Advertisement

ಬೆಳಗಾವಿ: ಧಾರಾಕಾರ ಮಳೆ-148 ಅಡಿ ಎತ್ತರದ ಮಂದಿರ ಮುಳುಗಡೆ

05:49 PM Jul 10, 2024 | Team Udayavani |

■ ಉದಯವಾಣಿ ಸಮಾಚಾರ
ಬೆಳಗಾವಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ಮೂಲಕ ಹಿಡಕಲ್‌ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಿಡಕಲ್‌ ಜಲಾಶಯದಲ್ಲಿರುವ 148 ಅಡಿ ಎತ್ತರದ ಶ್ರೀ ವಿಠಲ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ.

Advertisement

ಸಾವಂತವಾಡಿ, ಅಂಬೋಲಿ ಅರಣ್ಯ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ಮೂಲಕ ಹಿಡಕಲ್‌ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿರುವ ಶ್ರೀ ವಿಠಲ ಮಂದಿರ ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ 15 ದಿನಗಳಿಂದ ದರ್ಶನಕ್ಕೆ ಲಭ್ಯವಿದ್ದ ಮಂದಿರ ಈಗ ನೀರಿನಲ್ಲಿ ಮುಳುಗಿ ಕೇವಲ ಕಳಶ ಮಾತ್ರ ಕಾಣುತ್ತಿದೆ.

2175 ಅಡಿ ಸಾಮರ್ಥ್ಯದ ಹಿಡಕಲ್‌ ಜಲಾಶಯ 2128 ಅಡಿ ನೀರು ತುಂಬಿದ್ದು, 24 ಗಂಟೆಗಳ ಅವಧಿಯಲ್ಲಿ ಜಲಾಶಯ ಮಟ್ಟದಲ್ಲಿ ಐದು ಅಡಿ ನೀರು ಹೆಚ್ಚಳವಾಗಿದೆ. ಖಾನಾಪುರ ತಾಲೂಕಿನಲ್ಲಿ ಕಣಕುಂಬಿ ಹಾಗೂ ಜಾಂಬೋಟಿ ಅರಣ್ಯ ಪ್ರದೇಶದಲ್ಲೂ ಧಾರಾಕಾರ ಮಳೆ ಆಗುತ್ತಿರುವುದರಿಂದ ಮಲಪ್ರಭಾ ನದಿ ಮೂಲಕ 8504 ಕ್ಯೂಸೆಕ್‌ ನೀರು ಒಳಹರಿವು ಬರುತ್ತಿದೆ.

ಜಲಾಶಯದಲ್ಲಿ 24 ಗಂಟೆಗಳ ಅವಧಿಯಲ್ಲಿ ಎರಡು ಅಡಿ ನೀರು ಹೆಚ್ಚಳವಾಗಿದೆ. ಒಟ್ಟು 2079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2050 ಅಡಿ ನೀರು ಸಂಗ್ರಹಗೊಂಡಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪಂಚಗಂಗಾ ನದಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಪಂಚಗಂಗಾ ನದಿ
ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

32 ಅಡಿಗೂ ನೀರು ಹೆಚ್ಚಾಗಿದೆ. ಅಲ್ಲಿನ ಕೆಳ ಹಂತದ 52 ಸೇತುವೆಗಳು ಸಂಪೂರ್ಣ ಜಲಾವೃತ ಗೊಂಡಿವೆ. ಅನೇಕ ಗ್ರಾಮಗಳಿಗೆ ನೀರು ನುಗ್ಗಿದೆ. ನಿಪ್ಪಾಣಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಪ್ರವಾಹ ಭೀತಿ ಕಾಡುತ್ತಿದೆ. ಪಶ್ಚಿಮ ಘಟ್ಟಕ್ಕೆ ಹೊಂದಿ
ಕೊಂಡ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಆತಂಕಕ್ಕೆಡೆ ಮಾಡಿಕೊಟ್ಟಿದೆ.

Advertisement

ರಸ್ತೆ ಮೇಲೆ ಗುಡ್ಡ ಕುಸಿತ: ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಬೆಳಗಾವಿ-ಗೋವಾ ಮಧ್ಯದಲ್ಲಿ ಗುಡ್ಡ ಕುಸಿತಗೊಂಡು ರಸ್ತೆ ಸಂಚಾರ ವ್ಯತ್ಯಯಗೊಂಡಿದೆ. ಗೋವಾದ ಲೋಟೋರಿಯಮ್‌ ಬಳಿ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿತ ಗೊಂಡಿದ್ದರಿಂದ ರಸ್ತೆ ಮೇಲೆ ಮಣ್ಣು ಬಿದ್ದಿದೆ. ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿಬ್ಬಂದಿ ಮಣ್ಣು ತೆರವು ಕಾರ್ಯ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next