Advertisement
ಅ.9ರಂದು ಚಾರ್ಮಾಡಿ ತಾಲೂಕಿನ ಕೊಳಂಬೆ ಪ್ರದೇಶದಲ್ಲಿ ಮೃತ್ಯುಂಜಯ ನದಿ ಉಕ್ಕಿ ಹರಿದು ಕೊಳಂಬೆ ಅಂತರದ ಗದ್ದೆಗಳಲ್ಲಿ 2ರಿಂದ 4 ಅಡಿ ಮರಳು ಆವರಿಸಿತ್ತು. ಸುತ್ತಮುತ್ತಲಿದ್ದ 22 ಮನೆಗಳ ಪೈಕಿ ಎರಡು ಸಂಪೂರ್ಣ ಕುಸಿದಿದ್ದವು, ಒಂದು ಮನೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಇವರೆಲ್ಲರ ಬದುಕನ್ನು ಮತ್ತೆ ಹಳಿಗೆ ತರಲು ಉಜಿರೆ ಉದ್ಯಮಿಗಳಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ತಂಡ ಶ್ರಮಿಸಿದೆ.
ಮೋಹನ್ಕುಮಾರ್ ಮತ್ತು ರಾಜೇಶ್ ಪೈ ಸುಮಾರು 500ಕ್ಕೂ ಹೆಚ್ಚು ಯುವಕರ ತಂಡ ಕಟ್ಟಿಕೊಂಡು ಅ.15ರಂದು ಪುನರ್ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಪ್ರತಿ ರವಿವಾರದಂತೆ ಒಟ್ಟು ಸುಮಾರು 2 ಸಾವಿರ ಮಂದಿ ಕೂಲಿಯಾಳುಗಳು, 2,500 ವಿವಿಧ ಸಂಘ ಸಂಸ್ಥೆಗಳ ಸೇವಕರ ಕರ ಸೇವೆ ನಡೆಸಲಾಗಿದೆ. ಕೊಳಂಬೆ ಮತ್ತು ಅಂತರದ 70 ಎಕರೆ ಪ್ರದೇಶದ ಚಿತ್ರಣವನ್ನೇ ಅವರು ಬದಲಾಯಿಸಿದ್ದಾರೆ. ರಾಶಿಬಿದ್ದ ಮರಮಟ್ಟು ತೆರವಾಗಿದೆ, ಗದ್ದೆಗಳಲ್ಲಿ ಹರಡಿದ್ದ ಮರಳು ತೆಗೆದು ಉತ್ತು ಬಿತ್ತಿ ಹಚ್ಚ ಹಸುರಾಗಿದೆ. ಈಗಾಗಲೇ ನೂರು ಬಾಳೆ ಗಿಡಗಳು, 50 ಬುಡ ಬಸಳೆ, 20 ಸಾಲು ಅಲಸಂಡೆ, 12 ಸಾಲು ಸೌತೆ, 25 ಬುಡ ತೊಂಡೆ, 50 ಬದನೆ ಗಿಡ ನಾಟಿ ಮಾಡಿದ್ದಾರೆ. ಅ.20ರಂದು ಸಮಾರೋಪ
ಸುಮಾರು ಎರಡು ತಿಂಗಳ ಕಾಲ ನಡೆದ ಪುನರ್ನಿರ್ಮಾಣ ಶ್ರಮದಾನಕ್ಕೆ ಅ.20ರಂದು ಏಕಕಾಲದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. 6 ತಿಂಗಳಲ್ಲಿ ಊರು ಮರುನಿರ್ಮಾಣದ ಪಣ ತೊಟ್ಟಿದ್ದ ಉದ್ಯಮಿಗಳು ಕೇವಲ 2 ತಿಂಗಳಲ್ಲೇ ಇದನ್ನು ಸಾಧಿಸಿದ್ದಾರೆ. ಸರಕಾರದಿಂದ ಸಾಧ್ಯವಾಗದ್ದು ಸಮಾಜದಿಂದ ಕೈಗೂಡಿದೆ. ಅ.20ರಂದು ಶಾಸಕರು, ಪತ್ರಕರ್ತರು, ಸಾರ್ವಜನಿಕರು, ಸಂಘಸಂಸ್ಥೆಗಳು, ದಾನಿಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ 1 ಸಾವಿರ ಅಡಿಕೆ ಗಿಡ, 300 ತೆಂಗು, 100 ಬಾಳೆ, 150 ಹಲಸು, ಮಾವು, ಪೇರಳೆ ಸಹಿತ ಫಲವಸ್ತುಗಳ ಗಿಡ ನೆಡಲಾಗುತ್ತದೆ. ಬಳಿಕ ಸುಮಾರು 5 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಹದ ಮಾಡಿದ 17 ಗದ್ದೆಗಳಲ್ಲಿ ನೇಜಿ ನಾಟಿ ಮಾಡಿ ಪ್ರವಾಹ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ತಿಳಿಸಿದ್ದಾರೆ.
Related Articles
ಇದೇ ಗ್ರಾಮದ ಫರ್ಲಾನಿ ಪ್ರದೇಶದ ಚಿತ್ರಣ ಮಾತ್ರ ಹೇಳತೀರದಂತಿದೆ. ಅಡಿಕೆ ಮರಗಳ ಬುಡ 5 ಅಡಿಗಳಷ್ಟು ಮರಳಿನಿಂದ ಆವೃತವಾಗಿದೆ.ಇಲ್ಲಿನ ಡೀಕಯ್ಯ ಗೌಡ, ಗಣೇಶ್, ರಮಾನಂದ್, ಸುಧಾಕರ್, ಉಮನ ಗೌಡ ಅವರ 4 ಎಕ್ರೆ ತೋಟ ನೆರೆ ಹಾವಳಿಗೆ ತುತ್ತಾಗಿ 65 ದಿನಗಳಾದರೂ ಒಂದು ಹುಲ್ಲುಕಡ್ಡಿಯನ್ನೂ ಸ್ಥಳೀಯಾಡಳಿತದಿಂದ ತೆರವು ಮಾಡಲಾಗಿಲ್ಲ. ಒಂದು ಎಕ್ರೆಯಲ್ಲಿ 6 ವರ್ಷದ ಫಲಭರಿತ ಕನಿಷ್ಠ 400 ಅಡಿಕೆ ಗಿಡಗಳಿವೆ. ಇವೆಲ್ಲವನ್ನು ಕಳೆದುಕೊಂಡ ಈ ಪ್ರದೇಶದ ಮಂದಿಗೆ ಪಂಚಾಯತ್ ಉಚಿತವಾಗಿ ಮರಳು ತೆರವುಗೊಳಿಸುವ ಬದಲು 8 ಸಾವಿರ ರೂ. ಬಿಲ್ ನೀಡಿ ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಹಾನಿಕೊಳಂಬೆ : 21 ಮನೆ,
40 ಎಕ್ರೆ ಕೃಷಿ ಪ್ರದೇಶ
ಅಂತರ : 16 ಮನೆ,
30 ಎಕ್ರೆ ಕೃಷಿ ಪ್ರದೇಶ ಕಾಮಗಾರಿ
2 ಹಿಟಾಚಿ 20 ದಿವಸ
1 ಟಿಲ್ಲರ್ 50 ಗಂಟೆ ಶ್ರಮದಾನ
ಕೂಲಿಯಾಳು 2,000, ಸ್ವಯಂಸೇವಕರು 2,500 – ಗ್ರಾಮಾಭಿವೃದ್ಧಿ ಯೋಜನೆ ಸ್ವಯಂ ಸೇವಕರು, ಉಜಿರೆ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು, ಉಳಿದ ಸಂಘಟನೆಗಳ ನಿರಂತರ ಪ್ರಯತ್ನ
– 30 ಲಕ್ಷ ರೂ. ಅಧಿಕ ಕಾಮಗಾರಿ
– ಗದ್ದೆ, ತರಕಾರಿ ಕೃಷಿ, ನೀರು ಹರಿಯುವ ಕಣಿ ಮರುನಿರ್ಮಾಣ, ತೆಂಗಿನ ಮರ ಬುಡ ಸ್ವಚ್ಛ, ನೇಜಿ ನಾಟಿ, ಮನೆ ಸ್ವಚ್ಛ ಸಮಾಜದಲ್ಲಿ ಒಂದಷ್ಟು ಪರಿವರ್ತನೆ ಯಾಗಬೇಕೆಂಬ ಹಂಬಲದಿಂದ ಉದ್ಯಮಿಗಳು ತಂಡ ಕಟ್ಟಿಕೊಂಡು ಯುವಕರ ಸಹಾಯದಿಂದ ಪ್ರವಾಹ ಪ್ರದೇಶ ಮರುಸೃಷ್ಟಿಸಿದ್ದಾರೆ. ಇದು ಮಾದರಿ ಮತ್ತು ಅನುಕರಣೀಯ. ಅವರ ನಿಸ್ವಾರ್ಥ ಸೇವೆಯನ್ನು ಸರಕಾರವು ಶ್ಲಾಘಿಸಬೇಕಿದೆ.
– ಹರೀಶ್ ಪೂಂಜ, ಶಾಸಕರು ನಮ್ಮ ಕನಸು ಸಾಕಾರಗೊಂಡಿದೆ. ನಮಗೆ ದೇವರು ಕರುಣಿಸಿದ್ದರಲ್ಲಿ ಕಿಂಚಿತ್ತನ್ನು ನಾವು ಸಂತ್ರಸ್ತರ ಬಾಳಿಗೆ ಬೆಳಕಾಗಿ ನೀಡಿದ್ದೇವೆ. ಅ.20ರಂದು ಸಮಾರೋಪ ಹಮ್ಮಿಕೊಂಡಿದ್ದು ಅಂದು 200 ಮಹಿಳೆಯರು, 350 ಸ್ವಯಂ ಸೇವಕರಿಂದ ಏಕಕಾಲದಲ್ಲಿ ಶ್ರ ಮದಾನ ಸಮಾಪನಗೊಳ್ಳಲಿದೆ. ಆರಂಭದಲ್ಲಿ ನಾಲ್ಕು ತಿಂಗಳು ಎಂದು ಅಂದಾಜಿಸಲಾಗಿತ್ತು, ಆದರೆ ಪ್ರಸಕ್ತ ಎಲ್ಲರ ಸಹಕಾರದಿಂದ ಎರಡೇ ತಿಂಗಳಲ್ಲಿ ಪೂರ್ಣಗೊಳಿಸಿರುವ ಖುಷಿ ನಮಗಿದೆ.
– ಮೋಹನ್ ಕುಮಾರ್, ಉಜಿರೆ ಲಕ್ಷ್ಮೀ ಗ್ರೂಪ್ – ಚೈತ್ರೇಶ್ ಇಳಂತಿಲ