Advertisement

ಕೆನರಾ ಕೈಗಾರಿಕಾ ಪ್ರದೇಶ ಉಪಬಡಾವಣೆ: ಕಾಮಗಾರಿಗೆ ಕ್ರಮ

12:11 AM Feb 15, 2023 | Team Udayavani |

ಬೆಂಗಳೂರು: ಕೆನರಾ ಕೈಗಾರಿಕಾ ಪ್ರದೇಶದ ಉಪಬಡಾವಣೆ ಕಾಮಗಾರಿ ಸಂಬಂಧ ಗುತ್ತಿಗೆದಾರರಿಗೆ 35.67 ಕೋಟಿ ರೂ.ಗಳಿಗೆ ಟೆಂಡರ್‌ ಆದೇಶ ನೀಡಲಾಗಿದೆ. ಆದರೆ, ಈ ಪ್ರದೇಶ ಬೆಟ್ಟ-ಗುಡ್ಡ, ಇಳಿಜಾರಿನಿಂದ ಕೂಡಿದ್ದು, ಕಾಮಗಾರಿ ನಿರ್ವಹಿಸಲು ಸಾಧ್ಯವಿಲ್ಲದೆ ಇರುವುದರಿಂದ ಹಾಗೂ ಕೇಂದ್ರ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಪರಿಸರ ಪರವಾನಿಗೆ ಪತ್ರ ಜಾರಿಯಾದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಹೇಳಿದ್ದಾರೆ.

Advertisement

ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ ಸದಸ್ಯ ಬಿ.ಎಂ. ಫಾರೂಕ್‌ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಕೆನರಾ 1 ಮತ್ತು 2ನೇ ಹಂತದ ಕೈಗಾರಿಕಾ ಪ್ರದೇಶಗಳಿಗೆ ಭೂಸ್ವಾಧೀನ ಪೂರ್ಣಗೊಂಡಿದೆ. ಕೆನರಾ 1ನೇ ಹಂತದ ಕೈಗಾರಿಕಾ ಪ್ರದೇಶದ ಒಟ್ಟು 585.66 ಎಕರೆ ಪೈಕಿ 213.90 ಎಕರೆ ಜಮೀನು ಭಾಗಶ: ಸಮತಟ್ಟಾಗಿದ್ದು, ಇದರಲ್ಲಿ 113.90 ಎಕರೆ ಜಮೀನು ಜಿಲ್ಲಾ ಕೇಂದ್ರ ಕಾರಾಗೃಹ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಇಲಾಖೆಗೆ ಹಂಚಿಕೆ ಮಾಡಲಾಗಿದೆ. 55.76 ಎಕರೆ ಜಮೀನು ಸಂಪರ್ಕ ರಸ್ತೆಗಳಿಗೆ ಉಪಯೋಗಿಸಿಕೊಳ್ಳಲಾಗಿದೆ. ಉಳಿದ 100 ಎಕರೆ ಜಮೀನು ಭಾಗಶ: ಸಮತಟ್ಟಾಗಿದ್ದು, ಹಂಚಿಕೆ ಮಾಡಬಹುದಾಗಿದೆ. ಸುಮಾರು 316 ಎಕರೆ ಜಮೀನು ಮೇಲ್ನೋಟಕ್ಕೆ ಗುಡ್ಡ ಮತ್ತು ಇಳಿಜಾರು ಪ್ರದೇಶವಾಗಿ ಕಂಡು ಬರುತ್ತದೆ. ಈ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯ ರಸ್ತೆ, ನಿರ್ಮಿಸಲಾಗಿದ್ದು, ಚರಂಡಿ, ಬೀದಿದೀಪ ಸೌಕರ್ಯ ಒದಗಿಸಲಾಗಿದೆ. ಕೆನರಾ 2ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನಪಡಿಸಿಕೊಂಡ 125 ಎಕರೆ ಜಮೀನು ಗುಡ್ಡ-ಇಳಿಜಾರು ಹೊಂದಿದ್ದು, ಇದರ ಉಪಯುಕ್ತತೆ ಬಗ್ಗೆ ಮಂಡಳಿಯಿಂದ ಕ್ರಮ ಕೈಗೊಳ್ಳಲು ಬಾಕಿ ಇದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸ್ಥಳ ಪರಿಶೀಲನೆಯಲ್ಲಿ ಕಂಡು ಬಂದಂತೆ ಕೆನರಾ ಕೈಗಾರಿಕಾ ಪ್ರದೇಶದ ಭೂಸ್ವಾಧೀನದಿಂದ ಯಾವುದೇ ರಸ್ತೆ ಸಂಪರ್ಕವನ್ನು ಕಳೆದುಕೊಂಡಿರುವುದಿಲ್ಲ. ಕೈಗಾರಿಕಾ ನಿವೇಶನ ಅಭಿವೃದ್ಧಿಪಡಿಸಿದ ನಂತರ ಜಮೀನುಗಳಿಗೆ ಸಂಪರ್ಕ ಕಡಿತವಾಗಬಹುದು. ಅದಾಗ್ಯೂ, ಚೇಳೂರು ಗ್ರಾಮದ ಸರ್ವೆ ನಂಬರ್‌ 201 (ಪಿ) ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿರುವ ಜಮೀನಿಗೆ ಮುಡಿಪು-ಕುರ್ನಾಡು ರಸ್ತೆಯಿಂದ ಹೊಂದಿರುವ ಕಚ್ಚಾ ರಸ್ತೆಯಿಂದ ಸಂಪರ್ಕ ಪಡೆಯುವ ಅವಕಾಶವಿರುತ್ತದೆ ಎಂದು ಸಚಿವರು ಉತ್ತರದಲ್ಲಿ ಹೇಳಿದ್ದಾರೆ.

ಮಂಗಳೂರು ಬಸ್‌ ನಿಲ್ದಾಣ: ವರದಿ ಪರಿಷ್ಕರಣೆ
ಮಂಗಳೂರು ಕೇಂದ್ರ ಬಸ್‌ ನಿಲ್ದಾಣವನ್ನು ಹಂತ-ಹಂತವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಯೋಜನಾ ವರದಿಯನ್ನು ಸೂಕ್ತ ರೀತಿಯಲ್ಲಿ ಪರಿಷ್ಕರಿಸಲಾಗುತ್ತಿದೆ ಎಂದು ಬಿ.ಎಂ ಫಾರೂಕ್‌ ಅವರ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಲಿಖಿತ ಉತ್ತರ ನೀಡಿದ್ದಾರೆ.

Advertisement

ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಕೇಂದ್ರ ಬಸ್‌ ನಿಲ್ದಾಣ ಯೋಜನೆಯನ್ನು ಪಿಪಿಪಿ ಮಾದರಿಯಡಿ 445 ಕೋಟಿ ಮೊತ್ತಕ್ಕೆ 2020ರ ಮೇ 20ರಂದು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾಮಗಾರಿಗೆ ಮೂರು ಬಾರಿ ಟೆಂಡರ್‌ ಕರೆಯಲಾಗಿತ್ತು. ಆದರೆ ಯಾವುದೇ ಬಿಡ್‌ದಾರರು ಭಾಗವಹಿಸಿಲ್ಲ. ಆದ್ದರಿಂದ ಉದ್ದೇಶಿತ ಕೇಂದ್ರ ಬಸ್‌ ನಿಲ್ದಾಣವನ್ನು ಹಂತ-ಹಂತವಾಗಿ ಅಭಿವೃದ್ಧಿಪಡಿಸಲು ಯೋಜನಾ ವರದಿಯನ್ನು ಪರಿಷ್ಕೃರಿಸಲಾಗುತ್ತಿದ್ದು, ಸಕ್ಷಮ ಪ್ರಾಧಿಕಾರಿಗಳಿಂದ ಪರಿಷ್ಕೃತ ವರದಿಗೆ ಅನುಮೋದನೆಯ ನಂತರ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಶೀಘ್ರವಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸುರತ್ಕಲ್‌ ಮಾರುಕಟ್ಟೆ: ಟೆಂಡರ್‌ ಕರೆಯಲು ಕ್ರಮ
ಸುರತ್ಕಲ್‌ ಮಾರುಕಟ್ಟೆ ಸಂಕೀರ್ಣ ನಿರ್ಮಾಣದ ಬಾಕಿ ಕಾಮಗಾರಿಗಳಿಗೆ ಸಚಿವ ಸಂಪುಟದ ತೀರ್ಮಾನದಂತೆ ಚಾಲ್ತಿ ದರಪಟ್ಟಿಯನ್ವಯ ಹೊಸದಾಗಿ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಜೆಡಿಎಸ್‌ ಸದಸ್ಯ ಬಿ.ಎಂ. ಫಾರೂಕ್‌ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ್ದಾರೆ.

ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. 82 ಕೋಟಿ ರೂ. ಮೊತ್ತದ ಪರಿಷ್ಕೃತ ಅಂದಾಜಿಗೆ ಮಂಗಳೂರು ಮಹಾನಗರ ಪಾಲಿಕೆ 2022ರ ಡಿ.31ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈವರೆಗೆ ನಿರ್ವಹಿಸಿದ 16.75 ಕೋಟಿ ವೆಚ್ಚ ಕಳೆದ ಉಳಿದ 65.24 ಕೋಟಿ ಮೊತ್ತದ ಬಾಕಿ ಕಾಮಗಾರಿಯನ್ನು ಚಾಲ್ತಿ ದರಪಟ್ಟಿಯಂತೆ ಹೊಸದಾಗಿ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿದೆ. ಬಾಕಿ ಕಾಮಗಾರಿಯು 50 ಕೋಟಿ ಮೇಲ್ಪಟ್ಟು ಇರುವುದರಿಂದ ರಾಜ್ಯ ಟೆಂಡರ್‌ ಪರಿಶೀಲನಾ ಸಮಿತಿ ಮುಂದೆ ಮಂಡಿಸಲಾಗಿದೆ. ಟೆಂಡರ್‌ ಕರೆಯುವ ಮೊದಲು ಅನುಪಾಲನಾ ವರದಿ ಸಲ್ಲಿಸಲು ಟೆಂಡರ್‌ ಸಮಿತಿ ಸೂಚಿಸಿದೆ. ಸಮಿತಿಗೆ ವರದಿ ಸಲ್ಲಿಸಿ ಟೆಂಡರ್‌ ಕರೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಸದ್ಯ ಸಾರ್ವಜನಿಕ ಮೈದಾನದಲ್ಲಿ ನಡೆಯುತ್ತಿರುವ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next