Advertisement

ಬಿಜೆಪಿ ಭರವಸೆ ಕಾರ್ಯಗತಗೊಂಡಿಲ್ಲ: ಆಸ್ಕರ್‌ 

08:45 AM Feb 19, 2017 | Team Udayavani |

ಉಡುಪಿ: ಚುನಾವಣಾ ಪೂರ್ವದಲ್ಲಿ ಬಿಜೆಪಿ ನೀಡಿದ್ದ ಯಾವುದೇ ಭರವಸೆ ಕಾರ್ಯಗತವಾಗಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್‌ ಫೆರ್ನಾಂಡಿಸ್‌ ಟೀಕಿಸಿದ್ದಾರೆ. ಕಪ್ಪು ಹಣ ತರುವ ಭರವಸೆ ಯೊಂದಿಗೆ ನೋಟು ಅಪಮೌಲ್ಯ ಗೊಳಿಸಲಾಗಿದೆ ಎಂದು ಕೇಂದ್ರ ಹೇಳಿಕೆ ನೀಡುತ್ತಿದೆ. ಚಲಾವಣೆಯಲ್ಲಿ ಇದ್ದ 15ರಿಂದ 18 ಲ.ಕೋ. ರೂ.ಬ್ಯಾಂಕ್‌ಗಳಿಗೆ ಮರು ಪಾವತಿಯಾಗಿದೆ. ಹೀಗಿರುವಾಗ ಕಪ್ಪು ಹಣ ತರುವ ಉದ್ದೇಶ ಈಡೇರಿದೆಯೋ ಎಂಬ ಬಗ್ಗೆ ಸರಕಾರದಿಂದ ಇಷ್ಟರವರೆಗೆ ಯಾವುದೇ ಹೇಳಿಕೆ ಪ್ರಕಟಗೊಂಡಿಲ್ಲ. ಆರ್‌ಬಿಐ ಗವರ್ನರ್‌ ಜತೆಗೆ ಚರ್ಚಿಸದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕೇಂದ್ರ ಸರಕಾರದ ನಡೆಯಿಂದ ದೇಶದ ಆರ್ಥಿಕತೆ ಹಾಗೂ ಉತ್ಪಾದನೆ ಹಿಂಜರಿತ ಕಂಡಿದೆ. ಈ ಸಮಸ್ಯೆಗಳಿಗೆ ಕೇಂದ್ರ ಸರಕಾರ ಯಾವುದೇ ಪರಿಹಾರ ಕಂಡು ಕೊಂಡಿಲ್ಲ ಎಂದು ಅವರು ಜಿಲ್ಲಾ ಕಾಂಗ್ರೆಸ್‌ ಸಭೆಯಲ್ಲಿ ಹೇಳಿದರು.

Advertisement

ಕಾಂಗ್ರೆಸ್‌ಗೆ ಪೂರಕ
ಭ್ರಷ್ಟಾಚಾರವನ್ನು ವಿರೋಧಿಸುತ್ತೇವೆ ಎನ್ನುವ ಮೋದಿಯವರು ಸಹರಾ, ಬಿರ್ಲಾ ಕಂಪೆನಿಗಳಿಂದ ಹಣ ಪಡೆದಿರುವುದು ಕಂಪೆನಿಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡು ಬರುತ್ತದೆ. ಆದರೆ ಕೇಂದ್ರ ಸರಕಾರದಿಂದ ಇಷ್ಟರವರೆಗೆ ಇದಕ್ಕೆ ಸ್ಪಷ್ಟನೆ ಬಂದಿಲ್ಲ. 1972ರಲ್ಲಿ ಇಂದಿರಾ ಗಾಂಧಿಯವರು ಸೋತ ಅನಂತರ 1980ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಅವರನ್ನು ಮರು ಆಯ್ಕೆ ಮಾಡುವ ವಾತಾವರಣ ಸೃಷ್ಟಿಯಾ ದಂತೆ ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪೂರಕ ವಾತಾ
ವರಣ ಉಂಟಾಗಲಿದೆ ಎಂದರು.

ಕಾಂಗ್ರೆಸ್‌ ಮುತುವರ್ಜಿ
ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮಾತನಾಡಿ, 9/11, ಸಿಆರ್‌ಝಡ್‌, ಮರಳು ಸಮಸ್ಯೆಗಳು ಬಿಜೆಪಿ ಆಡಳಿತ ಅವಧಿಯ ಕೊಡುಗೆಗಳು. ಆದರೆ ಸಮಸ್ಯೆ ಪರಿಹಾರಕ್ಕಾಗಿ ಕಾಂಗ್ರೆಸ್‌ ಪಕ್ಷ ಮುತುವರ್ಜಿ ವಹಿಸಿದೆ. ಕಾನೂನು ತೊಡಕನ್ನು ಪರಿಹರಿಸಿ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಸರಕಾರ ಬದ್ಧವಾಗಿದೆ ಎಂದರು. ಈಗಾಗಲೇ ಹೊಸ ತಾಲೂಕು ರಚನೆಗಾಗಿ ಬ್ರಹ್ಮಾವರ, ಬೈಂದೂರು, ಕಾಪು, ಹೆಬ್ರಿಗಳಲ್ಲಿ ಬೇಡಿಕೆಗಳು ಬಂದಿವೆ. ಸಮಿತಿಯ ವರದಿಯ ಆಧಾರದ ನೆಲೆಯಲ್ಲಿ ಹಂತ ಹಂತ ವಾಗಿ ಹೊಸ ತಾಲೂಕುಗಳ  ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಪಕ್ಷದ ಸಮಾವೇಶ
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಶಾಸಕ ಗೋಪಾಲ ಪೂಜಾರಿ ಅವರು ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ ಮತ್ತೂಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವ ಸಲುವಾಗಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಮಾವೇಶಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಬ್ಲೋಸಂ ಫೆರ್ನಾಂಡಿಸ್‌, ಮುಖಂಡರಾದ ಪ್ರತಾಪಚಂದ್ರ ಶೆಟ್ಟಿ, ಗೋಪಾಲ ಭಂಡಾರಿ, ಎಂ.ಎ. ಗಫ‌ೂರ್‌, ಅಶೋಕ್‌ ಕುಮಾರ್‌ ಕೊಡವೂರು, ಕೃಷ್ಣರಾಜ ಸರಳಾಯ, ಮುರಳಿ ಶೆಟ್ಟಿ, ಅಬ್ದುಲ್‌ ಅಜೀಜ್‌, ಎಸ್‌. ನಾರಾಯಣ, ಯತೀಶ್‌ ಕರ್ಕೆರಾ, ಸರಳಾ ಕಾಂಚನ್‌, ಎಂ.ಪಿ ಮೊದಿನಬ್ಬ, ಶ್ಯಾಮಲಾ ಭಂಡಾರಿ, ಜಯಶ್ರೀ ಕೃಷ್ಣರಾಜ್‌, ವೆರೋನಿಕಾ ಕರ್ನೇಲಿಯೊ, ಚಂದ್ರಿಕಾ ಕೇಳ್ಕರ್‌, ಎಲ್ಲೂರು ಶಶಿಧರ ಶೆಟ್ಟಿ, ಜನಾರ್ದನ ತೋನ್ಸೆ, ಸುಧೀರ್‌ ಹೆಗ್ಡೆ, ಸುಧಾಕರ್‌ ಕೋಟ್ಯಾನ್‌, ನಿತ್ಯಾನಂದ ಶೆಟ್ಟಿ, ಸತೀಶ್‌ ಅಮೀನ್‌ ಪಡುಕೆರೆ, ಮಲ್ಯಾಡಿ ಶಿವರಾಮ್‌ ಶೆಟ್ಟಿ, ವಿಕಾಸ್‌ ಹೆಗ್ಡೆ, ಪ್ರಶಾಂತ್‌ ಪೂಜಾರಿ, ವಿಶ್ವಾಸ್‌ ಅಮೀನ್‌, ಸುಬ್ರಹ್ಮಣ್ಯ, ದಿನೇಶ್‌ ಪುತ್ರನ್‌, ಮಂಜಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next