Advertisement

ಕಾವೇರಿದ ಉಪ ಕದನ; ಬೃಹತ್‌ ಶಕ್ತಿ ಪ್ರದರ್ಶನ

09:57 AM Nov 20, 2019 | Lakshmi GovindaRaj |

ರಮೇಶ ಜಾರಕಿಹೊಳಿ, ಲಖನ್‌, ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌ ಸೇರಿ ಕೊನೇ ದಿನದಂದು ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯ ಪ್ರಮುಖ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳಿಂದ ಬೃಹತ್‌ ಶಕ್ತಿ ಪ್ರದರ್ಶನ. ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಮಾಧುಸ್ವಾಮಿ, ಅಶೋಕ್‌, ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಪಕ್ಷದ ನಾಯಕರ ಸಾಥ್‌. ಸತೀಶ್‌ ಜಾರಕಿಹೊಳಿ ಸೇರಿ ಹಲವೆಡೆ ಡಮ್ಮಿ ಅಭ್ಯರ್ಥಿಗಳು ಕಣಕ್ಕೆ. ಹಿರೇಕೆರೂರಿನಲ್ಲಿ ಕಂಬಿಣಕಂಥಿ ಮಠದ ಸ್ವಾಮೀಜಿ ಕಣಕ್ಕೆ. ಬಂಡಾಯ ಅಭ್ಯರ್ಥಿಗಳಿಂದಲೂ ನಾಮಪತ್ರ ಸಲ್ಲಿಕೆ. ಕೆ.ಆರ್‌.ಪೇಟೆಯಲ್ಲಿ ಮಾಧುಸ್ವಾಮಿ, ನಾರಾಯಣಗೌಡರ ಮೇಲೆ ಚಪ್ಪಲಿ ತೂರಾಟ… ಇವು ಸೋಮವಾರ ನಾಮಪತ್ರ ಸಲ್ಲಿಕೆ ವೇಳೆ ಕಂಡು ಬಂದ ದೃಶ್ಯಗಳು.

Advertisement

ರಣಾಂಗಣವಾದ ಕೆ.ಆರ್‌.ಪೇಟೆ
ಕೆ.ಆರ್‌.ಪೇಟೆ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಕೆ.ಆರ್‌.ಪೇಟೆಯಲ್ಲಿ ರಣಾಂಗಣ ಸೃಷ್ಟಿಯಾಗಿ, ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಮೇಲೆ ಜೆಡಿಎಸ್‌ ಕಾರ್ಯಕರ್ತರಿಂದ ಹಲ್ಲೆಗೆ ಯತ್ನ ನಡೆಯಿತು. ನಾಮಪತ್ರ ಸಲ್ಲಿಕೆಗೆ ತೊಂದರೆ ಉಂಟಾಗದಂತೆ ತಾಲೂಕು ಆಡಳಿತ ಬೆಳಗ್ಗೆ 11 ರಿಂದ 12 ಗಂಟೆಯೊಳಗೆ ಜೆಡಿಎಸ್‌ ಅಭ್ಯರ್ಥಿಗೆ, ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯೊಳಗೆ ಬಿಜೆಪಿ ಅಭ್ಯರ್ಥಿ ಹಾಗೂ ಮಧ್ಯಾಹ್ನ 1ರಿಂದ 2 ಗಂಟೆಯೊಳಗೆ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಸಮಯ ನಿಗದಿಪಡಿಸಿತ್ತು.

ಮೊದಲು ನಾಮಪತ್ರ ಸಲ್ಲಿಸಬೇಕಿದ್ದ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜು, ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಸ್ಟೇಡಿಯಂ ರಸ್ತೆಯಿಂದ ಮೆರವಣಿಗೆ ಆರಂಭಿಸಿದರು. ಇದೇ ವೇಳೆ, ಹೊಸಹೊಳಲು ರಸ್ತೆಯ ಶ್ರೀರಂಗ ಚಿತ್ರಮಂದಿರದ ಬಳಿಯಿಂದ ಬಿಜೆಪಿ ಮೆರವಣಿಗೆಯೂ ಆರಂಭಗೊಂಡಿತು. ಅಭ್ಯರ್ಥಿ ನಾರಾಯಣಗೌಡರೊಂದಿಗೆ ಸಚಿವ ಜೆ.ಸಿ.ಮಾಧುಸ್ವಾಮಿ, ವಿಶ್ವಕರ್ಮ ಜನಾಂಗದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ, ಯಡಿಯೂರಪ್ಪ ಅಕ್ಕನ ಮಕ್ಕಳಾದ ಅರವಿಂದ್‌, ಅಶೋಕ್‌ ಇತರರಿದ್ದರು.

ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದ ನಾರಾಯಣಗೌಡರು ಮಧ್ಯಾಹ್ನ 12.40ಕ್ಕೆ ಮುಹೂರ್ತ ನಿಗದಿಪಡಿಸಿದ್ದರು. ಮೊದಲು ನಾಮಪತ್ರ ಸಲ್ಲಿಸಬೇಕಿದ್ದ ಜೆಡಿಎಸ್‌ ಅಭ್ಯರ್ಥಿ ಇನ್ನೂ ಮೆರವಣಿಗೆಯಲ್ಲೇ ಇದ್ದರು. ಸಮಯ ಸಮೀಪಿಸುತ್ತಿರುವುದನ್ನು ಅರಿತ ನಾರಾಯಣಗೌಡರು ಮೆರವಣಿಗೆಯನ್ನು ಅರ್ಧದಲ್ಲೇ ಕೈಬಿಟ್ಟು ವಾಹನದಿಂದ ಇಳಿದು ತಾಲೂಕು ಕಚೇರಿಯತ್ತ ನಡೆದರು. ಈ ವೇಳೆ, ಜೆಡಿಎಸ್‌ ಕಾರ್ಯಕರ್ತರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಾರಾಯಣಗೌಡರು ತೆರಳುತ್ತಿದ್ದ ಗುಂಪಿನ ಮೇಲೆ ಚಪ್ಪಲಿ ತೂರಿದರು.

ಬಳಿಕ, ಮೆರವಣಿಗೆಯಲ್ಲಿದ್ದ ಸಚಿವ ಮಾಧುಸ್ವಾಮಿ ದುರ್ಗಾಭವನ್‌ ಸರ್ಕಲ್‌ ಬಳಿ ಬಂದಾಗ ಮತ್ತೆ ಜೆಡಿಎಸ್‌ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರಲ್ಲದೆ, ಬಾವುಟ ಕಿತ್ತು ನೆಲಕ್ಕೆ ಹಾಕಿ ತುಳಿದರು. ಇದೇ ವೇಳೆ, ಜೆಡಿಎಸ್‌ ಮುಖಂಡನೆನ್ನಲಾದ ವ್ಯಕ್ತಿಯೊಬ್ಬ ಪಕ್ಷದ ಬಾವುಟದ ಕೋಲಿನಿಂದ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ್ದು, ರಕ್ಷಣೆಗೆ ಬಿಜೆಪಿ ಕಾರ್ಯಕರ್ತರು ಧಾವಿಸಿ ಬಂದರು.

Advertisement

ನಾರಾಯಣಗೌಡರು ಮೆರವಣಿಗೆಯಲ್ಲಿದ್ದ ಜೆಡಿಎಸ್‌ ಕಾರ್ಯಕರ್ತರ ಬಳಿಗೆ ತೆರಳಲು ಯತ್ನಿಸಿದರಾದರೂ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಬಳಿಕ, ನಾಮಪತ್ರ ಸಲ್ಲಿಸಲು ನಾರಾಯಣಗೌಡರು ತಾಲೂಕು ಕಚೇರಿಗೆ ಆಗಮಿಸಿದಾಗ ಜೆಡಿಎಸ್‌ ಕಾರ್ಯಕರ್ತರು, ಬ್ಯಾರಿಕೇಡ್‌ ಬೇಧಿಸಿಕೊಂಡು ತಾಲೂಕು ಕಚೇರಿಗೆ ನುಗ್ಗುವ ಯತ್ನ ನಡೆಸಿದರು. ಜೆಡಿಎಸ್‌ ಬಾವುಟಕ್ಕೆ ಅಳವಡಿಸಿದ್ದ ದೊಣ್ಣೆಯನ್ನು ಅವರತ್ತ ತೂರಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಕಂಡು, ಪೊಲೀಸರು ನಾರಾಯಣಗೌಡ ಹಾಗೂ ಅವರ ಕುಟುಂಬವನ್ನು ಕಾರಿನಲ್ಲಿ ಕರೆದೊಯ್ದರು.

ನಾಮಪತ್ರ ಸಲ್ಲಿಸಲು ಬಂದು ನಾಮಪತ್ರ ಹುಡುಕಿದರು: ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಯೊಳಗೆ ಬಂದ ನಾರಾಯಣಗೌಡರು ನಾಮಪತ್ರಕ್ಕೆ ಹುಡುಕಾಡಿದರು. ಆಪ್ತ ಸಹಾಯಕ ನಾಮಪತ್ರ ತಂದುಕೊಟ್ಟರು. ಉಮೇದುವಾರಿಕೆ ಜೊತೆ ಬಿ-ಫಾರಂ ನೀಡದೆ ಕೇವಲ ಎ-ಫಾರಂನ್ನು ಮಾತ್ರ ನೀಡಿದರು. ಚುನಾವಣಾಧಿಕಾರಿ ಬಿ-ಫಾರಂ ಎಲ್ಲಿ ಎಂದು ಕೇಳಿದಾಗ, ಅದಕ್ಕೂ ಹುಡುಕಾಡಿದರು. ಐದು ನಿಮಿಷದ ಬಳಿಕ ಬಿ-ಫಾರಂನ್ನು ಚುನಾವಣಾಧಿಕಾರಿಗೆ ನಾರಾಯಣಗೌಡರು ನೀಡಿದರು. ನಾಮಪತ್ರ ಸಲ್ಲಿಸುವ ಸಮಯದಲ್ಲಿ ಪ್ರಮಾಣಪತ್ರ ಮತ್ತು ದೃಢೀಕರಣ ಪತ್ರ ಓದುವುದಕ್ಕೂ ನಾರಾಯಣಗೌಡರು ತಡವರಿಸಿದರು. ಪಕ್ಕದಲ್ಲೇ ಇದ್ದ ಪತ್ನಿ ದೇವಿಕಾ ಪತಿಗೆ ನೆರವಾದರು. ಚುನಾವಣಾ ಸಿಬ್ಬಂದಿ ಹಾಗೂ ಪತ್ನಿ ಹೇಳಿದ್ದನ್ನು ಕೇಳಿಕೊಂಡು ಓದಿ ಪೂರ್ಣಗೊಳಿಸಿದರು.

ಚೆನ್ನಮ್ಮರಿಂದ “ಬಿ’ಫಾರಂ ಪಡೆದ ಜೆಡಿಎಸ್‌ ಅಭ್ಯರ್ಥಿ: ಜೆಡಿಎಸ್‌ ಅಭ್ಯರ್ಥಿ ದೇವರಾಜು ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಬಂದು, ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಂದ ಬಿ-ಫಾರಂ ಪಡೆದುಕೊಂಡರು. ಬಿ-ಫಾರಂನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ, ಚೆನ್ನಮ್ಮರ ಆಶೀರ್ವದಿಸಿ ಪಡೆದರು. ಬಳಿಕ, ಕೆ.ಆರ್‌.ಪೇಟೆಗೆ ಆಗಮಿಸಿ, ಮನೆ ದೇವರಿಗೆ ಪೂಜೆ ಸಲ್ಲಿಸಿ, ಸಾಸಲು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಭುಲಿಂಗೇಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಹೊರಟರು.

ನನ್ನ ರಾಜಕೀಯ ಜೀವನದಲ್ಲಿ ಇಂಥಾ ಗೂಂಡಾಗಿರಿಯನ್ನು ಸಾಕಷ್ಟು ನೋಡಿದ್ದೇನೆ. ಇದಕ್ಕೆಲ್ಲಾ ಹೆದರುವವನು ನಾನಲ್ಲ.
-ಜೆ.ಸಿ.ಮಾಧುಸ್ವಾಮಿ, ಸಚಿವ

ತಾಲೂಕಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ ಮಟ್ಟಹಾಕಲೆಂದೇ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಇದಕ್ಕೆಲ್ಲಾ ಹೆದರುವುದಿಲ್ಲ. ಕಾರ್ಯ ಕರ್ತರು ಧೃತಿಗೆಡಬೇಕಾದ ಅಗತ್ಯವಿಲ್ಲ. ಇಂತಹ ಗೂಂಡಾಗಿರಿ ಮಾಡುವ ವರನ್ನು ಜನರು ಬೆಂಬಲಿಸುವುದಿಲ್ಲ.
-ಕೆ.ಸಿ.ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ

ಬಿಜೆಪಿ ಮೆರವಣಿಗೆ ಮೇಲೆ ಚಪ್ಪಲಿ ತೂರಿದ್ದು ಹಾಗೂ ಸಚಿವರ ಮೇಲೆ ಹಲ್ಲೆಗೆ ಯತ್ನ ನಡೆಸಿದವರು ಜೆಡಿಎಸ್‌ನವರಲ್ಲ. ಜೆಡಿಎಸ್‌ಗೆ ಕೆಟ್ಟ ಹೆಸರು ತರಬೇಕೆಂದು ಯಾರೋ ಈ ರೀತಿ ಮಾಡಿದ್ದಾರೆ.
-ಎಚ್‌.ಡಿ.ರೇವಣ್ಣ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next