Advertisement

B.K. Hariprasad ವಿರುದ್ಧ ತನಿಖೆಗೆ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

11:25 PM Jan 03, 2024 | Team Udayavani |

ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಗೋಧ್ರಾ ಮಾದರಿಯ ಘಟನೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಿರುವ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಒಳಪಡಿಸಿ ಅವರಲ್ಲಿರುವ ಮಾಹಿತಿಯನ್ನು ಪಡೆಯಬೇಕು. ಇಲ್ಲವಾದರೆ ಮುಂದೆ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಯಾಗಲಿದ್ದಾರೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 59 ರಾಮ ಭಕ್ತರು ಹೋಗುತ್ತಿದ್ದ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಗೋದ್ರಾ ಘಟನೆಯನ್ನು ಹರಿಪ್ರಸಾದ್‌ ಈಗ ಯಾಕೆ ನೆನಪಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ರಾಮ ಮಂದಿರ ನಿರ್ಮಾಣವನ್ನು ಮೊದಲಿನಿಂದಲೂ ಕಾಂಗ್ರೆಸ್‌ ವಿರೋಧಿಸುತ್ತಲೇ ಬಂದಿದೆ. ಭೂಮಿ ಪೂಜೆ ಸಂದರ್ಭದಲ್ಲಿ ಸಂಸತ್‌ ಒಳಗೆ ಕಪ್ಪುಪಟ್ಟಿ ಧರಿಸಿದ್ದರು. ನಕಾರಾತ್ಮಕ ಹೇಳಿಕೆ ನೀಡಿದ್ದರು, ಈಗ ಕರಸೇವಕರನ್ನು ಬಂಧಿಸುತ್ತಿದ್ದಾರೆ. ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದ ಕಾಂಗ್ರೆಸ್‌ ಈಗ ಜನರಲ್ಲಿ ಭೀತಿ, ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿದರು.

ದ್ವೇಷ ರಾಜಕಾರಣ
ರಾಜ್ಯದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. 31 ವರ್ಷ ಹಿಂದಿನ ಪ್ರಕರಣವನ್ನು ಈಗ ಮುನ್ನೆಲೆಗೆ ತಂದು ಬಂಧಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠ ತೀರ್ಪು ನೀಡಿದ ಪ್ರಕರಣವನ್ನು ಪೊಲೀಸರು ಹೇಗೆ ತನಿಖೆ ಮಾಡಲಿದ್ದಾರೆ? ವಾರಂಟ್‌ ನೀಡಲು ನ್ಯಾಯಾಲಯ ಹೇಳಿದ್ದಲ್ಲ ಕಾಂಗ್ರೆಸ್‌ ಸರಕಾರ ಹೇಳಿರಬೇಕು. ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಭಾಗಿಯಾದವರನ್ನು ನಿರಪರಾಧಿಗಳು ಎನ್ನುವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ರಾಮ ಮಂದಿರ ನಿರ್ಮಾಣದಿಂದ ಇಡೀ ದೇಶವೇ ಸಂಭ್ರಮದಲ್ಲಿದೆ. ಇದನ್ನು ಸಹಿಸಲಾಗದೆ ಬಡಪಾಯಿಗಳ ಮೇಲೆ ದುರುದ್ದೇಶದಿಂದ ಪ್ರಕರಣ ಹಾಕುತ್ತಿದ್ದಾರೆ. ಇದು ದ್ವೇಷ ರಾಜಕಾರಣವಲ್ಲದೇ ಮತ್ತೆನೂ ಅಲ್ಲ ಎಂದರು.

ಸಚಿವರಿಗೆ ಬುದ್ಧಿ ಹೇಳಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊರಿಗೆಲ್ಲ ಬುದ್ಧಿ ಹೇಳುತ್ತಾರೆ ಆದರೆ ಅವರ ಸಚಿವ ಸಂಪುಟದ ಸಚಿವರು ಹೇಗೆ ನಡೆದುಕೊಳ್ಳಬೇಕು, ಮಾತನಾಡಬೇಕು ಎಂಬುದನ್ನು ಕಲಿಸಿಲ್ಲ. ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮುಖ್ಯಸ್ಥರು, ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸುವ, ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ತಿಳಿಸಬೇಕಾದ ಶಿಕ್ಷಣ ಸಚಿವರು ಬಿಜೆಪಿ ನಾಯಕರ ವಿರುದ್ಧ ಕೀಳು ಮಟ್ಟದ ಪದ ಪ್ರಯೋಗ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರ ವೈಯಕ್ತಿಕ ಘಟನೆಗಳು ಸಾರ್ವಜನಿಕವಾಗಿಯೇ ಪರಿಗಣಿಸಲಾಗುತ್ತದೆ. ಟೀಕೆಗಳು ಸೌಜನ್ಯ ಮೀರಬಾರದು. ಸಚಿವರಲ್ಲಿ ಗೌರವದ ನಡವಳಿಕೆ ಇರಬೇಕು. ಹಂಗಿಸುವ ಭಾಷೆಯಲ್ಲಿ ಮಾತನಾಡುವುದು ಸರಿಯಲ್ಲ. ಟೀಕೆ ಮಾಡಿದ ಎಲ್ಲರನ್ನು ಹೀಗೆ ನೋಡಿದರೆ ಸಚಿವರ ಶಿಷ್ಟಾಚಾರಕ್ಕೆ ಮುಖ್ಯಮಂತ್ರಿಯವರ ಸಹಮತ ಇರಲಿದೆಯೇ ಎಂದು ಪ್ರಶ್ನಿಸಿದರು.

ತನಿಖೆಗೆ ಆಗ್ರಹ
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಗೋಧ್ರಾ ಮಾದರಿಯ ಘಟನೆ ನಡೆಯುವ ಸಾಧ್ಯತೆಯಿದೆ ಎಂಬ ಬಿ.ಕೆ. ಹರಿಪ್ರಸಾದ್‌ ಹೇಳಿಕೆಯನ್ನು ಗಮನಿಸಿದಾಗ ರಾಜ್ಯದಲ್ಲಿ ಕಾಂಗ್ರೆಸ್‌ ಅಂತಹ ಷಡ್ಯಂತ್ರ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹಾಗಾಗಿ ಅವರ ಹೇಳಿಕೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್‌ ಶೆಟ್ಟಿ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್‌ ಕಾಂಗ್ರೆಸ್‌ನ ದೊಡ್ಡ ನಾಯಕ. ಅವರ ಗುಂಪಿನಲ್ಲಿ ಹಲವಾರು ವಿಚಾರಗಳು ಚರ್ಚೆಯಾಗುತ್ತವೆ. ಯಾವುದೋ ಒಂದು ಸಭೆಯಲ್ಲಿ ಕಾಂಗ್ರೆಸ್‌ ಪ್ರಾಯೋಜಿತ ಗೋಧ್ರಾದಂತಹ ಕೃತ್ಯ ನಡೆಸುವ ಬಗ್ಗೆಯೂ ಚರ್ಚಿಸಿರಬಹುದು. ಅದನ್ನು ಹರಿಪ್ರಸಾದ್‌ ಅವರು ಸೂಚ್ಯವಾಗಿ ಬಹಿರಂಗಗೊಳಿಸಿದ್ದಾರೆ. ಇದನ್ನು ಹಗರುವಾಗಿ ಪರಿಗಣಿಸಬಾರದು ಎಂದರು.

ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಸಂದರ್ಭ ಸಾರ್ವತ್ರಿಕ ರಜಾ ಘೋಷಣೆಗೆ ಶಾಸಕರು ಮನವಿ ಮಾಡಿರುವುದು ಸರಿಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು. ಕೇಂದ್ರ ಸರಕಾರ ಈ ಬಗ್ಗೆ ತೀರ್ಮಾನ ಮಾಡಲಿದೆ. ರಾಜ್ಯದ ತೀರ್ಮಾನ ಪ್ರಕಟಿಸಬೇಕು. ರಾಮಮಂದಿರ ರಾಜಕೀಯ ವಿಷಯವಲ್ಲ. ಜನರ ಭಾವೈಕ್ಯದ ವಿಷಯವಾಗಿದೆ. ಟ್ರಸ್ಟ್‌ ವತಿಯಿಂದ ಪ್ರಮುಖರಿಗೆ ಆಹ್ವಾನ ಬರಲಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next