Advertisement

BJP: 3 ರಾಜ್ಯಗಳಲ್ಲಿ ಬಿಜೆಪಿ ಡಿಸಿಎಂ ತಂತ್ರ

12:13 AM Dec 06, 2023 | Team Udayavani |

ಹೊಸದಿಲ್ಲಿ: ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಅಬ್ಬರದ ಗೆಲುವು ಸಾಧಿಸಿರುವ ಬಿಜೆಪಿ ಇದೀಗ ಈ ರಾಜ್ಯಗಳ ಸಿಎಂ ಆಯ್ಕೆಗೆ ಚಾಣಾಕ್ಷ ನೀತಿಯಲ್ಲಿ ವ್ಯೂಹ ರಚಿಸಲು ಮುಂದಾಗಿದೆ. ಇದಕ್ಕಾಗಿ ‘ಡಬ್ಬಲ್‌ ಡಿಸಿಎಂ’ ಅಸ್ತ್ರ ಬಳಕೆಗೆ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪಕ್ಷದ ಮುಖಂಡರು ಸಿಎಂ ಆಯ್ಕೆ ವಿಚಾರದ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಇತ್ತ ಮೂರೂ ರಾಜ್ಯ ಗಳಲ್ಲೂ ಸಿಎಂ ರೇಸಿಗೆ ಪೈಪೋಟಿ ಕಡಿಮೆ ಇಲ್ಲ.

ಈ ನಡುವೆ ಪಕ್ಷದೊಳಗಿನ ಭಿನ್ನತೆಯನ್ನೂ ಹೊರಗೆ ತೋರದೇ, ಸಿಎಂ ಆಯ್ಕೆಯನ್ನೂ ಸುಸೂತ್ರವಾಗಿ ನಡೆಸಲು ಈ ಡಬ್ಬಲ್‌ ಡಿಸಿಎಂ ತಂತ್ರವನ್ನು ಹಣೆಯಲು ಬಿಜೆಪಿ ಮುಂದಾಗಿದೆ.
ಈಗಾಗಲೇ ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌, ರಾಜಸ್ಥಾನದಲ್ಲಿ ವಸುಂಧರಾ ರಾಜೇ ಹಾಗೂ ಛತ್ತೀಸ್‌ಗಢದಲ್ಲಿ ರೇಣುಕಾ ಸಿಂಗ್‌ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡುವುದು ಖಚಿತವೆಂದು ಮೂಲಗಳು ತಿಳಿಸಿವೆ. ಆದರೆ ಪಕ್ಷದಲ್ಲಿ ಈ ಆಯ್ಕೆಗಳ ಬಗ್ಗೆ ಭಿನ್ನಮತವೂ ಇರುವುದರಿಂದ ಹಳೆ ಮುಖಗಳಿಗೆ ಮಣೆಹಾಕಬೇಕೋ? ಬದಲಾವಣೆಗೆ ನೆಲೆ ನೀಡಬೇಕೋ ಎನ್ನುವಂಥ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ 3 ರಾಜ್ಯಗಳಲ್ಲೂ ಸಿಎಂ ಗದ್ದುಗೆ ಏರಲು ಪೈಪೋಟಿ ನಡೆಸುತ್ತಿರುವ ಪ್ರಬಲರಿಗೆ ಡಿಸಿಎಂ ಸ್ಥಾನಗಳನ್ನು ನೀಡಿ ಬಿಕ್ಕಟ್ಟು ತಣ್ಣಗಾಗಿಸಲು ಬಿಜೆಪಿ ತಂತ್ರ ರೂಪಿಸಿದೆ ಎನ್ನಲಾಗಿದೆ.

ಶಾಸಕರಾದ ಸಂಸದರ ರಾಜೀನಾಮೆ?: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಂಸದರಾದ ದಿಯಾ ಕುಮಾರಿ, ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಬಾಬಾ ಬಾಲಕ ನಾಥ್‌ ಹಾಗೂ ಕಿರೋಡಿ ಲಾಲ್‌ ಮೀನಾ ಅವರಿಗೆ ರಾಜ್ಯದಲ್ಲಿ ಪ್ರಮುಖ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಅವರನ್ನು ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಬಹುದಾಗಿದೆ. ಈ ಮೂಲಕವೂ ಸಿಎಂ ರೇಸಿಗೆ ಇರುವ ಸ್ಪರ್ಧೆಯನ್ನು ಕಡಿಮೆ ಮಾಡಲು ಬಿಜೆಪಿ ಯೋಜಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next