ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯ 13ನೇ ದಿನದ ನಡಿಗೆ ಬುಧವಾರ ಚಳ್ಳಕೆರೆ ಹೊರವಲಯದ ನಗರಂಗೆರೆಯಿಂದ ಆರಂಭವಾಯಿತು.
ಬೆಳಗ್ಗೆ 6.30ಕ್ಕೆ ಇಲ್ಲಿನ ಗಂಧರ್ವ ಹೋಟೆಲ್ ಬಳಿಯಿಂದ ಪ್ರಾರಂಭವಾದ ಯಾತ್ರೆ ಚಳ್ಳಕೆರೆಯ ನೆಹರು ವೃತ್ತದಿಂದ ಸಾಗಿ ಬಳ್ಳಾರಿ ರಸ್ತೆ ಮೂಲಕ ಗಿರಿಯಮ್ಮನಹಳ್ಳಿ ಕಡೆಗೆ ಆಗಮಿಸಿತು.
ಈ ವೇಳೆ ರಾಹುಲ್ ಗಾಂಧಿ ಪೌರ ಕಾರ್ಮಿಕೊರೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡು ಆತ್ಮೀಯವಾಗಿ ಮಾತನಾಡಿದರು. ಜತೆಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಪೌರಕಾರ್ಮಿಕ ಹೇಳುತ್ತಿದ್ದ ವಿಚಾರಗಳನ್ನು ರಾಹುಲ್ ಗಾಂಧಿಗೆ ವಿವರಿಸುತ್ತಿದ್ದರು.
ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರ ಕ್ಷೇತ್ರ ಚಳ್ಳಕೆರೆಯಲ್ಲಿ ಪಾದಯಾತ್ರೆ ಸಾಗಿತು. ಈ ವೇಳೆ ಡೊಳ್ಳು, ತಮಟೆ, ಖಾಸಾ ಬೇಡರ ಪಡೆ, ಲಂಬಾಣಿ ನೃತ್ಯ, ಗಾರುಡಿ ಗೊಂಬೆ ಸೇರಿದಂತೆ ಅನೇಕ ಕಲಾ ತಂಡಗಳು ಮೆರವಣಿಗೆಗೆ ಕಳೆ ತಂದವು.
ರಾಹುಲ್ ಜೊತೆಗೆ ಎಐಸಿಸಿ ಕಾರ್ಯದರ್ಶಿ ಸುರ್ಜೆವಾಲಾ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಚಿವ ಎಚ್. ಆಂಜನೇಯ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಾಥ್ ನೀಡಿದರು.
ಇದನ್ನೂ ಓದಿ : ಹುಣಸೂರು : ಮುಂದುವರೆದ ಮಳೆಯ ಆರ್ಭಟ, ಹಲವು ಬಡಾವಣೆ ಜಲಾವೃತ