Advertisement

ಸಂಭ್ರಮವನ್ನು ಮರೆಯಲು ಸಾಧ್ಯವಿಲ್ಲ

10:00 PM Aug 14, 2020 | Team Udayavani |

ನನ್ನ ಬಾಲ್ಯದ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯು ನನ್ನ ಅಚ್ಚುಮೆಚ್ಚಿನ ರಾಷ್ಟೀಯ ಹಬ್ಬವಾಗಿತ್ತು.

Advertisement

ಸ್ವಾತಂತ್ರೋತ್ಸವ ಎಂದರೆ ನನ್ನಲ್ಲಿ ಹೊಸದೊಂದು ಅನುಭವದ, ಹೊಸದೊಂದು ನೆನಪಿನ ಲೋಕ ಕಣ್ಣ ಮುಂದೆ ಬರುತ್ತದೆ.

ಸೂರ್ಯೋದಯವಾಗುವ ಮುಂಚೆಯೇ ಎದ್ದು ಸ್ನಾನ ಮಾಡಿ, ಶುಭ್ರವಾದ ಇಸ್ತ್ರೀ ಮಾಡಿದ ಬಿಳಿ ಸಮವಸ್ತ್ರ ಧರಿಸುತ್ತಿದ್ದೆ.
ನನ್ನ ತಂದೆ ದರ್ಜಿ. ಆದ್ದರಿಂದ ಸ್ವಾತಂತ್ರೋತ್ಸವಕ್ಕೆ ಹೊಸ ಬಿಳಿ ಸಮವಸ್ತ್ರ ಹೊಲಿದು ಕೊಡುತ್ತಿದ್ದರು.

ಅದನ್ನು ಧರಿಸಿ ಶಾಲೆಗೆ ಹೊರಡುತ್ತಿದ್ದೆ. ಮೊದಲು ನಮ್ಮ ಶಾಲೆಯಲ್ಲಿ ಧ್ವಜಾರೋಹಣ. ಅದು ಮುಗಿದ ಬಳಿಕ ಸಮೀಪದಲ್ಲಿದ್ದ ದೊಡ್ಡ ಮೈದಾನದಲ್ಲಿ ಧ್ವಜಾರೋಹಣ ನೆರವೇರುತಿತ್ತು. ಇಂದಿಗೂ ನಾನು ಆ ಮೈದಾನವಿರುವ ರಸ್ತೆಯಲ್ಲಿ ಹಾದು ಹೋಗುವಾಗ ಆ ದಿನಗಳು ಮರುಕಳಿಸುತ್ತವೆ. ನಮಗೆ ಖುಷಿ ಕೊಡುತ್ತಿದ್ದ ವಿಷಯವೇನೆಂದರೆ ನಾವು ಶಾಲೆಯಿಂದ ಮೈದಾನಕ್ಕೆ ಹೋಗುವ ಮಧ್ಯದಲ್ಲಿ ನಮಗೆ ರಸ್ತೆಯಲ್ಲಿ ಸಿಹಿತಿಂಡಿಯನ್ನು ನೀಡುತ್ತಿದ್ದರು. ಅದಕ್ಕಾಗಿ ನಾನು ಮತ್ತು ನನ್ನ ಗೆಳತಿಯರು ಕಾಯುತ್ತಿದ್ದುದು ಈಗಲೂ ಕಣ್ಣ ಮುಂದೆ ಬರುತ್ತದೆ.

ನಾವೆಲ್ಲರೂ ಮೈದಾನಕ್ಕೆ ತಲುಪಿದ ಬಳಿಕ ಅತಿಥಿಗಳು ಹಾಗೂ ಗಣ್ಯರು ಆಗಮಿಸುತ್ತಿದ್ದರು. ಧ್ವಜಾರೋಹಣದೊಂದಿಗೆ ಪಥ ಸಂಚಲನ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ನಡೆಸಿಕೊಡುತ್ತಿದ್ದರು. ಅದನ್ನು ನೋಡುವುದು ನಮ್ಮ ಪುಟಾಣಿ ಕಣ್ಣುಗಳಿಗೆ ಹಬ್ಬವಾಗಿತ್ತು. ಈ ಕಾರ್ಯಕ್ರಮದ ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯುತ್ತಿತ್ತು. ನಾನು ಕೂಡ ಹಲವು ಬಾರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಸ್ವಾತಂತ್ರ್ಯ ದಿನಾಚರಣೆ ಎಂದ ಕೂಡಲೇ ಆ ದಿನಗಳು ಹಾಗೆ ಕಣ್ಣ ಮುಂದೆ ಸರಿದು ಹೋಗುತ್ತದೆ. ಹೀಗೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಬಹಳ ಸುಂದರವಾದ ನೃತ್ಯ, ನಾಟಕಗಳನ್ನೆಲ್ಲ ಪ್ರದರ್ಶಿಸುತ್ತಿದ್ದರು.

Advertisement

ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮನೆಗೆ ಹೋಗುವಾಗ ನಾನು ನಡೆದುಕೊಂಡೇ ಹೋಗುತ್ತಿದ್ದೆ. ಏಕೆಂದರೆ ರಸ್ತೆ ಉದ್ದಕ್ಕೂ ನಮಗೆ ಸ್ವಾತಂತ್ರ್ಯ ದಿನಾಚರಣೆಯ ದಿನ ಚಾಕಲೇಟು ಹೀಗೆ ಅನೇಕ ಸಿಹಿತಿಂಡಿಗಳನ್ನು ನೀಡುತ್ತಿದ್ದರು. ಮನೆಯನ್ನು ತಲುಪುವಾಗ ನನ್ನ ಬಳಿ ಸಾಕಷ್ಟು ಚಾಕಲೇಟುಗಳು ಸಂಗ್ರಹವಾಗುತ್ತಿದ್ದವು. ನನ್ನ ಬಾಲ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯು ನನ್ನ ಅಚ್ಚುಮೆಚ್ಚಿನ ರಾಷ್ಟೀಯ ಹಬ್ಬವಾಗಲು ರಸ್ತೆ ಉದ್ದಕ್ಕೂ ನೀಡುತ್ತಿದ್ದ ಸಿಹಿತಿಂಡಿಗಳೇ ಕಾರಣವೋ ಏನೋ, ನನಗೆ ತಿಳಿದಿಲ್ಲ. ಆದರೆ ನನ್ನ ಬಾಲ್ಯದ ಸ್ವಾತಂತ್ರೋತ್ಸವದ ಸಂಭ್ರಮವನ್ನು ನಾನು ಮರೆಯಲು ಸಾಧ್ಯವೇ ಇಲ್ಲ.

ಲಾವಣ್ಯಾ, ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next