Advertisement

ತುಮಕೂರಿನಲ್ಲಿ ವಿಶ್ರಾಂತಿಗೆ ತೆರಳಿದ ಅಭ್ಯರ್ಥಿಗಳು

02:32 PM May 14, 2018 | Team Udayavani |

ತುಮಕೂರು: ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ಸುಡು ಬಿಸಿಲ ಬೇಗೆಯಲ್ಲಿ ಬೆಂದು ಬೆವರಿಳಿಸಿ ಬಸವಳಿದು ಮತದಾರರ ಮನಗೆಲ್ಲಲು ಕಸರತ್ತು ನಡೆಸಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಾರ್ಯಕರ್ತರಿಂದ ದೂರವಿದ್ದು, ರಿಲ್ಯಾಕ್ಸ್‌ ಮೂಡಿನಲ್ಲಿ ಇರುವುದು ಕಂಡು ಬಂದಿದೆ.

Advertisement

ಕಲ್ಪತರು ನಾಡಿನಲ್ಲಿ ಕಳೆದ ಒಂದು ತಿಂಗಳಿನಿಂದ ಚುನಾವಣಾ ರಣರಂಗದ ಕಾವು ತಾರಕಕ್ಕೇರಿ ಮೇ.12 ರಂದು ಅಭ್ಯರ್ಥಿಗಳ ನಡುವೆ ಅದೃಷ್ಟ ಪರೀಕ್ಷೆಯ ಚುನಾವಣಾ ಸಮರ ಮುಗಿದಿದ್ದು, ಈ ಸಮರದಲ್ಲಿ ಗೆಲುವು ಸಾಧಿಸಲು ಕಳೆದ ಒಂದು ತಿಂಗಳಿನಿಂದ ನಿರಂತರ ಹೋರಾಟ ನಡೆಸಿದ್ದ ಅಭ್ಯರ್ಥಿಗಳು ಚುನಾವಣೆ ಮುಗಿದ ಮಾರನೆಯ ದಿನ ತಮ್ಮ ಕುಟುಂಬದೊಂದಿಗೆ ತಮಗಾಗಿ ಶ್ರಮಿಸಿದ ಕಾರ್ಯಕರ್ತರೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಿದ್ದುದು ಕಂಡು ಬಂದಿತು.

ಕುಟುಂಬ ಮಿಲನ: ಬಿಸಿಲಾದರೇನು ಮಳೆಯಾದರೇನುಕಾಲಲ್ಲಿ ಬೊಬ್ಬೆ ಬಂದರೇನುಎಂತಹ ಆಯಾಸವಾದರೂ ಪರವಾಗಿಲ್ಲ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಗಳಿಸಿ ಚುನಾವಣಾ ಸಮರದಲ್ಲಿ ಎದುರಾಳಿಗಳನ್ನು ಮಣಿಸಿ ಗೆಲುವು ಸಾಧಿಸಬೇಕೆಂದು ಹಗಲಿರುಳು ಕಾರ್ಯಕರ್ತರ ಪಡೆಯೊಂದಿಗೆ ಹೋರಾಟ ನಡೆಸಿದ್ದರು.

ಈ ಹೋರಾಟದ ಫ‌ಲವಾಗಿ ಮತದಾರ ಪ್ರಭು ಯಾರ ಶಕ್ತಿ ಎಷ್ಟಿದೆ ಎನ್ನುವುದನ್ನು ಮತಯಂತ್ರದಲ್ಲಿ ಬರೆದಿದ್ದು, ಇದರ ಫ‌ಲಿತಾಂಶ ಮೇ 15 ರಂದು ಪ್ರಕಟವಾಗಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತದೆ ಎನ್ನುವ ಕೌತುಕದಲ್ಲಿರುವಾಗ ಕಳೆದೊಂದು ತಿಂಗಳಿನಿಂದ ಮನೆ, ಮಠ, ಬಂಧು, ಬಳಗ ಬಿಟ್ಟು ಚುನಾವಣೆಯ ಗುಂಗಿನಲ್ಲಿದ್ದ ಅಭ್ಯರ್ಥಿಗಳು ಇಂದು ಕೂಲ್‌ ಕೂಲ್‌ ಆಗಿ ಕುಟುಂಬದೊಂದಿಗೆ ಸಂತಸ ಹಂಚಿಕೊಂಡರು.

ಇಲ್ಲಿಯ ಗಾಂಧಿನಗರದಲ್ಲಿರುವ ಮಾಜಿ ಸಂಸದ ಜಿ.ಎಸ್‌. ಬಸವರಾಜ್‌ ಪುತ್ರ ಜಿ.ಬಿ. ಜ್ಯೋತಿಗಣೇಶ್‌ ತುಮಕೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಳೆದೊಂದೂವರೆ ತಿಂಗಳಿನಿಂದ ಮತದಾರ ಪ್ರಭುವಿನ ಮನೆ ಬಾಗಿಲು ತಟ್ಟಿ ಕಾರ್ಯಕರ್ತರೊಂದಿಗೆ ಬೆರೆತು ಪ್ರತಿನಿತ್ಯ ಬೆಳಿಗ್ಗೆ 5.30 ಕ್ಕೆ ಎದ್ದು ವಾಯು ವಿಹಾರಕ್ಕೆ ತೆರಳುವ ಮತದಾರ ಬಂದುಗಳನ್ನು ಭೇಟಿ ಮಾಡುವುದರಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿ ರಾತ್ರಿ 1.30 ರವರೆಗೆ ಚುನಾವಣೆಯಲ್ಲಿಯೇ ಬ್ಯುಸಿಯಾಗಿರುತ್ತಿದ್ದರು.

Advertisement

ಜ್ಯೋತಿಗಣೇಶ್‌ ಸಂತಸ: ಈಗ ಚುನಾವಣೆ ಮುಗಿದ ಹಿನ್ನಲೆಯಲ್ಲಿ ತಮ್ಮ ಕುಟುಂಬದೊಂದಿಗೆ ಜ್ಯೋತಿಗಣೇಶ್‌ ಭಾನುವಾರ ಸಂತಸದ ಕ್ಷಣಗಳನ್ನು ಹಂಚಿಕೊಂಡು ಜೊತೆಯಲ್ಲಿದ್ದರು. ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ ಕಳೆದ ಒಂದೂವರೆ ತಿಂಗಳಿನಿಂದ ದಿನಪತ್ರಿಕೆಗಳನ್ನು ಓದಲು ಸಾಧ್ಯವೇ ಆಗುತ್ತಿರಲಿಲ್ಲ.

ಇಂದು ಸ್ವಲ್ಪ ಆರಾಮವಾಗಿದೆ. ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದಿಸುವ ಕೆಲಸ ಮಾಡುತ್ತಾ ಮನೆಯವರೊಂದಿಗೆ ಬೆರೆತು ಹೋಗಿದ್ದೇನೆ. ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎನ್ನುವ ವಿಶ್ವಾಸ ನನಗಿದೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೇ ಬರುತ್ತಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.

ಕುಟುಂಬದೊಂದಿಗೆ ಕಾಲ ಕಳೆದ ರಫೀಕ್‌: ಇದೇ ರೀತಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಚುನಾವಣಾ ಪ್ರಚಾರದಲ್ಲಿ ಧುಮುಕಿ ಗೆಲುವಿಗೆ ಸಮರ ನಡೆಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಡಾ. ಎಸ್‌ ರಫೀಕ್‌ ಅಹಮದ್‌ ಕಾರ್ಯಕರ್ತರೊಂದಿಗೆ ಮತ ಎಣಿಕೆ ಕುರಿತು ಸ್ವಲ್ಪ ಚರ್ಚೆ ನಡೆಸಿ ನಂತರ ತಮ್ಮ ಪತ್ನಿ ಆಯಿಷಾ ರೊಂದಿಗೆ ಸಂತಸದಿಂದ ಕಾಲ ಕಳೆದರು.

ಇಷ್ಟು ದಿನ ಚುನಾವಣೆಯ ಗುಂಗಿನಲ್ಲಿದ್ದು, ಇಂದು ಸ್ವಲ್ಪ ರಿಲ್ಯಾಕ್ಸ್‌ ಆಗಿದೆ ಎನ್ನುವ ರಫೀಕ್‌ ಈ ಭಾರಿ ಚುನಾವಣೆ ನನಗೆ ಖುಷಿ ತರಲಿದೆ. ನಗರದ ಮತದಾರರು ನನ್ನ ಕೈಹಿಡಿದಿದ್ದಾರೆ. ಎನ್ನುವ ಆಶಾಭಾವನೆ ಹೊಂದಿದ್ದಾರೆ.

ಅದೇ ರೀತಿಯಲ್ಲಿ ಜಿಲ್ಲೆಯ ವಿವಿಧ ರಾಜಕಾರಣಿಗಳು ಚುನವಣೆಯಲ್ಲಿ ಈವೆಗೂ ಬ್ಯುಸಿಯಾಗಿ ಭಾನುವಾರ ಆರಾಮಾಗಿ ಕಾರ್ಯಕರ್ತರೊಂದಿಗೆ ಚುನಾವಣೆ ನಡೆದಿರುವ ಬಗ್ಗೆ ಯಾವ ಮತಗಟ್ಟೆಯಲ್ಲಿ ಎಷ್ಟು ಮತಗಳು ಬರಬಹುದು ಎನ್ನುವ ಲೆಕ್ಕಾಚಾರವನ್ನು ಹಾಕುತ್ತಿದ್ದಾರೆ. ಕೆಲವರು ಫೋನ್‌ ಸಂಪರ್ಕಕ್ಕೆ ಸಿಗದೆ ವಿಶ್ರಾಂತಿಗಾಗಿ ತೆರಳಿದ್ದಾರೆ. ಚುನಾವಣೆಯ ಗುಂಗಿನಿಂದ ಹೊರ ಬಂದು ಸಂತಸದ ಕ್ಷಣವನ್ನು ಭಾನುವಾರ ಅಭ್ಯರ್ಥಿಗಳು ಕುಟುಂಬದೊಂದಿಗೆ ಕಳೆದರು.

* ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next