Advertisement

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

06:40 PM Apr 27, 2024 | Team Udayavani |

ಯಾದಗಿರಿ: ದೇಶದ ಸಂಪತ್ತನ್ನು, ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಅನೇಕ ಹಗರಣಗಳಿಗೆ ಕಾರಣವಾದ ಭಾರತೀಯ ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರ ಕಳೆದುಕೊಂಡು ಹತ್ತು ವರ್ಷಗಳಲ್ಲಿ ನೆಲಕಚ್ಚಿದೆ‌ ಎಂದು ಶಾಸಕ ಬಸನಗೌಡ ಯತ್ನಾಳ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

Advertisement

ಶಹಾಪುರ ನಗರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ರಾಯಚೂರ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ರೋಡ್ ಶೋನಲ್ಲಿ ಭಾಗವಹಿಸಿದ ಅವರು, ಭ್ರಷ್ಟಾಚಾರ ಮುಕ್ತ, ಭಯೋತ್ಪಾಧನಾ ಮುಕ್ತ ಕಳಂಕ ರಹಿತ ಆಡಳಿತ ಮತ್ತು ದೇಶದ ಉನ್ನತೀಕರಣಕ್ಕೆ ಶ್ರಮಿಸುವ ಪ್ರಧಾನಿ ನರೇಂದ್ರ ಮೋದಿಜೀಯವರನ್ನು ಮತ್ತೊಮ್ಮೆ ನಾವು ಪ್ರಧಾನಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ದೇಶದ ಸುಭದ್ರತೆಗಾಗಿ, ಏಳ್ಗೆಗಾಗಿ ಬಿಜೆಪಿಗೆ ಮತ ನೀಡುವ ಮೂಲಕ ಸಹಕರಿಸಬೇಕಿದೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಹೆಸರಿನಡಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಒಂದು ಕೈಯಿಂದ ದುಡ್ಡು ನೀಡಿದಂತೆ ಮಾಡಿ ಇನ್ನೊಂದಡೆ ದುಪ್ಪಟ್ಟು ಹಣ ದೋಚುವ ಕೆಲಸ ಮಾಡುತ್ತಿದೆ. ಮೋದಿಜೀ ಅವರು ವರ್ಷಕ್ಕೆ 6 ಸಾವಿರ ಧನ ಸಹಾಯ ಸೇರಿದಂತೆ ಯಡಿಯೂರಪ್ಪ ಸಿಎಂ ಇದ್ದಾಗ ರಾಜ್ಯದಿಂದ 4 ಸಾವಿರ ಸೇರಿ ವರ್ಷಕ್ಕೆ 11 ಸಾವಿರ ರೂ. ರೈತರ ಅಕೌಂಟ್‍ಗೆ ಹಾಕಲಾಗುತಿತ್ತು. ಆದರೆ ಸಿದ್ದರಾಮಯ್ಯ ಬಂದು ರಾಜ್ಯದ 4 ಸಾವಿರ ತೆಗೆದು ಹಾಕಿದ್ದಾರೆ ಎಂದು ಗುಡುಗಿದರು.

ರೈತರ ಹಿತಾಸಕ್ತಿ ಕಾಪಾಡದ ಕಾಂಗ್ರೆಸ್ ಸುಳ್ಳು ಪಳ್ಳು ಯೋಜನೆ ರೂಪಿಸಿ ರಾಜ್ಯದ ಬೊಕ್ಕಸ ಖಾಲಿ ಚೊಂಬು ಮಾಡಿಟ್ಟಿದೆ. ಮೋದಿಜೀ ಖಾಲಿ ಚೊಂಬು ಕೊಟ್ಟಿದ್ದಾರೆ ಎನ್ನುವ ಸಿದ್ದರಾಮಯ್ಯ, ಖರ್ಗೆ ಮತ್ತು ಬಂಡೆಗೆ ಈ ಬಾರಿ ಬಿಜೆಪಿ ನಾಲ್ಕು ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ನವರ ಕೈಗೆ ಚೊಂಬು ಕೊಟ್ಟು ಕಳಿಸಬೇಕಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ತಾಲೂಕು ಮಂಡಲ ಅಧ್ಯಕ್ಷ ರಾಜೂಗೌಡ ಉಕ್ಕಿನಾಳ, ನಗರ ಅಧ್ಯಕ್ಷ ದೇವಿಂದ್ರಪ್ಪ ಕೋನೇರ, ಪ್ರಮುಖ ಹಿರಿಯರಾದ ಡಾ.ಚಂದ್ರಶೇಖರ ಸುಬೇದಾರ, ಶಿವರಾಜ ದೇಶಮುಖ, ಬಸವರಾಜ ವಿಭೂತಿಹಳ್ಳಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next