Advertisement

ಖಾತೆ ಹಂಚಿಕೆಯಲ್ಲೂ ಜಾಣ ನಡೆ

11:26 PM Aug 26, 2019 | Team Udayavani |

ಬೆಂಗಳೂರು: ಹೊಸದಾಗಿ ಮೂರು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೂ ಹಿರಿಯ ಶಾಸಕರಿಗೂ ಪ್ರಭಾವಿ ಹುದ್ದೆಗಳನ್ನು ನೀಡುವ ಮೂಲಕ ಸಮತೋಲನ ಸಾಧಿಸುವ ಪ್ರಯತ್ನವನ್ನು ಖಾತೆ ಹಂಚಿಕೆಯಲ್ಲಿ ಮಾಡಲಾಗಿದೆ. ಜತೆಗೆ ಆಯ್ದ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ ಸದ್ಯ ಅನರ್ಹತೆಗೊಂಡ ಶಾಸಕರ ವಿಶ್ವಾಸವನ್ನೂ ಉಳಿಸಿಕೊಳ್ಳುವ ಕಸರತ್ತು ನಡೆಸಿರುವುದು ಕಾಣುತ್ತದೆ.

Advertisement

ಸಂಪುಟ ವಿಸ್ತರಣೆಯಾದರೂ ಖಾತೆ ಹಂಚಿಕೆ ಸಿಎಂ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿತ್ತು. ತಮಗೆ ಗೊತ್ತುಪಡಿಸಿದ ಖಾತೆ ಗಳನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟು ಕೊಳ್ಳಬೇಕು ಎಂಬುದು ಅನರ್ಹತೆಗೊಂಡ ಶಾಸಕರ ಒತ್ತಾಯವಾಗಿತ್ತು. ಆದರೆ ಪ್ರಭಾವಿ ಖಾತೆಗಳನ್ನು ತಮಗೇ ನೀಡಬೇಕು ಎಂದು ಹಿರಿಯ ಶಾಸಕರು ಒತ್ತಡ ಹೇರಿದ್ದರು. ಯಡಿಯೂರಪ್ಪ ಅವರು ವರಿಷ್ಠರ ಸಲಹೆಯನ್ನೂ ಪಡೆದು ಕೊನೆಗೂ ಖಾತೆ ಹಂಚಿಕೆ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಪ್ರಧಾನವಾಗಿ ಬೆಂಬಲಿ ಸುತ್ತಾ ಬಂದಿರುವ ಲಿಂಗಾಯಿತ ಸಮುದಾಯಕ್ಕೆ ಸಂಪುಟದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಬರೋಬ್ಬರಿ ಏಳು ಸಚಿವರಿಗೆ ಅವಕಾಶ ಕಲ್ಪಿಸುವ ಮೂಲಕ ಮುಖ್ಯಮಂತ್ರಿ ಸೇರಿದಂತೆ ಎಂಟು ಮಂದಿ ಸಂಪುಟದಲ್ಲಿದ್ದಾರೆ. ಇದೀಗ ಲಿಂಗಾಯಿತ ಸಮುದಾಯ ಲಕ್ಷ್ಮಣ ಸವದಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ವಿಶೇಷ ಆದ್ಯತೆ ನೀಡಲಾಗಿದೆ.

ಗೃಹ, ಭಾರೀ ಮತ್ತು ಮಧ್ಯಮ ಕೈಗಾರಿಕೆ, ಸಾರಿಗೆ, ವಸತಿ, ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯೂ ಇದೇ ಸಮುದಾಯದ ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಆ ಮೂಲಕ ಲಿಂಗಾಯಿತ ಸಮುದಾಯಕ್ಕೆ ಪಕ್ಷದಲ್ಲಿ ವಿಶೇಷ ಮಾನ್ಯತೆ ನೀಡಲಾಗುತ್ತದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ.

ಇನ್ನು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯ (ಎಡಗೈ) ಕೂಡ ಬಿಜೆಪಿಗೆ ಬೆಂಬಲ ನೀಡುತ್ತಲೇ ಬಂದಿದೆ. ಅಲ್ಲದೇ ಕಾಂಗ್ರೆಸ್‌, ಜೆಡಿಎಸ್‌ಗೆ ಹೋಲಿಸಿದರೆ ಮಾದಿಗ ಸಮುದಾಯ ಜನಪ್ರತಿ ನಿಧಿಗಳು ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಯಾಗುತ್ತಿದ್ದಾರೆ. ಹಾಗಾಗಿ ಇದೇ ಸಮುದಾಯದ ಗೋವಿಂದ ಕಾರಜೋಳ ಅವರಿಗೆ ಡಿಸಿ ಎಂ ಹುದ್ದೆ ನೀಡುವ ಜತೆಗೆ ಪ್ರಮುಖವಾದ ಲೋಕೋಪ ಯೋಗಿ, ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ.

Advertisement

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ವಿಶ್ವಾಸವನ್ನು ಗಳಿಸಿ ಪಕ್ಷ ಬಲವರ್ಧನೆ ಮಾಡಿಕೊಳ್ಳುವ ಉದ್ದೇಶದಿಂದ ಒಕ್ಕಲಿಗ ಸಮುದಾಯದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ಜತೆಗೆ ಒಕ್ಕಲಿಗ ಸಮುದಾಯದ ಆರ್‌.ಅಶೋಕ್‌ ಅವರಿಗೆ ಕಂದಾಯ ಖಾತೆ ನೀಡಿ ಹಿರಿತನವನ್ನು ಸಮತೋಲನ ಮಾಡುವ ಕಸರತ್ತು ನಡೆಸಿದಂತಿದೆ. ಒಟ್ಟಾರೆ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಸಮುದಾಯಗಳಿಗೆ ವಿಶೇಷ ಆದ್ಯತೆ ನೀಡುವ ಜತೆಗೆ ಪಕ್ಷ ಸಂಘಟನೆ ದೃಷ್ಟಿಯಿಂದಲೂ ಒಂದಿಷ್ಟು ಸಮತೋಲನ ಸಾಧಿಸುವ ಪ್ರಯತ್ನ ನಡೆಸಿದಂತಿದೆ.

ಅನರ್ಹಗೊಂಡ ಶಾಸಕರ “ವಿಶ್ವಾಸ’: ಇನ್ನೊಂದೆಡೆ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹತೆಗೊಂಡಿರುವ ಶಾಸಕರ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನವೂ ಮೇಲ್ನೋಟಕ್ಕೆ ಕಾಣುತ್ತದೆ. ಪ್ರಮುಖ ಖಾತೆಗಳನ್ನು ಹಿರಿಯ ಶಾಸಕರಿಗೆ ಹಂಚಿಕೆ ಮಾಡಿದರೂ ಉಳಿಕೆ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಬಳಿಯೇ ಇಟ್ಟುಕೊಳ್ಳುವ ಮೂಲಕ ಅನರ್ಹತೆಗೊಂಡಿರುವ ಶಾಸಕರ “ವಿಶ್ವಾಸ’ ಗಳಿಸುವ ಪ್ರಯತ್ನ ಮಾಡಿದಂತಿದೆ. ಪಕ್ಷೇತರ ಶಾಸಕರಾದ ಎಚ್‌.ನಾಗೇಶ್‌ ಅವರಿಗೆ ಮೈತ್ರಿ ಸರ್ಕಾರ ಸಣ್ಣ ಕೈಗಾರಿಕೆ ಖಾತೆ ನೀಡಿತ್ತು.

ಆದರೆ ಬಿಜೆಪಿ ಸರ್ಕಾರ ಅಬಕಾರಿ ಖಾತೆ ನೀಡುವ ಮೂಲಕ ಪಕ್ಷದ ಕೈಹಿಡಿದವರ ಹಿತ ಕಾಪಾಡುವ ಭರವಸೆ ನೀಡಿದಂತಿದೆ. ಒಂದೊಮ್ಮೆ ಅನಿರೀಕ್ಷಿತವಾಗಿ ಮಧ್ಯಂತರ ಚುನಾವಣೆ ಎದುರಾದರೆ ಇಲ್ಲವೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡಿದಂತಾಗಿದೆ. ಜತೆಗೆ ರಾಜ್ಯದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಿ ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ದೃಷ್ಟಿಯಿಂದಲೂ ಅಳೆದು ತೂಗಿ ಖಾತೆ ಹಂಚಿಕೆಯಲ್ಲಿ ಪಕ್ಷ ಜಾಣ ಹೆಜ್ಜೆ ಇಟ್ಟಂತಿದ್ದು, ಎಷ್ಟರ ಮಟ್ಟಿಗೆ ಫ‌ಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next