Advertisement

ಉತ್ತಮ ಕೃಷಿ ಪದ್ಧತಿ ಅಳವಡಿಕೆಯಿಂದ ಲಾಭ ; ಮುಂಗಾರಿನಲ್ಲಿ ವಿವಿಧ ಕೃಷಿ ಚಟುವಟಿಕೆ

12:07 PM Jun 25, 2020 | mahesh |

ಉಡುಪಿ: ಮುಂಗಾರಿನಲ್ಲಿ ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತರು ಸುಧಾರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ. ರೈತರು ಯಾವ ತಂತ್ರಜ್ಞಾನದ ಶಿಫಾರಸನ್ನು ಆಯ್ಕೆ ಮಾಡಬೇಕು ಮತ್ತು ಯಾವ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳುವುದರಿಂದ ಹೆಚ್ಚಿನ ಇಳುವರಿಗಳಿಸಬಹುದು ಎಂಬ ಪ್ರಶ್ನೆಗಳಿಗೆ ಕೃಷಿ ವಿಜ್ಞಾನಿಗಳು ಕೆಲವು ಸಲಹೆ ನೀಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಮಾಡಬೇಕಾದ ಸುಧಾರಿತ ಬೇಸಾಯ ಕ್ರಮಗಳು ಈ ರೀತಿ ಇವೆ.  ಬೆಳೆ ಪದ್ಧತಿ ಪರಿಗಣನೆ ನಿರಂತರವಾಗಿ ಏಕ ಬೆಳೆ ಪದ್ಧತಿಯಲ್ಲಿ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಫ‌ಲವತ್ತತೆ ನಾಶವಾಗುತ್ತದೆ. ಬೆಳೆ ಅನುಕ್ರಮ ಅನುಸರಿಸುವುದರಿಂದ ನೀರು, ಪೋಷಕಾಂಶಗಳ ಬಳಕೆಯನ್ನು ಉತ್ತಮಗೊಳಿಸಿ, ರೋಗ ಮತ್ತು ಕಳೆ ಸಮಸ್ಯೆಗಳನ್ನು ಕಡಿಮೆ ಮಾಡಿ, ಪ್ರತಿ ಎಕೆರೆಗೆ ಹೆಚ್ಚು ಲಾಭವನ್ನು ಪಡೆಯಬಹುದು.

Advertisement

ಬಿತ್ತನೆ ಕ್ಷೇತ್ರ ಸ್ವಚ್ಛವಾಗಿಡುವುದು
ಬಿತ್ತನೆ ಮಾಡುವ ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಕಳೆಗಳನ್ನು ನಾಶಪಡಿಸಬೇಕು. ಈ ಕಳೆಗಳು ಮಳೆ ಬಿದ್ದ ತತ್‌ಕ್ಷಣ ತೇವಾಂಶ, ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಬಳಸಿಕೊಂಡು ಬೀಜಗಳನ್ನು ಉತ್ಪಾದಿಸುವುದರಿಂದ ಸುಮಾರು ಶೇ. 30ರಿಂದ 40ರಷ್ಟು ಇಳುವರಿ ಕಡಿಮೆ ಮಾಡುತ್ತವೆ. ಮಣ್ಣಿನ ಫ‌ಲವತ್ತತೆ ಕಾಪಾಡುವುದು ಭೂಮಿಯಲ್ಲಿ ಬಿತ್ತನೆಪೂರ್ವ ಹಸುರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಡಯಾಂಚ, ಹೆಸರು ಇತರ ಬೆಳೆಗಳನ್ನು ಬೆಳೆಯುವುದರಿಂದ ಮತ್ತು ಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನ ಫ‌ಲವತ್ತತೆ ಹೆಚ್ಚಾಗುತ್ತದೆ.  ಮಿಶ್ರ ಬೆಳೆ ಏಕ ಬೆಳೆ ಪದ್ಧತಿಯಿಂದ ರೋಗ ಮತ್ತು ಕೀಟ ಬಾಧೆ ಹೆಚ್ಚಾಗುತ್ತದೆ. ಆದ್ದರಿಂದ ಮಿಶ್ರಬೆಳೆ ಬೆಳೆಯುವುದು ಉತ್ತಮ. ಉದಾ: ಭತ್ತ ಬೆಳೆದ ಬಳಿಕ ದ್ವಿದಳ ಧಾನ್ಯ ಬೆಳೆಯಬಹುದಾಗಿದೆ.

ರೋಗ ನಿರೋಧಕ ತಳಿಗಳ ಬಳಕೆ
ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಹೆಸರಾಂತ ಖಾಸಗಿ ಕಂಪೆನಿಗಳು ಬಿಡುಗಡೆ ಮಾಡಿರುವ ವಿವಿಧ ಬೆಳೆಗಳ ರೋಗ ನಿರೋಧಕ ತಳಿಗಳನ್ನು ಬಿತ್ತನೆ ಮಾಡುವುದರಿಂದ ರೋಗ ಹತೋಟಿ ಮಾಡಬಹುದು.

ಬೀಜೋಪಚಾರ
ಯಾವುದೇ ಬೆಳೆಯನ್ನು ಬೆಳೆಯುವುದ ಕ್ಕಿಂತ ಮುಂಚೆ ಕೀಟನಾಶಕ ಅಥವಾ ರೋಗ ನಾಶಕ ಅಥವಾ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತಬೇಕು. ಇದರಿಂದ ಬೀಜ ಮತ್ತು ಮಣ್ಣಿನಿಂದ ಹರ ಡುವ ರೋಗಗಳನ್ನು ಮತ್ತು ಕೀಟಗಳನ್ನು ಕಡಿಮೆ ಮಾಡಬಹುದು.

ನೀರು ನಿರ್ವಹಣೆ
ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ನೀರು ಕೊಡುವುದರಿಂದ ಉತ್ತಮ ಇಳುವರಿ ಪಡೆಯುವುದಲ್ಲದೆ ರೋಗ ಬಾಧೆ ಕಡಿಮೆ ಮಾಡಬಹುದು.

Advertisement

ಉತ್ತಮ ಗುಣಮಟ್ಟದ ಬೀಜ ಬಳಕೆ ಮಾಡಿ
ರೈತರು ಬೀಜಗಳನ್ನು ಸಾಧಾರಣವಾಗಿ ಮಾರುಕಟ್ಟೆಯಿಂದ ಖರೀದಿ ಮಾಡುವುದು ರೂಢಿಯಾಗಿಸಿಕೊಂಡಿದ್ದಾರೆ. ಬೀಜಗಳನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು- ಪ್ರಮಾಣಿಕೃತ ಮತ್ತು ಗುಣಮಟ್ಟದ ಬೀಜವೇ ಎಂದು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಇದರಿಂದ ಬೀಜದ ಮೊಳಕೆ ಪ್ರಮಾಣವನ್ನು ಖಾತರಿಪಡಿಸುವುದರ ಜತೆಗೆ ರೋಗ ಮತ್ತು ಕೀಟಬಾಧೆಗಳನ್ನು ತಡೆಗಟ್ಟಬಹುದು.

ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಿ
ಮುಂಗಾರುಪೂರ್ವದಲ್ಲಿ ಉತ್ತಮ ಇಳುವರಿ ತೆಗೆಯಲು ಪರಿಣಾಮಕಾರಿಯಾಗಿರುವ ಕೆಲವು ಸೂತ್ರಗಳನ್ನು ರೈತರು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇದರಿಂದ ಹೆಚ್ಚು ಇಳುವರಿ ತೆಗೆಯಲು ಸಾಧ್ಯವಿದೆ. ಬೆಳೆಗಳಿಗೆ ತಕ್ಕಂತೆ ಸೂಕ್ತ ಸಮಯದಲ್ಲಿ ಬಿತ್ತನೆ ಮಾಡುವುದರಿಂದ ರೋಗ ಮತ್ತು ಕೀಟಗಳ ಹತೋಟಿಯನ್ನು ಮಾಡಬಹುದು.
-ಡಾ| ಎನ್‌. ನವೀನ‌, ವಿಜ್ಞಾನಿ (ಬೇಸಾಯಶಾಸ್ತ್ರ) ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ

ರೈತಸೇತು ಸಹಾಯವಾಣಿ ಕೃಷಿ ಸಮಸ್ಯೆಗಳಿದ್ದರೆ ತಿಳಿಸಿ
ರೈತರು ತಮ್ಮಲ್ಲಿದ್ದ ಹೆಚ್ಚಿನ ಬೆಳೆಗಳನ್ನು ಮಾರಾಟ ಮಾಡಿ ಈಗ ಮುಂಗಾರು ಮಳೆಯೊಂದಿಗೆ ಮತ್ತೆ ಕೃಷಿ ಕಾಯಕಕ್ಕೆ ಮರಳಿದ್ದಾರೆ. ಆದುದರಿಂದ ಇನ್ನು ಕೆಲವು ಸಮಯ ರೈತ ಸೇತು ಅಂಕಣದಲ್ಲಿ ಕೃಷಿ ಉತ್ಪನ್ನಗಳ ವಿವರ ಪ್ರಕಟವಾಗುವುದಿಲ್ಲ. ಆದರೆ ಪ್ರತಿ ಗುರುವಾರ ರೈತಸೇತು ಅಂಕಣದಲ್ಲಿ ಕೃಷಿ ಪೂರಕ ಮಾಹಿತಿ ಪ್ರಕಟವಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.
ವಾಟ್ಸಪ್‌ ಸಂಖ್ಯೆ 76187 74529

Advertisement

Udayavani is now on Telegram. Click here to join our channel and stay updated with the latest news.

Next