Advertisement

ಸಮಾಜದ ಒಳಿತಿಗಾಗಿ ಸ್ತನ್ಯಪಾನ ಸ್ನೇಹಿ ಆಸ್ಪತ್ರೆ ಹಾಗೂ ಇದರ ಅನುಕರಣೆ ನಮ್ಮೆಲ್ಲರ ಜವಾಬ್ದಾರಿ

01:00 PM Dec 18, 2022 | Team Udayavani |

ಗರ್ಭಾವಸ್ಥೆಯ ಪೌಷ್ಟಿಕತೆಯು ತಾಯಿಯ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ, ಇದು ಮಗುವಿನ ಬೆಳವಣಿಗೆಯನ್ನು ಮಾತ್ರವಲ್ಲದೆ ಉತ್ತಮ ಪೋಷಣೆಗೆ ಹಾಗೂ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಕಳಪೆ ಪೋಷಣೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ, ತಿನ್ನುವ ಹಾಗೂ ಆಟವಾಡುವ ಆಸಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ಈ ಮಕ್ಕಳು ಕಡಿಮೆ ಗ್ರಹಿಕೆ ಶಕ್ತಿಯನ್ನು ಹೊಂದಿರುತ್ತಾರೆ. ಸ್ತನ್ಯಪಾನವು ತಾಯಿ ಮತ್ತು ಅವಳ ಮಗುವಿನ ಪ್ರೀತಿಯನ್ನು ಮತ್ತು ನಿಕಟ ಸಂಬಂಧ ಬೆಳೆಸಿಕೊಳ್ಳಲು ಹಾಗೂ ಉತ್ತಮ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುವುದು.

Advertisement

ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ, ಅತಿಸಾರ, ನ್ಯುಮೋನಿಯಾ, ಮಲೇರಿಯಾ, ದಡಾರ ಮತ್ತು ಇತರ ಸೋಂಕುಗಳಿಂದ ಮರಣಾಂತಿಕ ಕಾಯಿಲೆಗಳಲ್ಲಿ ಸರಾಸರಿ ಅರ್ಧ ಶೇಕಡಾದಷ್ಟು ಮಕ್ಕಳು ಸ್ತನ್ಯಪಾನ ಸರಿಯಾಗಿ ನೀಡದಿರುವ ಕಾರಣದಿಂದ ಸಾವನ್ನಪ್ಪಿರುತ್ತಾರೆ ಎಂದು ವಿವಿಧ ಸಂಶೋಧನೆಗಳಿಂದ ತಿಳಿದುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ತಾಯಿ ಮಗುವಿಗೆ ಯಶಸ್ವಿಯಾಗಿ ಹಾಲು ನೀಡಲು ಮತ್ತು ವಿಶ್ವಾಸ ಹಾಗೂ ಧೈರ್ಯ ನೀಡುವುದು ನಮ್ಮೆಲ್ಲರ ಮುಖ್ಯ ಜವಾಬ್ದಾರಿ.

ಸ್ತನ್ಯಪಾನವನ್ನು ಶಿಶು ಹುಟ್ಟಿದ ತತ್‌ಕ್ಷಣ ಅಥವಾ ಒಂದು ತಾಸಿನ ಮೊದಲೇ ಏಕೆ ಪ್ರಾರಂಭಿಸಬೇಕು? ನವಜಾತ ಶಿಶು ಹುಟ್ಟಿದ ತತ್‌ಕ್ಷಣ ಅಥವಾ ಒಂದು ತಾಸಿನಲ್ಲಿ ಶಿಶುವು ಎಚ್ಚರಗೊಂಡಿದ್ದು ತುಂಬಾ ಲವಲವಿಕೆಯಿಂದಿರುತ್ತದೆ. ಈ ಸಮಯದಲ್ಲಿ ಮಗುವು ಹಾಲುಣಿಸಲು ಸಿದ್ಧವಾಗಿದೆ ಎಂದು ತಿಳಿಯಲು ಮಗುವು ತಾಯಿಯ ಸ್ತನದ ಹತ್ತಿರ ಬಂದಾಗ ಬಾಯಿ ತೆರೆಯುತ್ತದೆ, ಹುಡುಕುತ್ತಿರುವಂತೆ ತಲೆ ತಿರುಗಿಸುತ್ತದೆ, ಸ್ತನದ ತೊಟ್ಟು ಬೆರಳುಗಳು ಅಥವಾ ಕೈಗಳನ್ನು ಹೀರುವಂತೆ ಬಾಯಿ ತೆರೆಯುತ್ತದೆ. ಈ ಅವಧಿಯು ತುಂಬಾ ವಿಶೇಷವಾಗಿದ್ದು ಈ ಹಾಲಿನಲ್ಲಿ ರೋಗ ನಿರೋಧಕ ಅಂಶಗಳು ಹೇರಳವಾಗಿರುತ್ತವೆ. ಮಗುವನ್ನು ಸ್ತನ್ಯಪಾನಕ್ಕೆ ಒಡ್ಡಲು ಸಾಧ್ಯವಾಗದಿದ್ದರೆ ಸ್ತನ, ಚರ್ಮದಿಂದ ಚರ್ಮದ ಸಂಪರ್ಕವಾಗುವಂತೆ ನೋಡಿಕೊಳ್ಳಬೇಕು, ಈ ಕ್ರಿಯೆ ತಾಯಿಯ ಸ್ತನದಿಂದ ಹಾಲು ಹರಿದು ಬರುವಂತೆ ಸಹಾಯ ಮಾಡುತ್ತದೆ. ಅಲ್ಲದೆ ತಾಯಿಯಲ್ಲಿ ಹೆರಿಗೆಯಾದ ಕೂಡಲೇ ಸಂಭವಿಸುವಂತಹ ರಕ್ತಸ್ರಾವವನ್ನು ತಡೆಗಟ್ಟುತ್ತದೆ.

ಸ್ತನ್ಯಪಾನವನ್ನು ಬೇಗನೆ ಪ್ರಾರಂಭಿಸುವುದು ಹಾಗೂ ಆರು ತಿಂಗಳವರೆಗೆ ಸ್ತನ್ಯಪಾನವನ್ನು ಮಾತ್ರ ನೀಡುವುದು ಮಗುವಿನ ಹಾಗೂ ತಾಯಿಯ ಅರೋಗ್ಯಕ್ಕೆ ಅತ್ಯವಶ್ಯ.

ಸ್ತನ್ಯಪಾನದ ಇತರ ಉಪಯೋಗಗಳು

Advertisement

ಮೊದಲ ಹಾಲುಣಿಸುವಿಕೆಯು ಹೆಚ್ಚು ಹಾಲು ಉತ್ತೇಜಿಸಲು ಸಹಾಯ ಮಾಡುತ್ತದೆ, ಎದೆ ಹಾಲಿನ ಹರಿವನ್ನು ಉತ್ತೇಜಿಸುತ್ತದೆ, ಹಾಲುಣಿಸುವ ಆರಂಭಿಕ ಸಮಸ್ಯೆಗಳನ್ನು ತಡೆಯುತ್ತದೆ. ಮಗುವನ್ನು ಬೆಚ್ಚಗಾಗಿಸಿ, ತಾಯಿ ಮತ್ತು ಮಗುವಿನ ನಡುವೆ ಸಂಬಂಧವನ್ನು ಬಲಪಡಿಸುತ್ತದೆ.

ಮೊದಲ ಹಾಲು ಮಗುವಿನ ಮೊದಲ ಲಸಿಕೆ ಮತ್ತು ಮಗುವನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ. ಇದು ನವಜಾತ ಶಿಶುವಿನ ಕಾಮಾಲೆಯನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್‌ ಎ ಬಹಳ ಸಮೃದ್ಧವಾಗಿದೆ, ಇದರಿಂದಾಗಿ ಕಣ್ಣುಗಳಿಗೆ ಮುಖ್ಯವಾಗಿದೆ. ಸ್ತನ್ಯಪಾನವು ಚಿಕ್ಕ ಮಗುವಿನ ಬೆಳವಣಿಗೆ ಹಾಗೂ ತಾಯಿ ಮತ್ತು ಮಗುವಿನ ನಡುವೆ ನಿಕಟ ಸಂಬಂಧವನ್ನು ಬಲಪಡಿಸುತ್ತದೆ. ಎದೆಹಾಲನ್ನು ಮಗುವಿನ ಪೌಷ್ಠಿಕಾಂಶಕ್ಕಾಗಿ ಪರಿಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ರೋಗ ನಿರೋಧಕ ಅಗತ್ಯಗಳು ಮತ್ತು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಸ್ತನ್ಯಪಾನ ಸಪ್ತಾಹದ ಮುಖ್ಯ ಉದ್ದೇಶ

„ ಭಾರತದಲ್ಲಿ ಹಾಲುಣಿಸುವ ಸ್ನೇಹಿ ಆಸ್ಪತ್ರೆಗಳನ್ನು ನೀತಿ ನಿರೂಪಕರು ಮತ್ತು ಕಾರ್ಯಕ್ರಮ ನಿರ್ವಾಹಕರ ಪ್ರಾಮುಖ್ಯದತ್ತ ಗಮನ ಸೆಳೆಯಲು

„ ಹೆರಿಗೆ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳನ್ನು ಸ್ತನ್ಯಪಾನ ಸ್ನೇಹಿಯಾಗಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು

„ಹೆರಿಗೆಯಾದ ಸಮಯದಲ್ಲಿ ತಾಯಂದಿರಿಗೆ ಆಸ್ಪತ್ರೆಯಲ್ಲಿ ಸ್ತನ್ಯಪಾನದ ಬಗ್ಗೆ ಸಲಹೆ ಮತ್ತು ಬೆಂಬಲ ನೀಡಲು ನಿರ್ವಹಣ ಕೌಶಲಗಳ ಅಗತ್ಯವಿದೆ. ಈ ಸಮಯ ಆರೋಗ್ಯ ಮತ್ತು ಪೌಷ್ಠಿಕಾಂಶದ ಆರೈಕೆ ನೀಡುಗರಿಗೆ ಹಾಲುಣಿಸುವಲ್ಲಿ ತರಬೇತಿ ನೀಡಲು ಅನುವು ಮಾಡುವುದು.

ಮಕ್ಕಳ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿಶ್ವಸಂಸ್ಥೆ ಕೆಳಗಿನ ಅಂಶಗಳನ್ನು ಶಿಫಾರಸು ಮಾಡಿರುತ್ತದೆ.

1) ಜನನದ ಒಂದು ಗಂಟೆಯೊಳಗೆ ಸ್ತನ್ಯಪಾನವನ್ನು ಪ್ರಾರಂಭಿಸುವುದು

2) ಮೊದಲ ಆರು ತಿಂಗಳವರೆಗೆ ಕೇವಲ ಸ್ತನ್ಯಪಾನ (ಸ್ತನ್ಯಪಾನ ಮಾತ್ರ) ಬೇರೇನೂ ನೀಡದಿರುವುದು.

3) 2 ವರ್ಷ ವಯಸ್ಸಿನವರೆಗೆ ಅಥವಾ ಸಾಧ್ಯವಾದಲ್ಲಿ ಅದಕ್ಕಿಂತ ಹೆಚ್ಚಿನ ಸಮಯ ಸ್ತನ್ಯಪಾನವನ್ನು ಸೂಕ್ತ ಪೂರಕಗಳೊಂದಿಗೆ ಮುಂದುವರಿಸಿ ಆರು ತಿಂಗಳ ವಯಸ್ಸಿನ ಅನಂತರ ಮನೆಯಲ್ಲೇ ತಯಾರಿಸಿದ ಆಹಾರವನ್ನು ನೀಡಲು ಪ್ರೋತ್ಸಾಹ ನೀಡುವುದು.

ಅಂತಾರಾಷ್ಟ್ರೀಯ ಅಧ್ಯಯನದ ಪ್ರಕಾರ ಭಾರತದಲ್ಲಿ ಅಸಮರ್ಪಕ ಸ್ತನ್ಯಪಾನ 1 ಲಕ್ಷ ತಡೆಗಟ್ಟಬಹುದಾದ ಮಕ್ಕಳ ಸಾವುಗಳಿಗೆ ಕಾರಣವಾಗುತ್ತದೆ (ಮುಖ್ಯವಾಗಿ ಅತಿಸಾರ ಮತ್ತು ನ್ಯುಮೋನಿಯಾದಿಂದಾಗಿ). 34.7 ಮಿಲಿಯನ್‌ ಪ್ರಕರಣಗಳು, ಭಾರತದಲ್ಲಿ ಅತಿಸಾರ, 2.4 ಮಿಲಿಯನ್‌ ನ್ಯುಮೋನಿಯಾ ಪ್ರಕರಣಗಳು ಮತ್ತು 40,382 ಸ್ಥೂಲಕಾಯ ಪ್ರಕರಣಗಳು. ತಾಯಂದಿರ ಆರೋಗ್ಯದ ಮೇಲೆ ಪರಿಣಾಮದಿಂದ 7,000ಕ್ಕೂ ಹೆಚ್ಚು ಸ್ತನ ಕ್ಯಾನ್ಸರ್‌ ಪ್ರಕರಣಗಳು, 1,700 ಅಂಡಾಶಯದ ಕ್ಯಾನ್ಸರ್‌ ಮತ್ತು 87,000 ಟೈಪ್‌-ಮಧುಮೇಹ ಮತ್ತು ಭಾರತ ಅನಾರೋಗ್ಯದ ಕಾರಣದಿಂದಾಗಿ ಆರೋಗ್ಯ ರಕ್ಷಣೆಗಾಗಿ ಅಮೆರಿಕ 106.05 ಮಿಲಿಯನ್‌ ಖರ್ಚು ಮಾಡುತ್ತದೆ ಎಂದು ಅಂದಾಜು ಮಾಡಿದೆ.

ಸರಿಸಾಟಿಯಿಲ್ಲದ ಮೌಲ್ಯದ ಹೊರತಾಗಿಯೂ, ಸ್ತನ್ಯಪಾನ ದರವು ಭಾರತದಲ್ಲಿ ಕಡಿಮೆ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆರಿಗೆ ಆಸ್ಪತ್ರೆಗಳಲ್ಲಿ “ಹತ್ತು ಹಂತಗಳನ್ನು’ ಅನುಷ್ಠಾನಗೊಳಿಸಿ ಮಾತೃತ್ವ ಮತ್ತು ನವಜಾತ ಶಿಶುವಿನ ಆರೋಗ್ಯ ಗಮನಾರ್ಹವಾಗಿ ಯಶಸ್ವಿಯಾದ ಸಾಕಷ್ಟು ಪುರಾವೆಗಳಿವೆ.

-ಮುಂದಿನ ವಾರಕ್ಕೆ

ಡಾ| ಯಶೋದಾ ಸತೀಶ್‌, ಅಸಿಸ್ಟೆಂಟ್‌ ಪ್ರೊಫೆಸರ್‌,

-ಡಾ| ಬೇಬಿ ಎಸ್‌. ನಾಯಕ್‌, ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು, ಚೈಲ್ಡ್‌ ಹೆಲ್ತ್‌ ನರ್ಸಿಂಗ್‌ ವಿಭಾಗ, ಮಣಿಪಾಲ ಕಾಲೇಜ್‌ ಆಫ್ ನರ್ಸಿಂಗ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ಸ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next