Advertisement

ಕೋವಿಡ್‌ ಸೆಸ್‌ ವಿಧಿಸದ್ದು ಉತ್ತಮ ನಿರ್ಧಾರ: ವಿನಾಯಿತಿ ಇಲ್ಲದಿದ್ದರೂ ಬೆಸ್ಟ್‌ ಬಜೆಟ್‌

10:18 PM Feb 01, 2021 | Team Udayavani |

ಕೊರೊನಾದಿಂದ ತಾಂತ್ರಿಕವಾಗಿ ಹಿಂಜರಿತಕ್ಕೆ ಒಳಗಾಗಿರುವ ದೇಶದ ಅರ್ಥ ವ್ಯವಸ್ಥೆ ಪುನಃಶ್ಚೇತನಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಯಾಗಬಹುದು ಎಂದು ನಿರೀಕ್ಷೆ ಮಾಡಿದ್ದವರಿಗೆ ನಿರಾಶೆಯಾಗಿದೆ. 75 ವರ್ಷ ಮೀರಿರುವ ಹಿರಿಯ ನಾಗರಿಕರಿಗೆ ರಿಟರ್ನ್ಸ್ ಫೈಲ್‌ ಮಾಡುವ ಅಗತ್ಯ ಇಲ್ಲ ಎಂದು ಪ್ರಕಟಿಸಲಾಗಿದೆ. ಗಮನಾರ್ಹ ಅಂಶವೆಂದರೆ ಒಂದು ಪಿಂಚಣಿ ಮತ್ತು ಒಂದು ಬಡ್ಡಿ ಯೋಜನೆ ಹೊಂದಿರುವವರಿಗೆ ಮಾತ್ರ ವಿನಾಯಿತಿ ಲಭಿಸಲಿದೆ.

Advertisement

ಮೇಲ್ನೋಟಕ್ಕೆ ಹೇಳುವುದಿದ್ದರೆ ಇದೊಂದು ಉತ್ತಮ ಬಜೆಟ್‌ ಎಂದು ಖಂಡಿತವಾಗಿಯೂ ಹೇಳಬಹುದು. ಮೂಲ ಸೌಕರ್ಯ, ಆರೋಗ್ಯ, ಕೃಷಿ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಮುಂಗಡಪತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊತ್ತ ಮೀಸಲು ಇರಿಸಿದ್ದಾರೆ.

ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಪುನಃಶ್ಚೇತನಕ್ಕೆ ಇಂಬು ನೀಡಲಿದೆ ಎಂಬ ನಿರೀಕ್ಷೆಯೂ ಇದೆ.
ಚಿನ್ನ ಮತ್ತು ಬೆಳ್ಳಿ ಆಮದು ಸುಂಕ ಪ್ರಮಾಣವನ್ನು ಶೇ.12.5ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಹಳದಿ ಲೋಹದ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದಕ್ಕೆ ಪೂರಕವಾಗಿಯೇ ಸೋಮವಾರ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಸೋಂಕಿನ ಪ್ರಭಾವದಿಂದಾಗಿ ಆದಾಯ ಕೊರತೆಯಾದದ್ದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕೋವಿಡ್‌ ಸೆಸ್‌ ಅಥವಾ ಇತರ ಮಾರ್ಗಗಳ ಮೂಲಕ ದಾರಿ ಕಂಡುಕೊಳ್ಳಲಿದೆ ಕೇಂದ್ರ ಸರ್ಕಾರ ಎಂಬ ಹಲವು ಊಹೆಗಳು ವ್ಯಕ್ತವಾಗಿದ್ದವು. ದೇಶವಾಸಿಗಳ ಸಂಕಷ್ಟ ಅರ್ಥ ಮಾಡಿಕೊಂಡ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂಥ ಯಾವುದೇ ಚಿಂತನೆ ಮಾಡಿಲ್ಲ.

ಗೃಹ ಸಾಲಗಳ ಮೇಲೆ ಸದ್ಯ ನೀಡಲಾಗಿರುವ ತೆರಿಗೆ ವಿನಾಯಿತಿಯನ್ನು 2022ರ ಮಾ.31ರ ವರೆಗೆ ವಿಸ್ತರಿಸಲಾಗಿದೆ. ಇದು ಕೈಗೆಟಕುವ ಗೃಹ ಯೋಜನೆಯು ಮತ್ತಷ್ಟು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡಲು ಅನುಕೂಲವಾಗಲಿದೆ. ಇದರ ಜತೆಗೆ ಡಿಜಿಟಲ್‌ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎನ್ನುವ ಉದ್ದೇಶದಿಂದ 10 ಕೋಟಿ ರೂ. ವರೆಗೆ ವಹಿವಾಟು ಹೊಂದಿರುವ ಕಂಪನಿಗಳಿಗೆ ಅಡಿಟ್‌ ನಡೆಸುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಿರುವುದು ಸ್ತುತ್ಯರ್ಹವಾಗಿಯೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next