Advertisement

4.6 ಕೋ.ರೂ. ಮಿಗತೆ ಬಜೆಟ್‌ ಮಂಡನೆ

10:20 PM Mar 20, 2021 | Team Udayavani |

ಉಡುಪಿ: ನಗರಸಭೆಯ 2021-22ನೇ ಸಾಲಿನಲ್ಲಿ 4.67 ಕೋ.ರೂ. ಮಿಗತೆ ಬಜೆಟ್‌ ಅನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ಅವರು ಶನಿವಾರ ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಮಂಡಿಸಿದರು.

Advertisement

ಬಜೆಟ್‌ನ ಆರಂಭ ಶುಲ್ಕ 83.57 ಕೋ.ರೂ., ಸ್ವೀಕೃತಿ 63.33 ಕೋ.ರೂ. ಸಹಿತ ಒಟ್ಟು ಆದಾಯ 146.97 ಕೋ.ರೂ.ಗಳಾಗಿದೆ. 142.24 ಕೋ.ರೂ. ವೆಚ್ಚ ಮಾಡಲು ಪ್ರಸ್ತಾವಿಸಲಾಗಿದೆ. ಪೌರಕಾರ್ಮಿಕರ ಅನುಕೂಲಕ್ಕಾಗಿ ಬೀಡಿನಗುಡ್ಡೆಯಲ್ಲಿ ವಸತಿ ಸಮುಚ್ಚಯ ನಿರ್ಮಾಣ, ನಗರದ ಸ್ವತ್ಛತೆ, ನೈರ್ಮಲ್ಯ ನಿರ್ವಹಣೆ, ಬಹುಮಹಡಿ ಪಾರ್ಕಿಂಗ್‌, ನಿಟ್ಟೂರು ಕೊಳಚೆ ನೀರು ಶುದ್ಧೀ ಕರಣ ಘಟಕದಲ್ಲಿ ಕೊಳಚೆ ನೀರು ಮರು ಬಳಕೆ ಯಂತ್ರ ಅಳವಡಿಕೆ ಯೋಜನೆಗಳು ಈ ಬಾರಿಯ ಬಜೆಟ್‌ನ ಹೈಲೈಟ್ಸ್‌.

ಅಭಿವೃದ್ಧಿ ಕಾರ್ಯಕ್ರಮಗಳು  :

ಆದಾಯ ಹೆಚ್ಚಳಕ್ಕೆ ನಗರದ ವಿಶ್ವೇಶ್ವರಯ್ಯ ಮಾರುಕಟ್ಟೆಯನ್ನು ಸಾರ್ವಜನಿಕ ಸಹಭಾಗಿತ್ವ ದೊಂದಿಗೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿದೆ. ಪರ್ಕಳದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ 3.50 ಕೋ.ರೂ., ಸಂತೆಕಟ್ಟೆಯಲ್ಲಿ 5 ಕೋ.ರೂ., ಮಣಿಪಾಲದಲ್ಲಿ 2.50 ಕೋ.ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿದೆ. ನಿಟ್ಟೂರು ಎಸ್‌ಟಿಪಿ ಘಟಕದಲ್ಲಿ ಶುದ್ಧೀಕರಿಸಿದ ನೀರಿನ ಮರು ಬಳಕೆ ಯೋಜನೆಗೆ ಯಂತ್ರೋಪಕರಣಗಳ ಖರೀದಿಗೆ 53 ಲ.ರೂ. ಕಾದಿರಿಸಲಾಗಿದೆ. ಮಳೆನೀರು ಹರಿಯುವ ತೋಡುಗಳು, ತಡೆಗೋಡೆ, ಸಣ್ಣ ಸೇತುವೆಗಳ ನಿರ್ಮಾಣ ಹಾಗೂ ದುರಸ್ತಿಗಾಗಿ 2 ಕೋ.ರೂ.,  ಇಂದ್ರಾಳಿ ಮತ್ತು ಬೀಡಿನಗುಡ್ಡೆ ಶ್ಮಶಾನ ಅಭಿವೃದ್ಧಿಗೆ ಒಟ್ಟು 1.23 ಕೋ.ರೂ. ಮೀಸಲಿರಿಸಲಾಗಿದೆ.

ಅಂದಾಜು ಆದಾಯ

Advertisement

15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ 5.24 ಕೋ.ರೂ., ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿ ಅನು ದಾನ 2.8 ಕೋ.ರೂ., ರಾಜ್ಯ ಹಣಕಾಸು ಆಯೋಗದ ಸಿಬಂದಿ ವೇತನ ಅನುದಾನ 5.41 ಕೋ.ರೂ., ರಾಜ್ಯ ಹಣಕಾಸು ಆಯೋಗದ ವಿದ್ಯುತ್‌ ಬಿಲ್‌ ಅನುದಾನ 6.74 ಕೋ.ರೂ., ಎಸ್‌ಎಫ್ಸಿ ವಿಶೇಷ ಅನುದಾನ 5ಕೋ. ರೂ., ಸ್ವತ್ಛ ಭಾರತ್‌ ಮಿಷನ್‌ ಅನುದಾನ 4.13 ಕೋ.ರೂ. ಸಂಸತ್‌-ವಿಧಾನಸಭಾ ಸದಸ್ಯರ ಅನುದಾನ 10 ಲ.ರೂ., ಆಸ್ತಿ ತೆರಿಗೆಯಿಂದ ಸರಾಸರಿ 13.50 ಕೋ.ರೂ.,  ಕಟ್ಟಡ ಕಾಯ್ದೆಗಳಿಗೆ ಸಂಬಂಧಪಟ್ಟ ಪರವಾನಿಗೆ ಶುಲ್ಕ 35 ಲ.ರೂ., ನೀರು ಸರಬರಾಜು ಶುಲ್ಕದಿಂದ 9 ಕೋ.ರೂ., ವಾಣಿಜ್ಯ ಸಂಕೀರ್ಣಗಳಿಂದ 1.75 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ.

ಅಂದಾಜು ವೆಚ್ಚಗಳು :

ಕಚೇರಿಯ ಆಡಳಿತಾತ್ಮಕ ವೆಚ್ಚಗಳಿಗೆ 2.8 ಕೋ.ರೂ., ಲೋಕೋಪಯೋಗಿ ಕಾಮಗಾರಿಗಳಿಗೆ ನಗರಸಭಾ ನಿಧಿಯಿಂದ 28.67 ಕೋ.ರೂ., ದಾರಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆಗೆ 1.37 ಕೋ.ರೂ., ನೀರು ಸರಬರಾಜಿಗೆ ಸಂಬಂಧಿಸಿ 10.31 ಕೋ.ರೂ., ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ 24.68 ಕೋ.ರೂ., ಒಳಚರಂಡಿ ಮತ್ತು ಎಸ್‌ಟಿಪಿಗಳ ನಿರ್ವಹಣೆಗೆ 3.18 ಕೋ.ರೂ. ನಿಗದಿಪಡಿಸಲಾಗಿದೆ. ಒಳಚರಂಡಿ ಜಾಲ ಅಭಿವೃದ್ಧಿಗೆ ಮತ್ತು ಕೊಳಚೆ ನೀರು ಶುದ್ಧೀಕರಣ ಘಟಕದ ವೆಚ್ಚಗಳಿಗೆ 3.97 ಕೋ.ರೂ., ಉದ್ಯಾನವನಗಳಿಗೆ 1.50 ಕೋ.ರೂ., ಶ್ಮಶಾನಗಳ ಅಭಿವೃದ್ಧಿಗಾಗಿ 1.33 ಕೋ.ರೂ., ಕಾದಿರಿಸಲಾಗಿದೆ.

ನಗರಸಭೆಗೆ ಹೊಸ ಕಟ್ಟಡ ನಿರ್ಮಾಣ  :

ನಗರಸಭೆ ಕಚೇರಿಗೆ ಹೊಸ ಕಟ್ಟಡ ನಿರ್ಮಾ ಣಕ್ಕಾಗಿ ಹಳೆ ತಾಲೂಕು ಕಚೇರಿ ಕಟ್ಟಡದ 0.96 ಎಕರೆ ಜಾಗವನ್ನು ಮೀಸಲಿ ರಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಣಿಪಾಲದಲ್ಲಿ 2 ಕೋ.ರೂ. ವೆಚ್ಚದಲ್ಲಿ ನಗರ ಸಭೆಯ ಸಿಬಂದಿ ವಸತಿಗೃಹ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ತಿಳಿಸಿದರು.

130 ಕೋ.ರೂ. ಯುಯುಡಿಪಿಐ ಯೋಜನೆ :

ಮಲ್ಪೆ, ಉಡುಪಿ, ಮಣಿಪಾಲ ಪ್ರದೇಶವನ್ನು ಸಾರ್ವಜನಿಕ ಸಹಭಾಗಿತ್ವದ ಡಿಬಿಎಂಎಫ್ ಮಾದರಿ ಯಲ್ಲಿ 130 ಕೋ.ರೂ. ರೂ. ವೆಚ್ಚದಲ್ಲಿ ಉಡುಪಿ ಅರ್ಬನ್‌ ಡಿಜಿಟಲ್‌ ಇನಾ#†ಸ್ಟ್ರಕ್ಚರ್‌ ಅನುಷ್ಠಾನಗೊಳಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವೃತ್ತಗಳು ಮತ್ತು ತಂಗುದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಸಿಟಿ ಬಸ್‌ ನಿಲ್ದಾಣವನ್ನು ಉನ್ನತೀಕರಿಸಿ ಡಲ್ಟ್ ಯೋಜನೆಯಲ್ಲಿ ಬಸ್‌ ನಿಲ್ದಾಣ ಮತ್ತು ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆಗಾಗಿ ಯೋಜಿಸಲಾಗಿದೆ.  ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌, ಪೌರಾಯುಕ್ತ ಡಾ| ಉದಯ ಶೆಟ್ಟಿ  ಮತ್ತಿತರರು ಉಪಸ್ಥಿತರಿದ್ದರು.

ನಗರಸಭೆಗೆ ಪೌರಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿರುವುದು ಬಹಳ ಉತ್ತಮವಾದ ಹೆಜ್ಜೆಯಾಗಿದೆ. ಇದೊಂದು ಅತ್ಯುತ್ತಮವಾದ ಬಜೆಟ್‌.

-ಗಿರೀಶ್‌ ಎಂ. ಅಂಚನ್‌  ಅಧ್ಯಕ್ಷ ಸ್ಥಾಯಿ ಸಮಿತಿ, ನಗರಸಭೆ

ಮಹಿಳೆಯರಿಗೆ ಬಜೆಟ್‌ನಲ್ಲಿ ಯಾವುದೇ ಯೋಜನೆಯನ್ನು ಮಂಡಿಸಿಲ್ಲ. ಕೊರೊನಾದಿಂದ ಎಲ್ಲ ಕುಟುಂಬಗಳು ಸಂಕಷ್ಟದಲ್ಲಿರುವ ಸಮಯದಲ್ಲಿ ಮಹಿಳೆಯರಿಗೆ ಸದ್ಯೋಗ ನಡೆಸಲು ಅನುಕೂಲವಾಗುವ ಯೋಜನೆಯನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು.-ಅಮೃತಾ ಕೃಷ್ಣಮೂರ್ತಿ, ನಗರಸಭೆ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next