Advertisement

ರಮಾನಾಥ ರೈ ತಲೆದಂಡಕ್ಕೆ ಬಿಜೆಪಿ ಆಗ್ರಹ

11:09 AM Jun 20, 2017 | Harsha Rao |

ವಿಧಾನಮಂಡಲ: ಸಚಿವ ಹಾಗೂ ಜಿಲ್ಲಾ ಉಸ್ತುವಾರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ರಮಾನಾಥ್‌ ರೈ ಅವರು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌
ಆಗ್ರಹಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶೆಟ್ಟರ್‌, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಬ್ಯಾಂಕ್‌ ರಾಜಕಾರಣಕ್ಕಾಗಿ ಕೋಮುಗಲಭೆ ಸೃಷ್ಟಿಸಲು ಸಂಚು ನಡೆಸಲಾಗುತ್ತಿದೆ. ಕಲ್ಲಡ್ಕ ಪ್ರಕರಣಕ್ಕೆ ಗಾಂಜಾ ಸೇವನೆ ಕಾರಣ ಎಂದು ಮಾಧ್ಯಮಗಳಲ್ಲೇ ಬಂದಿದೆ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಸುನೀಲ್‌ ಕುಮಾರ್‌, ಕಲ್ಲಡ್ಕದಲ್ಲಿ ನಡೆದಿರುವ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಹಾಗೂ ಅಲ್ಪಸಂಖ್ಯಾತರನ್ನು ಓಲೈಸಲು ಬಹುಸಂಖ್ಯಾತರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸಚಿವ ರಮಾನಾಥ್‌ ರೈ, ಪ್ರವಾಸಿ ಮಂದಿರದಲ್ಲಿ ಆಡಿರುವ ಮಾತುಗಳು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಚಿವರ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲಿದೆ. ಆ ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್‌ ರಾಕೆಟ್‌ಗೆ ಪ್ರೋತ್ಸಾಹ ನೀಡುವಂತಿದೆ. ಪ್ರವಾಸಿ ಮಂದಿರದಲ್ಲಿ ಸಚಿವರು ಆಡಿರುವ ಮಾತಿಗೆ ಸದನವೇ ಅವರಿಗೆ ಛೀಮಾರಿ ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಬೋಪಯ್ಯ, ಅಪ್ಪಚ್ಚು ರಂಜನ್‌ ಇದಕ್ಕೆ ಧ್ವನಿಗೂಡಿಸಿದರು.

ನಂತರ ಸ್ಪಷನೆ ನೀಡಲು ರಮಾನಾಥ್‌ ರೈ ಎದ್ದು ನಿಂತಾಗ, ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸರ್ಕಾರದಿಂದ ಉತ್ತರ ಬೇಕು ಎಂದು ಪಟ್ಟು ಹಿಡಿದರು. ಹಿರಿಯ ಸಚಿವ ಆರ್‌.ವಿ.ದೇಶಪಾಂಡೆ, ಗೃಹ ಸಚಿವರು ಸದನದಲ್ಲಿಲ್ಲ. ರಮಾನಾಥ್‌ ರೈ ಅಲ್ಲಿನ ಸಚಿವರಾಗಿ ಸ್ಪಷ್ಟನೆ ನೀಡಲಿದ್ದಾರೆ. ನಂತರ ಸರ್ಕಾರದಿಂದ ಉತ್ತರ ಕೊಡಿಸಲಾಗುವುದೆಂದು ಭರವಸೆ ನೀಡಿದರು. ಮಾತು ಮುಂದುವರಿಸಿದ ರಮಾನಾಥ್‌ ರೈ, ವಿಡಿಯೋದಲ್ಲಿ ಏನಿದೆ ಎಂಬುದನ್ನು ಮೊದಲು
ಸಮಗ್ರವಾಗಿ ನೋಡಬೇಕು. ನಮ್ಮ ಜಿಲ್ಲೆಯಲ್ಲಿ ಕೋಮುಗಲಭೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ಜಲೀಲ್‌ ಎಂಬ ಗ್ರಾಪಂ ಉಪಾಧ್ಯಕ್ಷನನ್ನು ಕೊಲೆ ಮಾಡಲಾಯಿತು. ಅದರ ಹಿಂದೆ ಸಂಘ ಪರಿವಾರದವರು ಇದ್ದಾರೆ. ಅವರ ಪ್ರಚೋದನಾಕಾರಿ
ಹೇಳಿಕೆಗಳೇ ಎಲ್ಲದಕ್ಕೂ ಕಾರಣ ಎಂದು ಹೇಳಿದರು.

Advertisement

ಇದರಿಂದ ಕುಪಿತರಾದ ಜಗದೀಶ ಶೆಟ್ಟರ್‌, ಸುನೀಲ್‌ ಕುಮಾರ್‌, ಬೋಪಯ್ಯ, ಅಪ್ಪಚ್ಚು ರಂಜನ್‌, ಕಾಗೇರಿ, ಸಂಘ ಪರಿವಾರದವರ ಪ್ರಸ್ತಾಪ ಇಲ್ಯಾಕೆ ಮಾಡುತ್ತೀರಿ. ಯಾರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ರಮಾನಾಥ್‌ ರೈ ಪರ ನಿಂತ ಸಚಿವರಾದ ರೋಷನ್‌ ಬೇಗ್‌, ಪ್ರಮೋದ್‌ ಮಧ್ವರಾಜ್‌, ಕೃಷ್ಣಬೈರೇಗೌಡ, ಮಾಜಿ ಸಚಿವ ಅಭಯಚಂದ್ರ ಜೈನ್‌, ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಅವರು ನಿಮ್ಮ ಸಂಸದರು ಜಿಲ್ಲೆಗೆ ಬೆಂಕಿ ಇಡ್ತೇನೆ ಎಂದು ಹೇಳಿರಲಿಲ್ಲವೇ? ಸಚಿವರಿಗೆ ಮಾತನಾಡಲು ಬಿಡಿ ಎಂದು ಆಗ್ರಹಿಸಿದರು.

ಸ್ಪೀಕರ್‌ ಸಹ, ಸಚಿವರು ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ, ಹೇಳಲು ಬಿಡಿ ಎಂದು ಸುಮ್ಮನಾಗಿಸಿದರು. ” ಕಲ್ಲಡ್ಕ ಪ್ರಭಾಕರ ಭಟ್‌ ಅವರೇ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ನರಸತ್ತ ಪೊಲೀಸರು, ಬೆಂಕಿ ಇಡ್ತೇವೆ ಅಂತೆಲ್ಲಾ ಮಾತನಾಡಿದ್ದಾರೆ ಎಂದು ರೈ ದೂರಿದರು. ನಾನು ಯಾರನ್ನೂ ವಿರೋಧಿಸುವುದಿಲ್ಲ. ಎಲ್ಲ ಭಾಷೆ, ಜಾತಿ, ಸಮುದಾಯದವರನ್ನೂ ಪ್ರೀತಿಸುತ್ತೇನೆ. ಎಂದಾದರೂ ತಪ್ಪು ಮಾಡಿದವರಿಗೆ ನೆರವಾಗಿರುವುದು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಬಂಟ್ವಾಳದಲ್ಲಿ ಅಲ್ಪಸಂಖ್ಯಾತ ಮತೀಯವಾದಿಗಳು ನನ್ನ ವಿರುದ್ಧ ಇದ್ದಾರೆ. ಬಹುಸಂಖ್ಯಾತ ಮತೀಯವಾದಿಗಳು ನನ್ನ ವಿರುದ್ಧ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಕಡೆಯವರು ನನ್ನನ್ನು ತೆಗಳುತ್ತಾರೆ. ಆದರೆ, ನಾನು ಎಂದಿಗೂ ಯಾರಿಗೂ ನೋಯಿಸಿಲ್ಲ. ಈ ಭೂಮಿ ಮೇಲಿರುವ ಸಕಲ ಜೀವರಾಶಿಗೂ ಒಳಿತು ಬಯಸುವವನು ನಾನು. ಪ್ರವಾಸಿ ಮಂದಿರಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ನಾನು ಕರೆಸಿಲ್ಲ. ಕಲ್ಲಡ್ಕದಿಂದ ಬಂದ ಕೆಲವರು ನಿರಪರಾಧಿಗಳನ್ನು ಬಂಧಿಸಲಾಗುತ್ತಿದೆ. ಅದಕ್ಕೆ ಎಸ್‌ಪಿಗೆ ಮೊಬೈಲ್‌
ದೂರವಾಣಿ ಕರೆ ಮಾಡಿದೆ. ಅವರು ನಾನು ಇಲ್ಲೇ ಇದ್ದೇನೆ, ಬರ್ತೇನೆ’ ಎಂದು ಬಂದರು.

ಆಗ ಕಲ್ಲಡ್ಕದ ಹುಡುಗರನ್ನು ಆಚೆ ಕಳುಹಿಸಿ, ಎಸ್‌ಪಿ ಅವರಿಗೆ ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಿ. ಆದರೆ, ಅಮಾಯಕರನ್ನು ಬಂಧಿಸಬೇಡಿ. ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಲ್ಲಡ್ಕ ಪ್ರಭಾಕರ್‌ಭಟ್‌ ಅವರ ಹೆಸರು ಪ್ರಸ್ತಾಪಿಸಿದ್ದು ಹೌದು. ಆದರೆ, ಆಕ್ಷೇಪಾರ್ಹ ಮಾತುಗಳನ್ನಾಡಿಲ್ಲ ಎಂದು ಹೇಳಿದರು.
“ಬಂಟ್ವಾಳದಲ್ಲಿ ಎಲ್ಲ ಜನರ ಪ್ರೀತಿ ಗಳಿಸಿ ಆರು ಬಾರಿ ಶಾಸಕನಾಗಿದ್ದೇನೆ. ಪಿಎಲ್‌ಡಿ ಬ್ಯಾಂಕ್‌ನಿಂದ ಜಿಲ್ಲಾ
ಪಂಚಾಯಿತಿವರೆಗೆ ಕಾಂಗ್ರೆಸ್‌ಗೆ ಬೆಂಬಲ ಇದೆ. ಕಲ್ಲಡ್ಕದಲ್ಲೂ ಕಾಂಗ್ರೆಸ್‌ಗೆ ಬೆಂಬಲವಿದೆ. ಹೀಗಾಗಿ, ನಾನು ಯಾರ ವಿರುದ್ಧವೂ ಎಂದೂ ಪಿತೂರಿ ಮಾಡಿದವನಲ್ಲ’ ಎಂದು ತಿಳಿಸಿದರು.

ನಂತರ ಜಗದೀಶ ಶೆಟ್ಟರ್‌, ಸರ್ಕಾರದಿಂದ ನಮಗೆ ಉತ್ತರ ಬೇಕು. ಸಚಿವರು ತಮ್ಮ ಸಮಾಜಾಯಿಷಿ ಕೊಟ್ಟಿದ್ದಾರೆ. ಆದರೆ, ಅಲ್ಲಿ ಸಚಿವರು ಆಡಿರುವ ಮಾತುಗಳ ವಿಡಿಯೋ ತರಿಸಿ ನೋಡಿ ಕಾನೂನು ಪ್ರಕಾರ ಕ್ರಮ ಆಗಲೇಬೇಕು ಎಂದು ಆಗ್ರಹಿಸಿದರು. ಸರ್ಕಾರದಿಂದ ಉತ್ತರ ಕೊಡಿಸುವುದಾಗಿ ಸ್ಪೀಕರ್‌ ಭರವಸೆ ನೀಡಿದ ನಂತರ ವಿಷಯಕ್ಕೆ ತೆರೆ ಬಿದ್ದಿತು.

Advertisement

Udayavani is now on Telegram. Click here to join our channel and stay updated with the latest news.

Next