Advertisement

ಮೀಸಲಾತಿ ಹೆಸರಲ್ಲಿ ಸಮಾಜ ಒಡೆವ ಸಿದ್ದು​​​​​​​; ರಾಜನಾಥ್‌ ಸಿಂಗ್‌

06:00 AM Dec 18, 2017 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಪ್ರಯತ್ನಿಸಿ ವಿಫ‌ಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಗಂಭೀರ ಆರೋಪ ಮಾಡಿದ್ದಾರೆ.

Advertisement

ನನಗೆ ಸಿಕ್ಕಿರುವ ಮಾಹಿತಿಯಂತೆ ಇಲ್ಲಿನ ಕಾಂಗ್ರೆಸ್‌ ಸರ್ಕಾರ ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ, ಕೇವಲ ಮುಸ್ಲಿಮರ ಕಣ್ಣಿಗೆ ಮಣ್ಣೆರಚಲು ಮತ್ತು ಆ ಸಮುದಾಯವನ್ನು ಹಾದಿ ತಪ್ಪಿಸಲು ಮೀಸಲಾತಿಯ ವ್ಯವಸ್ಥೆ ಮಾಡಿತ್ತು. ಆದರೆ, ಅದನ್ನು ನ್ಯಾಯಾಲಯ ಸಾರಾಸಗಟವಾಗಿ ತಳ್ಳಿ ಹಾಕಿತು ಎಂದರು.

ರಾಜ್ಯ ಬಿಜೆಪಿ ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮೀಸಲಾತಿ ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಅನ್ನುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ಆದರೆ, ಸಂವಿಧಾನದಲ್ಲಿ ಅವಕಾಶ ಇಲ್ಲದಿರುವಾಗ ಮೀಸಲಾತಿಯ ಆಮಿಷವೊಡ್ಡುವುದು ಆ ಸಮಾಜಕ್ಕೆ ಮಾಡುವ ಅತಿದೊಡ್ಡ ಮೋಸವಾಗಿದೆ ಎಂದರು.

ರಾಜ್ಯದಲ್ಲಿ ಜಾತಿ-ಮತ-ಧರ್ಮಗಳ ನಡುವೆ ಸಂಘರ್ಷ ಮತ್ತು ತಿಕ್ಕಾಟ ಸೃಷ್ಟಿಸುವ ಕೆಲಸ ಕಾಂಗ್ರೆಸ್‌ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದೆ. ಈಗ ಟಿಪ್ಪು ಜಯಂತಿ ಹೆಸರಲ್ಲಿ ಹೊಸದೊಂದು ವಿವಾದ ಹುಟ್ಟು ಹಾಕಲಾಗಿದೆ. ನಾನು ಇತಿಹಾಸದ ಸರಿ-ತಪ್ಪುಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ, ವಿವಾದಿತ ವಿಷಯವೊಂದನ್ನು ರಾಜಕಾರಣಕ್ಕೆ ಎಳೆದು ತರುವುದರ ಅವಶ್ಯತೆ ಏನಿತ್ತು. ಸ್ವಸ್ಥ ರಾಜಕಾರಣದಲ್ಲಿ ವಿಶ್ವಾಸವಿರುವ ಯಾರೇ ಆಗಲಿ ಸಮಾಜವನ್ನು ಜೋಡಿಸಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಾರೆಯೇ ಹೊರತು, ಸಮಾಜ ವಿಭಜಿಸುವುದಿಲ್ಲ. ಹಾಗೊಂದು ವೇಳೆ ಮಹಾಪುರಷರ ಜಯಂತಿ, ಉತ್ಸವಗಳನ್ನು ಮಾಡಬೇಕಾದರೆ, ಕಿತ್ತೂರು ರಾಣಿ ಚೆನ್ನಮ್ಮ, ಹಂಪಿಯ ಯಶೋಗಾಥೆ, ಕೆಂಪೇಗೌಡ ಜಯಂತಿ, ಸರ್‌.ಎಂ. ವಿಶ್ವೇಶ್ವರಯ್ಯ ಉತ್ಸವಗಳನ್ನು ಆಚರಿಸಲಿ ಎಂದರು.

ಭ್ರಷ್ಟಾಚಾರದ ಸಾಂಸ್ಥಿàಕರಣ: ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರವನ್ನು ಸಾಂಸ್ಥಿàಕರಣಗೊಳಿಸಿದೆ. ಇಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮಾಧ್ಯಮಗಳಲ್ಲಿ ಓದಿದಾಗ ಮನಸ್ಸಿಗೆ ತುಂಬಾ ವೇದನೆ ಆಗುತ್ತದೆ. ಸ್ಟೀಲ್‌ ಬ್ರಿಜ್‌ ಹಗರಣ, 300 ಕೋಟಿ ರೂ. ಲ್ಯಾಪ್‌ಟಾಪ್‌ ಹಗರಣ, ಗಾರ್ಬೆಜ್‌ ಹಗರಣ, ಕಸದಲ್ಲಿ ದುಡ್ಡು ಹೊಡೆಯುವುದು ಹೇಗೆ ಎಂದು ದೇಶದಲ್ಲಿ ಯಾರಾದರೂ ತೋರಿಸಿಕೊಟ್ಟಿದ್ದರೆ, ಆದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ. ಲೋಕಾಯುಕ್ತ ದುರ್ಬಲಗೊಳಿಸಿ, ಸರ್ಕಾರದ ಅಣತಿಯಂತೆ ಕೆಲಸ ಮಾಡುವ ಎಸಿಬಿ ರಚಿಸಲಾಗಿದೆ. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದು, ಪ್ರತಿಯೊಬ್ಬ ಪ್ರಜೆಯ ಮೇಲೆ 38 ಸಾವಿರ ರೂ. ಸಾಲ ಇದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಪ್ರತಿ ನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಮರೆತು, ಸಮಾಜವನ್ನು ಒಡೆಯುವ ಧ್ರುವೀಕರಣದ ರಾಜಕಾರಣ ಮಾಡುವ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರಿದಲ್ಲಿ ಮುಂದುವರಿಯವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ರಾಜ್‌ನಾಥ್‌ಸಿಂಗ್‌ ಹೇಳಿದರು.

Advertisement

ಆಡಳಿತದ ಅಲ್ಲ, ವ್ಯವಸ್ಥೆಯ ಪರಿವರ್ತನೆ:
ಬಿಜೆಪಿ ಪರಿವರ್ತನಾ ಯಾತ್ರೆಯ ಉದ್ದೇಶ ಕೇವಲ ಆಡಳಿತದ ಪರಿವರ್ತನೆ ಅಲ್ಲ, ಬದಲಾಗಿ ವ್ಯವಸ್ಥೆಯಲ್ಲಿ ಪರಿವರ್ತನೆಯಾಗಿ ಕರ್ನಾಟಕವನ್ನು ವೇಗವಾಗಿ ವಿಕಾಸಪಥದಲ್ಲಿ ಮುನ್ನೆಡಿಸಿಕೊಂಡು ಹೋಗಲು ಪರಿವರ್ತನೆ ತರಬೇಕಾಗಿದೆ. ಪರಿವರ್ತನಾ ಯಾತ್ರೆಗೆ ಸಿಗುತ್ತಿರುವ ಜನಬೆಂಬಲ ಹಾಗೂ ಕಾರ್ಯಕರ್ತರ ಉತ್ಸಾಹ ನೋಡಿದರೆ, ಮುಂದಿನ ಬಾರಿ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದದಲ್ಲಿ ನಿರುದ್ಯೋಗ, ಮೂಲಸೌಕರ್ಯಗಳು, ಕಾನೂನು-ಸುವ್ಯವಸ್ಥೆ ಸೇರಿ ಸಾರ್ವಂಗೀಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅವಶ್ಯಕವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ 46 ದಿನಗಳಲ್ಲಿ 112 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಕೈಗೊಂಡು, 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವ ಬಿ.ಎಸ್‌. ಯಡಿಯೂರಪ್ಪನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಇದೇ ವೇಳೆ ರಾಜನಾಥ್‌ ಸಿಂಗ್‌ ಹೇಳಿದರು.

ಕೊಲೆಗಡುಕರನ್ನು ಜೈಲಿಗಟ್ಟುತ್ತೇವೆ 
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪತ್ರಕರ್ತೆ ಗೌರಿ ಲಂಕೇಶ್‌, ಹಿಂದೂ ಕಾರ್ಯಕರ್ತರಾದ ರುದ್ರೇಶ್‌, ಕುಟ್ಟಪ್ಪ, ಪರೇಶ ಮೇಸ್ತಾ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತರನ್ನು ಹತ್ಯೆ ಮಾಡಿದ ಕೊಲೆಗಡುಕರನ್ನು ಜೈಲಿಗಟ್ಟುತ್ತೇವೆ. ಈ ವಿಚಾರದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ, ಕ್ಷಮಿಸುವುದೂ ಇಲ್ಲ ಎಂದು ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯಕರ್ಯರ ಕೊಲೆ ನಡೆದಿದೆ. ಆದರೆ. ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಆದರೆ, ಕರ್ನಾಟಕದ ಜನತೆಗೆ ನಾನು ಭರವಸೆ ನೀಡುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ, ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆಳಕ್ಕೆ ಹೋಗಿ ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಜೈಲಿಗೆ ಹಾಕುತ್ತೇವೆ. ಅದೇ ರೀತಿ ರುದ್ರೇಶ್‌, ಕುಟ್ಟಪ್ಪ, ಮೇಸ್ತ ಸೇರಿದಂತೆ ಉಳಿದ ಸಾಮಾಜಿಕ ಕಾರ್ಯಕರ್ತರ ಹತ್ಯಾಕೋರರಿಗೆ ಕಠಿಣ ಶಿಕ್ಷೆ ನೀಡುತ್ತೇವೆ ಎಂದರು.

ದೇಶದ ಆರ್ಥಿಕ ವ್ಯವಸ್ಥೆಗೆ ಸಾಫ್ಟ್ವೇರ್‌ ರಫ್ತಿನ ದೊಡ್ಡ ಪಾತ್ರವಿದೆ. ದೇಶದ ಒಟ್ಟು ಸಾಫ್ಟ್ವೇರ್‌ ರಫ್ತಿನಲ್ಲಿ ಬೆಂಗಳೂರಿನ ಪಾಲು ಶೇ.98ರಷ್ಟಿದೆ. ಆದರೆ, ಇಂದು ಬೆಂಗಳೂರು ಕೊಲೆಗಡುಕರ ನಗರವಾಗಿದೆ. ಅಪರಾಧ ಪ್ರಕರಗಳನ್ನು ಹೆಚ್ಚುತ್ತಲೇ ಇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೂಂಡಾಗಳು, ದುಷ್ಕರ್ಮಿಗಳ ವಾಸಸ್ಥಾನ ಜೈಲು ಆಗಲಿದೆ ಎಂದರು.

“ಕರ್ನಾಟಕದಲ್ಲಿ ಬೆಂಕಿ ಹಚ್ಚುವ ಕೆಲಸ ಯಾರಾದರೂ ಮಾಡುತ್ತಿದ್ದರೆ, ಅದು ಕಾಂಗ್ರೆಸ್‌ ಪಕ್ಷ. ಈ ಮಧ್ಯೆ, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೊಸ ಅಧ್ಯಕ್ಷರು. ಬಿಜೆಪಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ದೇಶದಲ್ಲಿ ಮೂಲಭೂತವಾದ, ಕೋಮುವಾದ, ನಕ್ಸಲ್‌ವಾದ, ಉಗ್ರವಾದ, ಸಿಖVರ ಹತ್ಯೆ, ಕುಟುಂಬ ರಾಜಕಾರಣದ ಬೆಂಕಿ ಹತ್ತಿಕೊಂಡಿದ್ದು, ಬಿಜೆಪಿಯ ನೀತಿಗಳಿಂದಾಗಿ ಅಲ್ಲ. ಈ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಬೆಂಕಿ ಹಚ್ಚುತ್ತಿದ್ದರೆ, ಅದನ್ನು ಆರಿಸುವ ಕೆಲಸ ಬಿಜೆಪಿ ಮಾಡುತ್ತಿದೆ’.
– ರಾಜ್‌ನಾಥ್‌ಸಿಂಗ್‌, ಕೇಂದ್ರ ಗೃಹ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next