Advertisement

ಭೀಮ, ಅಭಿಮನ್ಯು ಮತ್ತು ಘಟೋತ್ಕಚರ ದಾಳಿ

11:15 AM Oct 12, 2017 | Harsha Rao |

ಸಂಜಯನು ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧದ ನಿರೂಪಣೆ ಮಾಡುತ್ತಿದ್ದ. ಧೃತರಾಷ್ಟ್ರನು, “ಸಂಜಯ, ಪಾಂಡವರು ಮತ್ತೆ ಮತ್ತೆ ವಿಜೃಂಭಿಸುತ್ತಿದ್ದಾರೆ. ನನ್ನ ಮಕ್ಕಳಲ್ಲಿ ಹಲವರು ಆಗಲೇ ಹತರಾಗಿದ್ದಾರೆ. ಪಾಂಡವರು ಹೀಗೆ ಮೇಲುಗೈ ಸಾಧಿಸಲು ಕಾರಣವೇನು? ನನಗೆ ತುಂಬಾ ನಿರಾಸೆಯಾಗುತ್ತಿದೆ’ ಎಂದ. ಆಗ ಸಂಜಯನು, “ಮಹಾರಾಜ,  ಪಾಂಡವರು ಬಲಶಾಲಿಗಳು, ಧರ್ಮ ಸ್ಥಾಪನೆಗಾಗಿ ಧರ್ಮ ಏನು ಹೇಳಿದೆಯೋ ಅದೇ ರೀತಿಯಲ್ಲಿ ಯುದ್ಧ ಮಾಡುತ್ತಿದ್ದಾರೆ. ಕೃಷ್ಣನಿರುವ ಕಡೆ ಧರ್ಮ, ಧರ್ಮವಿರುವ ಕಡೆ ವಿಜಯ’ ಎಂದು ಹೇಳಿ ತನ್ನ ಕಥೆಯನ್ನು ಮುಂದುವರಿಸಿದ. 

Advertisement

ಹೀಗೆಯೇ ಯುದ್ಧವು ಒಂಬತ್ತನೇ ದಿನದವರೆಗೆ ಸಾಗಿತು. ಭೀಷ್ಮ, ದ್ರೋಣ, ದುರ್ಯೋಧನ, ದುಶಾÏಸನ, ಅಶ್ವತ್ಥಾಮ, ಶಲ್ಯ, ಭೀಮ, ಅರ್ಜುನ, ಸಾತ್ಯಕಿ, ಅಭಿಮನ್ಯು..ಹೀಗೆ ಎಲ್ಲರೂ ಯುದ್ಧದಲ್ಲಿ ಅಸಾಧಾರಣ ಶೌರ್ಯವನ್ನು ಮೆರೆದರು. ಭೂರಿಶ್ರವನು ಸಾತ್ಯಕಿಯ ಹತ್ತು ಮಂದಿ ಮಕ್ಕಳನ್ನು ಕೊಂದ. ಮತ್ತೆ ಮತ್ತೆ ಕುರುಸೇನೆಯು ದಿಕ್ಕುಗೆಟ್ಟು ಪಲಾಯನ ಮಾಡಿತು. ಇದನ್ನೆಲ್ಲ ಕೇಳಿದ ಧೃತರಾಷ್ಟ್ರನು, “ಸಂಜಯ, ನಮ್ಮ ಕಡೆ ಪರಾಕ್ರಮಿಗಳಿದ್ದಾರೆ. ಸ್ವಾಮಿನಿಷ್ಠ ಸೈನ್ಯ ನಮ್ಮದು. ಇಷ್ಟಾದರೂ ನಾವು ಸೋಲುತ್ತಿದ್ದೇವೆ ಎಂದರೆ ಇದು ವಿಧಿಯ ಆಟ, ದುರ್ಯೋಧನನು ವಿದುರನ ಎಚ್ಚರಿಕೆಯ ಮಾತುಗಳನ್ನು ಕೇಳಲಿಲ್ಲ’ ಎಂದು ವಿಷಾದಿಸಿದ. 

ಹೀಗಿರುವಾಗಲೇ ಒಮ್ಮೆ ಭೀಮ ಮತ್ತು ದುರ್ಯೋಧನರ ನಡುವೆ ಭೀಕರ ಕಾಳಗವಾಯಿತು. ದುರ್ಯೋಧನನು ಪ್ರಯೋಗಿಸಿದ ಬಾಣಗಳಿಂದ ಭೀಮನಿಗೆ ಘಾಸಿಯಾಯಿತು. ದುರ್ಯೋಧನನು ಭೀಮನನ್ನು ಕೊಲ್ಲಲು ಅವನ ಮೇಲೆ ಎರಗಿದ. ಕೋಪದಿಂದ ಕುದಿಯುತ್ತಿದ್ದ ಭೀಮನು ಬೆಂಕಿಯಂತೆ ಬೆಳಗುತ್ತಿದ್ದ ಮೂವತ್ತಾರು ಬಾಣಗಳನ್ನು ಹೊಡೆದು ದುರ್ಯೋಧನನ ಸಾರಥಿಯನ್ನೂ, ಕುದುರೆಗಳನ್ನೂ ಕೊಂದ, ಧ್ವಜವನ್ನೂ ಉರುಳಿಸಿದ. ಭೀಮನ ಈ ಮರುದಾಳಿಯಿಂದ ದುರ್ಯೋಧನನಿಗೆ ತಡೆಯಲಾರದಷ್ಟು ನೋವಾಯಿತು. ಆಗ ಧೃತರಾಷ್ಟ್ರನ ಮಗಳು ದುಶ್ಶಲೆಯ ಗಂಡ ಜಯದ್ರಥನೂ, ಕೃಪಾಚಾರ್ಯರೂ ದುರ್ಯೋಧನನ ಸಹಾಯಕ್ಕೆ ಧಾವಿಸಿದರು. ಇವರ ಕಾಳಗ ನಡೆಯುತ್ತಿರುವಾಗಲೇ ರಾತ್ರಿಯಾಗಿ ಯುದ್ಧವಿರಾಮ ಘೋಷಣೆಯಾಯ್ತು. ಭೀಷ್ಮರು ಕೌರವಸೇನೆಯ ದಳಪತಿಯಾಗಿದ್ದ ಹತ್ತು ದಿನಗಳಲ್ಲಿ ಇಂಥ, ರಕ್ತ ಹೆಪ್ಪುಗಟ್ಟುವಂತೆ ಮಾಡಿದ ಮುಖಾಮುಖೀಗಳು ಎಷ್ಟೋ. ಮತ್ತೆ ಮತ್ತೆ ದುರ್ಯೋಧನನು, ಭೀಷ್ಮ ಪಿತಾಮಹರು ಪಾಂಡವರ ಪಕ್ಷಪಾತಿಯೆಂದೂ, ಅವರು ಮನಸ್ಸಿಟ್ಟು ಯುದ್ಧ ಮಾಡುತ್ತಿಲ್ಲವೆಂದೂ ಆಕ್ಷೇಪಿಸಿದ. ಆಗ ಭೀಷ್ಮರು, “ಪಾಂಡವರು ಧರ್ಮವನ್ನು ಅನುಸರಿಸುತ್ತಾರೆ. ನಾನು, ದ್ರೋಣರು, ವಿದುರ, ಗಾಂಧಾರಿ ಸೇರಿ ಎಲ್ಲರೂ ನಿನಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರೂ ನೀನು ಕೇಳದೇ ಹೋದೆ. ನೆನಪಿಟ್ಟುಕೋ: ಎಷ್ಟೇ ಹೋರಾಡಿದರೂ ನಾನು, ದ್ರೋಣರು, ನೀನು ಯಾರೂ ಯುದ್ಧದಲ್ಲಿ ಉಳಿಯುವುದಿಲ್ಲ’ ಎಂದು ಹೇಳಿದರು. 

ಆರನೆಯ ದಿನ ಶಕುನಿ ಮತ್ತು ಅವನ ಸೋದರರು, ಅರ್ಜುನನ ಮಗನಾದ ಸುಂದರಾಂಗನೂ ವೀರನೂ ಆಗಿದ್ದ ಇರಾವತನ ಮೇಲೆ ದಾಳಿ ಮಾಡಿದರು. ಇರಾವತನು ಬಹು ಪರಾಕ್ರಮದಿಂದ ಸೆಣಸಾಡಿದ. ಮೈತುಂಬಾ ಬಾಣಗಳು ನೆಟ್ಟಿದ್ದರೂ ಶತ್ರುಗಳ ಮೇಲೆ ಏರಿ ಹೋದ. ಅಲಂಬುಸ ಎನ್ನುವ ರಾಕ್ಷಸ ಪಾಂಡವರ ವೈರಿ, ದುರ್ಯೋಧನನ ಸೈನ್ಯವನ್ನು ಸೇರಿದ್ದ. ದುರ್ಯೋಧನನು ಅವನಿಗೆ ಇರಾವತನನ್ನು ಕೊಲ್ಲುವಂತೆ ಆಜ್ಞೆ ಮಾಡಿದ. ಅಲಂಬುಸನು ಮಾಯಾಯುದ್ಧ ಮಾಡಿ ಇರಾವತನನ್ನು ಕೊಂದ. ಇದನ್ನು ಕಂಡ ಘಟೋತ್ಕಚನು ಆಕ್ರೋಶದಿಂದ ದುರ್ಯೋಧನನ ಮೇಲೆ ಬಾಣಗಳನ್ನು ಸುರಿಸಿದ. ಎರಡು ಸೈನ್ಯಗಳ ಪರಾಕ್ರಮಿಗಳೂ ತಮ್ಮ ತಮ್ಮ ವೀರರ ನೆರವಿಗೆ ಧಾವಿಸಿದರು. ಕೊನೆಗೆ ಭೀಮ, ಅಭಿಮನ್ಯು ಮತ್ತು ಘಟೋತ್ಕಚರ ದಾಳಿಯಿಂದ ಕಂಗೆಟ್ಟು ಕೌರವ ಸೇನೆ ಓಡಿಹೋಯ್ತು. ಆ ಹೊತ್ತಿಗೆ ಕತ್ತಲಾಗಿ ಅಂದಿನ ದಿನದ ಯುದ್ಧ ಮುಗಿದು ಹೋಯ್ತು. 

–  (ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

Advertisement
Advertisement

Udayavani is now on Telegram. Click here to join our channel and stay updated with the latest news.

Next