಎಂ ಅರವಿಂದ ಕೇಜ್ರಿವಾಲ್‌ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ನಡುವಿನ ಮಾತುಕತೆ ಫ‌ಲಪ್ರದವಾಗಿಲ್ಲ.

Advertisement

ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಬೈಜಲ್‌ರನ್ನು ಭೇಟಿಯಾದ ದೆಹಲಿ ಸಿಎಂ ಸಮಾಲೋಚನೆ ನಡೆಸಿದರು. 2015ರಲ್ಲಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಸೂಚನೆಯಲ್ಲಿ ಸೇವೆಗಳ ವಿಭಾಗವನ್ನು ಲೆಫ್ಟಿನೆಂಟ್‌ ಗವರ್ನರ್‌ ವ್ಯಾಪ್ತಿಗೆ ನೀಡಿತ್ತು ಎಂದು ಬೈಜಲ್‌ ಹೇಳಿದ್ದಾರೆ. ಆದರೆ ಸಿಎಂ ಬುಧವಾರದ ಸುಪ್ರೀಂ ತೀರ್ಪನ್ನು ಪ್ರಸ್ತಾಪಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಸೇವೆಗಳ ವಿಭಾಗವನ್ನು ದೆಹಲಿ ಸರ್ಕಾರಕ್ಕೆ ಬಿಟ್ಟುಕೊಡಲು ಲೆ.ಗವರ್ನರ್‌ ಒಪ್ಪಲಿಲ್ಲ ಎಂದು ಆರೋಪಿಸಿದ್ದಾರೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಸುಪ್ರೀಂ ಆದೇಶವನ್ನು ತಿರಸ್ಕರಿಸುತ್ತಿದೆ ಎಂದು ಹೇಳಿದ್ದಾರೆ.  ಈ ನಡುವೆ ಸಿಎಂ ಅರವಿಂದ ಕೇಜ್ರಿವಾಲ್‌ ಮತ್ತು ಡಿಸಿಎಂ ಮನೀಶ್‌ ಸಿಸೊಡಿಯಾ ಅವರು, ಪಡಿತರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ಎಲ್ಲಾ ಆಕ್ಷೇಪಗಳನ್ನೂ ಮೀರಿ, ಮನೆ ಬಾಗಿಲಿಗೆ ಪಡಿತರ ವಸ್ತುಗಳನ್ನು ವಿತರಿಸುವ ಯೋಜನೆಗೆ ಅನುಮೋದನೆ ನೀಡಿದ್ದಾಗಿ ಕೇಜ್ರಿವಾಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next