ಕೋಲ್ಕತಾ: ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ 3 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮೂರು ಪಕ್ಷಗಳಲ್ಲಿ ಜಯ ಸಾಧಿಸಿದೆ. ಉತ್ತರಾಖಂಡ್ ನಲ್ಲಿ ಒಂದು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆದಿದೆ.
ಭಾರತೀಯ ಜನತಾ ಪಕ್ಷದ ರಾಜಕೀಯ ದುರಂಹಕಾರವನ್ನು ಪಶ್ಚಿಮ ಬಂಗಾಳದ ಜನತೆ ತಿರಸ್ಕರಿಸಿದ್ದಾರೆ. ಖರಗ್ ಪುರ್ ಮತ್ತು ಕಾಳಿಗಂಜ್ ಕ್ಷೇತ್ರದಲ್ಲಿ ನಾವು ಮೊದಲ ಬಾರಿಗೆ ಗೆಲುವು ಸಾಧಿಸಿದ್ದೇವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇದು ಅಭಿವೃದ್ಧಿಯ ಗೆಲುವಾಗಿದೆ. ಕಾಳಿಗಂಜ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ತಪನ್ ದೇವ್ ಸಿನ್ನಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕಮಲ್ ಚಂದ್ರ ಸರ್ಕಾರ್ ವಿರುದ್ಧ 2,148 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಖರಗ್ ಪುರ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರದೀಪ್ ಸರ್ಕಾರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪ್ರೇಮ್ ಚಂದ್ರ ಝಾ ಅವರನ್ನು 20,811 ಮತಗಳಿಂದ ಪರಾಜಯಗೊಳಿಸಿದ್ದಾರೆ.
ಕರೀಂನಗರದಲ್ಲಿ ತೃಣಮೂಲ ಕಾಂಗ್ರೆಸ್ ನ ಬಿಮಲೇಂದು ಸಿನ್ನಾ ರಾಯ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜೈ ಪ್ರಕಾಶ್ ಮುಜುಂದಾರ್ ಅವರನ್ನು 23,650 ಮತಗಳಿಂದ ಸೋಲಿಸಿದ್ದಾರೆ.