Advertisement

ನ. 2ರಂದು ಯೋಗೇಶ್ವರ್‌ ಬಿಜೆಪಿಗೆ?

07:15 AM Oct 23, 2017 | |

ಬೆಂಗಳೂರು: ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಶಾಸಕ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನ. 2ರಂದು ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ವೇಳೆ ಬಿಜೆಪಿ ಸೇರಲಿದ್ದಾರೆಯೇ?

Advertisement

ಹೌದು ಎನ್ನುತ್ತವೆ ಯೋಗೇಶ್ವರ್‌ ಅವರ ಆಪ್ತ ಮೂಲಗಳು. ಆದರೆ, ಬಿಜೆಪಿ ಮೂಲಗಳ ಪ್ರಕಾರ ಯೋಗೇಶ್ವರ್‌ ಅವರು ಬಿಜೆಪಿ ಸೇರುವ ತಮ್ಮ ನಿರ್ಧಾರವನ್ನು ಇನ್ನೂ ಖಚಿತಪಡಿಸಿಲ್ಲ.ಯೋಗೇಶ್ವರ್‌ ಅವರು ಬಿಜೆಪಿ ಸೇರುವ ಕುರಿತಂತೆ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ, ಎರಡು ದಿನಗಳ ಹಿಂದೆ ಕೇಂದ್ರ ಸಚಿವರಾದ ಅನಂತಕುಮಾರ್‌ ಮತ್ತು ಡಿ.ವಿ.ಸದಾನಂದಗೌಡ ಅವರೊಂದಿಗೂ ಸಮಾಲೋಚನೆ ಮಾಡಿದ್ದಾರೆ ಎನ್ನಲಾಗಿದೆ.

ಈ ವಾರಾಂತ್ಯದೊಳಗೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೂ ಖುದ್ದಾಗಿ ಇಲ್ಲವೇ ದೂರವಾಣಿ ಮೂಲಕ ಮಾತುಕತೆ ನಡೆಸಲಿದ್ದು, ಅಮಿತ್‌ ಶಾ ಒಪ್ಪಿದರೆ ಯೋಗೇಶ್ವರ್‌ ಅವರು ನ. 2ರಂದು ಬಿಜೆಪಿ ಸೇರುವುದು ಖಚಿತ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಬಿಜೆಪಿ ಮಾತ್ರ ಈ ಕುರಿತು ಖಚಿತಪಡಿಸಲು ನಿರಾಕರಿಸಿದೆ. ಯೋಗೇಶ್ವರ್‌ ಅವರು ಪಕ್ಷ ಸೇರಲು ಕೆಲವೊಂದು ಷರತ್ತುಗಳನ್ನು ಹಾಕಿದ್ದಾರೆ. ಆ ಎಲ್ಲಾ ಷರತ್ತುಗಳನ್ನು ಈಡೇರಿಸುವುದು ಕಷ್ಟಸಾಧ್ಯ ಎಂದು ಈಗಾಗಲೇ ಪಕ್ಷದ ರಾಜ್ಯ ನಾಯಕರು ತಿಳಿಸಿದ್ದಾರೆ. ಹೀಗಾಗಿ ಬಿಜೆಪಿ ಸೇರುವ ಬಗ್ಗೆ ಯೋಗೇಶ್ವರ್‌ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಶಾಸಕ ರಾಜೀವ್‌ ಬಿಜೆಪಿಗೆ?:
ಈ ಮಧ್ಯೆ ಬಿಆರ್‌ಎಸ್‌ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಕುಡಚಿ ಕ್ಷೇತ್ರದ ಶಾಸಕ ರಾಜೀವ್‌ ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಶ್ರೀರಾಮುಲು ಅವರು ಬಿಎಸ್‌ಆರ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರೂ ರಾಜೀವ್‌ ಮಾತ್ರ ಆ ಪಕ್ಷದಲ್ಲೇ ಉಳಿದುಕೊಂಡಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಅವರು ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next