ಹೊಸದಿಲ್ಲಿ : ರಾಜಸ್ಥಾನದ ಬನ್ಸ್ವಾರಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಕರೆದ ಬಿಜೆಪಿ ಸಂಸದ ದೇವಜೀಭಾಯ್ ಅವರನ್ನು ಕಾಂಗ್ರೆಸ್ ಕೌನ್ಸಿಲರ್ ಸೀತಾ ದಾಮೋರ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಿರ್ಭಿಡೆಯ ವಿದ್ಯಮಾನ ವರದಿಯಾಗಿದೆ. ಈ ಘಟನೆಯ ವಿಡಿಯೋ ಕೂಡ ಈಗ ವೈರಲ್ ಆಗಿದೆ.
“ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ನೀವು ಪಪ್ಪು ಎಂದು ಕರೆದದ್ದು ಹೇಗೆ ? ಹಾಗೆ ಕರೆಯಲು ನಿಮಗೆ ಅದೆಷ್ಟು ಧೈರ್ಯ ? ಒಬ್ಬ ರಾಷ್ಟ್ರೀಯ ನಾಯಕನನ್ನು ಅಗೌರವಿಸುವ ರೀತಿಯಲ್ಲಿ ನೀವು ಅಂತಹ ಪದವನ್ನು ಬಳಸಿ ಅವರನ್ನು ಆ ರೀತಿ ಕರೆದದ್ದಾರೂ ಹೇಗೆ ? ನನಗೆ ಮೊದಲು ಉತ್ತರ ಕೊಡಿ’ ಎಂದು ಸೀತಾ ದಾಮೋರ್ ಅವರು ಸಿಟ್ಟಿನ ಆವೇಶದಲ್ಲಿ ಗುಡುಗಿದರು.
ತನ್ನ ಮಾತಿಗೆ ಸಮರ್ಥನೆ ಎಂಬಂತೆ ಬಿಜೆಪಿ ಸಂಸದ ದೇವಜೀಭಾಯ್ ಅವರು “ರಾಹುಲ್ ಗಾಂಧಿ ಅವರನ್ನು ಎಲ್ಲರೂ ಹಾಗೆ ಕರೆಯುತ್ತಾರೆ’ ಎಂದು ಹೇಳಿದಕ್ಕೆ ಇನ್ನಷ್ಟು ಸಿಟ್ಟು ಗೊಂಡ ಕೌನ್ಸಿಲರ್ ಸೀತಾ ದಾಮೋರ್ ಅವರು, ” ಎಲ್ಲರೂ ಗುಂಡಿಗೆ ಬೀಳುತ್ತಾರೆಂದು ನೀವೂ ಗುಂಡಿಗೆ ಬೀಳುತೀರಾ ? ರಾಹುಲ್ ಒಬ್ಬ ಗೌರವಾರ್ಹ ವ್ಯಕ್ತಿ ಎನ್ನುವುದಾದರೆ ನೀವೂ ಅವರನ್ನು ಗೌರವಿಸಬೇಕು; ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀ ನರೇಂದ್ರ ಮೋದಿ ಎಂದೇ ಸಂಬೋಧಿಸುತ್ತೇವೆ. ಶ್ರೀ ಎನ್ನುವುದು ಗೌರವ ಸೂಚಕ ಪದ. ಅವರ ಹಾಗಿನ ಇನ್ನೊಬ್ಬ ರಾಷ್ಟ್ರೀಯ ನಾಯಕರನ್ನು ನೀವು ಅಡ್ಡ ಹೆಸರಿನಿಂದ ಕರೆಯುವುದು ಎಷ್ಟು ಸರಿ ?’ ಎಂದು ಖಂಡತುಂಡವಾಗಿ ಹೇಳಿದರು.
ಬಿಜೆಪಿ ಸಂಸದ ದೇವಜೀಭಾಯ್ ಅವರು ರಸ್ತೆ ಹೊಂಡ ಗುಂಡಿಗಳ ಬಗ್ಗೆ ಮಾತನಾಡುತ್ತಾ “ಪಪ್ಪುವನ್ನು ಕರೀರಿ; ಆತ ರಸ್ತೆ ಹೊಂಡ ತುಂಬುತ್ತಾರೆ’ ಎಂದು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಸೀತಾ ದಾಮೋರ್, “ಆತ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಕರೆದದ್ದಾರೂ ಹೇಗೆ?’ ಎಂದು ಗುಡುಗಿದ್ದರು.