Advertisement

ಹೆಜಮಾಡಿಯಲ್ಲಿ ಬಸ್‌ ಪಲ್ಟಿ: ಹಲವರಿಗೆ ಗಾಯ

03:40 PM Mar 13, 2018 | Team Udayavani |

ಪಡುಬಿದ್ರಿ: ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿ ಟೋಲ್‌ ಗೇಟ್‌ ಬಳಿ ಸೋಮವಾರ ಮಧ್ಯಾಹ್ನದ 1 ಗಂಟೆ ಸುಮಾರಿಗೆ ಎಕ್ಸ್‌ಪ್ರೆಸ್‌ ಬಸ್ಸೊಂದು ಪಲ್ಟಿಯಾಗಿ ಚಾಲಕ ಸಹಿತ ಏಳು ಮಂದಿ ಗಾಯಗೊಂಡಿದ್ದಾರೆ.

Advertisement

ಕೇರಳ ಕಣ್ಣೂರು ಮೂಲದ ಮೋಹನ್‌ (62), ಮಂಗಳೂರು ಮರಕಡದ ಸುರೇಶ್‌ (50), ಉಡುಪಿ ನಿವಾಸಿಗಳಾದ ಜಯರಾಮ ಆಚಾರ್ಯ (70), ಹಮೀದ್‌ (30), ಪಣಿಯೂರಿನ ಜನಾರ್ದನ (41) ಹಾಗೂ ಮೂಲತಃ ಪುಣೆಯವರಾಗಿದ್ದು, ಮಂಗಳೂರಿನ ಬಂಧುಗಳ ಮನೆಗೆ ಬಂದಿದ್ದ ಪ್ರಭಾಕರ ಶೆಟ್ಟಿ (78) ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಮೋಹನ್‌ ಅವರನ್ನು  ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆದ್ದಾರಿಯಲ್ಲಿ  ಮರದ ದಿಮ್ಮಿಗಳನ್ನು ಹೇರಿಕೊಂಡು ಕೆಟ್ಟು ನಿಂತಿದ್ದ ಲಾರಿಯನ್ನು  ಬಸ್‌ ಚಾಲಕ ಗಮನಿಸದಿರುವುದೇ ಅಪ ಘಾತಕ್ಕೆ ಕಾರಣ.  ಲಾರಿಯ ಹತ್ತಿರ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ  ಬಸ್‌ ಮಣ್ಣಿನ ದಿಬ್ಬವೊಂದಕ್ಕೆ ಬಡಿದು  ಮೋರಿಗೆ ಉರುಳಿ ಬಿತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಓವರ್‌ ಟೇಕ್‌ ಭರಾಟೆ
ಲಾರಿಯ ಚಕ್ರವು ಸ್ಫೋಟಗೊಂಡಿದ್ದ ಕಾರಣ ಮುಂಜಾನೆಯಿಂದಲೇ ಮಾರ್ಗ ಮಧ್ಯೆ ನಿಂತಿತ್ತು. ವಾಹನವೊಂದನ್ನು ಓವರ್‌ಟೇಕ್‌ ಮಾಡುತ್ತಾ ಅತಿ ವೇಗದಿಂದ ಬಂದ  ಬಸ್ಸಿನ ಚಾಲಕ ಸಂತೋಷ್‌ ಲಾರಿಯ ಹತ್ತಿರ ತಲುಪಿದಾಗ ಹಠಾತ್‌  ಬ್ರೇಕ್‌ ಹಾಕಿದ್ದ. ಪರಿಣಾಮ ತೀರಾ ಎಡಕ್ಕೆ ಚಲಿಸಿ ಮೋರಿಗೆ ಉರುಳಿ ಬಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಕೂಡಲೇ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದರು. ಮಾರ್ಗ ಮಧ್ಯ ಕೆಟ್ಟು ನಿಂತಿದ್ದ ಲಾರಿಯನ್ನು ಮತ್ತು ಬಸ್ಸನ್ನು ಬದಿಗೆ ಸರಿಸಲಾಗಿದೆ. ಕೆಲವು ಬಸ್‌ ಪ್ರಯಾಣಿಕರ ಮೊಬೈಲ್‌ಗ‌ಳು, ಲ್ಯಾಪ್‌ಟಾಪ್‌ ಸಹಿತ ವಿವಿಧ ಸೊತ್ತು ಕಳೆದು ಹೋಗಿರುವುದಾಗಿ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next