Advertisement

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

02:17 AM May 19, 2024 | Team Udayavani |

ಮಲ್ಪೆ: ಮಲ್ಪೆಯಿಂದ ಆಳ ಸಮುದ್ರ ಮೀನು ಗಾರಿಕೆಗೆ ತೆರಳಿದ ದೋಣಿಗೆ ಇನ್ನೊಂದು ದೋಣಿ ಢಿಕ್ಕಿ ಹೊಡೆದ ಪರಿಣಾಮ ದೋಣಿ ಮುಳುಗಡೆ ಗೊಂಡಿದೆ. ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.

Advertisement

ವಡಭಾಂಡೇಶ್ವರ ಸಮೀಪದ ಗೋಪಾಲ ಸುವರ್ಣ ಅವರಿಗೆ ಸೇರಿದ ಮಾಲ್ತಿದೇವಿ 11 ಹೆಸರಿನ ತ್ರಿಸೆವೆಂಟಿ ಬೋಟ್‌ ಮೇ 16ರಂದು ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೇ 17ರ ಮುಂಜಾನೆ 5ರ ವೇಳೆಗೆ ಭಟ್ಕಳದಿಂದ 12 ಮಾರು ದೂರ ಮೀನುಗಾರಿಕೆ ನಡೆಸುವಾಗ ಶ್ರೀ ದುರ್ಗಾ ಬೋಟ್‌ ಮಂಜು ಮುಸುಕಿದ್ದ ವಾತಾವರಣದಿಂದಾಗಿ ಈ ಬೋಟ್‌ಗೆ ಢಿಕ್ಕಿ ಹೊಡೆಯಿತು. ಮಾಲ್ತಿದೇವಿ ಬೋಟ್‌ನ ಹಲಗೆ ಒಡೆದು ನೀರು ಒಳ ಬರಲಾರಂಭಿಸಿ ಸಂಪೂರ್ಣ ಮುಳುಗಿತು.

ಢಿಕ್ಕಿ ಹೊಡೆದ ಶ್ರೀ ದುರ್ಗಾ ಬೋಟ್‌ ಮತ್ತು ಸಮೀಪದಲ್ಲಿದ್ದ ಪಾಂಚಜನ್ಯ ಬೋಟ್‌ನವರು ತತ್‌ಕ್ಷಣ ರಕ್ಷಣೆಗೆ ಧಾವಿಸಿ ಮಾಲ್ತಿದೇವಿ ದೋಣಿಯ ತಾಂಡೇಲ ಸುರೇಶ್‌ ಕುಂದರ್‌, ಕಲಾಸಿಗಳಾದ ಶಂಕರ ಕುಂದರ್‌, ಶಂಕರ ಪೂಜಾರಿ, ಯೋಗೇಂದ್ರ, ಫರೀದ ಅಬ್ದಲ್‌ ಘನಿ ಶೇಖ್‌ ಅವರನ್ನು ರಕ್ಷಿಸಿದರು.

ಮತ್ತೆ ಮುಳುಗಡೆ
ಮಾಲ್ತಿದೇವಿ ದೋಣಿಯ ಎರಡೂ ಬದಿಗೆ ಹಗ್ಗವನ್ನು ಕಟ್ಟಿ ಗಂಗೊಳ್ಳಿ ಬಂದರಿಗೆ ಎಳೆದು ತರುವಾಗ ಗಂಗೊಳ್ಳಿ ಬಂದರು ಅಳಿವೆಯಿಂದ 8 ಮಾರು ದೂರದಲ್ಲಿರುವಾಗ ಬೋಟಿನಲ್ಲಿ ನೀರು ತುಂಬಿ ಕಟ್ಟಿದ ಹಗ್ಗ ತುಂಡಾದ ಕಾರಣ ಬೋಟು ಶೇ. 90ರಷ್ಟು ಮುಳುಗಡೆಗೊಂಡಿತು. ಬೋಟಿನಲ್ಲಿದ್ದ ಸುಮಾರು 2,500 ಲೀ. ಡೀಸೆಲ್‌, ಟ್ರಾಲ್‌ಬಲೆ, ಎಂಜಿನ್‌, ಇನ್ನಿತರ ಉಪಕರಣಗಳು ಸೇರಿದಂತೆ 20 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next