Advertisement

ಬೆಳಪು ಗ್ರಾಮ ಅಭಿವೃದ್ಧಿಗೆ ಸಹಕಾರ ನೀಡಲು ಬದ್ಧ : ಲಾಲಾಜಿ 

06:25 AM Aug 23, 2018 | Team Udayavani |

ಕಾಪು: ವಿದ್ಯಾ ಕ್ಷೇತ್ರವಾಗುತ್ತಿರುವ ಬೆಳಗುತ್ತಿರುವ ಬೆಳಪು ಗ್ರಾಮವು ಸಾಕಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆ. ಮುಂದಿನ ಯೋಜನೆಗಳಿಗೂ ಅನುದಾನಗಳು ಸಮರ್ಪಕವಾಗಿ ಹರಿದು ಬರುವಂತೆ ಗಮನ ಹರಿಸುತ್ತಾ ಗ್ರಾಮದ ಅಭಿವೃದ್ಧಿಯಲ್ಲಿ ಮುಂದೆ ಕೂಡಾ ಸಹಕಾರ ನೀಡಲು ಬದ್ಧನಿದ್ದೇನೆ ಎಂದು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಬೆಳಪು ಗ್ರಾಮ ಪಂಚಾಯತ್‌ನ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿನ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಪು ನಗರ ಯೋಜನಾ ಪ್ರಾಧಿಕಾರದಿಂದಾಗಿ ಬಡಾ, ಮಜೂರು, ಕೋಟೆ ಸಹಿತ ಹಲವು ಗ್ರಾಮದ ಜನರು ಮನೆಕಟ್ಟಲಾಗದ ದುಸ್ಥಿತಿಯಿದೆ. ಈ ಬಗ್ಗೆ ಸಹಾಯಕ ಕಮೀಷನರ್‌ ಸಹಿತ ಅಧಿಕಾರಿಗಳ ಮಟ್ಟದಲ್ಲಿ ಸಮಾಲೋಚನೆ ನಡೆಸಿದರೂ ಬಡಬಗ್ಗರ ಸಮಸ್ಯೆ ನಿವಾರಣೆ ಫಲಪ್ರದವಾಗಿಲ್ಲ. ಬೆಳಪು ಗ್ರಾಮ ಮೊದಲೇ ಇದರಿಂದ ವಿನಾಯಿತಿ ಪಡೆದಿರುವುದು ಗ್ರಾಮಸ್ಥರ ಅದೃಷ್ಟ ಎಂದರು. 

ಉಡುಪಿ ಜಿಲ್ಲಾ ಪಂಚಾಯತ್‌ ಸದಸ್ಯೆ ಶಿಲ್ಪಾ ಜಿ. ಸುವರ್ಣ ಮಾತನಾಡಿ, ಬೆಳಪು ಸರಕಾರಿ ಶಾಲಾ ಪೀಠೊಪಕರಣ ವ್ಯವಸ್ಥೆಗೆ 1 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಅದರ ಸಹಿತವಾಗಿ ಬೆಳಪು ಗ್ರಾಮಾಭಿವೃದ್ಧಿಗೆ ಇನ್ನೂ ಹೆಚ್ಚಿನ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು. ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ನಿರಂತರ ಮೂಲಭೂತ ಸೌಕರ್ಯಗಳನ್ನು ಜನರಿಗೆ ಕೊಡುವ ಉದ್ದೇಶದಿಂದ ನಮ್ಮ ಗ್ರಾಮದಲ್ಲಿ ರಾಜಕೀಯ ರಹಿತವಾಗಿ ಗ್ರಾಮೀಣಾಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಗ್ರಾಮದ ಪ. ಜಾ./ಪ. ಪಂ. ಮನೆಗಳ ಎಲ್ಲಾ ರಸ್ತೆಗಳನ್ನು ಶೇಕಡಾ ನೂರರಷ್ಟು ಕಾಂಕ್ರಿಟೀಕರಣಗೊಳಿಸಲಾಗಿದೆ. ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಸಹಕರಿಸುವಂತೆ ಮನವಿ ಮಾಡಿದರು.

ಕಾಪು ಪಶುಸಂಗೋಪನಾ ಇಲಾಖಾಕಾರಿ ಡಾ| ದಯಾನಂದ ಪೈ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ ಗ್ರಾಮಸ್ಥರಿಗೆ ಹಾಗೂ ಶಾಲಾ ಮಕ್ಕಳಿಗೆ ಪರಿಸರ ಸ್ನೇಹಿ ಕೈಚೀಲಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ದಿನಕರ್‌ ಅವರು ಭ್ರಷ್ಟಾಚಾರ ನಿಗ್ರಹದಲ್ಲಿ ಗ್ರಾಮಸ್ಥರ ಪಾತ್ರದ ಬಗ್ಗೆ ವಿವರಿಸಿದರು. 

Advertisement

ತೋಟಗಾರಿಕಾ ಇಲಾಖೆಯ ಶ್ವೇತಾ ಹಿರೇಮs…, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ್‌, ಕೃಷಿ ಇಲಾಖೆಯ ಶೇಕರ್‌ ಪಿ., ಕಂದಾಯ ಇಲಾಖೆಯ ಗಣೇಶ ಮೇಸ್ತಾ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ್‌, ಸಿ.ಡಿ.ಪಿ.ಒ ಮೋಹಿನಿ ಗೌಡ, ಆರೋಗ್ಯ ಉಪ ಕೇಂದ್ರ ವೈದ್ಯಾಕಾರಿ ಡಾ| ವೀಣಾ ನಾಯಕ್‌, ಆರೋಗ್ಯ ಸಹಾಯಕಿ ರಮಾ, ಶಾಲಾ ಮುಖ್ಯ ಶಿಕ್ಷಕ ಶಂಕರ್‌ ಎಸ್‌., ಹಾಗೂ ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್‌, ಸದಸ್ಯರು ಉಪಸ್ಥಿತರಿದ್ದರು.

ಗ್ರಾ.ಪಂ. ಪಿಡಿಒ ರಮೇಶ್‌ ಹೆಚ್‌.ಆರ್‌. ಸ್ವಾಗತಿಸಿದರು. ಸಿಬಂದಿಗಳಾದ ಸುಮಿತ್ರಾ ವರದಿ ವಾಚಿಸಿದರು. ಮಮತಾ ಸಹಕರಿಸಿದರು. ಶೋಭಾ ಶೆಟ್ಟಿ ವಂದಿಸಿದರು.

ಸರಕಾರಿ ಇಲಾಖೆಗಳ ಮೂಲಕ ನೀಡಲಾಗುವ ಔಷಧಿಗಳು ಉತ್ತಮ ಗುಣಮಟ್ಟದ್ದವಾಗಿವೆ. ಉಚಿತ ಎಂಬ ಕಾರಣಕ್ಕಾಗಿ ತಾತ್ಸಾರದಿಂದ ನೋಡುವ ಮನಸ್ಥಿತಿಯಿಂದ ಜನರು ಹೊರಬರಬೇಕು. ಡೆಂಗ್ಯೂ ಜ್ವರ ಎಂಬುದನ್ನು ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಸರಿಯಾಗಿ ಪರೀಕ್ಷಿಸಿ, ಹೌದಾದರೆ ಉಚಿತ ಚಿಕಿತ್ಸೆಯನ್ನು ಪಡೆದು ಗುಣಮುಖರಾಗುವ ಅಗತ್ಯವಿದೆ. ನಮ್ಮ ಗ್ರಾಮದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಮೂಲಕ ಸ್ವತ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸಲು ಬೆಂಬಲಿಸುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ.
– ಡಾ| ಸಂತೋಷ್‌ ಕುಮಾರ್‌
ವೈದ್ಯಾಧಿಕಾರಿ, ಶಿರ್ವ ಸಮುದಾಯ ಆರೋಗ್ಯ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next