Advertisement

ಲಿಂಗಾಯತರ ನಡುವೆ ಜಂಗಿ ಕುಸ್ತಿ

10:04 AM Apr 05, 2019 | Naveen |

ಆಳಂದ: ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ ಕ್ಷೇತ್ರ ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್‌ ಭೇದಿಸುವುದೇ ಎನ್ನುವ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಆಳಂದ ತಾಲೂಕು ಕಲಬುರಗಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟರೂ ಲೋಕಸಭೆ ಚುನಾವಣೆ ಮಾತ್ರ ನೆರೆಯ ಬೀದರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ.

Advertisement

ಮತದಾರರ ಕೆಲಸ ಕಾರ್ಯಗಳಿರುವುದು ಜಿಲ್ಲಾ ಕೇಂದ್ರ ಕಲಬುರಗಿಯಲ್ಲಿ. ಆದರೆ ಲೋಕಸಭೆ ಚುನಾವಣೆ ಅಭ್ಯರ್ಥಿಯ ಆಯ್ಕೆ ಮಾಡಬೇಕಾಗಿರುವುದು ಬೀದರ್‌ ಕ್ಷೇತ್ರಕ್ಕೆ. ಹೀಗಾಗಿ ಮೊದಲಿನಿಂದಲೂ ಮತದಾರರು ಚುನಾವಣೆ ಬಂದಾಗಲೊಮ್ಮೆ ಅಷ್ಟೇನು ಪೈಪೋಟಿ ಮಾಡಲಾರರು. ಆದರೂ ಬಿಜೆಪಿಗೆ ಪ್ರತಿಬಾರಿಯೂ ಲೀಡ್‌ ಕೊಡುತ್ತಲೇ ಬಂದಿರುವ ಈ ಕ್ಷೇತ್ರದಲ್ಲಿ, ಈ ಬಾರಿ ಬದಲಾವಣೆ ಆಗುವುದೇ ಎನ್ನುವ ಚರ್ಚೆ ಆರಂಭವಾಗಿದೆ.

ವಿಧಾನಸಭೆ ಚುನಾವಣೆ ಬಂದಾಗಲೊಮ್ಮೆ ಹಿಂದಿನ ಬಿಜೆಪಿ ಅಭ್ಯರ್ಥಿಗಳೆಲ್ಲ ತಮ್ಮ ಠೇವಣಿ ಉಳಿಸಿಕೊಳ್ಳುವ ಬದಲು, ಕಳೆದುಕೊಂಡಿದ್ದೇ ಹೆಚ್ಚು. ಆದರೆ ವಿಚಿತ್ರವಾದರೂ ಸತ್ಯ ಎನ್ನುವಂತೆ ಲೋಕಸಭೆ ಚುನಾವಣೆ ಬಂದರೆ ಬಿಜೆಪಿಗೆ ಹೆಚ್ಚು ಮತಗಳು ಬೀಳುತ್ತಲೇ ಬಂದಿವೆ.

ಒಮ್ಮೆಯೂ ಬಿಜೆಪಿ ಮುಖ ನೋಡದ ಈ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕ ಸುಭಾಷ ಗುತ್ತೇದಾರ ಆಯ್ಕೆಯಾಗುವ ಮೂಲಕ ಬಿಜೆಪಿಯ ಕಮಲದ ಪತಾಕೆ ಹಾರಿಸಿದರು. ಮೂರು ದಶಕಗಳಿಂದಲೂ ರಾಷ್ಟ್ರೀಯ ಪಕ್ಷಗಳಿಂದ ಈ ಕ್ಷೇತ್ರದಲ್ಲಿ ಯಾರೂ ಚುನಾಯಿತರಾಗಿಲ್ಲ. ಏನಿದ್ದರೂ ಪ್ರಾದೇಶಿಕ ಪಕ್ಷಗಳಿಂದಲೇ ಮಾಜಿ ಶಾಸಕ ಬಿ.ಆರ್‌. ಪಾಟೀಲ, ಹಾಲಿ ಶಾಸಕ ಸುಭಾಷ ಗುತ್ತೇದಾರ ಚುನಾಯಿತರಾಗಿದ್ದವರು. ಆದರೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷ ಬಿಜೆಪಿಯಿಂದಲೇ ಶಾಸಕ ಸುಭಾಷ ಗುತ್ತೇದಾರ ಆಯ್ಕೆಯಾಗಿದ್ದು ವಿಶೇಷವೇ ಆಗಿದೆ. ಕ್ಷೇತ್ರದಲ್ಲಿ ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿ ರಾಜಕಾರಣದ ಪ್ರತಿಷ್ಠೆಯ ನಡುವೆಯೂ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಇಲ್ಲಿನ ಮತದಾರರು ಪಕ್ಷಕ್ಕೆ ಮಣೆ ಹಾಕಿದ್ದಾರೆ.

2004ರಲ್ಲಿ ಬಿಜೆಪಿ ಸಂಸದ ರಾಮಚಂದ್ರ ವಿರಪ್ಪ ನಿಧನ ನಂತರ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ನರಸಿಂಗ ಹುಲ್ಲಾ ಮತ್ತು 2008ರಲ್ಲಿ ಮತಕ್ಷೇತ್ರ ವಿಂಗಡಣೆಯಾದ ಮೇಲೆ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ| ಧರ್ಮಸಿಂಗ್‌ ಗೆಲವು ಸಾಧಿ ಸಿದ್ದರು. ನಂತರ 2014ರಲ್ಲಿ ಬಿಜೆಪಿಯಿಂದ ಹಾಲಿ ಅಭ್ಯರ್ಥಿ ಭಗವಂತ ಖೂಬಾ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಕಾಂಗ್ರೆಸ್ಸಿನ ಪ್ರಬಲ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಕಣಕ್ಕಳಿದಿದ್ದರಿಂದ ಬಿಜೆಪಿಗೆ ನುಂಗದ ತುತ್ತಾಗಿ, ಗೆಲವು ಸುಲಭವಾಗಿ ಉಳಿದಿಲ್ಲ ಎನ್ನಲಾಗಿದೆ.

Advertisement

ಮೂರು ದಶಕಗಳಲ್ಲಿ ಬೀದರ ಕ್ಷೇತ್ರದಿಂದ ಸುಮಾರು ಎರಡು ಬಾರಿ ಕಾಂಗ್ರೆಸ್‌ ಗೆಲುವು ಬಿಟ್ಟರೆ ಉಳಿದೆಲ್ಲ ಬಿಜೆಪಿ ಪಾಲಾಗುತ್ತಲೇ ಬಂದಿದೆ. ಈ ಬಾರಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಡುವೆ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ.

1991-1996,1998, 1999, 2004ರಲ್ಲಿ ಹ್ಯಾಟ್ರಿಕ್‌ ಹೀರೋ ದಿ| ರಾಮಚಂದ್ರ ವಿರಪ್ಪ ಸರಣಿ ಗೆಲವು ಸಾಧಿ ಸಿದ್ದು, ಈ ಗೆಲುವಿಗೆ ಆಳಂದ ಕ್ಷೇತ್ರದ ಮತದಾರರೇ ಲೀಡ್‌ ಕೊಡುತ್ತ ಬಂದಿದ್ದರು.

ಆದರೀಗ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸೋಲು ಅನುಭವಿಸಿದ ಮಾಜಿ ಶಾಸಕ ಬಿ.ಆರ್‌. ಪಾಟೀಲ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಹೆಚ್ಚಿನ ಮತಗಳನ್ನು ಕೊಡುವ ಮೂಲಕ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಹಾಲಿ ಶಾಸಕ ಸುಭಾಷ ಗುತ್ತೇದಾರ ಅವರು, ತಮ್ಮ ವರ್ಚಸ್ಸು ಕಾಯ್ದುಕೊಳ್ಳಲು ಮತಗಳು ಹರಿದುಹೋಗಲು ಅಷ್ಟೇನು ಸರಳವಾಗಿ ಬಿಡುವುದಿಲ್ಲ ಎಂದಿದ್ದಾರೆ. ಆಳಂದ ಮತಕ್ಷೇತ್ರದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ 36 ಸಾವಿರ ಮತಗಳನ್ನು ಬಿಜೆಪಿಗೆ ಲೀಡ್‌ ಕೊಟ್ಟಿತ್ತು. ಈ ಬಾರಿ ಅಷ್ಟೊಂದು ಮತಗಳ ಅನುಮಾನವೂ ಗುತ್ತೇದಾರ ಅವರಿಗೆ ಇದ್ದು, ಅಗ್ನಿ ಪರೀಕ್ಷೆಯು ಎದುರಾಗಿದೆ.

ಇಬ್ಬರೂ ಲಿಂಗಾಯತರಾಗಿದ್ದರಿಂದ ಲಿಂಗಾಯಿತರ ಮತಗಳು ವಿಭಜನೆ ಆಗುವುದು ಮೇಲ್ನೋಟಕ್ಕೆ ಕಂಡುಬರತೊಡಗಿದೆ. ಈಶ್ವರ ಖಂಡ್ರೆ ಪ್ರಬಲ ಅಭ್ಯರ್ಥಿಯಾಗಿದ್ದರಿಂದ ಬಿಜೆಪಿಗೆ ಅಷ್ಟೇನು ಹಾದಿ ಸರಳವಾಗಿಲ್ಲ. ಬೀದರ ಲೋಕಸಭೆ ಕ್ಷೇತ್ರದಲ್ಲಿ ಬಾಲ್ಕಿ, ಹುಮನಾಬಾದ, ಬಸವಕಲ್ಯಾಣ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಕಾಂಗ್ರೆಸ್ಸಿನ ಶಾಸಕರೇ ಗೆದ್ದಿದ್ದಾರೆ. ಬೀದರ ಉತ್ತರ ಕ್ಷೇತ್ರಕ್ಕೆ ಜೆಡಿಎಸ್‌. ಇದೇ ಔರಾದ ಹಾಗೂ ಆಳಂದ ಮಾತ್ರ ಬಿಜೆಪಿ ಶಾಸಕರಿದ್ದಾರೆ.

ಮೂರು ಸಚಿವ ಸ್ಥಾನ ಕಾಂಗ್ರೆಸ್‌ಗೆ ಬಲ
ಬೀದರ ಜಿಲ್ಲೆಗೆ ಸಮ್ಮಿಶ್ರ ಸರ್ಕಾರದಿಂದ ಈ ಬಾರಿ ಕೊಡುಗೆಯಾಗಿ ಮೂರು ಸಚಿವ ಸ್ಥಾನ ನೀಡಲಾಗಿದೆ. ಹುಮನಾಬಾದ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ರಾಜಶೇಖರ ಪಾಟೀಲ, ಬೀದರ ಕ್ಷೇತ್ರದಿಂದ ರಹಿಂಖಾನ್‌, ದಕ್ಷಿಣ ಕ್ಷೇತ್ರದಿಂದ ಬಂಡೆಪ್ಪ ಕಾಶೆಂಪೂರ (ಜೆಡಿಎಸ್‌), ಬಸವ ಕಲ್ಯಾಣದ ಶಾಸಕ ಬಿ.ನಾರಾಯಣರಾವ್‌ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಸ್ವತಃ ಅಭ್ಯರ್ಥಿ ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯಲ್ಲಿದ್ದಾರೆ. ಹೀಗಾಗಿ ಬೀದರ ಕ್ಷೇತ್ರಕ್ಕೆ ಕಾಂಗ್ರೆಸ್ಸಿನ ಬಲ ತೋರಿದರೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಮೇಲೆ ಮತದಾರರ ನಿರಾಸಕ್ತಿ ಕಾರಣವೇ ಕಾಂಗ್ರೆಸ್‌ಗೆ ಬಲ ತಂದಿದೆ. ಈಗಾಗಲೇ ಇಬ್ಬರು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಕೈಗೊಂಡು ಪ್ರಚಾರ ನಡೆಸಿದ್ದಾರೆ. ಇವೆಲ್ಲದರ ನಡುವೆ ಇಬ್ಬರ ಭವಿಷ್ಯ ನೋಡಲು ಏ.23ರ ವರೆಗೆ ಕಾಯಲೇ ಬೇಕಾಗಿದೆ.

ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next